Monday, September 13, 2010

ದೃಢ ನಿರ್ಧಾರ

ಸುಮಾರು ೨ ದಶಕಗಳ ಹಿಂದಿನ ಮಾತು; ಒಂದನೇಯ ತರಗತಿಯಲ್ಲಿ ಪುಟ್ಟನೇಯ ಬೆಂಚುಗಳ ಮೇಲೆ ಕೂತು ಪಾಠ ಕೇಳಿದ ನೆನಪು. "ಈ ಕಿಟಕಿಗಳು ಎಷ್ಟು ದೊಡ್ಡದಾಗಿವೆ!", ಅಂತ ಆಗ ಮನದಲ್ಲಿಯೇ ಅಂದುಕೊಂಡದ್ದು ಈಗ ನೆನಪು ಬಂದಾಗ, ತರಗತಿಯಲ್ಲಿ ಶ್ರದ್ಧೆಯಿಂದ ವ್ಯಾಸಂಗ ಮಾಡುತ್ತಿದ್ದ ಆ ಸಹಪಾಠಿಯ ನೆನಪು ಸಹ ಬಂದಿತು. ದುಂಡನೇಯ ಮುಖ, ಲಕ್ಷಣವಾಗಿ ಬಾಚಿದ ತಲೆಗೂದಲು, ಎರಡು ಜುಟು, ನೀಟಾಗಿ ಆಯರ್ನ್ ಮಾಡಿದ ಸ್ಕರ್ಟು ಹಾಗು ಇಂಗ್ಲೀಷಿನಲ್ಲಿ ಮಾತನಾಡುವ ಸತತ ಪ್ರಯತ್ನ! ಪದಗಳು ಸರಿಯಾಗಿ ಬರುತ್ತಿರಲಿಲ್ಲ - ಆದರ ಅವಳು ಅಲ್ಲಿಗೇ ಬಿಡುವ ಪೈಕಿಯಲ್ಲ. ಪದಕ್ಕೆ ಪದವನ್ನು ಜೋಡಿಸು ಹರುಕು-ಮುರುಕು ಆದ್ರೂ ಸೈ, ಆಂಗ್ಲ ಪದಗಳ ಸರಮಾಲೆಯನ್ನು ಕಟ್ಟಿ ಮಾತನಾಡಲು ಯತ್ನಿಸುತ್ತಿದ್ದಳು. ಕಷ್ಟ ಪಟ್ಟು, ಪ್ರಯತ್ನ ಮಾಡಿ, ಎಡವಿ, ತಿದ್ದುಕೊಂಡು ಹೊಸ ಪದಗಳನ್ನು ಪ್ರಯೋಗಿಸುತ್ತಿದ್ದಳಾಕೆ. ಪ್ರಾಧ್ಯಾಪಕರು ಅವಳ ಪ್ರಯತ್ನವನ್ನು ಮೆಚ್ಚಿ ಕೈಲಾದಷ್ಟು ಸಹಾಯ ಮಾಡಿ ಪ್ರೋತ್ಸಾಹಿಸುತ್ತಿದ್ದರು. ನಾವು ಮಹಾ ಪಂಡಿತರಲ್ಲದಿದ್ದರೂ, ಅಪೇಕ್ಷೆಗೆ ತಕ್ಕಂತೆ, ಈ ಪ್ರಯತ್ನದಲ್ಲಿ ಹೊರಹೊಮ್ಮುವ ವಿವಿಧ ಪದಗಳಿಂದ ಉದ್ಭವಿಸುವ ನಗುವಿನ ಅಲೆಯನ್ನು ತಡೆದುಕೊಂಡು ಇರುತ್ತಿದ್ದೆವು. ಒಂದನೇಯ ತರಗತಿಯಲ್ಲಿ ಅನ್ಯರಂತೆ ನನಗಿದ್ದದ್ದು ಒಂದೇ ಪ್ರವೃತ್ತಿ - ಆಟ ಅಡುವುದು! ಆ ವಯಸ್ಸಿನ ಬಹಳಷ್ಟು ವಿಶಯಗಳು ನನಗೆ ನೆನಪಿಲ್ಲ - ಒಮ್ಮೆ ಕಾಲಚಕ್ರವನ್ನು ಹಿಂದಕ್ಕೆ ತಿರುಗಿಸಿ, ಗೆಳೆಯರನ್ನೊಮ್ಮೆ ನೋಡಿ ಆನಂದಿಸಬಹುದಾಗಿದ್ದರೆ ಎಷ್ಟು ಚೆನ್ನಾಗಿರ್ತಿತ್ತು :)

Monday, August 16, 2010

ಸವಿ ನುಡಿ

ಕಾಲೇಜಿನ ಮೊದಲ ದಿನ, ನಾನು ಕಾಲೇಜು ತಲುಪಿದಾಗ ಮೊದಲ ಪೀರಿಯಡ್ ಶುರುವಾಗಿತ್ತು. ಯಾವ ತರಗತಿ, ಎಲ್ಲಿ ಕೂಡ್ಬೇಕು, ಯಾವ ಸಬ್ಜೆಕ್ಟ್... ಇವೇನೂ ಗೊತ್ತಿರಲಿಲ್ಲ. ನನ್ನ ತಮ್ಮ ಹಾಗು ಮಿತ್ರರೊಡನೆ ಕಾಲೇಜಿನ ಕಾಂಪೌಂಡನ್ನು ದಾಟಿ ಒಳಗೆ ಬಂದಾಗ ಜನಜಾತ್ರೆಯನ್ನು ನೋಡಿ ಕೆಲಕಾಲ ಏನು ಮಾಡಬೇಕೆಂದು ತೋಚಲಿಲ್ಲ - ಬಹಳ ಜನರನ್ನು ಕಂಡರೆ ಮೊದಲೇ ನನಗಾಗುತ್ತಿರಲಿಲ್ಲ. ಒಂದೆಡೆ ಹುಡುಗರು ನೋಟಿಸ್-ಬೋರ್ಡನ್ನು ಮುತ್ತಿಗೆ ಹಾಕಿಕೊಂಡು ನಿಂತಿರುವುದನ್ನು ಕಂಡು ಅದರತ್ತ ನಾವೂ ಸಹ ಹೋಗಿ ನಿಂತೆವು - ಅಲ್ಲಿ, ಯಾವ ತರಗತಿಗಳಿಗೆ ಯಾವ ವಿದ್ಯಾಥಿಗಳು ಹೋಗಬೇಕೆಂಬ ವಿವರ ಬರೆಯಲಾಗಿತ್ತು. ನಮ್ಮದು ಫಿಸಿಕ್ಸ್ ಸೈಕಲ್ ಎಂದು ನಮಗೆ ಮೊದಲೇ ತಿಳಿದಿದ್ದರಿಂದಾಗಿ ನೇರವಾಗಿ ನಮ್ಮ ಹೆಸರುಗಳನ್ನು ಆ ಸೂಚಿಯಲ್ಲಿ ನೋಡತೊಡಗಿದೆವು. ನನ್ನ ತಮ್ಮನಿಗೆ ತನ್ನ ತರಗತಿಯಾವುದೆಂದು ತಿಳಿದು ಅವನು ಹೋಗಲು ಅಣಿಯಾದ. ನಾನು ನನ್ನ ತರಗತಿಯನ್ನು ಹುಡುಕಿಕೊಂದು ಅಲ್ಲಿ ಹೋಗುವುದಾಗಿ, ಅವನನ್ನು ಊಟದ ಸಮಯಕ್ಕೆ ಸಿಗುವುದಾಗಿ ಹೇಳಿ ಬೀಳ್ಕೊಟ್ಟೆ.

ಹುಡುಕುತ್ತ, ಹುಡುಕುತ್ತ ಕೊನೆಗೆ ನನ್ನ ಹೆಸರು ಕಂಡಾಗ ಕ್ಲಾಸ್ ಶುರುವಾಗಿ ಅರ್ಧ ಘಂಟೆ ಆಗಿ ಹೋಗಿತ್ತು. ನನ್ನೊಡನೆ ಸೂರಿ ಸಹ ಇದ್ದ - ಆಗಿನ್ನು ನಮ್ಮದು ಹೊಸ ಪರಿಚಯ - ಅವನೂ ಹರಿಹರದವನು ಅನ್ನುವುದೊಂದೇ ತಿಳಿದಿತ್ತು ನನಗೆ. ಗಡಿಬಿಡಿಯಲ್ಲಿ ಕ್ಲಾಸಿನತ್ತ ಧಾವಿಸತೊಡಗಿದೆವು. ಅಷ್ಟರಲ್ಲಿ ಹಿಂದಿನಿಂದ ಹುಡುಗಿಯೊಬ್ಬಳು ತನ್ನ ತಂದೆಯನ್ನು ಕುರಿತು ತಾನು ತರಗತಿಗೆ ಹೋಗುವುದಾಗಿಯು, ಚಿಂತಿಸಬಾರದೆಂದು ಹೇಳಿ ತಂದೆಯನ್ನು ಬೀಳ್ಕೊಟ್ಟು ನಮ್ಮ ತರಗತಿಯತ್ತ ಬರುವುದನ್ನು ಆಲಿಸಿದೆ - ನನ್ನ ಮನೆ ಹಾಗು ಸಂಭಂದಿಕರ ಹೊರತಾಗಿ ನನಗೆ ಅರ್ಥವಾಗುವ ರೀತಿಯಲ್ಲಿ ಕೊಂಕಣಿಯಲ್ಲಿ ಮಾತನಾಡಿದ್ದನ್ನು ನಾನು ಕೇಳಿದ್ದು ಅದು ಮೊದಲನೇಯ ಬಾರಿಯಾಗಿತ್ತು. ಒಂದು ಬಗೆಯ ಸಂತಸವಾಯಿತು - ಏಕೆಂದು ಗೊತ್ತಿಲ್ಲವಾದರು, ನೂರಾರು ಅಪರಚಿತರಲ್ಲಿ ಒಂದು ಪರಿಚಿತ ಸವಿ ನುಡಿಯನ್ನು ಕೇಳಿ ಈ ಅಪರಿಚಿತೆಯನ್ನು ಒಮ್ಮೆ ನನ್ನ ಮಾತೃಭಾಷೆಯಲ್ಲಿ ಮಾತನಾಡಿಸಬೇಕೆಂದುಕೊಂಡೆ ಆದರೆ ತಿರುಗಿ ಯಾರವಳಾಕೆ ಎಂದು ನೋಡಲು ಮನಸ್ಸಾಗಲಿಲ್ಲ.

ಇತ್ತ ಫಿಸಿಕ್ಸ್ ಮೇಷ್ಟ್ರು ಬುಲೆಟ್ ಟ್ರೇನಿನ ವೇಗದಲ್ಲಿ ಪಾಠವನ್ನು ಮಾಡುತ್ತಿದ್ದರು - ನಾವು ಅವರ ಕ್ಲಾಸನ್ನು ಹೊಕ್ಕು ಹಿಂದಿನ ಬೆಂಚಿನಲ್ಲಿ ಸಿಕ್ಕ ಜಾಗದಲ್ಲಿ ತುರುಕಿ ಕುಳಿತುಕೊಂಡೆವು. ಅಂದು ಪಾಠ ತಲೆಗೆ ಹತ್ತುವುದು ಅಷ್ಟರಲ್ಲಿಯೇಇತ್ತು - ನನ್ನ ಧ್ಯಾನ ಡೋರಿನತ್ತಕ್ಕೆ ಮಿಸ್ಕಾಡದ ಹಾಗೆ ಭದ್ರವಾಗಿ ನಾಟಿತ್ತು. ನನಗರಿವಾಗದಂತೆಯೇ ಓಳ ಬರುತ್ತಿದ್ದ ಪ್ರತಿಯೊಬ್ಬರನ್ನೂ ಕಣ್ಣಿನಿಂದಲೇ ಅಳೆಯಲಾರಂಭಿಸಿದ್ದೆ. ಅಂದಿನ ದಿನ ಈನ್ನೂ ಹಲವಾರು ಘಟನೆಗಳು ನಡೆದುವು - ಸೂರಿ ರುದ್ರಪ್ಪ ಸರ್ ಕೈಲಿ ಬೈಸಿಕೊಂಡ; ಕೆಲವು ತರಗತಿಗಳು ನಡೆದುವು ಆದರೆ ಅವುಗಳಲ್ಲೇನು ವಿಷೇಶವಾದುದ್ದೇನು ನಡೆಯಲಿಲ್ಲ ಅಂದರೆ ತಪ್ಪೇನಾಗದು.

ಆ ಹುಡುಗಿಯನ್ನು ಗುರುತಿಸಿದ್ದೇನೋ ಸರಿ ಆದರೆ ಅವಳನ್ನು ಮಾತನಾಡಿಸಿದ್ದು, ಇಡೀ ದಿಗ್ರೀ ಸಮಯದಲ್ಲಿ, ಕೇವಲ ೨-೩ ಬಾರಿ ಇರಬೇಕು. ಅದು ಇಂಗ್ಲೀಷಲ್ಲಿ. ನನ್ನ ತರಗತಿಯಲ್ಲಿ ನನ್ನೊಡನೆ ಓದುತ್ತಿದ್ದ ಪ್ರತಿ ಮುಖವನ್ನು ಗುರುತಿಸಲು ನನಗೆ ಏನಿಲ್ಲವೆಂದರೂ ಸುಮಾರು ಒಂದು ಸೆಮಿಸ್ಟರ್ ಬೇಕಾಯಿತು. ಇನ್ನು ಅವರ ಹೆಸರುಗಳು ತಿಳಿದು ಮಿತ್ರರು ಆಗುವಷರಲ್ಲಿ ಒಂದು ವರ್ಷವೇ ಆಗಿ ಹೋಗಿತ್ತು.

ಎರಡನೇಯ ವರ್ಷಕ್ಕೆ ಕಾಲಿಡುತ್ತಿದ್ದಂತೆಯೆ ನಮ್ಮ ತರಗತಿಗಳು ಬದಲಾದುವು. ಹೊಸ ಮಿತ್ರರು, ನಮ್ಮದೇ ಆದ ವಿಭಾಗ, ಎಲ್ಲ ಚೆನ್ನಾಗಿತ್ತು. ಜೀವನದ ಹಲವಾರು ಮರೆಯಲಾಗದ ನೆನಪುಗಳನ್ನು ಇಲ್ಲಿ ಪಡೆದೆ. ನಮ್ಮ ಲೋಕವೇ ಬೇರೆಯಾಗಿತ್ತು; ಬೆಳಗಾದರೆ ಓಡಿ ಪ್ರಾಣಭಯವಿಲ್ಲದೆ ಮುರುಕಲು ಉಕ್ಕಡಗಾತ್ರಿ-ದಾವಣಗೆರೆ ಬಸ್ಸಿನಲ್ಲಿ ಜೋತು ಬಿದ್ದು ಕಾಲೇಜು ಸೇರುವುದೆಂದರೆ ಒಂದು ತೆರನೇಯ ಮೋಜು - ಸಂತಸ. ಓದು, ಆಟ, ಮಿತ್ರರೊಡನೆ ತಿರುಗಾಟ - ಬೆಳಗಿನ ಜಾವ ಎದ್ದೇಳಲು ಕೇವಲ ಅಮ್ಮನ ಒಂದು ಸ್ಪರ್ಶವೇ ಸಾಕಾಗಿತ್ತು! ಉಪನ್ಯಾಸಕರ ಸಹಕಾರ ಹಾಗು ತಾಳ್ಮೆ ನಮ್ಮಲ್ಲಿನ ಆತ್ಮವಿಶ್ವಾಸವನ್ನು ಮುಗಿಲಿಗೇರಿಸಿತ್ತು. ನೋಡುನೋಡುತ್ತ ಸಮಯ ಕಳೆದದ್ದೇ ಗೊತ್ತಾಗಲಿಲ್ಲ - ಕಾಲೇಜು ಮುಗಿಯಲು ಕೆಲವೇ ದಿನಗಳು ಇದ್ದುವು.

ಹೀಗೊಂದು ದಿನ, ರವಿವಾರವಿರಬೇಕು, ದಾವಣಗೆರೆಗೆ ರೈಲ್ವೇ ಸ್ಟೇಶನ್ ಗೆ ಟಿಕೇಟೊಂದನ್ನು ಕೊಂಡುಕೊಳ್ಳಲು ನಾನು ಬಂದಿದ್ದೆ. ರಷ್ ಇದ್ದುದ್ದರಿಂದ ಕೆಲ ಕಾಲ ಕೂತುಕೊಂಡೆ - ಟಿಕೇಟನ್ನು ಪಡೆದೆ. ಆಷ್ಟರಲ್ಲಿ ನನ್ನ ಸಹಪಾಠಿಯೊಬ್ಬನು ಬೆಂಗಳೂರಿಗೆ ಹೋಗಲು ಟಿಕೇಟು ಕೊಂಡುಕೊಳ್ಳಲು ಬಂದಿದ್ದ; ಅವನೊಡನೆ ನಾನು ಕಾಲೇಜಿನ ಮೊದಲ ದಿನ ಮಾತನಾಡಲು ಬಯಸಿದ ಆ ಹುಡುಗಿಯೂ ಇದ್ದಳು. ಇಬ್ಬರನ್ನು ಮುಗುಳ್ನಕ್ಕು ಗುರುತಿಸಿದೆ. ಹಿಂದೆಂದೂ ಕೊಂಕಣಿಯಲ್ಲಿ ಅನ್ಯರನ್ನು ಮಾತನಾಡಿಸಿರಲಿಲ್ಲ - ಮಾತನಾಡಿಸುವ ಪ್ರಮಯವೂ ಬಂದಿರಲಿಲ್ಲ - ಬಂದಿದ್ದರೂ ನಾನು ಕನ್ನಡದಲ್ಲಿ ಅಥವ ಇಂಗ್ಲೀಷಿನಲ್ಲಿ ಮಾತನಾಡಿಸಿ ಮುಗಿಸಿದ್ದೆ. ಮೊದಲ ಬಾರಿ ನನ್ನ ಭಾಷೆಯನ್ನು ನನ್ನವರಲ್ಲದವರೊಡನೆ ಮಾತನಾಡಿದೆ. "ನೀನು ಎಲ್ಲಿಗೆ ಹೋಗ್ತಿದ್ದೀಯ?", ಅನ್ನೋ ಅರ್ಥದಲ್ಲಿ ಅವಳನ್ನು ಕುರಿತು ಒಂದು ಪ್ರಶ್ನೆಯನ್ನು ಕೇಳಿದೆ; ಮಾತಿನ ವಿಷಯದಲ್ಲಿ, ಮೊದಲ ಬಾರಿ, ಕೂಪಮಂಡೂಕನಾಗದಿರಲು ಮನಸ್ಸು ಮಾಡಿದ್ದೆ.

ಒಂದು ಕ್ಷಣ ಅವಳ ಮುಖದಲ್ಲಿ ದೊಡ್ಡ ಪ್ರಷ್ನಾಚಿನ್ಹೆಯನ್ನು ಕಂಡೆ - "ಇವನಿಗೆ ನನ್ನ ಭಾಷೆ ಹೇಗೆ ಗೊತ್ತು?", ಅನ್ನುವ ಭಾವದಲ್ಲಿ ಆ ಕಣ್ಣುಗಳು ನನ್ನನ್ನು ನೋಡಿದುವು. ಇದು ನಡೆದದ್ದು ಕ್ಷಣಾರ್ಧದಲ್ಲಿ. ನಾನು ಒಂದು ಶಾಕ್ ಕೊಟ್ಟ ಹಾಗೆ ಆಗಿದ್ದರಿಂದ ಆವಳು, ಸ್ವಲ್ಪ ಸುಧಾರಿಸಿಕೊಂಡು, "ಒಹ್! ನಿನಗೆ ಕೊಂಕಣಿ ಬರುತ್ತದೆಯಾ? ನಾವು ಬೆಂಗಳೂರಿಗೆ ಹೋಗುತ್ತಿದ್ದೇವೆ - ಕಂಪನಿಯವರು ಮೆಡಿಕಲ್ ಚೆಕಪ್ ಗೆ ಕರೆದಿದ್ದಾರೆ", ಎಂದು ಕೊಂಕಣಿಯಲ್ಲಿ ಉತ್ತರಿಸಿದಳು. ಆಷ್ಟರಲ್ಲಿ ಅವರಿಬ್ಬರು ಟಿಕೇಟನ್ನು ಕೋಂಡುಕೊಳುವ ಸರದಿ ಬಂದಿತ್ತು. ನಾನು ಅವರಿಬ್ಬರನ್ನು ಬೀಳ್ಕೊಟ್ಟು ಹರಿಹರದ ಬಸ್ಸನ್ನು ಹತ್ತಿದೆ. ನಾನು ಹಾಗೆ ಮಾತನಾಡಿ ಬಂದಿದ್ದೆ ಎಂಬುದು ನನಗೆ ಬಹಳ ಸಂತಸವನ್ನು ನೀಡಿತ್ತು; ಹುಡುಗಿಯನ್ನು ಮಾತನಾಡಿ ಬಂದೆನೆಂಬುದಕ್ಕಲ್ಲ - ಮುಕ್ತವಾಗಿ, ಬರುವ ಭಾಷೆಯಲ್ಲಿ ಭಯವಿಲ್ಲದೆ ಮಾತನಾಡಿ ಒಬ್ಬ ಮಿತ್ರನನ್ನು ಮಾಡಿಕೊಂಡೆನೆಂಬ ಕಾರಣದಿಂದಾಗಿ. ಮನೆ ತಲುಪುವ ತನಕ, ದಾರಿಯುದ್ದಕ್ಕೂ "ನಾನು ಮೊದಲಿನಿಂದ ಎಲ್ಲರೊಡನೆ ಇನ್ನೂ ಚೆನ್ನಾಗಿ ಬೆರೆತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು!" ಅಂತ ಹಗಲುಗನಸನ್ನು ಕಂಡದ್ದಾಯಿತು. ಆ ಅಧ್ಯಾಯ ಅಲ್ಲಿಗೇ ಮುಗಿಯಿತು; ಇದು ನಡೆದು ೩ ವರ್ಷಗಳಿಗೂ ಹೆಚ್ಚು ಸಮಯ ಕಳೆದು ಹೋಗಿದೆ.

ಈಗ, ಮಧ್ಯರಾತ್ರಿ ಕೂತು ಕೀಲಿಮಣೆಯನ್ನು ಕುಟಿಯುತ್ತಿರುವಾಗ, ನಾನು ಹಾಗೆ ಮಾಡಿದ್ದು ನನಗೆ ಎಷ್ಟು ಒಳ್ಳೆಯದನ್ನು ಮಾಡಿದೆ ಎಂದು ನೆನೆಯುತ್ತಿದ್ದೇನೆ. ಸಹೋದ್ಯೋಗಿಯೊಬ್ಬನು, "ನೀನು ಚೆನ್ನಾಗಿ ಹಿಂದಿಯಲ್ಲಿ ಮಾತನಾಡುತ್ತೀಯ! ಅನ್ನಿಸುವುದೇ ಇಲ್ಲ ನೀನು ದಕ್ಷಿಣ ಭಾರತದವ", ಎಂದಾಗ ನನಗೆ ಖುಶಿಯಾಗುವುದೇಕೆಂದರೆ ಸಮಯ ಬಂದಾಗ ಬರುವ ಭಾಷೆಯಲ್ಲಿ, ತಿಳಿದ ರೀತಿಯಲ್ಲಿ ನನ್ನ ವಿಚಾರಗಳನ್ನು ಅನ್ಯರೊಡನೆ ಹಂಚಿಕೊಳ್ಳುವ ಮನೋವೃತ್ತಿಯನ್ನು ನಾನು ಬೆಳೇಸಿಕೊಂಡಿದ್ದೇನೆ ಎಂದು. ಕನ್ನಡದಲ್ಲಿ ಮಾತನಾಡುವ ಸಂತಸ ಮನೆಯಲ್ಲಿ ಮಿತ್ರರೊಡನೆ ಮಾತನಾಡಿ ಪಡೆದರೆ, ಆಫೀಸಿನಲ್ಲಿ ಕನ್ನಡವನ್ನು ಸೇರಿಸಿ, ಅನ್ಯ ಭಾಷೆಗಳಲ್ಲಿ ಮಾತನಾಡಿ ಅದರ ಸ್ವಾರಸ್ಯವನ್ನು ಸವಿಯುತ್ತೇನೆ :)

Wednesday, May 26, 2010

ನಮ್ಮೂರ ನೆನಪುಗಳು - ೨

ಕೆ.ಬಿ. ಮೆಸ್

ನಾನು ಬಿ.ಈ. ಓದುತ್ತಿದ್ದಾಗ ಮೊದಲ ಕೆಲವು ತಿಂಗಳು ಮನೆಯಿಂದ ಊಟದ ಡಬ್ಬಿಯನ್ನು ಒಯ್ಯುತ್ತಿದ್ದೆ; ಆದರೆ ಬಿಸಿ-ಬಿಸಿ ಊಟ ಮಾಡಲು ಆಗುತ್ತಿರಲಿಲ್ಲ, ಮನೆಯಿಂದ ಡಬ್ಬವನ್ನು ಎತ್ತಿಕೊಂಡು ಹೋಗಬೇಕಾಗುತ್ತಿತ್ತು. ಕರಿಬಸವೇಶ್ವರ (ಕೆ.ಬಿ.) ಮೆಸ್ ಸೇರಿಕೊಂಡೆ. ಕೆ.ಬಿ. ಮೆಸ್ ನಮ್ಮ ಕಾಲೇಜಿನಿಂದ ಕೆಲವೇ ನೂರು ಮೀಟರ್ ದೂರದಲ್ಲಿತ್ತು. ಮಧ್ಯಾಹ್ನದ ಹೊತ್ತು ನಾನು, ಸೂರಿ ಹಾಗು ಹಲವರು ನಮ್ಮ ತರಗತಿಯವರು ಕೂಡಿ ಮೆಸ್ ಗೆ ಹೋಗೋದು ವಾಡಿಕೆಯಾಗಿತ್ತು. ಊಟದ ಸಮಯವೆಂದರೆ ಹೆಚ್ಚುಕಡಿಮೆ ಪೂರ್ತಿ ಕಾಲೇಜೇ ರೋಡಿನ ಮೇಲೆ ಇರ್ತಿತ್ತು; ಹಲವಾರು ಮಿತ್ರರು ಸಿಗುತ್ತಿದ್ದರು ಹಾಗು ಮಿತ್ರೇತರರು ಕಣ್ಣಿಗೆ ಬೀಳುತ್ತಿದ್ದರು. ದಾವಣಗೆರೆಯ ಮಧ್ಯಾಹ್ನದ ಬಿಸಿಲು ಸ್ವಲ್ಪ ತೀಕ್ಷ್ಣವಾಗೇ ಇರುತ್ತಿತ್ತು; ಆದರೆ ಹೊಟ್ಟೆಯ ಹಸಿವು ಇದನ್ನು ಮೀರಿಸುತ್ತಿತ್ತು!

ಕೆ.ಬಿ. ಮೆಸ್ಸಿನ ಊಟ ಬಹಳ ವಿಶೇಷವಾದುದ್ದೇನಲ್ಲ - ಎರಡು ತೆಳ್ಳನೇಯ ಹಾಗು ಸಣ್ಣ (ಹಪ್ಪಳಕ್ಕೆ ಪೈಪೋಟಿ ನೀಡುವಂತಹ) ಮೈದಾ ಚಪಾತಿಗಳು, ಎರಡು ಪಲ್ಯಗಳು (ಸಾಮಾನ್ಯವಾಗಿ ಒಂದು ಕಾಳಿನ ಪಲ್ಯ ಇದ್ದೇ ಇರುತ್ತಿತ್ತು), ಕರಿಂಡಿ / ಬದನೇಕಾಯಿ ಚಟ್ನಿ, ೫೦ ಮಿ.ಲೀ. ಗೂ ಕಡಿಮೆ ಹುಳಿ ಮೊಸರು, ಸೋಡಾಯುಕ್ತ ಅನ್ನ, ಕುದಿಯುವ ಸಾರು (ಮೂಲಂಗಿ ನಮ್ಮಲ್ಲಿ ಹೇರಳ ಹಾಗು ಸೋವಿ - ಇನ್ನು ಯಾವ ಸಾರು ಅಂತ ನಿಮಗೆ ಬಾಯಿ ಬಿಟ್ಟು ಹೇಳೋದು ಬೇಡ ಅಂದ್ಕೊಂಡಿದ್ದೀನಿ), ಉಪ್ಪಿನಕಾಯಿ, ಉಪ್ಪು - ಅಷ್ಟೆ! ಅದೆಷ್ಟೋ ಬಾರಿ ಪಲ್ಯದಲ್ಲಿ ಕಲ್ಲನ್ನು ಕಡೆದಿದ್ದೇನೆ - ಒಂದು ಹಲ್ಲು ಈ ಮೆಸ್ಸಿನಲ್ಲಿಯೇ ಕೆಡಿಸಿಕೊಂಡೆ ಎಂದರೆ ತಪ್ಪೇನಾಗದು. ಎರಡನೇಯ ಬಾರಿ ಪಲ್ಯ ನೀಡಲು ಹಿಂದೆ-ಮುಂದೆ ಮಾಡುತ್ತಿದ್ದರು ಮೆಸ್ಸಿನ ತಾತಾ. ಕೆಲವೊಮ್ಮೆ ಮೊಸರು ಅತಿ ಹುಳಿಯಾಗಿ ಬಿಟ್ಟು ಬಂದದ್ದೂ ಇದೆ. ತಾತಾ ಒಂದು ನೋಟು ಪುಸ್ತಕದಲ್ಲಿ ನಮ್ಮ ಲೆಕ್ಕವನ್ನು ಬರೆದಿಡುತ್ತಿದ್ದರು. ಮೊದಮೊದಲು ನನ್ನ ತಮ್ಮನ ಹಾಗು ನನ್ನ ಲೆಕ್ಕವನ್ನು ಏರುಪೇರು ಮಾಡಿದರಾದರು, ಕ್ರಮೇಣ ಅದನ್ನು ಸರಿ ಪಡೆಸಿದರು.

ಊಟ ತಿನ್ನಲು ಅಡ್ಡಿಯಿರಲಿಲ್ಲ - ಹೊಟ್ಟೆಗೆ ಇದನ್ನರಗಿಸಲು ಕಷ್ಟಪಡಬೇಕಾಗುತ್ತಿರಲಿಲ್ಲ; ಹಾಗಾಗಿ ಮೆಸ್ ನ ತಾತ/ಮಗನ ಜೋಡಿ ಸಹ ಖುಶ್, ನಾವು ಖುಶ್! ಪ್ರತಿ ಊಟದ ಬೆಲೆ ೧೧-೧೩ ಇತ್ತು; ತಿಂಗಳಿನ ಮೊತ್ತವನ್ನು ತಿಂಗಳು ಶುರುವಾಗುತ್ತಿದ್ದಂತೆ ಕೊಡಬೇಕಿತ್ತು. ಅಂದರೆ ತಿಂಗಳಿಗೆ (ಸಾಮಾನ್ಯವಾಗಿ ೨೧ ದಿನಗಳು) ೨೫೦ ಕ್ಕು ಹೆಚ್ಚು ಖರ್ಚು ಆಗುತ್ತಿರಲಿಲ್ಲ. ಪ್ರತಿಯೊಂದು ರೂಪಾಯಿಗು ಬೆಲೆ ಇತ್ತು - ನೆನಸಿಕೊಂಡರ ಖುಶಿಯಾಗೊತ್ತೆ. ಇಂದು ಒಂದು ಒಳ್ಳೆಯ ಬುಫೆಗೆ ಹೋದರೆ ಕನಿಷ್ಟ ೨೫೦+ತೆರಿಗಗಳು ಖಂಡಿತ; ಊಟದಲ್ಲಿ ನಿಮಗೇನು ಬೇಕು, ಎಷ್ಟು ಬೇಕು ಅಷ್ಟನ್ನು ಸ್ವಾಹ ಅನ್ನಬಹುದು; ಕಲ್ಲು ಹುಡುಕಿದರೂ ಸಿಗದು. ಆದರೆ, ಕೆ.ಬಿ. ಮೆಸ್ಸಿನಲ್ಲಿದ್ದ ಮಜ ಇಲ್ಲೆಲ್ಲಿ?

Monday, May 24, 2010

ನಮ್ಮೂರ ನೆನಪುಗಳು - ೧

ಈ ಬಾರಿ ಹರಿಹರಕ್ಕೆ ಹೋದಾಗ ಶಾಲೆ ಹಾಗು ಕಾಲೇಜು ದಿನಗಳಲ್ಲಿ ಕಳೆದ ಸವಿ ನೆನಪುಗಳು ಮನಸ್ಸಿನಲ್ಲಿ ಮರುಕಳಿಸಿ ಬಹಳ ಸಂತಸವೆನಿಸಿತು. ಕೆಲ ನನಪುಗಳನ್ನು ಇಲ್ಲಿ ಬರೆದಿದ್ದೇನೆ; ಓದಿ ಆನಂದಿಸಿ -

ಬೆಳಗಿನ ಜಾವ ಬಸ್ಸನ್ನೇರುವ ಸರ್ಕ್ ಸ್:
ದಾವಣಗೆರೆಯ ಬಾಪೂಜಿ ಕಾಲೇಜಿನಲ್ಲಿ ಓದುತ್ತಿರುವಾಗ ನಡೆಯುತ್ತಿದ್ದ ಪ್ರತಿ ದಿನದ ಸಾಹಸದ ಕೆಲಸ ಇದು! ನಮ್ಮೂರಿನಿಂದ (ಅಂದರೆ, ಹರಿಹರ) ಕಾಲೇಜಿಗೆ ನೇರವಾಗಿ ಹೋಗುವ ಒಂದು ಬಸ್ಸು ಇತ್ತು (ಈಗ ಸಹ ಇದೆ ಎಂದು ನನಗೆ ಕೇಳಿ ಬಂದಿದೆ). ಈ ಬಸ್ಸು ಬೆಳಗಿನ ಜಾವ ೭ - ೭.೧೫ರ ಒಳಗಡೆ ಹರಿಹರ ಬಸ್ ನಿಲ್ದಾಣಕ್ಕೆ ಬರುತ್ತಿತ್ತು. ಈ ಒಂದು ಬಸ್ಸನ್ನು ಅವಲಂಬಿಸಿದ್ದವರು ಹಲವಾರು ವಿದ್ಯಾರ್ಥಿಗಳು - ಪೀ.ಯೂ. ಕಾಲೇಜಿನಿಂದ ಹಿಡಿದು ಅನೇಕ ಡಿಗ್ರೀ ಕಾಲೇಜಿನ ಜನ ಇದನ್ನು ಹತ್ತೋರು. ಜನರ ಸಂಖ್ಯೆ ೩ ಬಸ್ಸುಗಳಿದ್ದರೂ ಸಾಕಾಗದಷ್ಟು ಇರುತ್ತಿತ್ತು. ಸೀಟು ಸಿಗುವ ವಿಷಯ ಆಚೆಯಿರಲಿ, ನಿಲ್ಲಲು ಜಾಗ ಸಿಗುವುದೇ ಒಂದು ದೊಡ್ಡ ಸಾಹಸವಾಗಿರುತ್ತಿತ್ತು. ಬಸ್ಸು ಹತ್ತಿರದ ಒಂದು ಹಳ್ಳಿಯೊಂದರಿಂದ ಬರುತ್ತಿದ್ದರಿಂದ ಅದರಲ್ಲಿ ಮೋತೀವೀರಪ್ಪ ಕಾಲೇಜಿನ ವಿದ್ಯಾರ್ಥಿಗಳು ಮೊದಲೇ ತುಂಬಿರುತ್ತಿದ್ದರು. ಉಳಿದ ಕೆಲವೇ ಸೀಟುಗಳಿಗಾಗಿ ನೂಕುನುಗ್ಗಲಾಟವಾಗುತ್ತಿತ್ತು. ಬಸ್ಸು ದೂರದಿಂದಲೇ ಬರುವುದನ್ನು ಗಮನಿಸಿ ಹುಡುಗರು ಬಸ್ಸಿನೋಡನೆ ಓಡಿ ಅದನ್ನೇರಲು ಸಜ್ಜಾಗುತ್ತಿದ್ದರು. ಬಸ್ಸು ಹತ್ತಿರ ಬಂತು ಅಂದಾಕ್ಷಣ ಅದರಲ್ಲಿಂದ ಇಳಿಯುವ ಜನರನ್ನು ಗಮನಿಸದೆ ನುಗ್ಗುತ್ತಿದ್ದರು. ಆ ಬಸ್ಸೋ ಒಂದು ಚಕ್ಕಡಿಗಾಡಿಗಿಂತಲೂ ಮೆಲ್ಲಗೆ ಚಲಿಸುತ್ತಿತ್ತು. ೧೨೦ ಕ್ಕೂ ಹೆಚ್ಚು ಜನರನ್ನು ಆ ಹಳೆಯ ಗಾಡಿ ಹೊತ್ತುಕೊಂಡು ಸಾಗುವಂತೆ ಮಾಡುತ್ತಿದ್ದ ಚಾಲಕನು ನಿಜವಾಗಿಯೂ ಚೆನ್ನಾಗಿ ಬಸ್ಸನ್ನು ಓಡಿಸುತ್ತಿದ್ದನೆನ್ನಬೇಕು.

ಬಸ್ಸನ್ನು ಏರುವುದು ಒಂದು ಸಾಹಸವಾದರೆ, ಅದರಲ್ಲಿ ನಿಲ್ಲುವುದು ಇನ್ನೊಂದು ಸಾಹಸ. ಒಬ್ಬರಿಗೊಬ್ಬರು ಮೈಯನ್ನು ಅಂಟಿಸಿ ನಿಲ್ಲದೆ ಬೇರೆಯ ವಿಧಿಯೇ ಇರಲಿಲ್ಲ. ಗಾಳಿಯಾಡದೆ, ಎಲ್ಲ ಬೆವೆತ ಮೈಗಳಿಂದ ಎಲ್ಲರ ಅಂಗಿಗಳು ಹಸಿ. ಬಸ್ಸಿನ ಸ್ಥಿತಿಯು ಅಷ್ಟೇನು ಚೆನ್ನಾಗಿರಲಿಲ್ಲ - ಮುರಿದು ಹೋದ ಕಿಟಕಿಗಳು, ಮುರಿದು ಬೀಳುವ ಅಂಚಿನಲ್ಲಿದ್ದ ಫೂಟ್-ರೆಸ್ಟ್, ತುಂಡಾಗಿದ್ದ ಬಸ್ಸಿನ ಮೇಲ್ಭಾಗ. ಇಷ್ಟೆಲ್ಲವಿದ್ದರೂ ಜನರು ಪ್ರತಿ ದಿನ ಈ ಬಸ್ಸಿಗಾಗಿ ಕಾಯುತ್ತಿದ್ದರು!

ಇಷ್ಟೆಲ್ಲ ಕಷ್ಟ ಪಡುವುದು ಬೇಕಿತ್ತೆ? ಸುಮ್ಮನೆ ದಾವಣಗೆರೆಗೆ ನೇರವಾಗಿ ಹೋಗಲು ಸೌಕರ್ಯವಿರಲಿಲ್ಲವೆ ಎಂದು ನಿಮಗೆ ಅನ್ನಿಸಿರಬಹುದು. ನಿಜ, ಬಸ್ಸುಗಳು ಸಾಕಷ್ಟು ಇದ್ದುವಾದರು, ನೇರವಾಗಿ ಕೇವಲ ಬಸ್ ಪಾಸನ್ನು ತೋರಿಸಿ ಕಾಲೇಜಿನವರೆಗೆ ಹೋಗಬಹುದಾದಂತಹ ಬಸ್ಸು ಇದು ಏಕಮಾತ್ರವಾಗಿತ್ತು. ೩ ರೂಪಾಯಿ ಉಳಿತಾಯವಾಗುತ್ತಿತ್ತು! ಒಂದು ವಾರ್ಷಿಕ ಪಾಸು ಸುಮಾರು ೭೦೦ ರೂಪಾಯಿಗಳಿಗೆ ಬಂದು ಬಿಡುತ್ತಿತ್ತು.

ಈಗ, ಮನಸ್ಸು ಬಂದಾಗ ಅಂತರ್ಜಾಲದಲ್ಲಿ ವಾಲ್ವೋ ಬಸ್ಸಿನ ಟಿಕೇಟನ್ನು, ೭೦೦ ರೂಪಾಯಿ ಕೊಟ್ಟು, ಕೊಂಡು ಪಯಣಿಸುತ್ತೇವೆ ಆದರೆ ಮುರುಕಲು ಬಸ್ಸಿನ ಮೇಲೆ ಮಿತ್ರರೊಡನೆ ಹರಟುತ್ತ ಸಾಗುವಾಗ ಸಿಗುತ್ತಿದ್ದ ಆನಂದ ಈಗ ವಿರಳ...

Thursday, May 13, 2010

ಹಾಳು ಹರಟೆ

ಸುಮ್ಮನೆ ಕೂತು ಏನೂ ಮಾಡದೆ ಹಾಗೆಯೆ ವಿಚಾರಗಳ ಲಹರಿಯನ್ನು ಮನದಲ್ಲಿ ಹರಿಬಿಟ್ಟು ಬಹಳ ದಿನಗಳಾಗಿದ್ದುವು; ಇಂದು ಸ್ವಲ್ಪ ಸಮಯ ಮಾಡ್ಕೊಂಡು ಕೂತಿದ್ದೀನಿ. ಎದ್ದು ಕಾಣುವ ಸಿಂಗಲ್ ಫ಼್ಯಾಮಿಲೀ ಪ್ಯಾಕ್ ಹೊಟ್ಟೆಯನ್ನು ನೇವರಿಸುತ್ತ ಅದನ್ನು ಕರಗಿಸುವ ಹಗಲುಗನಸುಗಳನ್ನು ಕಂಡದ್ದಾಯಿತು. ಸ್ವಲ್ಪ ಸಮಯದ ಕೆಳಗೆ ಅಮ್ಮ ಹಾಗು ಅಮ್ಮನ ತೊಡೆಯ ಮೇಲೆ ಮಲಗಿದಾಗ ಸಿಗುವ ಸಂತಸದ ಅರಿವನ್ನು ಮತ್ತೆ ಮೂಡಿಸಿದ ಒಂದು ಬ್ಲಾಗನ್ನು ಓದಿದೆ. ಚೆನ್ನಾಗಿದೆ - ನೀವು ಸಹ ಅದನ್ನು ಓದಿ ಆನಂದಿಸಬಹುದು : http://sampada.net/blog/harish-athreya/09/05/2010/25300