Monday, May 21, 2012

"ಕ್ಷಮಿಸು" ಎಂದಿತು ಅಂತರಾತ್ಮ


"ಕೆಟ್ಟ ಕನಸೇ ಇದು!?"
ತನಗೆ ತಾನೇ ಪ್ರಶ್ನಿಸಿಕೊಂಡ ಸುಜಯ್.
ಒಂದು ಕ್ಷಣ "ತಾನೆಲ್ಲಿದ್ದೇನೆ?", ಎನ್ನುವುದು ಪ್ರಶ್ನೆ ಬಂದಿತಾದರೂ ಯಾಕೋ ತಲೆಯ ಮೇಲೆ ಬೇತಾಳ ತಾಂಡವವಾಡುತ್ತಿರುವನೇನೋ ಎನ್ನುವಂತಹ ತಲೆ ನೋವು. ತನ್ನ ಬಲಗೈ ಎತ್ತಿ ತಲೆಗೆ ಇಡೋಣ ಅಂದುಕೊಂಡನಾದರೂ ಯಾಕೋ ಬಲಗೈ ಆಡುತ್ತಿಲ್ಲ; ನಿಶ್ತೇಜವಾಗಿ ಬಿದ್ದ ಮರದ ಕೊಂಬೆಯಂತಿತ್ತು ಅವನ ಬಲಗೈ. ತನಗಾಗಿದ್ದ ಆಯಾಸದಲ್ಲಿ, ನಿಧಾನವಾಗಿ, ಕಣ್ಣುಗಳನ್ನು ತೆರೆದ ಅವನು ತಲೆಯನ್ನು ಅಲುಗಾಡಿಸಲಾಗದೆ ತನ್ನ ಬಲಗೈಯನ್ನು ಗಮನಿಸಿದಾಗ ಅವನಿಗೆ ಆದದ್ದು ಆಘಾತ!
ಬಲಗೈಯನ್ನೂ ಯಾರೋ ಜಜ್ಜಿ ಮಾಂಸದ ಮುದ್ದೆಯ ಹಾಗೆ ಮಾಡಿ ಹಾಕಿದ್ದರು. ರಕ್ತ ಹೆಪ್ಪುಗಟ್ಟಿ ಹೆಣದ ಕೈಯಂತಾಗಿತ್ತು ಅದು. ಅವನಿಟ್ಟ ನೋವಿನ ಆಕ್ರಂದನ ದೂರದ ವರೆಗೆ ಪ್ರತಿಫಲಿಸಿದ ಹಾಗೆ ಅವನಿಗೆನ್ನಿಸಿತು. ಕಣ್ಣಿನಿಂದ ಹಾಗೆಯೇ ಕಂಬನಿಗಳ ಸರಮಾಗೆ ನೆಲಕ್ಕುರುಳಿದುವು. ಮೆಲ್ಲಗೆ ಜಿನುಗುತ್ತಿರುವ ಮಳೆಯಲ್ಲಿ ತಾನು ಬಿದ್ದಿರುವುದು ಯಾವುದೋ ಕ್ರೀಡಾಂಗಣದಲ್ಲಿ ಎಂದು ಅರಿವಾಯಿತು ಅವನಿಗೆ. ಕಷ್ಟ ಪಟ್ಟು ತನ್ನ ಎಡಗೈಯನ್ನು ತನ್ನ ತಲೆಗೆ ಮುಟ್ಟಿಸಿದಾಗ ಉರಿದಂತಾಯಿತು. ಮೆಲ್ಲಗೆ ತಲೆಯನ್ನು ತಿರುಗಿಸಿ ತನ್ನ ಕೈ ಬೆರಳುಗಳನ್ನು ಗಮನಿಸಿದ - ಅದು ತನ್ನ ರಕ್ತ; ತನ್ನ ತಲೆಗೆ ಯಾರೋ ಬಲವಾಗಿ ಹೊಡೆದಿದ್ದಾರೆ ಎಂಬುದನ್ನು ಕೂಗಿ ಹೇಳುವಂತಿತ್ತು. ತನ್ನ ಕಾಲುಗಳನ್ನು ಅಲುಗಾಡಿಸಲು ನೋಡಿದ - ಊಹೂಂ! ಆಗ್ತಿಲ್ಲ!
"ಅಮ್ಮ ಎಲ್ಲಿದ್ದಾಳೆ.... ಅಯ್ಯೋ! ಅವಳಿಗೆ ಏನು ಆಗದಿದ್ದಿರಲಿ ದೇವರೇ!
ಸಂಧ್ಯಾ ಸರಿಯಾಗಿ ಇದ್ದಾಳೆ ಅಂತ ತಿಳಿದುಕೊಳ್ಳುವುದು ಹೇಗೆ?
ನಾನೆಲ್ಲಿದ್ದೇನೆ? ನಾನಿನ್ನೂ ಯಾಕೆ ಉಸಿರಾಡುತ್ತಿದ್ದೇನೆ?", ಎಂದು ಹತ್ತು ಹಲವು ವಿಚಾರಗಳು ಕ್ಷಣಾರ್ಧದಲ್ಲಿ ಅವನ ಮೆದುಳಿನಲ್ಲಿ ಸುಳಿದಾಡಿದುವು.
ಸತ್ತ ಹೆಣದಂತೆ ತನ್ನನ್ನು ಮಾಡಿದವರ್ಯಾರು? ಯಾಕೆ? ತಾನು ಬದುಕುಳಿಯುವನೇ? ಮುಂದೇನು ಮಾಡುವುದು? ಎಂದೆಲ್ಲ ಅಂದುಕೊಂಡ...
ಅಷ್ಟರಲ್ಲಿ ದೂರದಿಂದ ಯಾರೋ ತನ್ನ ಹೆಸರನ್ನು ಕೂಗುತ್ತ ತನ್ನೆಡೆಗೆ ಓಡಿಕೊಂಡು ಬರುತ್ತಿರುವಂತೆ ಭಾಸವಾಯಿತು. ಚಿರಪರಿಚಿತ ದನಿ ಅದು.... ಯಾಕೋ ನಿದ್ದೆ ಬಂದಂತಾಗುತ್ತಿದೆ ಎಂದುಕೊಳ್ಳುತ್ತಿದ್ದಂತೆ ಕಣ್ಣರೆಪ್ಪೆಗಳು ಭಾರವಾಗತೊಡಗಿದುವು. ಮಿತ್ರ ಸುನೀಲ್ ನನ್ನು ನೋಡಿ ಸಣ್ಣ ನಗುವೊಂದನ್ನು ಬೀರಿ ಮೂರ್ಛೆ ಹೋದನು.
-- ೦ --
ಸುಜಯ್ ಒಬ್ಬ ಸಾಮಾನ್ಯ ಹುಡುಗ; ಆಟದಲ್ಲಿ ಬಹಳಷ್ಟು ಆಸಕ್ತಿ ಇದ್ದ ಕಾರಣ ತಾನು ಆಟವನ್ನೇ ತನ್ನ ವೃತ್ತಿಯನ್ನಾಗಿ ಸ್ವೀಕರಿಸಿದ್ದ. ಬೆವರು ಸುರಿಸಿ ನಿರಂತರವಾಗಿ ದುಡಿದು ಫೂಟ್ಬಾಲ್ ಕ್ರೀಡಾಪಟುವಾಗಿ ತನ್ನ ಊರಿನ ಸಣ್ಣದೊಂದು ಕ್ಲಬ್ ಸೇರಿಕೊಂಡಿದ್ದ. ಬಲಿಷ್ಠವಾದ ಮೈ - ಅಂದವಾದ ಮೈಕಟ್ಟು ಹೊಂದಿದ ಇವನಿಗೆ ಅಭಿಮಾನಿಗಳ ಕೊರತೆ ಇರಲಿಲ್ಲ. ಆಟವೇ ಸರ್ವಸ್ವವಾಗಿದ್ದರೂ ಹೊಟ್ಟೆಪಾಡಿಗೆ ಅದು ಸಾಕಾಗದು ಅನ್ನುವುದನ್ನು ಅರಿತು ತನ್ನ ವ್ಯಾಸಂಗವನ್ನೂ ನಿಷ್ಠೆಯಿಂದ ಮಾಡಿ ಮುಗಿಸಿ ಬಿ.ಏ. ಪದವೀಧರನಾದ. ಚಿಕ್ಕದೊಂದು ಕೆಲಸಕ್ಕೆ ಸೇರಿಕೊಂಡು ತನ್ನ ಅಮ್ಮನಿಗೆ ಆಸರೆಯಾಗಿದ್ದ. ಸುಮಾ, ಇವನ ತಾಯಿ, ಇವನನ್ನ ಹೆತ್ತಿಲ್ಲವಾದರೂ ತಾಯಿ ಕೊಡಬೇಕಾದ ಅಕ್ಕರೆ-ಪ್ರೀತಿಯನ್ನೆಲ್ಲ ಇವನಿಗೆ ಧಾರೆಯೆರೆದು ಬೆಳೆಸಿದ್ದಳು. ತನ್ನ ಗಂಡನಿಂದ ಅನಿವಾರ್ಯ ಕಾರಣಗಳಿಂದಾಗಿ ದೂರವಾದ ಇವಳ ಬದುಕಿನಲ್ಲಿ ಆಶಾಕಿರಣವಾಗಿ ಬಂದವನು ಸುಜಯ್.
ವೃತ್ತಿಯಿಂದ ವೈದ್ಯೆಯಾದ ಸುಮಾ, ಊರಿನ ಜನರಿಗೆಲ್ಲ "ಸುಮಕ್ಕ ಡಾಕ್ಟ್ರು" ಎಂದೇ ಪರಿಚಿತವಾಗಿದ್ದಳು. ಜೀವನದಲ್ಲಿ ಗಂಡನಿಂದ ದೂರವಾಗಿ ನೊಂದು ನಿಂತಾಗ, ತನ್ನ ವೃತ್ತಿಯನ್ನು ಪುನರಾರಂಭಿಸಬೇಕು ಎಂದು ಸಲಹೆಗಾಗಿ ಗುರುಗಳಾದ ಪ್ರೊ. ಸುಬ್ರಮಣ್ಯ ಅವರನ್ನು ಕಂಡು ಕೇಳಿದಾಗ ಅವರು ಸೂಚಿಸಿದ್ದು ಈ ಚಿಕ್ಕ ಗ್ರಾಮ - ಸಂಪಿಗೆಹಳ್ಳಿ.
"ಐದು ವರ್ಷ ಸುಮ್ಮನೆ ಕೂತಿದ್ದೆ ಅಂತ ನಿನ್ನ ವಿದ್ಯೆಯೇನು ನಿನ್ನ ಕೈ ಬಿಡೊಲ್ಲ. ಈ ಊರಿನಲ್ಲಿ ಸರಕಾರೀ ಆಸ್ಪತ್ರೆಯೇನೋ ಇದೆ... ಆದರೆ ವೈದ್ಯರಿಲ್ಲ. ಈ ಜನರಿಗೆ ನಿನ್ನಂತಹ ಪ್ರತಿಭಾನ್ವಿತ ಮಹಿಳೆಯ ಸಹಾಯ ಬೇಕು. ನಿನಗೆ ನೀನರಿಸುತ್ತಿರುವ ನೆಮ್ಮದಿ ಇಲ್ಲಿ ಸಿಗಬಹುದೇನೋ. ಏನಂತೀಯಾ?", ಎಂದು ಕೇಳಿದ್ದರು ಪ್ರೊಫೆಸ್ಸರ್, ಗ್ರಾಮದ ಬೀದಿಗಳಲ್ಲಿ ಸುಮಾಳನ್ನು ನಡೆಸಿಕೊಂಡು ಹೋಗುತ್ತಾ. ಸಂತಸದಿಂದ ಮುಗುಳ್ನಕ್ಕ ಸುಮಾ ತನಗೆ ಆಗಬಹುದು ಎಂದು ಸೂಚಿಸಿದಳು. ಜೀವನಕ್ಕೆ ಸಿಕ್ಕ ಹೊಸ ಗುರಿಯನ್ನು ತನ್ನೆಲ್ಲ ಏಕಾಗ್ರತೆಯಿಂದ, ನಿಷ್ಥೆಯಿಂದ ಮಾಡತೊಡಗಿದಳು. ತನಗೆ ಬೇಕಾದ ನಿಷ್ಠಾವಂತ ನರ್ಸುಗಳನ್ನು ಆಯ್ದುಕೊಂಡು ಎಲ್ಲ ಕಠಿಣ ಅಡೆತಡೆಗಳನ್ನು ದಾಟುತ್ತ ಆ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿ ಮಾರ್ಪಡಿಸಿದಳು. ಹಗಲು-ರಾತ್ರಿಯೆನ್ನದೆ ದುಡಿದು ಗ್ರಾಮದ ಜನತೆಯ ಹಿತಕ್ಕಾಗಿ ಗ್ರಾಮದ ಮಗಳಾಗಿ ನಿಂತಳು. ಅದೆಷ್ಟು ಜನರಿಗೆ ಆಶಾಕಿರಣವನ್ನು ಒದಗಿಸಿ ಕೊಟ್ಟಳು ಅನ್ನುವುದಕ್ಕೆ ಲೆಕ್ಕವೇ ಇರಲಿಲ್ಲ. ಆಗಾಗ ಗುರುಗಳಾದ ಸುಬ್ರಮಣ್ಯರವರು ಭೇಟಿ ನಿಡಿ ವಿಚಾರಿಸಿಕೊಂಡು ಹೋಗುತ್ತಿದ್ದರು. ಗ್ರಾಮದಲ್ಲಿ ಜನರ ಆರೋಗ್ಯದ ಮೇಲೆ ಆಗಿದ್ದ ಪರಿಣಾಮ ಕಣ್ಣಿಗೆ ಎದ್ದು ಕಾಣುವಂತಿತ್ತು. ಮನಸ್ಸಿನಲ್ಲೇ ತನ್ನ ಶಿಷ್ಯೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎದೆ ಖುಷಿಯಿಂದ ಹಿಗ್ಗಿತ್ತು. ಗಾಯಕ್ಕೆ ಚುಚ್ಚುಮದ್ದಿನಿಂದ ಹಿಡಿದು ಹೆರಿಗೆ - ಎಲ್ಲ ಸುಮಾಳ ತೀಕ್ಷ್ಣ ಕಣ್ಣುಗಳ ಹಾಗು ಕುಶಲ ಕೈಗಳನ್ನು ದಾಟಿ ಮುಂದೆ ಸಾಗುತ್ತಿದುವು.
ಸುಮಾಳ ಜೀವನಕ್ಕೆ ಜಾಸ್ತಿಯೇನು ಅಲ್ಲದ ಅವಳ ಸರಕಾರೀ ಸಂಬಳ ಸಾಗುತ್ತಿತ್ತು; ಆದರೆ ಜನರ ಪ್ರೀತಿಯ ಸುಮಕ್ಕಾಳಿಗೆ ದವಸ-ಧಾನ್ಯ, ಹಾಲು ಮೊಸರು ಇತ್ಯಾದಿ ಬೇಡವೆಂದರೂ ಬಂದು ಮನೆಗೆ ತಲುಪುತ್ತಿತ್ತು. ಮೊದಮೊದಲು ನಿರಾಕರಿಸಲು ಪ್ರಯತ್ನಪಟ್ಟಳಾದರೂ ಜನರ ಅಕ್ಕರೆಗೆ ಸೋತು ಸುಮ್ಮನಾಗಿದ್ದಳು. ತನ್ನ ಮನೆ ಕೆಲಸಗಳಿಗಾಗಿ ಸೌಭಾಗ್ಯಳನ್ನು ನೆಮಿಸಿದ್ದಳು ಸುಮಾ. ಸೌಭಾಗ್ಯ ಸುಮಾಳಿಗೆ ಮನೆಯಾಳು ಆಗದೆ ಗೆಳತಿಯಂತಿದ್ದಳು. ತಮ್ಮ ಕಷ್ಟ-ಸುಖಗಳನ್ನು, ಊರ ವಿಷಯವನ್ನೂ ಸಮಯ ಸಿಕ್ಕಾಗ ಮಾತನಾಡುವುದು ಅವರ ಹವ್ಯಾಸವಾಗಿತ್ತು. ಆಸ್ಪತ್ರೆಯ ಕೆಲಸದಲ್ಲೂ ಸಹಾಯ ಮಾಡುತ್ತಿದ್ದಳು ಸುಭಾಗ್ಯ. ಆದರೆ ಅವಳ ದುರ್ಭಾಗ್ಯಕ್ಕೆ ಸೌಭಾಗ್ಯಳ ಗಂಡ ಅವಳು ಗರ್ಭವತಿಯಾಗುತ್ತಿದಂತೆಯೇ ಅವಳನ್ನು ಬಿಟ್ಟು ನಾಪತ್ತೆಯಾಗಿದ್ದ. ಕುಡಿದು ಬಂದು ತನ್ನನ್ನು ಬಡಿಯುತ್ತಿದ್ದ ಗಂಡ ನಾಪತ್ತೆಯಾದ ಸುದ್ದಿ ಸ್ವಲ್ಪ ಮಟ್ಟಿಗೆ ಸಂತೋಷವನ್ನು ತಂದರೂ ತಾನು ಹೊರಲಿರುವ ಮಗುವಿನ ಬಗ್ಗೆ ಚಿಂತೆ ಕಾಡತೊಡಗಿತು ಅವಳಿಗೆ. ತನ್ನ ದುಃಖವನ್ನೂ ಸುಮಕ್ಕನಲ್ಲಿ ತೋಡಿಕೊಂಡಳು ಸೌಭಾಗ್ಯ. ಅಂದು, ತನ್ನ ತಂಗಿಯಂತಿದ್ದ ಸೌಭಾಗ್ಯಳ ಕೈಗಳನ್ನೂ ಮೃದುವಾಗಿ ಹಿಡಿದು, ತಾನು ಅವಳೊಂದಿಗೆ ಇದ್ದೇನೆ ಎಂದಿದ್ದಳು ಸುಮಾ.
ಹೀಗೊಂದು ದಿನ ಹೆರಿಗೆಯ ನೋವು ತಡೆಲಾಗದೆ ಆಸ್ಪತ್ರೆಗೆ ನಡೆದುಕೊಂಡು ಬಂದ ಸೌಭಾಗ್ಯಳ ಸ್ಥಿತಿ ಚಿಂತಾಜನಕವಾಗಿತ್ತು. ಸುಜಯನ ಆಗಮನವಾದದ್ದು ಆ ರವಿವಾರ. ಇನ್ನೂ ನೋವಿನಲ್ಲಿದ್ದ ಸೌಭಾಗ್ಯ ಸುಜಯನ ಮುಖ ನೋಡಿ ಸಂತಸದಲ್ಲಿಯೇ ಸುಮಾಳ ಕೈಗಳನ್ನೂ ಹಿಡಿದು,"ಅಕ್ಕಾ, ನಾನು ಶಿವನ ಪಾದ ಸೇರ್ಕೊಂಡ್ರೆ ನೀವು ನನ್ನ ಮಗೂನ ಸಾಕ್ತೀರಲ್ಲಕ್ಕಾ?", ಎಂದು ಕಣ್ಣಿರಿಟ್ಟಿದ್ದಳು. 
ಅವಳಿಗೆ ಪುಟ್ಟಗೆ,"ಹಾಗೆನ್ನಬಾರದು! ನಿನಗೇನೂ ಆಗೋದಿಲ್ಲ. ನಾನಿದ್ದೀನಿ", ಎಂದು ಗದರಿಸಿದ್ದಳು ಸುಮಾ. ಮನಸ್ಸಿನಲ್ಲಿ ದುಗುಡವಿತ್ತು - ಸೌಭಾಗ್ಯಳ ಸ್ಥಿತಿ ನಿಜಕ್ಕೂ ಚಿಂತಾಜನಕವೇ ಆಗಿತ್ತು. ಪಟ್ಟಣದಿಂದ ಪರಿಣತ ವೈದ್ಯರನ್ನು ಕರೆತರಲಾಯಿತು. ಬಹಳಷ್ಟು ಪ್ರಯತ್ನಗಳು ನಡೆದುವು; ಆದರೆ ಅವಳ ಆರೋಗ್ಯದಲ್ಲಿ ಯಾವ ಸುಧಾರಣೆಯೂ ಕಾಣಲಿಲ್ಲ. ಇದಾದ ಎರಡು ದಿನಗಳಲ್ಲಿ ಅವಳ ಹೃದಯ ನಿಂತು ಅವಳು ತೀರಿಕೊಂಡಳು. ಹಿಂದೆಂದೂ ಆಗದಷ್ಟು ದುಃಖ ಸುಮಾಳಿಗೆ ಆಗಿತ್ತು. ತನ್ನ ಗೆಳತಿಯನ್ನು ಉಳಿಸಿಕೊಳ್ಳಲಾಗಿರಲಿಲ್ಲ. ಸುಜಯನ್ನು ಸಾಕುವ ಹೊಣೆ ಅವಳದಾಗಿತ್ತು. 
ಸುಜಯನನ್ನು ದತ್ತು ತಗೆದುಕೊಂಡು ಪ್ರೀತಿಯಿಂದ ಸಾಕಿದಳು.
-- ೧ --
ಸಾಮಾನ್ಯವಾಗಿ ರಾತ್ರಿಯಾಗುವುದರೊಳಗೆ ಮನೆ ಸೇರಿಬಿಡುವ ಸುಜಯ್ ಅಂದು ಮನೆಗೆ ಬರ್ದಿದ್ದನ್ನು ಗಮನಿಸಿ ಸುಮಾಳಿಗೆ ದಿಗಿಲಾಯಿತು. ಹೇಳದೆ ಎಲ್ಲೂ ಹೋಗುವನಲ್ಲ ಸುಜಯ್. ಇಂದು ತನ್ನ ಫೋನನ್ನು ತಗೆದುಕೊಳ್ಳದೆ ಬೇರೆ ಹೋಗಿದ್ದಾನೆ. ಏನು ಮಾಡುವುದು ಎಂದು ತೋಚದೆ ಸುನೀಲನಿಗೆ ಕರೆ ಮಾಡಿ ತಿಳಿಸಿದಳು ಸುಮಾ. ದಿಗಿಲು ಮಾಡಿಕೊಳ್ಳಬಾರದು ಎಂದು ತಿಳಿ ಹೇಳಿ, ತಾನು ಹುಡುಕುವುದಾಗಿ ತಿಳಿಸಿ, ಮಲಗಲು ಹೇಳಿದನು ಅವನು. ತನ್ನ ಅನ್ಯ ಮಿತ್ರರನ್ನು ಫೋನಾಯಿಸಿ ಸುಜಯನು ಕಾಣದಿರುವ ವಿಷಯವನ್ನೂ ತಿಳಿಸಿ ಅಲ್ಲೇನಾದರೂ ಬಂದಿರುವನೆನು ಎಂದು ಕೇಳಿದನು. ಎಲ್ಲೂ ಇಲ್ಲದ್ದನ್ನು ತಿಳಿದು ಸ್ವಲ್ಪ ಗಾಬರಿಗೊಂಡನಾದರೂ ಸುಜಯನ ತಾಯಿಗೆ ಕರೆ ಮಾಡಿ ತಾನು ಮಾರನೆಯ ದಿನ ಬೆಳಕಾಗುತ್ತಲೇ ಹುಡುಕಲು ಶುರು ಮಾಡುವುದಾಗಿ ಹೇಳಿ, ಸುಜಯ ಎಲ್ಲೆ ಇದ್ದರೂ ಸರಿಯಾಗಿ ಇರುವನು ಎಂದು ಹೇಳಿ, ಚಿಂತೆ ಮಾಡಬಾರದೆಂದು ಮತ್ತೆ ತಿಳಿ ಹೇಳಿ ಬೆಳಕು ಹರಿಯಲು ಕಾಯತೊಡಗಿದನು. ಮಳೆಗಾಲವಾದ ಕಾರಣ ಮೆಲ್ಲಗೆ ಜಿನುಗುತ್ತಿರುವ ಮಳೆಯಲ್ಲಿ ಬೆಳಗಿನ ಜಾವ ೫ ಘಂಟೆಗೆ ಎದ್ದು ತನ್ನ ಬೈಕಿನಲ್ಲಿ ಗ್ರಾಮದ ಸುತ್ತ ತಿರುಗಾಡ ತೊಡಗಿದನು. ಗೊತ್ತಿರುವ ಜಾಗಗಳನ್ನೆಲ್ಲ ಸುತ್ತಿದನು. ಆರು ಘಂಟೆಗಳು ಕಳೆದುವು ಆದರೆ ಸುಜಯನ ಪತ್ತೆ ಇರಲಿಲ್ಲ. ಇತ್ತ ಸುಮಾ ತನ್ನ 
ಮಗನ ಮೇಲಿನ ಕಾಳಜಿಯಿಂದ ಮಲಗದೆ ದುಃಖದಲ್ಲಿ ಮುಳುಗಿದ್ದಳು. ಇನ್ನೇನು ಹುಡುಕಾಟ ಮುಗಿಯಿತು ಅನ್ನುವಷ್ಟರಲ್ಲಿ ಸುಜಯನು ಕೂಗಿದಂತೆ ಭಾಸವಾಯಿತು. ಗ್ರಾಮದ ಸರಹದ್ದಿನ ಮೇಲೆ ನಿಂತಿದ್ದ ಸುನೀಲನು ತಡ ಮಾಡದೆ ಸದ್ದು ಬಂದಲ್ಲಿ ಓಡತೊಡಗಿದನು. ಸುಮಾರು ಇನ್ನೂರು ಮೀಟರಿನಷ್ಟು ದೂರದಲ್ಲಿ ರಕ್ತದಲ್ಲಿ ಮುಳುಗಿದ್ದ ಆಕ್ರತಿಯೊಂದು ಕಂಡು,"ಸುಜಯ್!...", ಎಂದು ಕೂಗುತ್ತ ಅತ್ತ ಓಡಿದನು. ಇನ್ನೈದು ನಿಮಿಷಗಳಲ್ಲಿ ಅಲ್ಲೊಂದು ಅಂಬುಲ್ಯೆನ್ಸ ಬಂದು ಮಾಂಸದ ಮುದ್ದೆಯಾಗಿದ್ದ ಸುಜಯನನ್ನು ಆಸ್ಪತ್ರೆಗೆ ವೊಯ್ಯಲು ಅಣಿಯಾಯಿತು.
ವಿಷಯ ಗೊತ್ತಾದೊಡನೆ ಆಸ್ಪತ್ರೆಗೆ ಧಾವಿಸಿದ ಸುಮಾ, ಮಗನ ಅವಸ್ತೆಯನ್ನು ಕಂಡು ದಂಗಾದಳು. ಎಂದೂ ಅತ್ತಿರದ ಸುಮಾ, ಅಂದು ಭೋರ್ಗರೆದು ಅತ್ತಳು. ದುಃಖ ಉಮ್ಮಳಿಸಿ ಬರುತ್ತಿತ್ತು. ತನ್ನ ಅನುಭವದಿಂದ ಇಂತಹ ಕೇಸಿನಲ್ಲಿ ಪೇಶಂಟ್ ಬದುಕುಳಿಯುವ ಸಾಧ್ಯತೆ ಎಷ್ಟು ಕಡಿಮೆ ಅನ್ನುವುದು ಅವಳಿಗೆ ಗೊತ್ತಿತ್ತು. ಬದುಕುಳಿದರೂ ಮುಂದಿನ ಜೀವನ ಎಷ್ಟು ಕಠಿಣ ಎಂದು ಅವಳಿಗೆ ಬೇರೆಯವರು ಹೇಳಬೇಕಾಗಿರಲಿಲ್ಲ. ಮಗ ಬದುಕುಳಿದರೆ ಸಾಕು ಎಂದು ಪ್ರಾರ್ಥಿಸ ತೊಡಗಿದಳು.
ಒಂದು ದೊಡ್ಡ ನಿದ್ರೆಯಿಂದ ಎದ್ದೆನೇನೋ ಎನ್ನುವ ಭಾವದಿಂದ ಕಣ್ಣರಳಿಸಿದ ಸುಜಯನಿಗೆ ತನ್ನ ಪಕ್ಕದಲ್ಲಿ ಕುಳಿತ ತನ್ನ ತಾಯಿಯನ್ನು ಕಂಡು ಎಲ್ಲಿಲ್ಲದ ಸಂತೋಷವಾಯಿತು. "ಅಮ್ಮಾ" ಎಂದವನೇ ತನ್ನ ಕಣ್ಣುಗಳಿಂದ ಆನಂದಬಾಷ್ಪವನ್ನು ಹರಿಸಿದನು. ಸತತವಾಗಿ ನಿದ್ದೆಗೆಟ್ಟು ತನಗಾಗಿಯೇ ಕಾಯುತ್ತ ಕುಳಿತಿದ್ದ ಆ ತಾಯಿಯನ್ನು ಕಂಡು ಸುಜಯನಿಗೆ ಬೇಸರವಾಯಿತು. ಹಿಂದೆಂದೂ ತಾಯಿಯನ್ನು ಕಾಯಿಸಿದವನಲ್ಲ ಸುಜಯ್. ಇರುವುದನ್ನು ನೇರವಾಗಿ ಹೇಳಿ ಅಭ್ಯಾಸ ಅವನಿಗೆ. ತಾನು ಯಾರು ಎಂದು ತನ್ನ ಸಾಕು-ತಾಯಿ ತನ್ನ ೧೦ ನೇಯ ಹುಟ್ಟು ಹಬ್ಬದಂದು ಹೇಳಿದಾಗ ಸಮಾಧಾನದಿಂದ ಕೇಳಿಸಿಕೊಂಡು ತಡವಿಲ್ಲದೆ, "ನೀನು ನನ್ನವ್ವ. ಅಷ್ಟು ಸಾಕು ನನಗೆ", ಎಂದಿದ್ದನು ಅವನು. ಸುಮಾಳಿಗೆ ಅಂದು ಮನಸ್ಸಿನಿಂದ ಒಂದು ಭಾರ ಕಡಿಮೆಯಾಗಿತ್ತು. ಮಗನ ಸಂಯಮ ಹಾಗು ಪ್ರೀತಿಯನ್ನು ಕಂಡು ಖುಷಿಯಲ್ಲಿ ತೇಲಿ ಹೋಗಿದ್ದಳು ಅವಳು. ಒಂದೆಡೆ ಅಮ್ಮ, ಇನ್ನೊಂದೆಡೆಯಲ್ಲಿ ಸುನೀಲ್ ಕುಳಿತಿರುವುದನ್ನು ಕಂಡನು. ಅವನತ್ತ ಮುಗುಳ್ನಕ್ಕು ಅವನಿಗೆ ಧನ್ಯವಾದಗಳನ್ನು ಹೇಳಿದನು. ಆದರೆ ತನ್ನ ಹೆಂಡತಿಯಾದ ಸಂಧ್ಯಾ ಕಾಣುತ್ತಿಲ್ಲವಲ್ಲ ಎಂಬ ಚಿಂತೆಯ ಗೆರೆಗಳು ಅವನ ಹಣೆಯ ಮೇಲೆ ಮೂಡತೊಡಗಿದ್ದನ್ನು ಗಮನಿಸಿದ ಸುಮಾ, "ಸಂಧ್ಯಾ ಮನೆಯಲ್ಲಿದ್ದಾಳೆ; ಇನ್ನೇನು ಬರ್ತಾಳೆ", ಎಂದುಬಿಟ್ಟಳು. ಸುನೀಲ್ ಅವಳತ್ತ ಅಚ್ಚರಿ ಕಣ್ಣುಗಳನ್ನು ಹಾಯಿಸಿದನಾದರೂ ಏನನ್ನೂ ಮಾತನಾಡಲಿಲ್ಲ.
ಸುಜಯನಿಗೆ ಸ್ವಲ್ಪ ಔಷಧಿ ಮಿಶ್ರಿತ ಗ್ಲೂಕೋಸ್ ಏರಿಸುತ್ತಿದಂತೆಯೇ ಅವನು ಮತ್ತೆ ನಿದ್ದೆಗೆ ಜಾರಿದ. ಐದು ಶಸ್ತ್ರಚಿಕಿತ್ಸೆಗಳು ಹಾಗು ಮೂರು ತಿಂಗಳ ಕೋಮಾದ ನಂತರ ಮೊದಲನೆಯ ಬಾರಿ ಎದ್ದಿದ ಸುಜಯ್. ಅವನು ಚೇತರಿಸಿಕೊಳ್ಳುವ ಹಾದಿಯಲ್ಲಿ ಇದೊಂದು ಪುಟ್ಟ ಹೆಜ್ಜೆಯಾಗಿತ್ತು. ಅವನ ಬಲಗೈಯನ್ನು ಕತ್ತರಿಸಬೇಕಾಗಿ ಬಂದಿತ್ತು. ತಾಯಿಯ ಅನುಮತಿ ಪಡೆದು ಅದನ್ನು ಮಾಡಲಾಯಿತು. ಕಾಲುಗಳೆರಡರಲ್ಲೂ ತೆಜವಿರಲಿಲ್ಲ - ಸರಿಯಾಗಲು ಬಹಳಷ್ಟು ಸಮಯ ಬೇಕಾಗುವುದೆಂದು ಸುಮಾಳಿಗೆ ಚೆನ್ನಾಗಿ ಗೊತ್ತಿತ್ತು. ಇನ್ನೂ ದೇಹದ ಮೇಲೆ ಉಳಿದ ಗಾಯಗಳು ಮಾಸಲು ಹಲವಾರು ತಿಂಗಳುಗಳೇ ಕಳೆಯಬೇಕಿತ್ತು. ಇನ್ನೂ ಮನಸ್ಸಿಗೆ ಆದ ಹಾಗು ಆಗಲಿರುವ ಗಾಯಗಳು ಸುಜಯನನ್ನು ಅದೆಷ್ಟು ಶಿಥಿಲಗೊಳಿಸಲಿವೆಯೋ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಅವನು ಫೂಟ್ಬಾಲ್ ಆಡುವುದು ಕ್ರಮೇಣ ಸಾಧ್ಯವಿಲ್ಲವೆಂದು ವೈದ್ಯರು ಸುಮಾಳಿಗೆ ಹೇಳಿಯಾಗಿತ್ತು.
-- ೨ --
ಮಾರನೇಯ ದಿನ ಸುಜಯ್ ಎದ್ದಾಗ,"ಸಂಧ್ಯಾ ಎಲ್ಲಿ...?",ಎಂದು ಕೇಳಿದ.
"ಅವಳು ಇಲ್ಲಿ ಇಲ್ಲಪ್ಪ. ತಾವರೆಕೊಪ್ಪದ ಕಾರಾಗೃಹದಲ್ಲಿ ಇಟ್ಟಿದ್ದಾರೆ ಅವಳನ್ನು... ಉಗ್ರವಾದ ಹಾಗು ನಿನ್ನನ್ನು ಕೊಲ್ಲುವ ಪಿತೂರಿ ಮಾಡಿದ ಆರೋಪದ ಮೇಲೆ..ನೆನ್ನೆ ನೀನು ಮೂರು ತಿಂಗಳ ದೊಡ್ಡ ನಿದ್ರೆಯ ನಂತರ ಎದ್ದಿದ್ದ ಕಾರಣ ನಾನು ಈ ವಿಷಯವನ್ನೂ ನಿನ್ನಿಂದ ಮುಚ್ಚಿ ಇಟ್ಟಿದ್ದೆ... ನಿನ್ನ ಅಮ್ಮನ್ನ ಕ್ಷಮಿಸಪ್ಪ...", ಎಂದಳು ಸುಮಾ, ಕೈ ಜೋಡಿಸುತ್ತ. ಅವಳ ಮುಖದ ಮೇಲೆ ಯಾವ ಭಾವವೂ ಇರಲಿಲ್ಲ; ಆದರೆ ಕಂಬನಿಗಳೆರಡು ಉರುಳುವುದರೋಳಗಾಗಿ ಅವಳು ಅವುಗಳನ್ನು ಒರೆಸಿ ಹಾಕಿದ್ದಳು.
"ಸಂಧ್ಯಾ?!...", ಎಂದವನೇ ದಿಗ್ಭ್ರಾಂತನಾದ ಸುಜಯನಿಗೆ ಏನು ಹೇಳಬೇಕೆಂಬುದು ತೋಚದಂತಾಗಿ ಬಿಕ್ಕಳಿಸತೊಡಗಿದನು.
-- ೩ --
ಸಂಧ್ಯಾ ಸುಜಯನ ಬಾಲ್ಯ ಸ್ನೇಹಿತೆ.ಶಾಲೆಯಿಂದ ಡಿಗ್ರೀ ವರೆಗೂ ಜೊತೆಗೆ ಓದಿದ್ದವರು - ಸುನೀಲ್,ಸುಜಯ್ ಹಾಗು ಸಂಧ್ಯಾ. ಶಾಲೆಯಲ್ಲಿದ್ದಾಗ. ರವಿವಾರ ಬಂದರೆ ಮುಗಿಯಿತು, ಸುಮಾಳಿಗೆ ತಲೆನೋವು ಶುರು. ಮೂವರು ಮಿತ್ರರು ಸೇರಿ ಊರು ಸುತ್ತುವುದೇ ಕೆಲಸವೆಂಬಂತೆ ಮನೆಯಿಂದ ಹೊರ ಬಿದ್ದವರೇ ಮನೆ ಹೊಕ್ಕುತ್ತಿದ್ದದ್ದು ಕತ್ತಲು ಕವಿದ ಮೇಲೆ. ಮನೆಗೆ ಬಂದ ಮೇಲೆ ಹಿರಿಯರಿಂದ ಪೆಟ್ಟು ತಿಂದು ಅಳುವ ಪ್ರಕ್ರಿಯೆ ಪ್ರತಿ ರವಿವಾರ ನಡೆದೇ ನಡೆಯುತ್ತಿತ್ತು. ಪೆಟ್ಟು ತಿನ್ನಲು ಕಾರಣಗಳೇನು ಹುಡುಕಿಕೊಂಡು ಹೋಗಬೇಕಾಗಿರಲಿಲ್ಲ - ಅವುಗಳು ಇವರನ್ನೇ ಹುಡುಕಿಕೊಂಡು ಬರುತ್ತಿದ್ದುವು. ಮನೆಯ ಮುಂದೆ ಕ್ರಿಕೆಟ್ ಆಡುತ್ತಿರುವಾಗ ಸುಜಯನು ಬಾರಿಸಿದ ಪರ್ಫೆಕ್ಟ್ ಸ್ಕ್ವೇರ್ ಕಟ್ ಎಲ್ಲರ ಕಣ್ಣೆದುರಲ್ಲಿ ಸ್ಲೋ ಮೋಷನ್ನಿನಲ್ಲಿ ಎಂಬುವಂತೆ ಎದುರುಮನೆ ತಿಮ್ಮಕ್ಕನ ಕಿಟಕಿಯ ಗಾಜನ್ನು ತಿವಿದು ಒಳಹೊಕ್ಕಾಗ ಗಾಜು ಒಡೆದ ಸದ್ದಿಗಿಂತ ದೊಡ್ಡದಾದ ತಿಮ್ಮಕ್ಕನ ಗುಡುಗು,"ಯಾವನೋ --ಮಗ ಚೆಂಡು ಕಿಟಕಿಗೆ ಹೊಡೆದಿದ್ದು! ಎಷ್ಟ್ ಸಲಾ ಹೇಳ್ಬೇಕು ನಿಮಗೆ ಮಂಗ - ಪೋಲಿಗಳಾ!! ಬಾಲು ಕೊಡೊಲ್ಲ ನಾನು!". ಅಂದು ಅಮ್ಮನಿಂದ ಅವನ ಕಲೆಯ ಪ್ರದರ್ಶನಕ್ಕೆ ಸಿಕ್ಕಿದ್ದು ಕಪಾಳ ಮೋಕ್ಷ. ಚಿಕ್ಕ ಚೆಂಡಿನಿಂದ ದೊಡ್ದದಕ್ಕೆ (ಅಂದರೆ ಫುಟ್ಬಾಲ್ಗೆ) ತೆರ್ಗಡೆಯಾಗಿದ್ದೇ ಅಂದು. ಪಕ್ಕದ ಬೀದಿಯಲ್ಲಿ ಬುಗುರಿ ಆಡುತ್ತಿದ್ದಾಗ ಸಂಧ್ಯಾಳಿಗೆ ಕಲಿಸಿ ಕೊಡಲು  ಹೋಗಿ ಹೊಡೆದ ಗಿಚ್ಚಿ ಬೊಕ್ಕ ತಲೆ ಪಾಪಣ್ಣನ ತಲೆಗೆ ಬಿದ್ದು ತೂತು ಕೊರೆದಾಗ ಕಾಲು ಕಿತ್ತಿದ್ದು ಬಹಳ ಹೊತ್ತು ಸುಜಯನಿಗೆ ಉಳಿಸಲಿಲ್ಲ; ಅಮ್ಮನು ನೀಡಿದ ಚಾಟಿ ಏಟು ಬೆನ್ನ ಮೇಲೆ ಚಿತ್ರ-ವಿಚಿತ್ರ ನಕಾಶೆಗಳನ್ನ ಮೂಡಿಸಿತ್ತು.ಅಲ್ಲಿಗೆ, ರೋಡಿನಲ್ಲಿ ಆಡುವುದು ಬಂದ್! ಇನ್ನು ಮುಂದೆ ಶಾಲೆಯ ಕ್ರೀಡಾಂಗಣದಲ್ಲಿ ಹೋಗಿ ಆಡಬೇಕು, ಸರಿಯಾದ ಸಮಯಕ್ಕೆ ಮನೆಗೆ ಹಿಂದಿರುಗಬೇಕು ಅನ್ನುವ ಅಪ್ಪಣೆಯಾಗಿತ್ತು ಅಮ್ಮನಿಂದ. ಪಾಲಿಸದೇ ಇರುವುದು ಇದೆಯೇ?
ಇವರ್ಯಾರಿಗೂ ಕೈಯಲ್ಲಿ ಕಾಸು ನೀಡಲಾಗುತ್ತಿರಲಿಲ್ಲ; ಹಾಗಾಗಿ ಕಾಲುಗಳೇ ಇವರಿಗೆ ಗಾಲಿ, ಹೊಳೆಯ ನೀರೆ ಪೆಟ್ರೋಲ್ ಹಾಗು ಕದ್ದ ಪೇರಲೆಯ ಹಣ್ಣು - ಮಾವಿನ ಕಾಯಿ ಸೈಡ್ ಡಿಷ್. ಇದಕ್ಕೆಲ್ಲ ಪೊರಕೆಯ ಹೊಡೆತ ಮನೆಗೆ ಮರಳಿದ ಕೂಡಲೆ ಅನ್ನುವುದು ಇವರಿಗೆ ಗೊತ್ತು; ಆದರೆ, ಹೊಡೆತಕ್ಕೆ ಹೆದರಿ ತಡೆಯುವ ಜೀವಗಳಾಗಿರಲಿಲ್ಲ ಅವು. ತಮ್ಮ ದಾರಿಯನ್ನು ತಾವು ನಡೆದೇ ತೀರುತ್ತೇವೆ ಎಂದು ಪಣ ತೊಟ್ಟ ಪುಟಾಣಿಗಳ ಸಂಗ ಅದು. ಮೊದಲಿಂದಲೂ ಸುಜಯನಿಗೆ ಸಂಧ್ಯಾಳ ಮೇಲೆ ಪ್ರೀತಿ - ಅಕ್ಕರೆ. ತಮ್ಮ ಕರಾಮಾತುಗಳಲ್ಲಿ ಸಿಕ್ಕಿ ಹಾಕಿಕೊಂಡರೆ ಬೆತ್ತದ ಏಟು ತಿನ್ನಲು ಮೊದಲು ಕೈ ಮುಂದಾಗುತ್ತಿದ್ದದ್ದು ಸುಜಯನದ್ದು - ಜೊತೆಗೆ, ಸಂಧ್ಯಾಳದ್ದು ಇದರಲ್ಲಿ ಯಾವ ತಪ್ಪೂ ಇಲ್ಲ ಅನ್ನುವ ಧೃಡ ಹೇಳ್ಕೆ. ಮುಂದೊಮ್ಮೆ ತನ್ನ ಇದೆ ಸಂಧ್ಯಾಳ ಪರ ವಹಿಸುವುದು ತನ್ನನ್ನು ಜೀವಂತ ಶವವನ್ನಾಗಿ ಮಾಡುವುದು ಎನ್ನುವುದು ಅವನಿಗೆಲ್ಲಿ ಗೊತ್ತಿತ್ತು?
ಮಕ್ಕಳು ದೊಡ್ದವರಾದರು. ತಮ್ಮ ಗುರಿಗಳನ್ನು, ಅವನ್ನ ಸೇರುವ ದಾರಿಯನ್ನು ಅವರೇ ರೂಪಿಸಿಕೊಂಡರು. ಸುಜಯನಿಗೆ ಅವನ ತಾಯಿಯ ಪ್ರೋತ್ಸಾಹವಿತ್ತು. ಸುನೀಲನು ತನ್ನ ಸ್ವಂತ ಉದ್ಯೋಗವನ್ನು ಶುರು ಮಾಡಿದ. ಸಂಧ್ಯಾ ಸಮಾಜ ಸೇವಕಿಯಾಗಿ ಜನರ ಹಿತಕ್ಕಾಗಿ ಹೋರಾಡಲು ನಿರ್ಧರಿಸಿದ್ದಳು.
ಆದರೆ, ಇದರ ಮಧ್ಯ ಆದ ಒಂದು ವಿಚಿತ್ರ ಬೆಳವಣಿಗೆ ಎಲ್ಲರನ್ನೂ ಬೆಚ್ಚಿ ಬೀಳಿಸಿತು. ಸಮಾಜ ಸೇವಕಿ ಆಗಿದ್ದ ಸಂಧ್ಯಾ, ಉಗ್ರವಾದಿಗಳ ಸಂಘವೊಂದನ್ನು ಅರಿಯದೆ ಸೇರಿ, ಅದರಿಂದ ಬಿಡುಗಡೆಯಾಗಲಾರದೆ ಒದ್ದಾಡುತ್ತಿದ್ದಳು. ಇದನ್ನರಿತ ಸುಜಯ್ ತನ್ನ ಗೆಳೆಯ ಸುನೀಲ್ನೊಡನೆ ಸೇರಿ ಅವಳ ಸಹಾಯಕ್ಕಿಳಿದರು. ಪೋಲೀಸರ ಸಹಾಯ ಪಡೆದು ದುಷ್ಟರನ್ನು ಬಹು ಮಟ್ಟಿಗೆ ಹಿಡಿಸಿ ಹಾಕುವುದರಲ್ಲಿ ಸಮರ್ಥರಾದರು. ಇದಾದ ಕೆಲವೇ ದಿನಗಳಲ್ಲಿ ಸಂಧ್ಯಾ ಸುಜಯನ್ನ ಮದುವೆಯಾದಳು.ಇನ್ನೇನು ಎಲ್ಲ ಸರಿ ಹೋಯಿತು ಅನ್ನುವಸ್ಟರಲ್ಲಿ ಉಗ್ರರ ಟೋಳಿಯೊಂದು ಪ್ರತಿಕಾರಕ್ಕೆ ಹಾತೊರೆಯುತ್ತಿತ್ತು. ಎದುರಾಳಿಗೆ ಹಿಂಸೆ ಕೊಡುವ ಉದ್ದೇಶವುಳ್ಳ ಕ್ರುರಿಗಳಾದ ಅವರು ಹೊಂಚನ್ನು ಹಾಕುತ್ತ, ಸರಿಯಾದ ಸಮಯಕ್ಕೆ ಕಾಯುತ್ತ ಕುಳಿತರು. ಸುಜಯನ ಮನೆಯಲ್ಲಿ, ಗುಪ್ತವಾಗಿ, ಸಂಧ್ಯಾ  ಉಗ್ರವಾದಿಗಳಲ್ಲಿ ಒಬ್ಬಳು - ತನ್ನ ಗಂಡನನ್ನು ಕೊಲ್ಲಲು ಹೊಂಚು ಹಾಕುತ್ತಿದ್ದಾಳೆ ಎನ್ನುವಂತೆ ಪುರಾವೆಗಳನ್ನು ಸೃಷ್ಟಿಸಿ ನೆಟ್ಟರು. ಕೆಲಸದ ನಿಮಿತ್ತ ಪಕ್ಕದ ಊರಿನಿಂದ ನಡೆದು ಬರುತ್ತಿದ್ದ ಸುಜಯನಿಗೆ ಹಿಂದಿನಿಂದ ತಲೆಯ ಮೇಲೆ ಉಗ್ರರಲ್ಲೊಬ್ಬರು ಯಾರೋ ಬಲವಾಗಿ ಹೊಡೆದರು. ಸುಜಯ್ ನೆಲಕ್ಕೆ ಕುಸಿದು ಬಿದ್ದ. ಕೈಲಿದ್ದ ಕಬ್ಬಿಣದ ಸಲಾಖೆಗಳಿಂದ ಅವನ ಮೈ ಹಣ್ಣು-ಹಣ್ಣಾಗುವ ವರೆಗೆ ಚಚ್ಚಿದರು. ಮೂರ್ಛೆ ಹೋದ ಇವನು ಇನ್ನೇನು ಬದುಕಿಯಾನು ಎಂದು ದೂರದ ಬಯಲಿನಲ್ಲಿ ಎಸೆದು ತಲೆ ಮರೆಸಿಕೊಂಡರು. ಇತ್ತ ಅನಾಮಧೇಯರಾಗಿ ಪೊಲೀಸ್ ಸ್ಟೇಷನ್ ಗೆ ಕರೆ ಹಚ್ಚಿ ಪುರಾವೆಯ ಬಗ್ಗೆ  ಹೇಳಿದರು. ಮನೆಗೆ ಬಂದು ತಪಾಸಣೆ ನಡೆಸಿದ ಅವರು ಸಂಧ್ಯಾಳನ್ನು ಬಂಧಿಸಿದರು - ಪುರಾವೆಗಳು ಬಲವಾಗಿದ್ದುವು.
-- ೪ --
ಬಿಕ್ಕಳಿಸುತ್ತಿದ್ದ ಸುಜಯನಿಗೆ ಸಮಾಧಾನ ಹೇಳಿದ ಅವನಮ್ಮ ನಡೆದದ್ದನ್ನು ನಿಧಾನವಾಗಿ ತಿಳಿ ಹೇಳಿದಳು. ಸುಜಯನ ಕೈ-ಕಾಲುಗಳು ಪ್ಲಾಸ್ಟರ್ ನಲ್ಲಿ ಹೊಚ್ಚಲ್ಪಟ್ಟಿದ್ದುವು. ಬಲಗೈ ಇನ್ನಿಲ್ಲದಿರುವುದನ್ನು ಚಿಕ್ಕ ಮಾತೇನೋ ಅನ್ನುವ ಹಾಗೇ ತೆಲಿಸಿದಳು. ಕಾಲಿನಲ್ಲಿ ಸ್ಥಿರತೆ ಕ್ರಮೇಣ ಬರುವುದು ಆದರೆ ಸ್ವಲ್ಪ ಕುಂಟು ಇರುವುದು ಎಂದು ಸೂಕ್ಷ್ಮವಾಗಿ ತಿಳಿಸಿದಳು. ಎಲ್ಲದ್ದಕ್ಕಿಂತ ಹೆಚ್ಚಾಗಿ ತಾನು ಅವನೊಂದಿಗೆ ಇದ್ದು ಇದನ್ನೆಲ್ಲಾ ಜೊತೆಗೆ ಸರಿ ಮಾಡುವುದಾಗಿ ಹೇಳಿದಳು. ಸಂಧ್ಯಾ ತೊಂದರೆಯಿಲ್ಲದೆ ಬಿಡುಗಡೆಯಾಗುವಳೆಂದು, ಅವನು ಗುಣಮುಖನಾಗುವನೆಂದು ಭರವಸೆಯ ಮಾತುಗಳನ್ನ ಆಡಿದಳು ತಾಯಿ. ಎಲ್ಲ ಮೊದಲಿನಂತಿರುವುದಿಲ್ಲ ಎಂದು ಚೆನ್ನಾಗಿ ಗೊತ್ತಿತ್ತು ಅವಳಿಗೆ - ಆದರೆ, ಪ್ರಯತ್ನ ಪಟ್ಟರೆ, ಎಷ್ಟೋ ಮಟ್ಟಿಗೆ ಸುಧಾರಣೆಗಳು ಆಗಬಹುದು - ತನ್ನ ಮಗ ಇದೆಲ್ಲದರಿಂದ ಹೊರಬರುವನು ಅನ್ನುವ ಧೃಡ ನಂಬಿಕೆ ಅವಳಲ್ಲಿತ್ತು. ಸಧ್ಯಕ್ಕೆ ಸುಜಯನನ್ನು ಗುಣಮುಖನಾಗಲು ಬಿಟ್ಟು ಸಂಧ್ಯಾಳನ್ನು ಕಾಪಾಡಬೇಕಿತ್ತು.
ಗುರುಗಳಾದ ಸುಬ್ರಮಣ್ಯರವರು ತಮಗೆ ಗೊತ್ತಿದ್ದ ಅತ್ಯುನ್ನತ ವಕೀಲರನ್ನು ಕರೆತಂದರು. ಗ್ರಾಮದ ಜನರು ಸಂಧ್ಯಾಳ ಪರವಾಗಿ ನಿಂತು ಸಾಕ್ಷಿ ನೀಡಿದರು. ಮನ ಪರಿವರ್ತನೆಗೊಂಡಿದ್ದ ಹಲವು ಉಗ್ರರು ಉಳಿದ ಉಗ್ರರ ವಿರುಧ್ಧ ಸಾಕ್ಷಿ ನೀಡಿ ಸಹಕರಿಸಿದರು. ಅವರನ್ನೆಲ್ಲ ಒಟ್ಟುಗೂಡಿಸುವುದರಲ್ಲಿ ಸುನೀಲ ಸುಸ್ತಾದನಾದರು ಎಡೆಬಿಡದೆ ಶ್ರಮಿಸಿದನು. ಉಗ್ರರು ಪ್ರತಿಯಾಗಿ ಹಲ್ಲೆ ನಡೆಸಲು ಪ್ರಯತ್ನ ಪಟ್ಟರಾದರೂ, ಸತರ್ಕರಾಗಿದ್ದ ಗ್ರಾಮಸ್ಥರು ಹಾಗು ಪೋಲಿಸ್ ಇವರಿಗೆ ರಕ್ಷಣೆ ಒದಗಿಸಿತು. ಇದೆಲ್ಲ ಜರುಗಿ ನ್ಯಾಯ ಸಿಗುವಸ್ಟರಲ್ಲಿ ೩ ವರ್ಷಗಳು ಕಳೆದು ಹೋಗಿದ್ದುವು. ಬಹುತೇಕ ಎಲ್ಲ ಉಗ್ರರನ್ನು ಬಂಧಿಸಲಾಯಿತು.
ಇತ್ತ ಮಗನ ಆರೈಕೆ, ಸೊಸೆಯ ನ್ಯಾಯಾಲಯದಲ್ಲಿನ ಕಾರ್ಯಗಳನ್ನೂ ಸುನೀಲನ ಸಹಾಯದಿಂದ ನಿರ್ವಹಿಸುತ್ತಿದ್ದ ಸುಮಾ ದಣಿದಿದ್ದಳಾದರೂ, ಮಗನು ಮತ್ತೆ ಇಡುತ್ತಿದ್ದ ಪುಟ್ಟ ಹೆಜ್ಜೆಗಳನ್ನು ಕಂಡು ಸಂತಸದಿಂದ ಕುಣಿದಾಡಿದಳು. ಸಂಧ್ಯಾ ಜೈಲಿನಲ್ಲಿದ್ದಾಗ ಪ್ರತಿ ದಿನ ಸೋಸೆಯನ್ನು ಭೆಟ್ಟಿಯಾಗಿ ಬರುತ್ತಿದ್ದಳು ಸುಮಾ; ನ್ಯಾಯ ದೊರಕೇ ತೀರುತ್ತದೆ ಅಂತ ಅವಳನ್ನು ಹುರಿದುಂಬಿಸಿ ಬರುತ್ತಿದ್ದಳು. ಮೂರು ವರ್ಷಗಳಾಗುವಷ್ಟರಲ್ಲಿ ಸುಜಯ್ ಕೋಲಿನ ಸಹಾಯವಿಲ್ಲದೆ ನಡೆಯತೊಡಗಿದ. ತನ್ನ ಕೃತಕ ಬಳಗೈಯ್ಯನ್ನು ಚೆನ್ನಾಗಿ ಉಪಯೋಗಿಸಲು ಕಲೆತಿದ್ದ. ಎಡಗೈ ಅವನ ಪ್ರಮುಖ ಕೈಯ್ಯಾಗಿ ಮಾರ್ಪಟ್ಟಿತ್ತು. ಸುನೀಲನ ಉದ್ಯೋಗದಲ್ಲಿ ಸಹಭಾಗಿಯಾದ. ಸಮಯ ಸಿಕ್ಕಾಗ ಅಮ್ಮನ ಕಣ್ಣು ತಪ್ಪಿಸಿ ಬೀದಿ ಹುಡುಗರೊಡನೆ ಫುಟ್ಬಾಲ್ ಸಹ ಆಡಹತ್ತಿದ. ಪತ್ನಿ ಮರಳಿ ಮನೆಗೆ ಬಂದಾಗ ಅವನ ಸಂತೋಷ ಇಮ್ಮಡಿಯಾಗಿತ್ತು.
-- ೫ --
ಅಭಿಮಾನಿಗಳ ಚಪ್ಪಾಳೆಯ ಸುರಿಮಳೆಯಲ್ಲಿ ಮಿಂದು ಹೋಗಿತ್ತು ಆ ಕೋಣೆ. ಬೆವರ ಹನಿಗಳು ಹಣೆಯಿಂದುರುಳಿ ನೆಲಕ್ಕುರುಳಿದವು. ಆಟವಾಡಿ ದಣಿದ ಮುಖದ ಮೇಲೆ ಸಂತೃಪ್ತಿ ಮೂಡಿತ್ತು. ಮೇಲ್ದುಟಿಯನ್ನು ನಾಲಗೆ ಒಂದಂಚಿನಿಂದ ಇನ್ನೊಂದರ ವರೆಗೆ ಮೃದುವಾಗಿ ಸವರುತ್ತಿರಲು, ಆಟಗಾರ ಪಾನೀಯದ ಬಾಟಲಿಯನ್ನು ಕೈಗೆತ್ತುಕೊಂಡ. ಆಟವನ್ನೇ ವೃತ್ತಿಯನ್ನಾಗಿಸಿ ತಾನು ಸರಿಯಾದ ಕೆಲಸ ಮಾಡಿದೆ ಎಂದೆನಿಸಿತು. ಬೆವರನ್ನೊರೆಸಿ ಆಟಕ್ಕೆ ಮರಳಿದ, ತನ್ನ ವ್ಹೀಲ್ ಚೇರ್ ನ ಗಾಲಿಯನ್ನು ತಳ್ಳುತ್ತ. ಇದನ್ನು ನೋಡುತ್ತಿದ್ದ ಸುಜಯ್ ಇನ್ನಸ್ಟು ಜೋರಾಗಿ ಚಪ್ಪಾಳೆ ತಟ್ಟಿ ಹುರಿದುಂಬಿಸಿದ ತನ್ನ ನೆಚ್ಚಿನ ಆಟಗಾರನನ್ನು.
ಇತ್ತ ಸುಬ್ರಮಣ್ಯರವರು ಸುಮಾಳ ಜೊತೆ ಹೆಜ್ಜೆ ಹಾಕುತ್ತ ಊರ ಬಿದಿಗಳನ್ನು ಸುತ್ತುತ್ತಿದ್ದರು. ಅದೇ ಬೀದಿಗಳನ್ನು ಅವರಿಬ್ಬರೂ ೩೦ ವರ್ಷಗಳ ಹಿಂದೆ ಸುತ್ತಿದ್ದರು - ಸಮಯ ಎಷ್ಟು ಬೇಗ ಕಳೆದೆ ಹೋಯಿತು ಎನ್ನುವ ಭಾವ ಇಬ್ಬರ ಮುಖದಲ್ಲಿ ಇತ್ತು. ಮಾತು ಪ್ರಾರಂಭಿಸಿದರು  ಸುಬ್ರಮಣ್ಯರವರು..
"ಏನೆಲ್ಲ ಕಷ್ಟಗಳನ್ನ ಅನುಭವಿಸಿ ಬಿಟ್ಟೆಯಲ್ಲ ಸುಮಾ... ಕೆಲವೊಮ್ಮೆ, ಇದರಲ್ಲಿ ನನ್ನ ಪಾತ್ರವು ಇದ್ದ ಹಾಗೇ ನನಗೆ ಅನ್ನಿಸುತ್ತದೆ"
"ಹಾಗೆನ್ನಬೇಡಿ ಸರ್... ನೀವು ಹಾಕಿ ಕೊಟ್ಟ ದಾರಿ ಹಲವಾರು ಜನರ ಪ್ರಾಣ ಉಳಿಸಿದೆ. ನನ್ನ ಜೀವನಕ್ಕೊಂದು ಗುರಿ ಕಲ್ಪಿಸಿ ಕೊಟ್ಟಿದೆ. ಇನ್ನು ಇದರ ಮಧ್ಯೆ ಸ್ವಲ್ಪ ನೋವು, ಸಾಕಸ್ತು ಪ್ರೀತಿ ಹಾಗು ಸಂತೋಷವನ್ನು ಕಂಡು ಕೊಳ್ಳುವ ಹಾಗೇ ಮಾಡಿದೆ", ಎಂದಳು ಸುಮಾ.
ಮೌನವಾಗಿ ಸಾಕಸ್ತು ದೂರ ನಡೆದು ಇನ್ನೇನು ಸುಬ್ರಮಣ್ಯರವರು ಹಿಂದಿರುಗಬೇಕು ಎನ್ನುವಸ್ಟರಲ್ಲಿ ಸುಮಾಳನ್ನು ಕುರಿತು ಇನ್ನೊಂದು ಪ್ರಶ್ನೆಯನ್ನೂ ಎಸೆದರು...
"೩೨ ವರ್ಷಗಳ ಹಿಂದೆ ನಿಮ್ಮ ಮಗು ತೀರಿ ಹೋದಾಗ ನೀವು ಹಾಗೇ ನಿಮ್ಮ ಗಂಡನನ್ನು ಬಿಟ್ಟು ಬಂದಿರಿ... ನಾನು ಯಾಕೆಂದು ಕೇಳಲಿಲ್ಲ. ಒಳ್ಳೆಯ ಮನುಷ್ಯನೆಂದು ಕೇಳಿದ್ದೇನೆ; ಇಂದು ಕೇಳ ಬಹುದೇ ನೀವು ಯಾಕೆ ಒಂಟಿ ಜೀವನ ಆಯ್ದುಕೊಂಡಿರಿ ಎಂದು?"
"ನನ್ನ ಗಂಡ ಅನಿಸಿಕೊಂಡವನು ಒಳ್ಳೆಯ ಮನುಷ್ಯನೇ. ಆದರೆ ತನ್ನವರಿಗಲ್ಲ. ಹೆಂಡತಿ-ಮಕ್ಕಳು, ಅಪ್ಪ ಅಮ್ಮ ಅನ್ನುವ ಪದಗಳು ಅವನಿಗೆ ಕೇವಲ ಪದಗಳೇ ಆಗಿದ್ದುವು. ನಾನು ಅವನನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕೆಲಸ ಬಿಟ್ಟು ಮನೆಯಲ್ಲಿ ಇರತೊಡಗಿದೆ. ಅವನೊಡನೆ ಸಮಯ ಕಳೆಯಲು ಪ್ರಯತ್ನ ಪಟ್ಟೆ. ಅವನಿಗೆ ತನ್ನ ಕೆಲಸ ಹಾಗು ಸಹೋದ್ಯೋಗಿಗಳಿಂದ ಆಚೆ ಬರಲು ಸಾದ್ಯವೇ ಆಗಲಿಲ್ಲ. ನನ್ನ ಅತ್ತೆ-ಮಾವನವರ ಕೊನೆಗಾಲದಲ್ಲಿ ನಾನಿದ್ದೆ. ಇವರು ನಾಪತ್ತೆ. ಎಲ್ಲಿ ಹೋಗಿದ್ದರು ಅನ್ನುವ ಸುದ್ದಿ ನನಗೆ ಇಂದಿನ ವರೆಗೆ ತಿಳಿದಿಲ್ಲ. ಒಂದು ದಿನ ನಮ್ಮ ಒಂದು ವರ್ಷದ ಮಗು ಆರಾಮಿಲ್ಲದೆ ಅಳುತ್ತಿರುವಾಗ ಪಕ್ಕಾದೆ ಮನೆಯ ಬಸುರಿ ಪ್ರಸವ ವೇದನೆಯಲ್ಲಿ ನನ್ನನ್ನು ಕರೆದಾಗ ಸಮಯ ಕಡಿಮೆ ಇದ್ದ ಕಾರಣ ನಾನು ಮಗುವನ್ನೂ ಇವರ ಕೈಗಿಟ್ಟು ಅವಳಲ್ಲಿಗೆ ಧಾವಿಸಿದೆ. ಹೇರಿಗೆಯೇನೋ ಸರಿಯಾಗಿಯಾಗಿತ್ತು ಆದರೆ ನನ್ನ ಮಗು ಕಾಣೆಯಾಗಿತ್ತು. ಗೊರಕೆಯಲ್ಲಿ ತೇಲುತ್ತಿದ್ದ ಗಂಡ ಮಹಾಶಯನನ್ನು ಎಬ್ಬಿಸಿ ಕೇಳಿದೆ - ಮಗು ಎಲ್ಲಿ ಎಂದು. ಉತ್ತರ ಬಂದದ್ದು : ಅಲ್ಲೇ ಎಲ್ಲೋ ಇರ್ಬೇಕು ಹುದುಕ್ಕೋ! ದಿಕ್ಕು ತೋಚದಂತಾಗಿ ಬಾಲ್ಕನಿಗೆ ಬಂದಾಗ ಎದೆ ಝಲ್ಲೆಂದಿತು - ೫ ಅಂತಸ್ತಿನ ಮಹಡಿಯಿಂದ ಕೆಳಗೆ ಬಿದ್ದಿದ್ದ ಮಗು ರಕ್ತ ಸೋಕಿದ ನೆಲದಲ್ಲಿ ಶಾಶ್ವತವಾಗಿ ಮಲಗಿಬಿಟ್ಟಿತ್ತು!"
"ಒಹ್ ಮೈ ಗಾಡ್!", ಎಂದು ಉದ್ಗರಿಸಿದ ಸುಬ್ರಮಣ್ಯರವರು ಕೇಳಿದರು,"ನಿವೇನು ಆಕ್ಷನ್ ತೊಗೊಂಡ್ರಿ ಅವನ ಮೇಲೆ?".
"ಏನು ಇಲ್ಲ. ಅವನು, ಮೊದಲೇ ಹೇಳಿದ ಹಾಗೇ, ಹೊರ ಜಗತ್ತಿನಲ್ಲಿ ಅತಿ ಪ್ರಭಾವಶಾಲಿ ವ್ಯಕ್ತಿಯಾಗಿದ್ದ. ತನ್ನದೇನೂ ತಪ್ಪಿಲ್ಲದ ಹಾಗೇ ವರ್ತಿಸಿದ. ಪೊಲೀಸರು ನಂಬಿದರು. ನಾನು 
ವಿಚ್ಚೇದನ ಪಡೆದು ಹೊರ ನಡೆದೆ, ಬದುಕಿಗೊಂದು ಹೊಸ ಅರ್ಥ ಕಲ್ಪಿಸಿಕೊಳ್ಳಲು. ಅವನನ್ನು ಕ್ಷಮಿಸು ಎಂದಿತು ಅಂತರಾತ್ಮ. ಮನಸ್ಸು ಹಗುರವಾಗಿತ್ತು. ನಿಮ್ಮಲ್ಲಿಗೆ ಬಂದೆ".
"ಮತ್ತೆ ಅವನು ಹಾಗೇ ಸ್ಕಾಟ್-ಫ್ರೀ ಇದ್ದಾನೆಯೇ?"
"ಹೌದು - ಫ್ರೀ ಫ್ರೊಂ ದಿಸ್ ವರ್ಲ್ಡ್! ನಾವು ಬೇರ್ಪಟ್ಟ ಸ್ವಲ್ಪ ದಿನಗಳಲ್ಲಿ ಕಾರ್ ದುರ್ಘಟನೆಯಲ್ಲಿ ತೀರಿಹೊದನಂತೆ", ಎಂದು ನಿರ್ಭಾವುಕಳಾಗಿ ತಿಳಿಸಿದಳು ಸುಮಾ.

Wednesday, March 7, 2012

ನನಗೆ ನೀಡಿದ ಉಡುಗೊರೆ ನೀನು

ಸೂರ್ಯನ ಕಿರಣಗಳು ಕಿಟಕಿಯಿಂದ ಇಣುಕಿ ತನ್ನ ಸ್ಟಡಿ-ಟೇಬಲ್ ಮೇಲೆ ಬೀಳುತ್ತಿರುವುದು ಹೊಸತೇನಲ್ಲ. ಆದರೆ,ಇವತ್ತು ಯಾಕೋ ಇದರಲ್ಲಿ ಏನೋ ವಿಶೇಷವಾದದ್ದು ಕಂಡವಳಂತೆ ಮಂದಹಾಸ ಬೀರಿದಳು ಜ್ಯೋತಿ.ಛಳಿಗಾಲದ ಆಗಮನವಾಗಿತ್ತು. ಹಬೆಯಾಡುತ್ತಿರುವ ಕಾಫಿಯ ಲೋಟವನ್ನು ಭದ್ರವಾಗಿ ತನ್ನೆರಡು ಪುಟ್ಟ ಕೈಗಳಲ್ಲಿ ಹಿಡಿದು, ಮೆಲ್ಲನೆ ಹಿತವಾದ ಕಾಫಿಯನ್ನು ಹೀರುತ್ತ  ಮನೆಯನ್ನೆಲ್ಲ ತಿರುಗಿದಳು. "ಎಂದೂ ಇಲ್ಲದ ಸೋಮಾರಿಗೆ ಇಂದು ಅಂತಹದ್ದೇನು ಉತ್ಸಾಹ ಹುಟ್ಟಿತೋ?", ಅಂತ ಮನಸ್ಸಿನಲ್ಲಿ ತನಗೆ ತಾನೇ ಪ್ರಶ್ನೆಯನ್ನು ಹಾಕುತ್ತ, ಮನೆಯ ಕಿಟಕಿಗಳನ್ನೆಲ್ಲ ತೆರೆಯುತ್ತ ಮುನ್ನಡೆದಳು. ಇಂದೇನು ವಿಶೇಷವಂತೂ ಅಲ್ಲ - ಹಬ್ಬದ ದಿನವಲ್ಲ; ಅಪ್ಪ-ಅಮ್ಮ ಮನೆಗೆ ಬರ್ತೀನಿ ಅಂತೇನು ಹೇಳಿಲ್ಲ. ಸಾಮನ್ಯವಾದ "ಸಂಡೇ". ಗೆಳತಿಯರ್ಯಾರೂ ಫೋನ್ ಸಹ ಮಾಡಿಲ್ಲ. "ನನ್ನ ತಲೇಲಿ ಏನೋ ಎಡವಟ್ಟಾಗಿದೆ!",ಅಂತ ತನಗೆ ತಾನೇ ಮೆಲ್ಲನೆ ಉಸುರುತ್ತ ಅಂದಿನ "ಕ್ಲೀನಿಂಗ್" ಕಾರ್ಯಕ್ಕೆ ಕೈ ಹಾಕಿದಳು.

ಸಾಮಾನ್ಯವಾಗಿ ಎಲ್ಲಾ ಕೆಲಸಗಳು ಮುಗಿದು ಮಧ್ಯಾಹ್ನದ "ಬ್ರಂಚ್" ಆಗುವಷ್ಟರಲ್ಲಿ ೧ ಘಂಟೆ ಆಗಿ ಹೋಗ್ತಿತ್ತು. ಆದರೆ ಇವತ್ತು ಯಾಕೋ ಸಮಯ ನಿಂತೇ ಹೋಗಿದೆ ಏನೋ ಅಂತ ಅನ್ನಿಸಿತು ಅವಳಿಗೆ. ಸಮಯ ನೋಡಿದ್ರೆ ಇನ್ನು ಬೆಳಗಿನ ಜಾವ ೯ ಘಂಟೆ ಮಾತ್ರ ಆಗಿದ್ದನ್ನು ನೋಡಿ ಸ್ವಲ್ಪ ಕಿರಿಕಿರಿಯಾಗಿ, ಹುಸಿಮುನಿಸನ್ನು ಪಕ್ಕದ ರೂಮಿನಲ್ಲಿ ಮಲಗಿದ್ದ ತಂಗಿಯ ಮೇಲೆ ತೀರಿಸಿಕೊಳ್ಳುವ ಮನಸ್ಸಾಯಿತು. ತಂಗಿಯನ್ನು ಕುರಿತಾಗಿ,"ಲೇ, ಸೋಂಬೇರಿ... ಬಿಸಿಲು ನೆತ್ತಿಗೇರಿದ್ರೂ ನೀನು ಮಾತ್ರ ಬೇಡ್ದಲ್ಲಿ ಬಿದ್ಕೊಂಡು ನಿನ್ನ ಶಾಹರುಖ್ ಖಾನ್ ಕನಸುಗಳನ್ನ ಕಾಣೋದು ಬಿಡೋಲ್ವಲ್ಲೆ! ಎದ್ದೇಳು - ಮನೆ ಕ್ಲೀನ್ ಮಾಡ್ಬೇಕು!", ಎಂದು ಅಬ್ಬರಿಸಿದಳು.

"ತಿಂಡಿ ರೆಡಿ ಆಗಿದೆ ನಾ?...", ಅಂತ ಮೆಲ್ಲನೆ ಉಸುರಿದಳು ತಂಗಿ, ಪ್ರೀತಿ. ತನ್ನ ಎಂ.ಬೀ.ಏ. ವ್ಯಾಸಂಗದ ನಿಮಿತ್ತ ಮನಸ್ಸಿಲ್ಲದಿದ್ದರೂ ಪ್ರತಿ ದಿನ ೨-೩ ಘಂಟೆಗೇ ಮಲಗುವ ಪೈಕಿಯಾದ ಅವಳು , ಇನ್ನು ನಿದ್ದೆಗಣ್ಣಿನಲ್ಲೇ ಮಿಸ್ಕಾಡದೆ ಉಸುರಿದಳು.

"ತಿಂಡಿಯೇನು ಆಕಾಶದಿಂದ ಉದುರೋತ್ತಾ? ಮಾಡ್ಬೇಕು ಇನ್ನು. ಮೊದಲು ಎದ್ದು ನನಗೆ ಸ್ವಲ್ಪ ಕಸ ತಗೆಯೋಕ್ಕೆ ಸಹಾಯ ಮಾಡು...", ಅವಳ ಮಾತಿನಲ್ಲಿ ಅವಳಿಗೇ ಅಚ್ಚರಿ ಬರಿಸುವಂತಹ ಗಾಂಭೀರ್ಯವಿತ್ತು.

ಸ್ವಲ್ಪ ಹೊತ್ತು ತಂಗಿಯಿಂದ ಏನು ಪ್ರತಿಕ್ರಿಯೆ ಬರದದ್ದನ್ನು ಗಮನಿಸಿ, ಸುಮ್ಮನೆ ಅಲ್ಲೇ ನಿಂತು ಬಿಟ್ಟಳು ಅವಳು.

"ಪ್ರೀತೀ, ಸ್ವಲ್ಪ ಸಹಾಯ ಮಾಡ್ತಿಯಾ...?", ಅಂತ ಅವಳು ಮಾತು ಮುಗಿಸುವಷ್ಟರಲ್ಲಿ ಬೆಡ್ಡಿನ ಮೇಲೆ ಧಿಡೀರನೆ ಎದ್ದು ಕೂತ ಪ್ರೀತಿ, "ಏನಕ್ಕಾ ನಿನ್ ಕಿರಿಕಿರಿ. ಪ್ರತೀ ದಿನ ನಿದ್ದೆಯಿಲ್ಲ ನನಗೆ. ಅದರಲ್ಲಿ ಇವತ್ತು ಅಪರೂಪಕ್ಕೆ ಒಳ್ಳೆ ಕನಸು ಬಿಳ್ತಿತ್ತು - ಕಲ್ ಹಾಕ್ಬಿಟ್ಟೆ ನೀನು!

ಸುಮ್ನೆ ಹೋಗಿ ಮಲ್ಕೊಳ್ಳೋದಬಿಟ್ಟು ನನ್ ಜೀವ ಯಾಕ್ ತಿಂತೀಯಾ? ಭಾವ ಇದ್ದಿದ್ರೆ...", ಅಂದವಳೇ ಕಲ್ಲಾಗಿಬಿಟ್ಟಳು.

ಒಂದು ಕ್ಷಣಾರ್ಧದಲ್ಲಿ ಎಲ್ಲೆಡೆಯೂ ಮೌನ ಆವರಿಸಿತ್ತು. ಇಬ್ಬರೂ ಮಾತನಾಡಲಿಲ್ಲ. ಜ್ಯೋತಿಯ ಕಣ್ಣುಗಳಿಂದ ಕಂಬನಿಗಳೆರದು ಕೆನ್ನೆಯನ್ನು ಜಾರಿ ನೆಲಕ್ಕೆ ಬಿದ್ದವು. ಅಂದು ಜಗದೀಶನ ಹುಟ್ಟುಹಬ್ಬವಾಗಿತ್ತು.

ಜ್ಯೋತಿಯ ಗಂಡ ಜಗದೀಶ ತೀರಿಕೊಂಡು ೩ ವರ್ಷಗಳು ಉರುಳಿಹೋಗಿದ್ದುವು. ಅವನು ಬದುಕಿದ್ದಾಗ ಅವನ ಕಣ್ಣಲ್ಲಿ ಒಂದೇ ಒಂದು ದಿನ ಸಹ ಕಣ್ಣಿರು ಕಂಡವಳಲ್ಲ ಜ್ಯೋತಿ; ಮಾತು ಕಡಿಮೆಯಾದರೂ, ನಗುನಗುತ್ತ ಸಂತೋಷದಿಂದ ಇರುವ ಪೈಕಿ. ಕಷ್ಟಗಳಿರಲಿಲ್ಲ ಅಂತೇನಿಲ್ಲ; ಆದರೆ ಚಿಂತೆ ಅಥವಾ ಸಿಟ್ಟು ಮಾಡಿಕೊಳ್ಳುವುದು ಅವನ ಪ್ರವೃತ್ತಿಯಾಗಿರಲಿಲ್ಲ. ಸಂಯಮ ಹಾಗು ನಂಬಿಕೆಯಿಂದ ಕೂಡಿದ ವ್ಯಕ್ತಿ. ಅದೇ ಪ್ರವೃತ್ತಿ ಪ್ರೀತಿಯ ಪ್ರಾಣ ಉಳಿಸಿತ್ತು.

"ಅಕ್ಕಾ, ಸಾರಿ ಅಕ್ಕಾ! ನಿನ್ನ ಬೇಜಾರ್ ಮಾಡ್ಸೋ ಉದ್ದೇಶ ಇರ್ಲಿಲ್ಲ ನಂದು. ಭಾವ ನೆನ್ಪಾದ್ರು. ಸಾರಿ....", ಎಂದವಳೇ ಎದ್ದು ಬಂದು ಅಕ್ಕನನ್ನು ತಬ್ಬಿಕೊಂಡು ಕಣ್ಣೀರಿಟ್ಟಳು.

"ಅಯ್ಯೋ ಹುಚ್ಚಿ... ನನಗೆ ಬೇಜಾರಿಲ್ಲ; ಆದರೆ ನಿನ್ನ ಭಾವನ ನೆನಪುಗಳು ನೋಡು... ಬೆನ್ನು ಬಿಡೋದಿಲ್ಲ ಅನ್ನುತ್ತವೆ. ಇರ್ಲಿ ಮಹಾರಾಣಿ, ಈಗ ಎದ್ದೇಳ್ತಿಯೋ,ವೊದೆ ಬೇಕೋ?", ಅಂತ ಹುಸಿ ಮುನಿಸನ್ನು ತೋರಿದಳು ಜ್ಯೋತಿ.

--- ೦ ---

ವೃತ್ತಿಯಿಂದ ವೈದ್ಯನಾಗಿದ್ದ ಜಗದೀಶ, ತನ್ನ ಬಾಲ್ಯವನ್ನು ಬಡತನದಲ್ಲಿ ಒಂದು ಅನಾಥಾಶ್ರಮದಲ್ಲಿ ಕಳೆದಿದ್ದ. ತನ್ನ ತಂದೆ-ತಾಯಿ ಯಾರೆಂದು ಅವನಿಗೆ ಗೊತ್ತಿರಲಿಲ್ಲ; ದೊಡ್ಡವನಾಗುತ್ತಾ ತನ್ನ ಹೊತ್ತ ತಾಯಿಯನ್ನೂ ಗೊತ್ತು ಮಾಡಿಕೊಳ್ಳುವ ಆಸಕ್ತಿಯಿದ್ದರೂ,ಬಿಳಿ ಕಾರೊಂದು ಅನಾಥಾಶ್ರಮದ ಬಾಗಿಲಲ್ಲಿ ತನ್ನನ್ನು ಬಿಟ್ಟು ಹೋಗಿತ್ತು ಅನ್ನೋ ವಿಷಯ ತನ್ನ ಗಮನಕ್ಕೆ ಬಂದಾಕ್ಷಣ ತನಗೆ ತಂದೆ-ತಾಯಿ, ಬಂಧುಗಳೆಲ್ಲ  ಎಲ್ಲ ತನ್ನ ಅನಾಥಾಶ್ರಮ ಎಂದು ನಿರ್ಧರಿಸಿ ಬಿಟ್ಟ. ಓದಿನಲ್ಲಿ ಹಾಗು ಆಟದಲ್ಲಿ ಎತ್ತಿದ ಕೈ ಜಗದಿಶನದ್ದು. ದಾನಿಗಳೊಬ್ಬರು ಇವನ ಉಜ್ವಲ ಭವಿಷ್ಯಕ್ಕೆ ನೆರವಾದರು. ಅವನಿಗೆ ಉನ್ನತ ವಿಧ್ಯಾಭ್ಯಾಸ ನಿಡಿಸಿ ಅವನನ್ನು ಪ್ರೋತ್ಸಾಹಿಸಿದರು. ತಕ್ಕಂತೆ ಚೆನ್ನಾಗಿ ಓದಿ, ಆಟ-ಪಾಠಗಳಲ್ಲಿ ಸಮನಾಗಿ ಭಾಗವಹಿಸಿ ಸರಕಾರೀ ವೈದ್ಯನಾಗಿ ಹಳ್ಳಿಯೊಂದರಲ್ಲಿ ಸೇರಿದ. ತನಗೆ ಆಶ್ರಯವಿತ್ತ ಅನಾಥಾಶ್ರಮಕ್ಕೆ, ತನ್ನ ವಿಧ್ಯಾಭ್ಯಾಸಕ್ಕೆ ನೆರವಾದ ದಾನಿಯ ಹೆಸರಿನಲ್ಲಿ , ಸಹಾಯ ನಿಧಿಯೊಂದನ್ನು ರೂಪಿಸಿದ. ತನ್ನ ಕೈಲಾದ ಸಹಾಯವನ್ನೆಲ್ಲ ಹಳ್ಳಿಯ ಜನರಿಗೆ ಮಾಡಿ ದೊಡ್ಡ ಮನುಷ್ಯ ಅನ್ನಿಸಿಕೊಂದಿದ್ದ.

ಜ್ಯೋತಿಯು ವೃತ್ತಿಯಿಂದ ಸಾಫ್ಟ್ವೇರ್ ಎಂಜಿನಿಯರ್. ತಕ್ಕ ಮಟ್ಟಿಗೆ ಶಕ್ತರಾದ ತಂದೆ-ತಾಯಿ ಇವಳಿಗೆ ಒಳ್ಳೆಯ ವಿದ್ಯಾಭ್ಯಾಸ ನಿಡಿ ತನ್ನ ಕಾಲಿನ ಮೇಲೆ ತಾನು ನಿಲ್ಲುವ ಹಾಗೇ ಮಾಡಿದ್ದರು. ಇನ್ನು ತಂಗಿ ಇವಳಿಗಿಂತ ೬ ವರ್ಷ ಚಿಕ್ಕವಳು. ಓದು ತಲೆಗೆ ಹತ್ತೋಲ್ಲ ಅಂತ ಅವಳಿಗಿಂತ ಹೆಚ್ಚು ಪೋಷಕರಿಬ್ಬರಿಗೂ ಮೊದಲೇ ಗೊತ್ತಾಗಿ ಹೋಗಿತ್ತು. "ಬೇಕಾದದ್ದನ್ನು ಓದಿಕೊ ಮಗಳೇ", ಅಂದವರೇ ಜ್ಯೋತಿಗೆ ಪ್ರೀತಿಯ ಉಸ್ತುವಾರಿಯನ್ನು ಕೊಟ್ಟು ಇಬ್ಬರಿಗೆ ಇರಲು ಶಹರಿನಲ್ಲಿ ಮನೆಯೊಂದನ್ನು ತಗೆದು ಕೊಟ್ಟಿದ್ದರು.ತಾವು ತಮ್ಮ ಪೂರ್ವಜರ ಮನೆಯಲ್ಲಿ ನೆಲೆಸಿ ತೋಟವನ್ನು ನೋಡಿಕೊಂಡಿದ್ದರು.

ಜ್ಯೋತಿಯ ಮನಸ್ಸು ಕೀಲಿಮಣೆಯನ್ನು ಕುಟಿಯುವುದರ ಜೊತೆಗೆ ಸಮಾಜ ಸೇವೆ ಮಾಡುವತ್ತ ವಾಲಿತ್ತು. ತಾನು ಉನ್ನತ ಶಿಕ್ಷಣಕ್ಕೆಂದು ಪಟ್ಟಣದಲ್ಲಿದ್ದಾಗ ಕಂಡ ದೃಶ್ಯವೊಂದು ಅವಳ ಅಂತರಾತ್ಮವನ್ನು ಅಲುಗಾಡಿಸಿ ಬಿಟ್ಟಿತ್ತು.ಜೋರ ಬಂದು ವೈದ್ಯರನ್ನು ನೋಡಲು ತನ್ನ ಪಾಳಿಗೆ ಕಾಯುತ್ತಿದ್ದಳು. ಬಡ ಮಹಿಳೆಯೊಂದು ಸೊರಗಿ ಸುಕ್ಕಾದ ಮಗುವೊಂದನ್ನು ಹಿಡಿದು ಏನು ಮಾಡಬೇಕೆಂದು ತೋಚದೆ ಸಹಾಯಕ್ಕೆಂದು ವೈದ್ಯರನ್ನು ಕಾಣಲು ಬಂದಿದ್ದಳು. ಮಗು, ಸುಮಾರು ೩-೪ ತಿಂಗಳ ಕೂಸು,ಮೈಯಲ್ಲಿ ಶಕ್ತಿಯಿಲ್ಲದೆ ನಿತ್ರಾಣವಾಗಿತ್ತು.ತಾಯಿಯ ಕಡೆಯೋ ಕಾಸಿಲ್ಲ; ಇದ್ದ ಕಾಸು ಗಂಡ ಅನ್ನಿಸಿಕೊಂದವನು ಸೇಂದಿ ಕುಡಿದು ಮುಗಿಸಿ ಆಗಿತ್ತು. ಅವನ ಪತ್ತೆ ಇಲ್ಲ. ವೈದ್ಯರು ತುರ್ತಾಗಿ ಮಗುವನ್ನೂ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲು ಹೇಳ್ತಿದ್ದಾರೆ - ಇವರ ಹತ್ತಿರ ದುಡ್ಡಿಲ್ಲ. ಹೆದರಿ ದಿಗ್ಭ್ರಾಂತಳಾಗಿದ್ದಾಳೆ.ಆಟೋ ತರಿಸಿದರೆ ಇವಳಿಗೆ ಹೋಗಲು ಹಿಂದೇಟು. ಜ್ಯೋತಿ ತನ್ನ ಪಾಕೆಟ್ ಮನಿಯಿಂದ ೨೫ ರುಪಾಯಿ ತಗೆದು ಅವಳ ಕೈಗಿಟ್ಟು ಹೋಗು ಎಂದು ಸನ್ನೆ ಮಾಡಿದ್ದಳು. ತಾನು ಒಂದು ಏನ್.ಜೀ.ಓ.ಗೆ ಸೇರಿ ಬಡ ಮಕ್ಕಳಿಗೆ ಸಹಾಯ ಮಾಡಬೇಕು ಎಂದು ಆಗಲೇ ನಿರ್ಧರಿಸಿ ಬಿಟ್ಟಿದ್ದಳು.

ಜ್ಯೋತಿ ಜಗದಿಶನನ್ನು ಭೆಟ್ಟಿಯಾದದ್ದು ತನ್ನ ಗುರಿಯಿಂದಾಗಿ ಅಂದರೆ ತಪ್ಪಾಗಲಾರದು. ಕೆಲಸದ ಜೊತೆಗೆ ಏನ್.ಜೀ.ಓ.ಗೆ ಸೇರಿದ ಜ್ಯೋತಿ, ಬಹುತೇಕ ಪ್ರತಿ ರಜಾ ದಿನ ಜನ ಸೇವೆಯಲ್ಲಿ ಕಳೆಯುತ್ತಿದ್ದಳು. ಕೆಲವೊಮ್ಮೆ, ಬಿಡುವಿದ್ದಾಗ ಪ್ರಿತಿಯನ್ನು ತನ್ನೊಡನೆ ಕರೆದುಕೊಂಡು ಹೋಗುತ್ತಿದ್ದಳು. ಅಂತಹ  ಒಂದು ದಿನ, ಪ್ರಿತಿಯೊಡನೆ ಜಗದೀಶ ಕೆಲಸ ಮಾಡುವ ಊರಿಗೆ ಹೋಗಿದ್ದಾಗ ಮೊದಲ ಬಾರಿ ಜಗದೀಶನ ಭೆಟ್ಟಿಯಾಯಿತು. ಜ್ಯೋತಿಗೆ ಆತನ ವ್ಯತಿತ್ವ ಬಹಳವೇ ಇಷ್ಟವಾಗಿ ಹೋಯಿತು - ಮದುವೆಯನ್ನೋದು ಆದರೆ ಇಂತಹವನನ್ನೇ ಅಂತ ನಿರ್ಧರಿಸಿಬಿಟ್ಟಳು. ತನ್ನ ಹಾಗು ಇವನ ಗುರಿ ಒಂದೇ ಆಗಿದೆ, ಜೊತೆಗೆ - ಇನ್ನೇನು ಬೇಕು; ಹಾಂ - ಅವನ ಬಗ್ಗೆ ತಿಳಿದುಕೊಳ್ಳಬೇಕು. ಇದನ್ನೆಲ್ಲಾ ಪ್ರೀತಿಗೆ ಹೇಳಲು ಅವಳಿಗೆ ಇಷ್ಟವಿರಲಿಲ್ಲ. ಚಿಕ್ಕ ಹುಡುಗಿ, ಬುದ್ಧಿ ಬೆಳೆದಿಲ್ಲ. ತುಂಟಾಟ ಜಾಸ್ತಿ - ಇನ್ನೇನಿದ್ರು ನಾನೇ ಇದನ್ನ ನೋಡ್ಕೋಬೇಕು ಅಂದುಕೊಂಡವಳೇ ತನ್ನ ಏನ್.ಜೀ.ಓ.ಸಹಕರ್ಮಿಗಳಲ್ಲಿ ವಿಚಾರಿಸಿ ಅವನ ಬಗ್ಗೆ ತಿಳಿದುಕೊಂದಿದ್ದಳು. ಇನ್ನು ಸ್ವಲ್ಪ ಅವನೊಡನೆ ಸಮಯ ಕಳೆದರೆ ತನಗೆ ಒಂದು ನಿರ್ಧಾರಕ್ಕೆ ಬರಲಾಗುವುದು ಅಂದುಕೊಂಡು ಮುಂದಿನ ೩ ತಿಂಗಳು ಕಾಲ ಹಲವಾರು ಜನ ಸೇವೆಯ ಕೆಲಸಗಳಲ್ಲಿ ಭಾಗ ವಹಿಸುತ್ತ ಅವನ ಬಗ್ಗೆ ಅರಿತುಕೊಂಡಳು. ಹಾಗೆಯೇ ಒಂದು ದಿನ ಅವನಲ್ಲಿಗೆ ಹೋಗಿ ತಮ್ಮ ಮನಸ್ಸನ್ನು ಅವನೆದುರು ಬಿಚ್ಚಿಟ್ಟೆ ಬಿಟ್ಟಳು. ಧೈರ್ಯ ಎಲ್ಲಿಂದ ಬಂತೋ ಗೊತ್ತಿಲ್ಲ; ಆದರೆ ಇನ್ನೊಂದೆಡೆಗೆ ತಾನು ತನ್ನ ತಂದೆ-ತಾಯಿಗೆ ತಿಲಿಸಿದ್ದಿದ್ದರೆ ಚೆನ್ನಾಗಿರ್ತಿತ್ತೇನೋ ಆನೋ ಕೊರೆತ ಮನಸ್ಸಿನಲ್ಲಿ. ಅದನ್ನೆಲ್ಲ ಬದಿಗೊತ್ತಿ ಬಾಯಿ ತೆರೆದಿದ್ದಳು.

ಜಗದೀಶನಿಗೋ ಆಗಿದ್ದು ಶಾಕ್. ತಾನು ಎಂದೂ ಇದರ ಬಗೆಗಾಗಿ ವಿಚಾರವೇ ಮಾಡಿರಲಿಲ್ಲ ಎಂದು ಸಮಾಧಾನದಿಂದಲೇ ಹೇಳಿದ. ಜ್ಯೋತಿಯ ಧೃಡ ನಿರ್ಧಾರದಿಂದ ಕೂಡಿದ ಅವಳ ಬಟ್ಟಲು ಕಣ್ಣುಗಳನ್ನೂ ನೇರವಾಗಿ ನೋಡಲಾಗದೆ ಅವನು ತಾನು ಇದರ ಬಗ್ಗೆ ವಿಚಾರ ಮಾಡುವುದಾಗಿ ಹೇಳಿ ಅವಳನ್ನು ಬೀಳ್ಕೊಟ್ಟ. ತನಗೆ ತಾನೇ ಪ್ರಶ್ನೆಯನ್ನೂ ಹಾಕಿಕೊಂಡ. ಪ್ರಶ್ನೆಗಳ ಮಹಾಪೂರವೇ ಅವನ ಮನಸ್ಸಿನಲ್ಲಿ - ಮನಸ್ಸಿನಿಂದ ಶ್ಯಾಹಿಯ ಮೂಲಕ್ಕ ಕಾಗದಕ್ಕೆ - ಹರಿಯಿತು. ಎಲ್ಲವನ್ನೂ ಬರೆದಿಟ್ಟುಕೊಂಡ. ತನ್ನ ಹೆತ್ತವಳು ತನ್ನನ್ನು ಯಾಕೆ ತೊರೆದಳು ಅನ್ನುವುದು ಅವನಿಗೆ ಇಂದು ತಿಳಿದುಕೊಳ್ಳಲೇ ಬೇಕು ಅನ್ನುವ ಛಲ ಬಂದಿತ್ತು. ಅದಕ್ಕೆ ಉತ್ತರ ಸಿಗದೇ ತಾನು ಮದುವೆಯಾಗುವ ವಿಚಾರ ಸಹ ಮಾಡುವುದಿಲ್ಲ ಎಂದು ನಿರ್ಧರಿಸಿ ಬಿಟ್ಟಿದ್ದ. ಇನ್ನೊಂದು ವಾರ ಸಮಯ ಬೇಕು ತನಗೆ ಎಂದು ಜ್ಯೋತಿಗೆ ಮಿಂಚಂಚೆ ಕಳುಹಿಸಿದ. ಮೊದಲು ತನ್ನ ಪ್ರಶ್ನೆಗಳಿಗೆ ತಾನು ಉತ್ತರಗಳನ್ನು ಹುಡುಕಬೇಕಿತ್ತು; ಅನಂತರ ಅವಳಿಗೆ ಪ್ರಶ್ನೆಗಳನ್ನೂ ಕೇಳಬೇಕಿತ್ತು. ಮಾರನೆಯ ದಿನ ಎಂದೂ ರಜೆ ಹಾಕದವನು ರಜೆಯ ಅರ್ಜಿ ಹಾಕಿ ನೇರವಾಗಿ ತನ್ನ ಅನಾಥಾಶ್ರಮಕ್ಕೆ ಹೋಗಿ ಅಲ್ಲಿ ಕೆಲಸ ಮಾಡುತ್ತಿದ್ದ ತನ್ನ ನೆಚ್ಚಿನ ವಾರ್ಡೆನ್ ತಾತನನ್ನು ಭೆಟ್ಟಿಯಾದ. ತನಗೆ ತನ್ನ ಹೊರೆದವಳು ಯಾಕೆ ಬಿಟ್ಟು ಹೋದಳು ಅನ್ನುವ ಪ್ರಶ್ನೆ ಕಾಡುತ್ತಿದೆ - ಉತ್ತರ ಬೇಕು ಎಂದು ಅವನಲ್ಲಿ ಕೇಳಿದ. ಮುದುಕನ ಪ್ರೀತಿಯ ಹುಡುಗ ಜಗದೀಶ. ಆದರೆ ತಾನು ಮಾತು ಕೊಟ್ಟ ತಾಯಿಗೆ ಅನ್ಯಾಯ ಮಾಡಬಾರದು ಅನ್ನುವುದು ಇನ್ನೊಂದು ಕಡೆ. ಸುಮ್ಮನಾಗಿಬಿಟ್ಟ ಅವನು. ಜಗದೀಶ ತನಗೆ ಅವಳ ಹೆಸರು ಬೇಡ; ಅವಳಿಂದ ಧನ-ಕನಕಗಳು ಸಹ ಬೇಡ.ಕೇವಲ ಕಾರಣ ಬೇಕು - ಸತ್ಯ ತನಗೆ ತಿಳಿಯಬೇಕು ಎಂದು ಅಂಗಲಾಚಿದ. ಮುದುಕ ಬಾಯಿ ಬಿಟ್ಟ. ನಿನ್ನ ಹೆತ್ತವಳು ಒಳ್ಳೆಯ ಕುಟುಂಬದವಳು; ಅವಳು ಒಬ್ಬ ಹುಡುಗನನ್ನು ಪ್ರೀತಿಸಿದಳು. ಅಪ್ರಾಪ್ತ ವಯಸ್ಸು - ದುಡುಕಿದಳು. ಆ ಹುಡುಗನು ತನ್ನ ಜಾವಬ್ದಾರಿಯನ್ನು ಮರೆತು ಇವಳನ್ನು ದೂರ ಮಾಡಿದನು. ಆದರೆ ನಿನ್ನ ತಾಯಿಗೆ ನಿನ್ನ ಹೊರುವ ಆಸೆ. ತನ್ನ ಮಗು ತನ್ನಿಂದ ದೂರವಾಗಬಾರದು ಆನುವ ವಿಚಾರದಿಂದ, ಹೆದರಿ, ತನ್ನ ಪೋಷಕರಿಗೆ ಹೇಳಲಿಲ್ಲ. ಮುಂದೊಂದು ದಿನ ಈ ವಿಚಾರ ಅರಿತ ಅವರು ಅವಳ ಇಚ್ಛೆಯಂತೆ ನಿನ್ನ ಬದುಕಲು ಬಿಟ್ಟರು. ಬದಲಾಗಿ, ನೀನು ಹೊರ ಜಗತ್ತಿಗೆ ಬರುತ್ತಿದ್ದಂತೆಯೇ ನಿನ್ನನ್ನು ಅವಳು ಬಿಡಬೇಕು ಅಂತ ಅವರು ಆಜ್ಞಾಪಿಸಿದರು. ತಪ್ಪು ಮಾಡಿದ ನಂತರ ಅವಳಿಗೆ ಬೇರೆಯ ದಾರಿ ಇರಲಿಲ್ಲ. ಒಪ್ಪಿಕೊಂಡಳು. ಇಂದು ಅವಳು ಇನ್ನೊಂದು ಮದುವೆಯಾಗಿ ಸುಖವಾಗಿದ್ದಾಳೆ. ನಿನ್ನ ತಾತ, ನಿನ್ನನ್ನು ನನ್ನ ತಾಯಿಯ ಪ್ರಿತಿಯಿಂದ ವಂಚಿಸಿದನಾದರೂ ನಿನ್ನ ಸಕಲ ಸುಖಗಳಿಗೆ ಕಾರಣನಾದ. ಅವನೇ ನಿನ್ನ ದಾನಿ. ನಿಂಗೆ ಗೊತ್ತಿರೋ ಅವನ ಹೆಸರೂ ಸಹ ಅದಲ್ಲ.

ಇಷ್ಟು ಹೊತ್ತಿಗಾಗಲೇ ಜಗದೀಶನ ಮನಸ್ಸು ಹಗುರವಾಗಿತ್ತು. ಎಲ್ಲರನೂ ಮನಸ್ಸಿನಲ್ಲೇ ಕ್ಷಮಿಸಿ, ತಾತನಿಗೆ ಧನ್ಯವಾದಗಳನ್ನು ಅರ್ಪಿಸಿ ತನ್ನ ಊರಿಗೆ ಹಿಂದಿರುಗಿದನು. ಒಂದು ದಿನವಿಡೀ ಮಲಗಿ ಎದ್ದನು. ಮನಸ್ಸಿನಲ್ಲಿ ಏನೋ ಉಲ್ಲಾಸ.

ತಾನು ಜ್ಯೋತಿಗೆ ಫೋನಾಯಿಸಿ ಭೆಟ್ಟಿ ಆಗಬೇಕು ಅಂದನು. ಜ್ಯೋತಿ ತನ್ನ ಕೆಲಸಕ್ಕೆ ರಜೆ ಹಾಕಿ ಅವನಲ್ಲಿಗೆ ಬಂದಳು. ಇಬ್ಬರೂ ಕೂತು ಹಲವಾರು ವಿಷಯಗಳ ಬಗ್ಗೆ ಮಾತನಾಡಿದರು - ಕೆಲಸ ಹಾಗು ಕೆಲಸೇತರ. ತನ್ನ ಒಪ್ಪಿಗೆಯನ್ನೂ ಸೂಚಿಸುವ ಮುನ್ನ ಜ್ಯೋತಿ ತನ್ನ ವಿಷಯವಾಗಿ  ಅವಳ ಮನೆಯವರಿಗೆ ತಿಳಿಸಬೇಕು ಎಂದು ಅವನು ಕೇಳಿಕೊಂಡನು. ಜ್ಯೋತಿ ಒಪ್ಪಿಗೆಯನ್ನು ಸೂಚಿಸಿದಳು. ತನ್ನ ಜೀವನದ ಪುಟಗಳನ್ನೂ ಜ್ಯೋತಿಯ ಎದುರು ತೆರೆದಿಡುತ್ತಾ ತನ್ನ ಕಳೆದೆರಡು ದಿನಗಳ ವಿವರವನ್ನೂ ಸೇರಿಸಿ ವಿಸ್ತಾರವವಾಗಿ ಹೇಳಿದನು. ಜ್ಯೋತಿಗೆ ಇದರಲ್ಲಿ ಹಲವಾರು ವಿಶಯಗಳು ಗೊತ್ತಿದ್ದರೂ ಅವನ ಬಾಯಿಂದ ಕೇಳುವ ಆನಂದ ಬೇರೆಯದೇ ಆಗಿತ್ತು. ಪ್ರೀತಿಯಲ್ಲಿ ಮುಳುಗಿದ್ದ ಅವಲಿದೆ ಅವನ ಹೊರತು ಬೇರೆ ಏನು ಕಂಡರೆ ಅಲ್ಲವೇ ಪ್ರಶ್ನೆ ಕೇಳುವ ವಿಚಾರ ಬರುವುದು. ಸಂಜೆ ಆಗುತ್ತಿದ್ದ ಹಾಗೇ ದವಾಖಾನೆಗೆ ಜನರ ಆಗಮನ ಶುರುವಾಯಿತು. ಜ್ಯೋತಿ ಅವನಿಂದ ಬೀಳ್ಕೊಟ್ಟು ಮನೆಗೆ ಹಿಂದಿರುಗಿದಳು. ತಂದೆ-ತಾಯಿಗೆ ಫೋನಾಯಿಸಿ ತಾನು ಒಬ್ಬ ಹುಡುಗನನ್ನು ಹುದುಕಿರುವುದಾಗಿ ಹೇಳಿದಳು. ಮಾರನೇಯ ದಿನ ತಂಗಿ ಪ್ರೀತಿಯೋಡನೆ ಊರಿಗೆ ಹೊರಟೇ ಬಿಟ್ಟಳು.

ತಂದೆ-ತಾಯಿಯೊಡನೆ ವಿಚಾರ ವಿನಿಮಯ ಆದಮೇಲೆ ಜಗದೀಶನಿಗೆ ತನ್ನ ಮನೆಗೆ ಬರಲು ಆಮಂತ್ರಿಸಿದಳು.

ಜಗದೀಶ ಮುಂದಿನ ರವಿವಾರ ರಜೆ ಹಾಕಿ ಜ್ಯೋತಿಯ ಊರಿಗೆ ಬಂದಾಗ ಜ್ಯೋತಿಯ ತಂದೆ ಶ್ಯಾಮಸುಂದರ ಮೂರ್ತಿ ಅವರು ಅವನನು ಆದರದಿಂದ ಬರಮಾಡಿಕೊಂಡರು. ಮೂರ್ತಿ ಅವರು ಓದಿದ್ದು ಬೀ.ಏ.(ಎಲ್.ಎಲ್.ಬೀ). ವಾಕಿಲರಾಗಿ ಕೆಲಕಾಲ ಕೆಲಸ ಮಾಡಿದರಾದರೂ, ವ್ಯವಸಾಯದಲ್ಲಿ ಅವರ ಆಸಕ್ತಿ. ಮಕ್ಕಳು ತಮಗೆ ಬೇಕಾದ ರೀತಿಯಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲಿ ಅನ್ನುವುದು ಅವರಾಸೆ. ಅಂತೆಯೇ ಜ್ಯೋತಿ, ಗೆಳೆಯನಂತಹ ತನ್ನ ತಂದೆಗೆ ವಿವರವಾಗಿ ಏನನ್ನೂ ಮುಚ್ಚಿಡದೆ ಎಲ್ಲವನ್ನೂ ವಿವರವಾಗಿ ಹೇಳಿದ್ದಳು. ಇನ್ನೊಂದು ತಿಂಗಳಲ್ಲಿ ಒಳ್ಳೆಯ ಮಹೂರ್ತ ನೋಡಿ ಇಬ್ಬರ ಮದುವೆಯನ್ನು ಮಾಡಿಸಿದರು.

ಜ್ಯೋತಿ ತನ್ನ ಕಿಲಿಮಣೆಯ ಕೆಲಸಕ್ಕೆ ತಿಲಾಂಜಲಿ ಹೇಳಿ ತನ್ನ ಪೂರ್ತಿ ಸಮಯವನ್ನು ಜನಸೇವೆಗೆ ಇಟ್ಟಳು. ಈ ಮಧ್ಯೆ ತಂಗಿ ಪ್ರಿತಿಯನ್ನು ಹಾಸ್ಟೆಲ್ ಗೆ ಹಾಕಲಾಯಿತು. ಅವಳಿಗೋ ಹೊಸ ಜನರೊಂದಿಗೆ ಬೆರೆಯುವುದು ಅಂದ್ರೆ ಪಂಚ ಪ್ರಾಣ. ಅಕ್ಕನಿಂದ ಕನಿಷ್ಠ ಪಕ್ಷ ವಾರಕ್ಕೊಮ್ಮೆಯಾದ್ರು

ಸಿಗಬೇಕು ಅಂತ ಭಾಷೆ ತಗೊಂಡು ಬಿಳ್ಕೊಟ್ಟಳು. ಮೊದಲ ಒಂದು ವರುಷ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ ಜ್ಯೋತಿಗೆ. ಇಬ್ಬರ ಆಸಕ್ತಿಗಳು ಒಂದೇ ಆಗಿದ್ದಕ್ಕೋ ಏನೋ, ಎಲ್ಲದರಲ್ಲೂ ಹೊಂದಾಣಿಕೆ ಇತ್ತು. ಎಲ್ಲ ಸುಸ್ಥಿತಿಯಲ್ಲಿದೆ ಅನ್ನುವಷ್ಟರಲ್ಲಿ ಅಪಘಾತ ಸಂಭವಿಸಿತು. ಪ್ರೀತಿಯು ಒಂದು ಅಪಘಾತಕ್ಕೆ ತುತ್ತಾಗಿ ತನ್ನ ಕಣ್ಣುಗಯನ್ನೆರಡನ್ನೂ ಕಳೆದುಕೊಂಡಳು. ಇಂತಹ ಕಷ್ಟಕರ ಸ್ಥಿತಿಯಲ್ಲಿ ಗಂಡನ ಪ್ರೋತ್ಸಾಹದಿಂದ ಜ್ಯೋತಿ ತನ್ನ ತಂಗಿಯ ಆರೈಕೆಗೆ ಪಟ್ಟಣಕ್ಕೆ ಹಿಂದಿರುಗಿದಳು. ಜ್ಯೋತಿಯ ತಂದೆ-ತಾಯಿ ಸಹ ಬಂದಿದ್ದರು. ಆದರೆ ಅವರ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲದ ಕಾರಣ ಅವರನ್ನು ಜ್ಯೋತಿ ಊರಿಗೆ ಕಳುಹಿಸಿದಳು.ಗಂಡ ಪ್ರತಿದಿನ ತನಗಾಗಿ - ತನ್ನ ತಂಗಿಗಾಗಿ ಸ್ವ ಇಚ್ಛೆಯಿಂದ ತನ್ನ ಕೆಲಸಗಳನ್ನೂ ಮುಗಿಸಿ ದಣಿದಿದ್ದರೂ ನೆರವಿಗೆ ಬರುವುದನ್ನು ಕಂಡು ಅವಳ ಮನಸ್ಸು ಸಂತೋಷದಿಂದ ಹಿಗ್ಗಿತು. ಕಣ್ಣುಗಳು ತುಂಬಿ ಬಂದುವು.

ಪ್ರೀತಿಯು ಕ್ರಮೇಣ ಗುಣವಾಗುತ್ತ ಬಂದಿದ್ದಳು - ಆದರೆ ಕಣ್ಣುಗಳ ಬಗ್ಗೆ  ಚಿಂತೆ ಇತ್ತು.ಎಲ್ಲ ಕಾಣುತ್ತಿದ್ದವಳಿಗೆ ಒಮ್ಮೆಲೆ ಕತ್ತಲು ಆವರಿಸಿದಾಗ ಎಲ್ಲಿಲ್ಲದ ಖಿನ್ನತೆ ಕಾಡತೊಡಗಿತು. ಹಾಗೆಯೇ ರಮಿಸಲಾಗದ ಹಾಗೇ ಅಳುವುದು ಅವಳಿಗೆ ಅಭ್ಯಾಸವಾಗಿ ಹೋಗಿತ್ತು. ಜೀವನದ ಮುಂದಿನ ಹಂತವನ್ನೂ ಯೋಚಿಸಿ ಎಲ್ಲರೂ ದುಃಖದಲ್ಲಿದ್ದರು. ಜಗದೀಶ ಮಾತ್ರ ಪ್ರೋತ್ಸಾಹದ ಮಾತುಗಳನ್ನೂ ಆಡುತ್ತ ತನ್ನೆಲ್ಲ ವೃತ್ತಿ ಹಾಗು ಗೆಳೆಯ ವೃಂದದಲ್ಲಿ ಯಾರಾದ್ರೂ ನೇತ್ರ ದಾನಿಗಳು ದಾನ ಮಾಡಿದ ಕಣ್ಣುಗಳು ಸಿಗಬಹುದೇ ಎಂದು ಹುಡುಕಾಟ ಜಾರಿಯಲ್ಲಿ ಇಟ್ಟಿದ್ದ.

--- ೧ ---

ಸುಮಾರು ೧ ವರುಷ ಕಳೆದು ಪ್ರೀತಿ ತನ್ನ ಅಳುವನ್ನು ಕಡಿಮೆ ಮಾಡಿ ತನ್ನ ಹೊಸ ಉಪಕರನಗಳನ್ನು ಬಳಸಲು ಕಲಿಯುತ್ತಿದ್ದಳು. ಜಗದೀಶ ಜ್ಯೋತಿಗೆ ಫೋನಾಯಿಸಿದ. ಅವನ ದನಿಯಲ್ಲಿ ಸಂತಸವಿತ್ತು - ದಾನಿಗಳು ಒಬ್ಬರು ಹಟಾತ್ತಾಗಿ ನಿಧನರಾಗಿದ್ದರಿಂದ ಕಣ್ಣುಗಳ ವ್ಯವಸ್ಥೆ ಆಗಿದ್ದು, ಪ್ರೀತಿಯ ಕಣ್ಣುಗಳು ಸರಿಯಾಗುವುದು ಇನ್ನು ಕೆಲವೇ ತಿಂಗಳುಗಳ ವಿಷಯ ಎಂದು ಅವನು ಹೇಳಿದಾಗ ಜ್ಯೋತಿಯು ಸಂತೋಷದಿಂದ ಹಿಗ್ಗಿದಳು. ಪ್ರೀತಿಗೆ ಇದನ್ನು ಹೇಳಿ ಅವಳನ್ನು ಹುರಿದುಂಬಿಸಿದಳು. ಗಂಡನು ಬರುವ ಹಾದಿಯನ್ನು ಕಾಯುತ್ತ, ಪ್ರಿತಿಯನ್ನು ಮಾತನಾಡಿಸುತ್ತ ಕುಳಿತಳು.

ಸ್ವಲ್ಪ ಸಮಯದಲ್ಲಿ ಜಗದೀಶನ ಮೊಬೈಲಿನಿಂದ ಕರೆ ಬಂದಿತು. ಆದರೆ ಅತ್ತಕಡೆಯಿಂದ  ಮಾತನಾಡುತ್ತಿದ್ದುದು ಜಗದೀಶನಾಗಿರಲಿಲ್ಲ.

"ಹಲೋ... ಎಮ್ ಐ ಸ್ಪೀಕಿಂಗ್ ಟು ಮಿಸ್ಸೆಸ್ ಜಗದೀಶ್? ಮೇಡಂ,ಮೈ ನೇಮ್ ಇಸ್ ಅಜಯ್. ನಿಮ್ಮ ಗಂಡ ಒಂದು ಅಫಘಾತಕ್ಕೆ ತುತ್ತಾಗಿದ್ದಾರೆ; ರೋಡ್ ಕ್ರಾಸ್ ಮಾಡ್ಬೇಕಾದ್ರೆ ಸಿಗ್ನಲ್ ಗಮನಿಸದೇ ಕಾರ್ ಒಂದು ಅವರ ಮೇಲೆ ಹಾದು ಹೋಯ್ತು. ತಾವು ಮಣಿಪಾಲ್ ಆಸ್ಪತ್ರೆಗೆ ಬನ್ನಿ. ಅಲ್ಲಿ ಕರ್ಕೊಂಡು ಬಂದಿದ್ದೇವೆ", ಎಂದವನೇ ಇತ್ತು ಬಿಟ್ಟನು.

ಆಕಾಶವೇ ಕಳಚ ಬಿದ್ದಂತೆ ಆಗಿತ್ತು ಜ್ಯೋತಿಗೆ. ದುಃಖದಿಂದ ಪದಗಳು ಹೊರಮೊಮ್ಮುತ್ತಿಲ್ಲ. ಪಕ್ಕ ಕೂತಿದ್ದ ಪ್ರೀತಿಯೇ ಒಂದೂ ಅರ್ಥವಾಗ್ತಿಲ್ಲ.

"ಅಕ್ಕಾ! ಏನಾಯ್ತು. ನಿನ್ಯಾಕೆ ಅಳತಿದ್ದೀಯ!?", ಅಂದಳವಳು ಬೆಚ್ಚಿಬಿದ್ದು.

"ಏನಿಲ್ಲ ಪುಟ್ಟ. ನಿನ್ನ ಭಾವಂಗೆ ಚಿಕ್ಕ ಆಕ್ಸಿಡೆಂಟ್ ಆಗಿದೆಯಂತೆ - ನೋಡ್ಕೊಂಡು ಬರೋಣ ಬಾ...", ಅಂತ ಬಿಕ್ಕಳಿಸುತ್ತ ಅಳುವನ್ನು ತಡೆ ಹಿಡಿದವಳು ತಂಗಿಯನ್ನು ಕರೆದುಕೊಂಡು ಆಸ್ಪತ್ರೆಗೆ ಧಾವಿಸಿದಳು. ದಾರಿಯಲ್ಲಿ ಹೋಗುತ್ತಾ ತಂದೆ-ತಾಯಿಗೆ ವಿಷಯ ತಿಳಿಸಿದಳು.

ಆಸ್ಪತ್ರೆಯಲ್ಲಿ ಧಾವಿಸಿ ಅಜಯ್ ಗೆ ಫೋನಾಯಿಸಿದಳು. ಅಜಯ್ ಅವಳನ್ನು ಭೆಟ್ಟಿಯಾಗಿ ಓ.ಟಿ.ಅತ್ತ ಅವರನ್ನು ಕರೆದೊಯ್ದ. ೧೫ ನಿಮಿಷ ಕಳೆದ ನಂತರ ಹೊರಬಂದ ಡಾಕ್ಟರ್ "ಐ ಯಾಂ ಸಾರಿ... ನಿಮ್ಮ ಗಂಡನನ್ನು ಬದುಕಿಸಿಕೊಡೋಕ್ಕೆ ಆಗ್ಲಿಲ್ಲ", ಎಂದುಬಿಟ್ಟರು.

ಜ್ಯೋತಿಗೆ ಮಾತೇ ಹೊರಡಲಿಲ್ಲ. ಸುಮ್ಮನಾಗಿಬಿಟ್ಟಳು. ಪ್ರೀತಿ ಮೆಲ್ಲನೆ "ಭಾವ... ಭಾವ..." ಅಂತ ಕಿರುದನಿಯಲ್ಲಿ ಅಳಹತ್ತಿದಳು.

ಎರಡು ತಿಂಗಳುಗಳು ಬೇಕಾಯಿತು ಜ್ಯೋತಿ ಮತ್ತೆ ಸಾಮಾನ್ಯವಾಗಿ ಮಾತನಾಡಲು. ಬದುಕಿದ್ದಾಗ ಜಗದೀಶ ತನ್ನ ಅಂಗಾಂಗಗಳನ್ನೂ ಮರನಾಂತರ ದಾನ ಮಾಡಬೇಕು ಎಂದು ಬರೆದು ಕೊಟ್ಟಿದ್ದ. ಅವನ ಕಣ್ಣುಗಳು, ಹೃದಯ, ಕಿಡ್ನಿಗಳನ್ನೂ  ದಾನ ಮಾಡಲಾಯಿತು.

ಪ್ರೀತಿಗೆ ಇನ್ನೊಮ್ಮೆ ಶಸ್ತ್ರಚಿಕಿತ್ಸೆ ನಡೆದು ಹೊಸ ಕಣ್ಣುಗಳು ಬಂದುವು. ಇದೆಲ್ಲ ಆಗಲು ಸುಮಾರು ೧ ವರುಷ ಸಮಯ ಬೇಕಾಯಿತು.

ಈ ಮಧ್ಯೆ, ಪ್ರೀತಿ ತಾನು ಮತ್ತೊಮ್ಮೆ ಕೀಲಿಮಣೆ ಕೈಗೆ ತಗೆದುಕೊಂಡಳು. ತಾನು ತನ್ನ ಗಂಡನೊಡನೆ ಸೇರಿ ಮಾಡುತ್ತಿದ್ದ ಸಮಾಜ ಸೇವೆಯನ್ನೂ ಸಹ ಮುಂದುವರಿಸಿಕೊಂಡು ಹೋದಳು. ಹೊಸ ಜನರನ್ನು ಭೆಟ್ಟಿಯಾದಳು - ಅವರ ಸುಖ-ದುಃಖಗಳಲ್ಲಿ ಪಾಲ್ಗೊಂಡಳು. ಪ್ರೀತಿ ತನ್ನ ವ್ಯಾಸಂಗವನ್ನು ಮುಗಿಸಲು ಮತ್ತೆ ಓದನ್ನು ಪ್ರಾರಂಭಿಸಿದಳು - ಓದು ತಲೆಗೆ ಎಷ್ಟು ಹತ್ತೊತ್ತೋ ಗೊತ್ತಿಲ್ಲ; ಆದರೆ ಅಕ್ಕನಿಗೆ ಸಹಾಯ ಮಾಡ್ಬೇಕು ಅನ್ನೋ ಆಸೆ ಮಾತ್ರ ಇದ್ದೇ ಇದೆ. ತಂದೆ-ತಾಯಿ ಆಗಾಗ ಬಂದು ಹೋಗ್ತಿರ್ತಾರೆ; ಇನ್ನು ಕೆಲವು ವರ್ಷಗಳಲ್ಲಿ ಎಲ್ಲರೂ ಜೊತೆಗಿರುವ ಪ್ಲಾನ್ ಇದೆ.

--- ೦ ---

"ಅಕ್ಕಾ, ಇವತ್ತು ಎಲ್ಲಿ ತಿರ್ಗಾಡೋಣ? ಆಫ್ಟರಾಲ್ ಇವತ್ತು ಭಾವನ ಬರ್ತ್ಡೇ!", ಎಂದಳು ಪ್ರೀತಿ.

"ಪ್ರೀತಿ... ನೀನು ನನ್ನ ಬಂಗಾರ ಕಣೆ. ನಿನ್ನ ಭಾವ ನನಗೆ ನೀಡಿದ ಉಡುಗೊರೆ ನೀನು. ಎಲ್ಲಿ ಹೋಗೋಣ ಹೇಳು"

Tuesday, August 9, 2011

ಸಂತೋಷ - ಸಂಯಮ

 ಬರೀಬೇಕು ಅನ್ನಿಸ್ತು - ಮುಂದೊಂದು ದಿನ ಓದಿದಾಗ ಹೆಗನ್ನಿಸಬಹುದು ಅಂತ.

೧. ಸಂತೋಷವಾಗಿರಲು ಬೇಕಾಗಿರೋದು ವಸ್ತು ಅಥವಾ ವ್ಯಕ್ತಿ ಅಲ್ಲ... ಶುದ್ಧವಾದ ಮನಸ್ಸು, ವಿಚಾರಗಳು. ಹಾಗಂತ ವಸ್ತುಗಳು ಹಾಗು ವ್ಯಕ್ತಿಗಳು ಇಲ್ಲದೆ ಸಂತೋಷ ಅಪೂರ್ಣ. ಮನಸ್ಸಿಗೆ ಹತ್ತಿರವಾಗಿರುವವರು ದೈಹಿಕವಾಗಿ ಹತ್ತಿರವಿಲ್ಲದಿದ್ದರೂ ಅವರೊಡನೆ ಕಳೆದ ಸಂತಸದ ಆ ಸ್ವಲ್ಪ ಸಮಯವನ್ನು ಮೆಲುಕು ಹಾಕುತ್ತ ಮುಗುಳ್ನಗು ಮುಖದಲ್ಲಿ ಮೂಡಿದಾಗ ಸಿಗುವ ಆನಂದ ಅಪಾರ.
೨. ಪ್ರತಿಯೊಬ್ಬರಲ್ಲಿ ಇರುವ ವಿಚಾರಗಳನ್ನ ಸಂಯಮದಿಂದ ಆಲಿಸಬೇಕು - ದುಡುಕಿ ತಿರುಗೇಟು ನೀಡಲು ನಿಲ್ಲಬಾರದು. ಕಾರಣವಿಲ್ಲದೆ ಜಗಳ ಮಾಡಬಾರದು. ಯಾರಾದರು ಕೆಣಕಿದರೆ ಅದನ್ನು ಮನಸ್ಸಿಗೆ ತಗೆದುಕೊಲ್ಲಬಾರದು; ಮಾತು-ಜಗಳಕ್ಕೆ ಆಸ್ಪದ ನೀಡಬಾರದು. ಯಾರೋ ಏನೋ ಹೇಳಿದರು ಅಂತ ಅವರ ಮಾತಿನ ಧಾಟಿಗೆ ಕೆರಳಿದರೆ ಅದು ಮೂರ್ಖತನ. ಸತ್ಯ-ಸರಿಯಾದ ವರ್ತನೆ ಗೊತ್ತಿದ್ದವರಾದರೆ ಬೆಲೆ ಕೊಟ್ಟು ಮಾತನಾಡು; ಚರ್ಚಿಸು. ಮೈ ಮುಟ್ಟಿದರೆ ಚಚ್ಚುವುದು ಅನಿವಾರ್ಯ - ನಿನ್ನ ಹಾಗು ನಿನ್ನ ಜನರ ರಕ್ಷಣೆಗಾಗಿ.
೩. ಹೆದರಿಸಿ / ಹೆದರಿಕೊಂಡು ಕೆಲಸ ಮಾಡಬೇಡ. ಶ್ರದ್ಧೆ, ನಿಯತ್ತು ಹಾಗು ಸಂತಸದಿಂದ ಕೆಲಸ ಮಾಡು. ಗುಣಮಟ್ಟಕ್ಕೆ ಆದ್ಯತೆ ಕೊಡು. ಬಲ್ಲದವರಿಗೆ, ಆಸಕ್ತಿ ಇರುವವರಿಗೆ ದಾರಿ ತೋರಿಸು. ಕೆಲಸ ಮಾಡುವ ಬಗೆಯನ್ನು ಹೇಳಿ ಕೊಡು. ನಿನ್ನ ಅಭಿಮಾನವನ್ನು ಬದಿಗೊತ್ತಿ ತಪ್ಪಾಗಿದ್ದರೆ ಒಪ್ಪಿಕೊ; ತಪ್ಪು ಮಾಡಿದವರಿಗೆ ಕ್ಷಮಿಸಬಹುದಾದ ಪಕ್ಷದಲ್ಲಿ ಕ್ಷಮಿಸು.
೪. ಕೆಲವೊಮ್ಮೆ 'ನನಗೆ ಏನೂ ಬಾರದು - ದಡ್ಡ ನಾನು' ಅನ್ನಿಸಿದ ಪಕ್ಷದಲ್ಲಿ ನಿನ್ನ ಅನಿಸಿಕೆ ತಪ್ಪು ಅಂತ ತಿಳಿದುಕೊ. ನಿಜ, ಕೆಲವು ವಿಶಯಗಳು ಗೊತ್ತಿಲ್ಲದೇ ಇರಬಹುದು. ಆದರೆ ಕಲಿಯಕಲಿಯಲಾಗದಷ್ಟು ಪೆದ್ದ ನೀನಲ್ಲ.
೫. ಯಾವುದೇ ವಿಷಯದಲ್ಲಿ ಸರಿ ಅಥವಾ ತಪ್ಪು ನಿರ್ಧರಿಸುವುದು ಹಲವಾರು ವಿಷಯಗಳ ಮೇಲೆ ಅವಲಂಬಿಸಿರುತ್ತದೆ. ಪ್ರತಿಯೊಬ್ಬರ ದೃಷ್ಟಿಕೋನದಲ್ಲಿ ಸರಿ-ತಪ್ಪುಗಳು ಬೇರೆಯಾಗಿರುತ್ತವೆ. ದುಡುಕಿ ಆದೇಶವನ್ನು ಹೊರಡಿಸಬಾರದು.
೬. ಮರಳಿ ಯತ್ನವ ಮಾಡು; ಯತ್ನ ಮಾಡುವುದರಲ್ಲಿ, ಕಷ್ಟ ಪಟ್ಟು ಸಂಪಾದಿಸಿದ ಸ್ವತ್ತಿನಲ್ಲಿ ಇರುವ ಆನಂದ ನಿರಾಯಾಸವಾಗಿ ಸಿಗುವ ಗಂಟಿನಲ್ಲಿ ಇಲ್ಲ.
೭. ನಗೆ ಬೀರಿ ಸ್ನೇಹವನ್ನು ತೋರಿದರೆ ಗಂಟೇನು ಕಳೆದು ಹೋಗುವುದಿಲ್ಲ.
೮. ಏನೇ ಮಾಡಿದರೂ, ಮನಸಪೂರ್ವಕವಾಗಿ ಮಾಡು. ಹೊಗಳಿದರೆ, ನಕ್ಕರೆ, ಸಂತೋಷವನ್ನು ಹಂಚಿದರೆ, ಇತ್ಯಾದಿ ಇತ್ಯಾದಿ.
೯. ಕೈಲಾದರೆ, ಮನಸ್ಸಿದ್ದರೆ ಸಹಾಯ ಮಾಡು. ಹಣ ಕೊಡಬೇಕು ಎಂದೇನು ಇಲ್ಲ; ಸಹಾಯ ಅರ್ಥಿಕವಾಗಿಯೇ ಇರಬೇಕು ಅನ್ನೋದು ಸುಳ್ಳು. ವಿದ್ಯೆಯನ್ನು ಹಂಚು.
೧೦. ಯಾರನ್ನೂ ಕಡೆಗಾಣಿಸಬೇಡ. ಮಿತ್ರರನ್ನ, ಮಿತ್ರೇತರರನ್ನು ನೋಡಿ ಕಲಿ.

Tuesday, June 21, 2011

ಧಾರವಾಡ ಪೇಡಾ ಸವಿಯುವ ವಿಧಾನ

ವಿವಿಧ ಬಗೆಯ ಪೇಡಾ ಇದ್ರೂ ಧಾರವಾಡ ಪೇಡಾನೇ ಯಾಕೆ ಅಂತೀರಾ? ಸುಮ್ನೆ. ಇದೊಂದು ಸ್ವಾದಿಷ್ಟ ಪೇಡಾ ಅಂತಾ. ಇನ್ನೂ ತಿನ್ನೋ ಬಗೆಗಾಗಿ... ಬೇಕಾದ್ ರೀತೀಲಿ ತಿನ್ರೀ ಯಾರ್ ಬ್ಯಾಡಾ ಅಂತಾರೆ; ಆದ್ರೆ, ಅದನ್ನ ಸವಿಯುವುದು ಹೇಗ ಅಂತ ನನ್ನ ವರ್ಶನ್ ನಿಮ್ಮ್ ಮುಂದೆ ಇಲ್ಲಿ ಇಟ್ಟಿದ್ದೀನಿ.

ಧಾರವಾಡದ ಮಿಶ್ರಾ ಪೇಡಾ ಭಾಳಾ ಪ್ಹೇಮುಸ್. ನನಗೆ ಗೊತ್ತಿರೋ ಹಾಗೆ, ಇನ್ನೂ ಕೆಲೋರು ಮಾಡ್ತಾರೆ (ಬಾಬೂರಾವ್ ಪೇಡಾ), ಆದ್ರೆ ಒಥೆಂಟಿಕ್ ಪೇಡಾ ಅಂದ್ರೆ ಮಿಶ್ರಾ ಪೇಡಾದವರದ್ದೇ. ಇವರು ಪೇಡಾ ಜೊತೆಗೆ ಹಲವಾರು ಬೇರೆ ರುಚಿರುಚಿಯಾದ ಬೇಕರಿ ತಿನಿಸುಗಳನ್ನ ಸಹ ಮಾಡ್ತಾರೆ. ನಾನು ಸವೆದಿರೋ ಎಲ್ಲಾ ಐಟೆಮ್ ಗಳು ನಾಲಗೆ ಚಪ್ಪರಿಸುವಂತೆ ಇದ್ದವು - ಲಕ್ಕಡ ಗಾಟಿ, ಪುದಿನಾ ಗಾಟಿ, ಶೇವ್, ಭಾಕರ್ ವಡಾ, ದೂದ್ಹ್ ಪೇಡಾ, ಹಲವಾರು ಬಂಗಾಲಿ ಮೂಲದ ಸಿಹಿ ತಿನಿಸುಗಳು. ಆದ್ರೆ, ಧಾರವಾಡ್ ಪೇಡಾ ಟೇಸ್ಟ್ ಒನ್ಥರಾ ವಿಶೇಷವಾದದ್ದು. ವಿವರಣೆಯ ಸಲುವಾಗಿ ಧಾರವಾಡ ಪೇಡಾ ನಾ ಇನ್ ಶಾರ್ಟ್ 'ಡೀ.ಪೀ.' ಅಂತ ಕರೀತೀನಿ.

'ಡೀ.ಪೀ.' ಹೊರಗಡೆಯಿಂದ ನೋಡಲು ಡಾರ್ಕ್-ಬ್ರೌನ, ಡ್ರೈ ಲುಕ್. ಮೇಲಿಂದ ವೈಟ್ ಪಾರ್ಟಿಕಲ್ (ರವೆಯ ಥರಾ) ಕೋಟಿಂಗ್ ಕೊಟ್ಟಿರೋ ಹಾಗೆ. ಕಾಣೊಕ್ಕೆ ಡ್ರೈ-ಜಾಮೂನಿನನ್ತಿದ್ದರೂ ಶೇಪ್ ಅನ್ನೋದು ಇಲ್ಲ. ಕೈಯಲ್ಲಿ ಉಂಡೆ ಕಟ್ಟಿ ಅಕ್ಕ-ಪಕ್ಕ ಅದುಮಿ ಸಾಲಾಗಿ ಡಬ್ಬಿಯಲ್ಲಿ ಜೋಡಿಸಿ ಇಟ್ಟಿರುತ್ತಾರೆ. ಕಾಣೊಕ್ಕೆ ಹಾಗಿದ್ರೆ ಏನಂತೆ, - ಬಾಯಿಗೆ ಹಾಕಿದಾಗ ಸರಾಗವಾಗಿ ಮೆಲ್ಟ್ ಆದಾಗ ಬರೋ ಆನಂದ ತಿಂದವರಿಗೇ ಗೊತ್ತು. ಪೇಡಾ ದ ಒಳಗಿನ ಟೆಕ್ಸ್ಚರ್ ಅನ್ಯ ಪೇಡಾಗಳಿಗಿಂತ ವಿಭಿನ್ನವಾದುದು. ಅಲ್ಲಲ್ಲಿ ತರಿತರಿಯಾದ ಖೋವಾ, ನುಣ್ಣನೇಯ ಖೋವಾದೊಂದಿಗೆ ಹದವಾದ ರೀತಿಯಲ್ಲಿ ಸಿಹಿಯಾಗಿ, ಮೃದುವಾಗಿ, ಬೆರೆತಿದ್ದು, ಬಾಯಲ್ಲಿಟ್ಟು ಕರಗಿದ ಕೂಡಲೆ ಇನ್ನೊಂದು ಸಣ್ಣ ತುಣುಕನ್ನು ತಿನ್ನುವ ತವಕವನ್ನು ಹುಟ್ಟಿಸುತ್ತದೆ.

ಕೈಯಲ್ಲಿರೋ ಪೇಡಾ ನ ಇಡಿಯಾಗಿ ನುಂಗಿ ನೀರು ಕುಡಿಯುವವರು ಮೂರ್ಖರು - ಔಷಧಿಗೂ, ತಿನಿಸಿಗೂ ವ್ಯತಾಸ ಗೊತ್ತಿಲ್ಲದವರು.

ಪೇಡಾ ಸ್ಯಾಂಪಲ್ ಮಾಡೋಕ್ಕೆ ಕೊಟ್ಟಾಗ ತಿನ್ನೋ ಮಜಾ ನೇ ಬೇರೆ. ಚಿಕ್ಕದೊಂದು ಕಸ್ಟಮ್-ಮೇಡ್ ಸ್ಯಾಂಪಲ್ ಪೇಡಾ ಕೈಗೆ ಸೇರಿದಾಗ ಗ್ರ್ಯಾವಿಟಿ-ಆಫ್-ದಿ-ಸಿಚುವೇಶನ್ ತಿಳಿದವರು ಕನ್ಸರ್ವೇಶನ್-ಆಫ್-ಟೆಸ್ಟ್ ಅನ್ನೋ ವಿಧಾನವನ್ನ ಅಳವಡಿಸುತ್ತಾರೆ. ಮೆಲ್ಲನೆ ಪೇಡಾ ನ ಕೈಗೆತ್ತಿಕೊಂಡು, ದಿಟ್ಟಿಸಿ ನೋಡಿ, ಅದನ್ನು ಕೊಟ್ಟ ಕೌಂಟರ್ ನಲ್ಲಿನ ಮಾಹಾಶಯನನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿ, ಹುಸಿ ಮುಗುಳ್ನಕ್ಕು, ಮತ್ತೆ ಪೇಡಾ ನ ನೋಡಿ... ಹಾಗೆ ಅದನ್ನು ಮೂಸುವ ಪ್ರಯತ್ನ ಮಾಡುತ್ತಾರೆ (ಆಫ್ಟರ್ ಆಲ್, ಪೇಡಾ ಹುಳಿಯಾಗಿದ್ರೆ ಅನ್ನೋ ಸಂಶಯ!). ಮೆಲ್ಲನೆ ಪೇಡಾ ತುಟಿಗಳತ್ತ ಸಾಗಲು ದವಡೆಗಳು ಚೂರೇ-ಚೂರು ಬೇರ್ಪಟ್ಟು ಆ ಸ್ಯಾಂಪಲ್ ನ ಮೀಲ್ಪದರವನ್ನು ಹಲ್ಲುಗಳು, ಮೆಲ್ಲನೆ, ನಾಲಿಗೆಯ ಮೇಲೆ ಸೇರಿಸುತ್ತವೆ.

"ಪರಮಾನಂದ!!!" (ಸ್ವಾಮಿಗಳಲ್ಲ! ಇದು ನಿತ್ಯವಾಗುವ ಆನಂದವೂ ಅಲ್ಲ! ಅಪರೂಪಕ್ಕೊಮ್ಮೆ ಆಗೋದು ನೋಡಿ)

 ಲಾಳಾ-ರಸ ಈ ಡೆಲಿಕಸಿಯೊಡನೆ ಮಿಕ್ಸ್ ಆಗಿ ನಾಲಿಗೆಯ ದಾಹವನ್ನು ತೀರಿಸುತ್ತಿರಲು, ಮನಸ್ಸಿನಲ್ಲಿಯೇ ಮೆಲ್ಲಗೆ "ಇನ್ನೂ ಸ್ವಲ್ಪವೇ ಇದೆ ಈ ಸ್ಯಾಂಪಲ್! ಮಿತವಾಗಿ ತಿನ್ನಬೇಕು!" ಅನ್ನೋ ಸಿಗ್ನಲ್ ಆಗಲೇ ಹೋಗಿಯಾಗಿದೆ ಗಂಟಲಿಗೆ - ಗಂಟಲು ನುಂಗಲು ನಿರಾಕರಿಸುತ್ತದೆ - "ಇನ್ನಸ್ಟು ಜಗಿ! ಲಾಳಾ ರಸವನ್ನು ಬೆರೆಸು" ಅಂತ ಬಾಯಿಗೆ ಆಗ್ರಹಿಸುವಂತೆ.

ಇನ್ನೊಂದು ಸಣ್ಣ ತುಣುಕು ಬಾಯಲ್ಲಿ ಇಳಿಯಿತು... ಕಣ್ಣುಗಳು ನಿರಾಯಾಸವಾಗಿ ಮುಚ್ಚುತ್ತಿದಂತೆ, ಪೇಡಾದ ಒಳಗಿನ ಸವಿ ನಾಲಿಗೆಯ ಮಾರ್ಗವಾಗಿ ತಲೆಗೆ ಏರುವ ಹೊತ್ತಿಗೆ...
"ಸಾರ್!!! ಎಷ್ಟು ಪ್ಯಾಕ್ ಮಾಡ್ಲಿ?", ಅಂತ ಅಶರೀರ ವಾಣಿ ಯಾವುದೋ ಮೊಲೆಯಿಂದ ಹೊರಡಿದಂತಾಗುತ್ತದೆ. ಕಣ್ಣು ತೆರೆದಾಗ ಹಲ್ಲು ಕಿರಿಯುತ್ತ ನಿಂತ ಕೌಂಟರ್ ನ ಪೋರನಿಗೆ ಚಚ್ಚುವಷ್ಟು ಸಿಟ್ಟು ನೇತ್ತಿಗೆರಿದರೂ, ರಿಯಾಲಿಟಿ ಅರ್ಥ ಮಾಡ್ಕೊಂಡು, "ಆ ಶೇವ್ ಸ್ಯಾಂಪಲ್ ಕೊಡಪ್ಪ", ಅಂತ ಅಂದಾಗ ಲುಕ್ ಕೊಡೋ ಬಾರಿ ಆ ಹುಡುಗನದ್ದು.

"ಪರಮಾನಂದ!!!"

ಇನ್ನೊಂದು ನಿಮಿಷ ಟೈಮ್ ಸಿಗ್ತು ಅನ್ನೋ ಖುಷಿ ಒಂದೆಡೆ ಆದ್ರೆ, ಇನ್ನೊಂದೆಡೆ ಈ ಪೇಡಾ ನ ಮುಗಿಸಬೇಕು! ಆದಷ್ಟು ಮೆಲ್ಲಗೆ ಅದನ್ನು ತಿಂದು ಮುಗಿಸಿ ಶೇವ್ ಸ್ಯಾಂಪಲ್ ಗೆ ಕಾಯಬೇಕು...

ಬಾಟಂ-ಲೈನ್ ಏನಪ್ಪಾ ಅಂದ್ರೆ, ತಿಂಡಿ-ತಿನಿಸುಗಳನ್ನ ಆದಸ್ತು ಮೆಲ್ಲಗೆ ಎಂಜಾಯ್ ಮಾಡ್ಕೊಂಡು ತಿನ್ಬೇಕು; ಮುಕ್ಕಬಾರದು. ಇನ್ನೂ, ಫ್ರೀ ಸ್ಯಾಂಪಲ್ ಅಂದ್ರೆ ಅದರ ಟೆಸ್ಟ್ ಸ್ವಲ್ಪ ಜಾಸ್ತಿ - ನೆನಪಿರಲಿ!

ಪೋಸ್ಟ್-ಸ್ಕ್ರಿಪ್ಟ್:
ಪೇಡಾ ನ ನೆನೆಯುತ್ತ, ಇಡ್ಲಿ ನ ತಿನ್ನುತ್ತ ರವಿ ಬೆಳಗೆರೆ ಅವರ ಕಾದಂಬರಿಯನ್ನ ಓದಿದಾಗ ಆಗೋ ಡೆಡ್ಲಿ ಕಾಂಬಿನೇಶನ್ ನ ಒಂದು ಝಲಕು ಇದು!

Sunday, May 22, 2011

ಚಿತ್ರದುರ್ಗ - ಬಾಲೇನಹಳ್ಳಿ ಪ್ರಸಂಗ

ಕಾಂತ, ಮಲ್ಲಿಕಾರ್ಜುನ ಹಾಗು ನಾನು ಏಪ್ರಿಲ್ ೨೧ ನೇಯ ರಾತ್ರಿ ಬಹಳ ಹೊತ್ತಿನ ವರೆಗೆ ದುರ್ಗಕ್ಕೆ ಹೋಗುವ ಸ್ಲೋ ಪ್ಯಾಸೆಂಜರ್ (ಅದರ ಹೆಸರು, ಹೊಸಪೇಟೆ ಫಾಸ್ಟ್ ಪ್ಯಾಸೆಂಜರ್ - ಆದರೆ ಅದು ಎಷ್ಟು ಫಾಸ್ಟ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ ನೆ) ಗಾಡಿಗಾಗಿ ಕಾಯುತ್ತ ನಿಂತಿದ್ದೆವು. ಮಾರನೆಯ ದಿನ ವಿವೇಕನ ಅಣ್ಣ ವಿನಯನ ಮದುವೆಗೆ ಮಹೂರ್ತಕ್ಕೆ ಸರಿಯಾಗಿ ಸೇರಬೇಕು ಅನ್ನುವುದು ನಮ್ಮ ಉದ್ದೇಶವಾಗಿತ್ತು. ಮಳೆ ಸ್ವಲ್ಪ ಜೋರಾಗಿಯೇ ಬೀಳುತ್ತಿತ್ತು. ವಾರದ ಅಂತ್ಯ ಅನ್ನೋ ಕಾರಣದಿಂದ ಪ್ಲ್ಯಾಟ್ಫಾರಂ ಜನರಿಂದ ತುಂಬಿ ಕಿಕ್ಕಿರಿಯುತ್ತಿತ್ತು. ಸಿಕ್ಕ ಸ್ವಲ್ಪ ಜಾಗದಲ್ಲಿ ನಾನು ಹಾಗು ಮಲ್ಲಿಕಾರ್ಜುನ ನಿಂತುಕೊಂಡು ಬಿಸಿ ಕಾಫಿ ಸವೆಯುತ್ತಿರಲು, ಎಲ್ಲೆಡೆ ಹಸಿ-ಹಸಿ ಇದ್ದ ಕಾರಣ ಕಾಂತ ಸ್ವಲ್ಪ ದೂರದಲ್ಲಿ ನಿಂತಿದ್ದ. ಕೊನೆಗೂ ರೈಲು ಗಾಡಿ ಬಂದಾಗ ಸಮಯ ರಾತ್ರಿಯ ೧೧.೩೦. ನಿಧಾನವಾಗಿಯೇ ನಮ್ಮ ಬೋಗಿಯೊಳಗೆ ಹತ್ತಿದ್ದಾಯಿತು. ಎಂದಿನಂತೆ ಮಲ್ಲಿ-ಕಾಂತ ರ ಕಾಲುಗಳಿಗೆ ಗಾಲಿಗಳು ಅಂಟಿರುವುದರಿಂದ ಮಳೆ ಇದ್ದರೂ ಸಹ ಹೊರಗೆ ಜೋತಾಡಿ ಒಳಗೆ ಬಂದರು. ನನ್ನದು ಕೆಳಗಿನ ಸೀಟು, ಅದರ ಎದುರಿನ ಸೀಟು ಬೇರೊಬ್ಬನದ್ದು, ಅದರ ಮೇಲಿನ ಎರಡು ಸೀಟುಗಳು ಮಲ್ಲಿ-ಕಾಂತನದ್ದು ಆಗಿದ್ದುವು. ಇನ್ನೂ ಕಸ ತಗೆಯೋ ಬಾಯಿ ಬಂದಿಲ್ಲದಿದ್ದ ಕಾರಣ ಮಾತನಾಡುತ್ತ ಕುಳಿತಿದ್ದೆವು. ಮುಂದಿನ ಸೀಟಿನಲ್ಲಿ ಕುಳಿತಿದ್ದ ಪೋರ ನೀರು ಕುಡಿಯುತ್ತಿದ್ದಾಗ ಅವನ ಕೈ ಜಾರಿ ಬಾಟಲಿ ಕೆಳಗೆ ಬೀಳುತ್ತಿದ್ದಂತೆಯೇ ನನಗೆ ಚಿಮ್ಮುತ್ತಿರುವ ನೀರಿನಲ್ಲಿ ಮೂರನೇಯ ಬಾರಿ ಸ್ನಾನವಾಯ್ತು (ಮೊದಲನೇಯ ಬಾರಿ ಮನೆಯಲ್ಲಿ, ಎರಡನೇಯದ್ದು ಮಳೆಯಲ್ಲಿ). ಸಿಟ್ಟನ್ನು ಹತೋಟಿಯಲ್ಲಿಟ್ಟುಕೊಂಡು ಪೋರನ ಸಣ್ಣನೆಯ ಕ್ಷಮಾ ಯಾಚನೆಯನ್ನು ಗಮನಿಸದೇ ನೀರನ್ನು ಒರೆಸಿಕೊಂಡೆ. ಕೀಟಲೆ ಮಾಡುತಿದ್ದ ಮಲ್ಲಿಯನ್ನು ಚಚ್ಚುವ ಅತೀವ್ರವಾದ ಆಸೆಯನ್ನೂ ಬದಿಗೊತ್ತಿ (ಪ್ರಯೋಜನವಿಲ್ಲ ನೋಡಿ, ಅರ್ಥ ಆಗುವವರಿಗೆ ಬಿಡಿಸಿ ಹೇಳಬಹುದು) ತೆಪ್ಪಗೆ ಮಲಗಿಕೊಂಡೆ. ಸುಸ್ತಾಗಿದ್ದ ಕಾರಣ ಯಾರು ಏನು ವೋದರಿಕೊಂಡ್ರೋ ಗೊತ್ತಾಗ್ಲಿಲ್ಲ - ನಿದ್ದೆ ಅಂತು ಚೆನ್ನಾಗಿ ಹತ್ತಿತು.
ಎಚ್ಚರವಾದಾಗ ಬೆಳಗಿನ ಜಾವ ೬.೦೦ ಘಂಟೆ ಆಗಿತ್ತು. ಎದ್ದು ಫೋನು ತೆಗೆದು ಸಮಯ ನೋಡಿ ಎಷ್ಟು ದೂರ ಬಂದಿದ್ದೇವೆ ಎಂದು ನೋಡಿದರೆ ಇನ್ನೂ ಚಿಕ್ಕಜಾಜೂರು ಸಹ ಬಂದಿಲ್ಲ ಎಂದು ಬೇಸರವಾಯಿತು. ಮತ್ತೆ ಮಲಗಿಕೊಂಡೆ. ೭.೩೦ ಯ ಸುಮಾರು ಎಚ್ಚರವಾದಾಗ ಚಿಕ್ಕಜಾಜೂರು ದಾಟಿದ್ದೆವು. ಮಲ್ಲಿಕಾರ್ಜುನನನ್ನು ಎಬ್ಬಿಸಲು ಹೋದೆ...
"ಲೇ ಮಲ್ಲಿ ಎದ್ದೇಳೋ!"
"ಊ ಊ ಅಂ ಅಂ..." (ನಿದ್ದೆಯಲ್ಲಿ ಕನವರಿಸುವುದು)
"ಎದ್ದೇಳೋ ಮಲ್ಲಿಕಾರ್ಜುನ!"
"... ಊ ಊ ಊ ... ದುರ್ಗಾ ಬಂತಾ??" (ಮುಸುಕು ಎತ್ತದೆಯೇ)
"ಇಲ್ಲ.. ಇನ್ನೊಂದು ಘಂಟೆಯಲ್ಲಿ ಬರಬಹುದೇನೋ"
"ಬಂದಾಗ್ಲಾಸಿ ಎಬ್ಸು!"
ಇನ್ನೇನು ಎಬ್ಬಿಸೋ ಪ್ರಯತ್ನಗಳೆಲ್ಲ ವಿಫಲ ಅಂತ, ಹಲ್ಲುಜ್ಜುತ್ತಿರುವ ಅನ್ಯರನ್ನು ನೋಡುತ್ತಾ ತೆರೆದ ಬಾಗಿಲಿಗೆ ಜೋತು ಬಿದ್ದು ಮಳೆಯಿಂದ ಹಸಿಯಾದ ಮಣ್ಣಿನ ಸುವಾಸನೆಯನ್ನು ಹೀರುತ್ತ, ಹಸಿರನ್ನ ಕಣ್ಣಿನಲ್ಲಿ ಸೆರೆ ಹಿಡಿಯುತ್ತ ಇನ್ನೊಂದು ಘಂಟೆ ಕಳೆದೆ. ಚಿತ್ರದುರ್ಗ ಬರುವ ಸನ್ನೆಗಳು ಕಾಣಿಸುತ್ತಿರಲಿಲ್ಲ. ಆದರು, ಚಾದರ್ ಮಡಿಚಿ, ಕನ್ನಡಕ ಏರಿಸಿಕೊಂಡು ತಯಾರಾಗಿ ಕುಳಿತೆ. ಸುಮಾರು ಒಂಭತ್ತು ಘಂಟೆಗೆ ರೈಲು ಚಿತ್ರದುರ್ಗ ಮುಟ್ಟಿತು. ಅದರ ಅರಿವಾಗಲು ನನಗೆ ಕೆಲ ನಿಮಿಷಗಳು ಬೇಕಾಯಿತು. ಮಲ್ಲಿಯನ್ನು ಎಬ್ಬಿಸಿದೆ. ಕಾಂತನನ್ನು ಎಬ್ಬಿಸಿದೆ. ಇಬ್ಬರು ಗೊಣಗುತ್ತ ಕಣ್ಣು ತಿಕ್ಕಿಕೊಳ್ಳುತ್ತ ಮೆಲ್ಲನೆ ಇಳಿಯಲಾರಂಭಿಸಿದರು. ಮಲ್ಲಿಕಾರ್ಜುನ ಅಷ್ಟರಲ್ಲಿ ತನ್ನ ದೂರವಾಣಿ ಯಂತ್ರವನ್ನು ಕಿವಿಗದುಮಿಕೊಂಡು ಚಿತ್ರದುರ್ಗ ಬಂದಿರುವ ಪರಿವೆ ಇಲ್ಲದೆ ನಡೆಯತೊಡಗಿದ. ಅಲ್ಲಿಯೇ ಇದ್ದ ಒಬ್ಬರಿಗೆ ನಾನು ಕೇಳಿ ಇದೇ ಚಿತ್ರದುರ್ಗ ಎಂದು ಖಾತ್ರಿ ಪಡಿಸಿಕೊಂಡಾಗ ಮಲ್ಲಿ ಎಚ್ಚೆತ್ತ. ಬೇಗನೆ ತನ್ನ ಬ್ಯಾಗನ್ನು ಇಳಿಸಿಕೊಂಡ. ನಾನು ನನ್ನ ಬ್ಯಾಗೊಂದನ್ನು ಇಳಿಸಿ ಚಂದ್ರಕಾಂತನ ಬ್ಯಾಗನ್ನು ತಂದೆ. ಆದರೆ ಕಾಂತ ಎಲ್ಲಿ? ಬೋಗಿಯಲ್ಲಿನ ಶೌಚಾಲಯದ ಬಾಗಿಲು ಬಡಿದು ಕರೆ ನೀಡಿದ ಮೇಲೆ ಆಸಾಮಿ ಹೊರಬಂದ. ೫ ನಿಮಿಷದ ಮೇಲೆ ನಿಂತಿದ್ದ ರೈಲು ಅಷ್ಟರಲ್ಲಿ ಮತ್ತೆ ಹೊರಟಿತು. ಇನ್ನೇನು ರೈಲು ಸ್ಟೇಷನ್ ಬಿಡ್ತು ಅನ್ನೋ ಅಷ್ಟರಲ್ಲಿ
"ಓಹೋ, ಅಮ್ಮ ಕೊಟ್ಟು ಕಳುಹಿಸಿದ ಬ್ಯಾಗು ಬೋಗಿಯಲ್ಲಿಯೇ ಉಳಿಯಿತು!" ಅಂತ ನಾನು ಉಸುರಿದೆ.
ಅಷ್ಟು ಹೊತ್ತಿಗಾಗಲೇ ಎಲ್ಲರೂ ಎದ್ದಿದ್ದರು. ಮಲ್ಲಿಕಾರ್ಜುನ ರೈಲು ಸಿಬ್ಬಂದಿಗೆ ಕೇಳು ಅಂತ ನನಗೆ ಹೇಳಿದ. ಹಾಗೆಯೇ ಮಾಡಿದೆ - ಅಲ್ಲಿಯೇ ನಿಂತಿದ್ದ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಹಾಗು ಅನ್ಯ ಸಿಬ್ಬಂದಿಗೆ ಆದ ವಿಷಯವನ್ನ ಹೇಳಿದೆ. ಅವರು ಸ್ಟೇಷನ್ ಮಾಸ್ಟರ್ ಅವರನ್ನು ಬೇಗ ಭೆಟ್ಟಿಯಾಗಿ ತಿಳಿಸಲು ಹೇಳಿದರು. ಮುಂದಿನ ಸ್ಟೇಷನ್ ಅಲ್ಲಿ ಬ್ಯಾಗ್ ಸಿಕ್ರೆ ಇಳಿಸಿಕೊಳ್ಳಬಹುದು ಅಂದ್ರು. ನಾನು ಬೇಗನೆ ಹೋಗಿ ಅಲ್ಲಿಯೇ ಇದ್ದ ಸ್ಟೇಷನ್ ಮಾಸ್ಟರ್ ಅವರನ್ನು ಕಂಡೆ.
"ಸರ್, ಟ್ರೈನಲ್ಲಿ ನಾನು ಒಂದು ಬ್ಯಾಗ್ ಬಿಟ್ಟಿದ್ದೀನಿ... ಇಳೀಬೇಕಾದ್ರೆ ಲಕ್ಷ್ಯಕ್ಕೆ ಬರ್ಲಿಲ್ಲ..."
"ಅಲ್ಲ ಅದು ಹೇಗೆ ಬಿಟ್ರಿ? ಬ್ಯಾಗ್ ಅಲ್ಲೇ ಇದ್ರೆ ಸಿಗಬಹುದು - ಇಲ್ಲ ಅಂದ್ರೆ ಏನು ಮಾಡೋಕ್ಕಾಗೋಲ್ಲ...
ಯಾವ್ ಬೋಗಿ, ಸೀಟ್ ನಂಬರ್ ಏನು?..."
"ಎಸ್ ೨, ಸೀಟ್ ನಂಬರ್ ೬೦..."
"ಯಾವ ಬ್ಯಾಗ್? ಬಣ್ಣ ಏನಿತ್ತು?"
"ದೊಡ್ಡ ಏರ್ ಬ್ಯಾಗ್... ಕರಿ ಬಣ್ಣ... ಆ ಸೀಟ್ ಕೆಳಗೆ ಇತ್ತು... ಸಿಕ್ರೆ ನೆಕಸ್ಟ್ ಸ್ಟೇಷನ್ ಅಲ್ಲಿ ಇಳ್ಸಕ್ಕೆ ಹೇಳ್ರಿ... ಅಲ್ಲಿ ಹೋಗಿ ತಗೋತೀವಿ..."
ಮುಂದಿನ ಸ್ಟೇಷನ್ ಫೋನಾಯಿಸಿದ ಸ್ಟೇಷನ್ ಮಾಸ್ಟರ್,"ಸಾರ್, ಇಲ್ಲಿ ಒಬ್ರು ಪ್ಯಾಸೆಂಜರ್ ತಮ್ಮ ಬ್ಯಾಗನ್ನ ಬೋಗಿಯಲ್ಲೇ ಬಿಟ್ಟಿದ್ದಾರೆ... ಟ್ರೈನ್ ಅಲ್ಲಿ ಸೇರಿದಾಗ ಬ್ಯಾಗ್ ಸಿಕ್ರೆ ಇಳಿಸಿ ಇಟ್ಕೊಳ್ಳಿ. ಬರ್ಕೊಳ್ಳಿ... ಎಸ್ ೨, ಸೀಟ್ ನಂಬರ್ ೬೦, ಕರಿ ಬಣ್ಣದ ಏರ್ ಬ್ಯಾಗ ಅಂತೆ... ಅಲ್ಲಿ ಸೀಟ್ ಕೆಳಗೆ ಬಿಟ್ಟಿದ್ದಾರೆ... ಓಕೆ ಸಾರ್..."
"ಸಾರ್, ಬ್ಯಾಗ್....", ನಾನು ಉಸುರಿದೆ.
"ಇನ್ನೊಂದು ೧೫ ನಿಮಿಷಗಳಲ್ಲಿ ಟ್ರೈನ್ ಬಾಲೇನಹಳ್ಳಿ ರಿಚ್ ಆಗೊತ್ತೆ... ಆಮೇಲೆ ಸಿಕ್ರೆ ತಿಳಸ್ತಾರೆ... ಆಗ ಅಲ್ಲಿ ಹೋಗಿ ಬ್ಯಾಗ ತಗೊಳ್ಳಿ..."
ಸ್ಟೇಷನ್ ಮಾಸ್ಟರ್ ಅನ್ನು ಮಾತನಾಡಿಸಿ ಹೊರಬಂದ್ದದ್ದಾಯ್ತು. ಅಲ್ಲಿ ಇದ್ದ ರೈಲ್ವೆ ಸಿಬ್ಬಂದಿಯೊಬ್ಬರು ನನ್ನನ್ನು ಮಾತನಾಡಿಸಿ ಯಾರು, ಏನು, ಎಂತು ಎಂದೆಲ್ಲ ವಿಚಾರಿಸಿ ತಮ್ಮ ಒಬ್ಬ ಸೀನಿಯರ್ ಅದೇ ಟ್ರೈನ್ ಅಲ್ಲಿ ಹೋಗುತ್ತಿರುವುದಾಗಿಯೂ, ಅವರಿಗೆ ಫೋನಾಯಿಸಲು ಹೇಳಿದರು. ಮಾಡಿದೆ. ಅವರಿಗೆ ನನ್ನ ಬ್ಯಾಗಿನ ಬಗ್ಗೆ ಹೇಳಿದೆ - ಅವರು ಅದನ್ನು ಹುಡುಕಿದರು. ಬ್ಯಾಗು ಅವರಿಗೆ ಸಿಕ್ಕಿತು. ಮುಂದಿನ ಸ್ಟೇಷನ್ ಅಲ್ಲಿ ಇಳಿಸುವುದಾಗಿ ಹೇಳಿದರು.
ಇದಾದ ಮೇಲೆ ರೈಲ್ವೆ ಸಿಬ್ಬಂದಿಯವರು ತಮ್ಮ ಮಗ ಬೀ.ಐ.ಈ.ಟೀ ಅಲ್ಲಿ ಓದುತ್ತಿರುವುದಾಗಿಯು ಅವನ ಕ್ಯಾಂಪಸ್ ಪ್ಲೆಸಮೆಂಟ್ ಬಗ್ಗೆ ಮಾತನಾಡತೊಡಗಿದರು, ತಾವು ಹರಿಹರಕ್ಕೆ ಟ್ರಾನ್ಸ್ಫರ್ ಆಗುವುದಾಗಿಯೂ, ಅಲ್ಲಿ ಮನೆ ಸಿಗುವುದೇ ಎಂದೆಲ್ಲ ವಿಚಾರಿಸಿಕೊಂಡರು. ನಾನು ನನ್ನ ಕೈಲಾದಷ್ಟು ವಿವರಿಸಿದೆ. ಅಷ್ಟರಲ್ಲಿ ರೈಲು ಬಾಲೇನಹಳ್ಳಿ ಸೇರಿ, ಬ್ಯಾಗನ್ನು ಅಲ್ಲಿ ಇಳಿಸಲಾಗಿದೆ ಅಂತ ಸುದ್ದಿ ಬಂದಿತು.
ರೈಲಿನಿಂದ ಇಳಿದು ಈ ಕೊನೆಯ ಸುದ್ದಿ ಸಿಗುವುದರ ವರೆಗೆ ಆದ ಘಟನೆಗಳೆಲ್ಲ ೧೫ ನಿಮಿಷಗಳಲ್ಲಿ ಜರುಗಿದ್ದುವು!
ಈಗ ಆ ಸ್ಟೇಷನ್ ಗೆ ಹೋಗೋದು ಹೇಗೆ ಅನ್ನೋದೇ ಪ್ರಶ್ನೆ... ಮಲ್ಲಿ ವಿವೇಕನಿಗೆ ಫೋನಾಯಿಸಿ ಬೈಕ್ ಸಿಗುತ್ತಾ ಅಂತ ವಿಚಾರಿಸಿದ... ಮದುವೆಯ ಕೆಲಸದ ಮೇರೆಗೆ ಎಲ್ಲ ಗಾಡಿಗಳು ಉಪಯೋಗದಲ್ಲಿದ್ದವು. ಆಗ ನೆನಪಾದದ್ದು ನಮ್ಮ ಮಂಜು (ಅಲಿಯಾಸ್ "ಸ್ಪೂನ್ ಮಂಜ"). ಮಲ್ಲಿ ಅವನಿಗೆ ಫೋನಾಯಿಸಿ ಗಾಡಿ ಬೇಕಿತ್ತು ಎಂದು ವಿಚಾರಿಸಿದ; ಕಾರು ಸಿಕ್ಕರೆ ನಾವೇ ಓಡಿಸಿಕೊಂಡು ಹೋಗ್ತಿವಿ ಅಂದ. ಮಂಜ ಹಳೆಯ ಚೇತಕ್ ನಡೀಬಹುದ ಅನ್ನೋ ಪ್ರಶ್ನೆಗೆ ಹೂ ಅಂದಿದ್ದ ಮಲ್ಲಿ. ರೈಲ್ವೆ ಸ್ಟೇಷನ್ ಇಂದ ಹೊರ ಬಂದು ಕಾಂತನನ್ನ ವಿವೇಕನು ಕಾಯಿದಿರಿಸಿದ್ದ ಹೋಟಲ್ ರೂಂಗೆ ಆಟೋ ಹತ್ತಿಸಿ ಕಳುಹಿಸಿದೆವು. ನಾವು ಮಂಜು ಮಾವನ ಮನೆಗೆ ಆಟೋ ಹತ್ತಿದೆವು.
ಅಲ್ಲಿ ಮಂಜು ಅವರ ಮಾವ, ಹೆಂಡತಿ, ಭಾವ ಅವರನ್ನು ಭೆಟ್ಟಿಯಾಗಿ ಮಂಜು, ಅವರ ಭಾವ, ಮಾವ ಅವರ ಜೊತೆ ಅವರ ಕಾರಿನಲ್ಲಿ ನಾನು ಹಾಗು ಮಲ್ಲಿ ಹೊರಟೆವು. ದಾರಿಯುದ್ದಕ್ಕೂ ಮಾತನಾಡುತ್ತ ಹೋದೆವು. ಬಾಲೇನಹಳ್ಳಿ - ಚಿತ್ರದುರ್ಗದಿಂದ ೨೩ ಕಿಲೋಮೀಟರು; ೨೦ ಕಿಲೋಮೀಟರ್ ವರೆಗೆ ಒಳ್ಳೆಯ ರಸ್ತೆ ಇದೆ. ಅದರ ಮುಂದೆ ಸ್ವಲ್ಪ ಕಚ್ಚಾ ರಸ್ತೆ ಎಂದು ರೈಲ್ವೆ ಸಿಬ್ಬಂದಿ ಹೇಳಿದ್ದರು. ಹಾಗೆಯೇ ಇತ್ತು. ಮೊದಲ ೨೦ ಕಿಲೋಮೀಟರ್ ಸುಗಮವಾಗಿ ಸಾಗಿದೆ ಪಯಣ ಆನಂತರ ಸ್ವಲ್ಪ ಕಷ್ಟಕರವಾಗಿತ್ತು. ಹೆಚ್ಚು-ಕಡಿಮೆ ಅಸ್ತೆ ಅನ್ನೋದು ಇರಲೇ ಇಲ್ಲ! ಅದರಲ್ಲಿ, ನಾವೆಲ್ಲಾ ಅಲ್ಲಿ ಮೊದಲನೇಯ ಬಾರಿ ಹೋಗುತ್ತಿದ್ದೆವು - ದಾರಿ ಯಾರಿಗೂ ಗೊತ್ತಿರಲಿಲ್ಲ. ದಾರಿಯಲ್ಲಿ ಹೋಗುತ್ತಿದ್ದ ಒಬ್ಬನನ್ನು ನಿಲ್ಲಿಸಿ ಇಲ್ಲಿ ರೈಲ್ವೆ ಸ್ಟೇಷನ್ ಎಲ್ಲಿದೆ (ಇದೆಯಾ?) ಎಂದು ಕೇಳಿದಾಗ ಅವನು, "ಹೀಗೆ ಮುಂದೆ ಹೋದ್ರೆ ಸಿಗೊತ್ತೆ", ಅಂತ ಹೇಳಿದ... ಆದ್ರೆ ಅಲ್ಲಿ ರಸ್ತೆ ಇದ್ದರಲ್ಲ ಹೋಗೋಕ್ಕೆ! ಸುಮಾರು ೧.೫ ಕಿಲೋಮೀಟರ್ ಹೇಗೋ ಒಳಗಡೆಯವರೆಗೆ ಕಾರು ಹೋಯಿತು. ಅದಕ್ಕಿಂತ ಮುಂದೆ ಹೋದ್ರೆ ಕೊಚ್ಚೆಯಲ್ಲಿ ಗಾಲಿಗಳು ಸಿಕ್ಕಿಕೊಂಡು ಕಷ್ಟ ಆಗಬಹುದು ಅಂತ ನಾನು ಹಾಗು ಮಲ್ಲಿ ಇಳಿದು ಮುಂದಿನ ೧.೫ ಕಿಲೋಮೀಟರು ನಡೆಯುವುದಾಗಿ ನಿರ್ಧರಿಸಿ ಉಳಿದವರನ್ನ ಅಲ್ಲಿಯೇ ಇರಲು ಹೇಳಿ ನಡೆಯಲಾರಂಭಿಸಿದೆವು. ಮಳೆ ಬಿದ್ದು ಹೋಗಿದ್ದರಿಂದ ಆ ಮಣ್ಣಿನ ರಸ್ತೆ ಗದ್ದೆಯಂತೆ ಕೊಚ್ಚೆಯಿಂದ ಕೂಡಿತ್ತು. ಸುಮಾರು ೧.೫ ಕಿಲೋಮೀಟರು ನಡೆದ ಮೇಲೆ ಒಂದು ರೈಲು ಹಳಿ ಕಾಣಸ್ತು. ಆ ರೈಲು ಹಳಿಯ ಪಕ್ಕ ಒಂದು ಮುರುಕಲು ಗುಡಿಸಿಲು ದೂರದಿಂದ ಸ್ಟೇಷನ್ ಅನ್ನಿಸಿದ್ದು ಈಗ ಹಾಳು ಬಿದ್ದ ಕೊಠಡಿ ಅಂತ ತಿಳಿದು ಸ್ವಲ್ಪ ಬೇಸರವೇ ಆಯಿತು. ಆದರೆ ಮಾಡುವುದೇನು?

"ಇಲ್ಲೇ ಎಲ್ಲಾದರು ಇರಲೇಬೇಕು - ಹಳಿ ಹತ್ತಿ ನೋಡೋಣ", ಅಂದ ಮಲ್ಲಿಕಾರ್ಜುನ.

ಹೇಗೆ ಆಗಲಿ, ಒಮ್ಮೆ ಸಹಾಯ ಮಾಡಿದ ಆ ರೈಲ್ವೆ ಸಿಬ್ಬಂದಿಯವರನ್ನ ಮಾತನಾಡಿಸಿ ಕೇಳೋಣ ಎಂದುಕೊಂಡು ಫೋನಾಯಿಸಿದೆ. ಅವರು,"ರೈಲ್ವೆ ಸ್ಟೇಷನ್ ಅಲ್ಲಿಯೇ ಹತ್ತಿರದಲ್ಲಿ ಇರಬೇಕು", ಅಂದರು. ಮಲ್ಲಿ ಹಳಿ ಹತ್ತಿ ಸುಮಾರು ಅರ್ಧ ಕಿಲೋಮೀಟರು ದೂರದಲ್ಲಿ ಸ್ಟೇಷನ್ ಹೆಸರಿನ ಬೋರ್ಡ್ ಅನ್ನು ಕಂಡು ನನ್ನನ್ನು ಬರಲು ಹೇಳಿದ. ಇಬ್ಬರು ಹಳಿಯ ಗುಂಟ ನಡೆದು ಸ್ಟೇಷನ್ ತಲುಪಿದೆವು. ನೆನಪಿಗಾಗಿ ಫೋಟೋ ಕ್ಲಿಕ್ಕಿಸಿ ಆಮೇಲೆ ಸ್ಟೇಷನ್ ಹೊಕ್ಕೆವು. ಸ್ಟೇಷನ್ ಅಚ್ಚುಕಟ್ಟಾಗಿತ್ತು. ಆದರೆ, ಎಲ್ಲೊ ಕಾಡಿನ ಮಧ್ಯ ಇದ್ದ ಹಾಗಿತ್ತು. ಅಲ್ಲಿ ೩ ಮಂದಿ ಸಿಬ್ಬಂದಿಗಳು ಕುಳಿತಿದ್ದರು. ಅವರಿಗೆ ನಾವು ಬ್ಯಾಗಿಗಾಗಿ ಬಂದಿರುವುದಾಗಿ ತಿಳಿಸಿದೆವು. ಅವರು ನಮ್ಮ ಬ್ಯಾಗನ್ನು ನಮಗೆ ಒಪ್ಪಿಸಿದರು. ನಾನು ಸ್ವಲ್ಪ ಹಣವನ್ನೂ ಅವರಿಗೆ ನೀಡಲು ಹೋದಾಗ ಬೇಡ ಅಂದವರು ನಮ್ಮ ಧನ್ಯವಾದಗಳಿಗೆ,"ಇರ್ಲಿ ಸಾರ್. ದುಡ್ಡು ಬ್ಯಾಡ. ಏನೋ ನೀಮ್ಮ ಬ್ಯಾಗ ಸಿಗ್ತಲ್ಲ ಅಷ್ಟು ಸಾಕು", ಎಂದರು. ನಾವು ಮತ್ತೆ ಹಳಿಯನ್ನು ಹತ್ತಿ ಹೋಗೋದು ಬೆಡವೆಂದುಕೊಂಡು ಅಲ್ಲಿಯ ಸಿಬ್ಬಂದಿಗೆ ದಾರಿ ಕೇಳಿ ಬೀಳ್ಕೊಟ್ಟೆವು. ಬ್ಯಾಗಿನೊಂದಿಗೆ ಸ್ವಲ್ಪ ದೂರ ನಡೆದು ಉಳಿದವರನ್ನು ಸೇರಿದೆವು. ಕಾರನ್ನು ಹತ್ತಿ ಚಿತ್ರದುರ್ಗ ಸೇರಿಕೊಂಡೆವು. ಕಾಂತ ಆಗಲೆ ಮದುವೆ ಮಂಟಪವನ್ನು ಸೇರಿದ್ದ. ನಾವು ಹೋಟೆಲ್ ಹೋಗಿ, ಮಂಜು ಹಾಗು ಅವರ ಮಾವನವರಿಗೆ ಧನ್ಯಾವದಗಳನ್ನು ತಿಳಿಸಿ - ಬೀಳ್ಕೊಟ್ಟು, ಅಲ್ಲಿಂದ ಮಂಟಪದತ್ತ ಧಾವಿಸಿದೆವು - ಮಹೂರತಕ್ಕೆ ಸರಿಯಾಗಿ.

Monday, February 7, 2011

ಕವನ - ವರ್ಣನೆ

ಬರೆದದ್ದು ಪ್ರಥಮ ವರ್ಷ, ಪದವಿ ಪೂರ್ವ ಕಾಲೇಜಿನಲ್ಲಿದಾಗ. ಕೇವಲ ಕಾಲ್ಪನಿಕ! ಪ್ರಶ್ನೆಗಳನ್ನು ಕೇಳಬೇಡಿ - ನನ್ನ ಹತ್ತಿರ ಉತ್ತರಗಳಿಲ್ಲ. ಆಗ ಇದನ್ನು ಬರೆದಾಗ ನನ್ನ ಬೆನ್ನನ್ನು ನಾನೇ ತಟ್ಟಿಕೊಂಡಿದ್ದೆ - ಕಾಲೇಜಿನ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾಗಿತ್ತು - ಆ ಪುಟಗಳನ್ನು ಮತ್ತೆ ತಿರುವಿ ಹಾಕಿದಾಗ ಇದನ್ನು ಇಲ್ಲಿ ಬರೆಯಬೇಕೆನಿಸಿತು...

ಕವನ : ~

ಆ ನಿನ್ನ ಚಂಚಲತೆಗೆ ಸೋತೆ ನಾನು
ನಿನ್ನನ್ನು ತಡೆಯಲು ಇಲ್ಲವಲ್ಲ ಯಾವ ಕಾನೂನು
ನಿನ್ನ-ನನ್ನ ಸಂಬಂಧ ಬಿಡಿಸಲಾಗ ನಂಟು
ಬ್ರಹ್ಮನೂ ತಲೆ-ಕೆಡಿಸಿಕೊಂಡ ಜಟಿಲ ಗಂಟು

ನಿನ್ನ ಮೃದು ತನುವ ಹಾಡಿ ಹೊಗಳಲೆ
ನನ್ನ ಬಿಟ್ಟು ತೊಲಗು ನೀನೀಗಲೆ
ಆ ನಿನ್ನ ಬಳುಕು ನಡೆಗೆ ಸೋತೆ ನಾನು
ಜನರೆಲ್ಲ ನಕ್ಕರೂ ಏಕೆ ಬಿಡಲೊಲ್ಲೆ ನೀನು

ನೀನು ತೆಳು - ಬಿಳುಪು ಮಿಶ್ರಿತ ರನ್ನ
ಕರೆತಂದೆಯಲ್ಲ ಜೊತೆಗೆ ನಿನ್ನ ಅಣ - ತಮ್ಮಂದಿರನ್ನ
ಬಂದು, ಬೇಗನೆ ಹೋಗದವರನ್ನೆಲ್ಲ
ಅದ್ಹೇಗೆ ತಿಳಿ ಹೇಳುವುದು, ನನಗೆ ಗೊತ್ತಿಲ್ಲ

ನೀನೊಬ್ಬಳೇ ಬಂದರೆ ಪರ್ವಾಗಿಲ್ಲ
ಜೊತೆಗೆ ತರುತೀಯಲ್ಲ ತಲೆನೋವನ್ನೆಲ್ಲ
ನೀನು ಚಪಲತೆಯಿಂದ ಕೂಡಿದಾಗ ಮಾತ್ರ
ನನ್ನ ಸಿಟ್ಟಿಗೆ ನೀನೇ ಪಾತ್ರ

ಅಂದು ಕೇಳಿದ್ರು ಡಾಕ್ಟರು ನಿನ್ನ
ನಾನೆಂದೆ, ನನ್ನ-ನಿನ್ನದು ಅಮರ ಪ್ರೇಮ
ನಿನ್ನೊಂದಿಗೆ ನಾನು-ನನ್ನೊಂದಿಗೆ ನೀನು, ಜೊತೆಯಲ್ಲಿ
ನಮ್ಮೀ ಐಕ್ಯಕ್ಕೆ, ಅಯ್ಯೋ, ಆಕೆ ಬರಲಿಲ್ಲ ಕಲಿ?

ನಿನ್ನ ಪ್ರಯತ್ನಗಳನ್ನೆಲ್ಲ ಮಾಡಲು ವಿಫಲ
ವೈದ್ಯ ಮಹಾಶಯರು ಬಳಸಿದರು ತಮ್ಮ ತಪೋಬಲ
ಅವಳ ಮನದಲ್ಲೆದ್ದಿತೊಂದು ಬಲವಾದ ಶಂಕೆ
ವೈದ್ಯರ ವಿಷ ಬೀಜ ಹೊಡೆಯಲಿಲ್ಲ ಮೊಳಕೆ

ನಾ ಹೇಳಿದೆ ನಿನ್ನ ಆಗಮನದಿಂದ ಬೇಸರಗೊಳ್ಳಲಿಲ್ಲ ಚಿನ್ನ
ಆದರೆ ಆ ನಿನ್ನ ಚಪಲತೆ, ಹಾಕಿತು ನಿನ್ನ ನೀಯತ್ತಿಗೆ ಕನ್ನ
ಮರುದಿನದ ಆ ನಿನ್ನ ಜಟಿಲತೆ, ಕಾಡಿಸಿ ಕೈಬಿಟ್ಟಿತು ನನ್ನ
ಅಯ್ಯೋ, ಹೇಗೆ ತಡೆಯಲಿ ನಿನ್ನ ಕೆಲಸಗಳನ್ನ

ಸಕಲ ಅಸ್ತ್ರಗಳ ಬಳಕೆಯಾಯಿತು
’ಲೋಕಲ್’ - ಲಗಾಟಿ ಹೊಡೆಯಿತು
’ಹರ್ಬಲ್’ - ಶೆಟೆದು ಹೋಯಿತು
’ರಾಯಲ್’ - ಜೇಬಿಗೆ ತೂತು ಹೊಡೆಯಿತು

ನಿನ್ನ ಆ ಗಲಭೆಗೆ ಕೆಟ್ಟಿತು ಈ ತಲೆ
ಇನ್ನೇನಾದರು ಮಾಡಬೇಕೆನ್ನುವಷ್ಟರಲ್ಲೆ
ಹೊರಟು ಹೋದರು ನಿನ್ನ ಜೊತೆಯವರು
ಕೊನೆಗೂ ಕಡಿಮೆಯಾಯಿತು ನಿನ್ನ ಜೋರು

ಅಂದಹಾಗೆ, ದುಃಖಿಸಬೇಡ ಪ್ರಿಯೆ
ಅಡೆತಡೆ ಇಲ್ಲದೆ, ನಿರಂತರವಾಗಿ ನಡೆಸು ನಿನ್ನ ಕ್ರಿಯೆ
ಮೂಗಿನೊಳ ರಂಧ್ರದೊಳಗೆ ಮುತ್ತಿನಂತೆ ನೀನು ಹೊಳೆಯುತ್ತಿರುವೆ
ನೆಗಡಿ ಬಂದಾಗ ಮಾತ್ರ, ಎಲ್ಲರ ಮನದೊಳಗೆ ನೀ ಕೊಳೆಯುತ್ತಿರುವೆ

Friday, February 4, 2011

ಅಲೆ

ಹಿತವಾದ ತಂಗಾಳಿ ಸಮುದ್ರದ ಅಲೆಯೊಡನೆ ದಡದತ್ತ ಬೀಸುತಲಿತ್ತು. ಸಮುದ್ರದ ಮಧುರ ಘರ್ಜನೆಯ ಹೊರತು ಬೇರೆ ಯಾವುದೇ ಸಪ್ಪಳವಿರಲಿಲ್ಲ. ಸಾಯಂಕಾಲದ ಸಮಯ; ಅವರಿಬ್ಬರು ಹಸಿ ಮರಳಿನಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸುತ್ತ ಮಾತನಾಡದೆ ನಡೆಯುತ್ತಿರಲು, ಕೆಂಪಾದ ಸೂರ್ಯನು ಇವರಿಬ್ಬರ ನೆರಳನ್ನು ಸಮುದ್ರ ದಂಡೆಯ ಮೇಲೆ ಬೃಹದಾಕೃತಿಯ ರೂಪದಲ್ಲಿ ಮೂಡಿಸುತ್ತ ದೂರ-ದೂರದ ವರೆಗೆ ಹಬ್ಬಿದ್ದ ಸಮುದ್ರದ ಹಿಂದೆ ಮೆಲ್ಲನೆ ಮರೆಯಾಗಲಾರಂಭಿಸದ್ದನು. ಅವನು-ಅವಳ ಉತ್ಸಾಹ ಭರಿತ ಆ ನಡಿಗೆಯಲ್ಲಿ ಮಾತನ್ನು ಯಾರೂ ಪ್ರಾರಂಭಿಸಿರದಿದ್ದರೂ, ಕಣ್ಣುಗಳ ನೋಟದಲ್ಲಿಯೇ ಸಾವಿರಾರು ಪ್ರಶ್ನೆಗಳನ್ನು ಕೇಳಿ ಉತ್ತರಿಸಿಯೂ ಆಗಿತ್ತು! ಸಂತಸ ಕೂಡಿದ ಮಂದಹಾಸ ಅವಳ ಮುಖದಲ್ಲಿ ತುಂಬಿದ್ದರೆ, ಅವನ ನಯನಗಳಲ್ಲಿ ಅವಳ ಪ್ರತಿಬಿಂಬವೇ ಹೊರತು ಬೇರಿನ್ನಿಲ್ಲ... ಆಕಾಶ್ ಹಾಗು ಅನ್ವಿತ ಈ ಸಮುದ್ರ ದಂಡೆಯ ಮೇಲೆ ಹಲವಾರು ಬಾರಿ ನಡೆದಿದ್ದರು, ಆದರೆ ಇಂದು ಅವರಿಗೆ ಒಂದು ವಿಶೇಷವಾದ ದಿನ...

ಅವಳಂದಳು, "ಇಂದು ನಮ್ಮ ಮದುವೆಯಾಗಿ ಒಂದು ವರ್ಷ ಕಳೆದಿದೆ ಅಂತ ನೆನೆಸಿಕೊಂಡ್ರೆ ನಂಬೊಕ್ಕೆ ಆಗ್ತಿಲ್ಲ! ನಾವು ಮೊದಲ ಬಾರಿ ಇಲ್ಲಿಗೆ ಬಂದಾಗ ನನ್ನನೇ ನೋಡುತ್ತ ನೀವು ಆ ತಂಗಿನ ಮರಕ್ಕೆ ಡಿಕ್ಕಿ ಹೊಡೆದದ್ದು ನನಗಿನ್ನೂ ನೆನಪಿದೆ...".
ಮುಖ ಕೆಂಪೇರಿದ ಅಕಾಶ್, "ಒಹ್! ಅದು ನಿನ್ನನ್ನು ನೋಡುತ್ತ ಅಲ್ಲ, ನಿನ್ನ ಜೊತೆಗಿದ್ದ ನಿನ್ನ ಗೆಳತಿ ಪ್ರಿಯಾ ನ ನೋಡಿ!", ಎಂದು ಅನ್ವಿತಾಳನ್ನು ರೇಗಿಸಿ ಅವಳ ಮೃದು ಕೈಗಳ ಪುಟ್ಟ ಗುದ್ದುಗಳಿಂದ ತಪ್ಪಿಸಿಕೊಳ್ಳುತ್ತ ಪ್ರೀತಿಯಿಂದ ಅವಳ ಕೈಗಳನ್ನು ಹಿಡಿದನು.
"ಅನ್ವಿತಾ, ನೀನೇ ನನ್ನ ದಾರಿ ತಪ್ಪಿಸಿದ್ದು! ಇನ್ನು ನಿನ್ನ ಹಾಗು ನನ್ನ ದಾರಿ ಒಂದೇ ಆದ ಮೇಲೆ ನಾನು ನೀನು ಹೇಳಿದ ಹಾಗೆಯೇ ಕೇಳಬೇಕಲ್ಲವೇ?", ಎಂದು ಸ್ವಲ್ಪ-ಸ್ವಲ್ಪವಾಗಿಯೇ ಬೆಂಕಿಗೆ ತುಪ್ಪ ಹಾಕಿದನು.
ಅನ್ವಿತಳ ಹುಸಿ ಮುನಿಸನ್ನು ಹೋಗಲಾಡಿಸಲು ಹಣೆಯೆ ಮುತ್ತೊಂದನ್ನು ಇತ್ತು ಕ್ಷಮೆಯನ್ನು ಯಾಚಿಸಿದನು. ಇಬ್ಬರೂ ದಡದ ಮೇಲೆ ಒಂದೆಡೆ ಕುಳಿತು ಮರಳಿನ ಮನೆಯೊಂದನ್ನು ಕಟ್ಟಲು ಪ್ರಾರಂಭಿಸಿದರು.

ಅಕಾಶ್ - ಅನ್ವಿತ, ಒಬ್ಬರನ್ನೊಬ್ಬರು ನೋಡಿದ್ದು ಸುಮಾರು ೨ ವರ್ಷಗಳ ಹಿಂದೆ. ಅಂದಿನಿಂದಲೂ ಒಬ್ಬರನ್ನೊಬ್ಬರು ಅರಿತು, ಇಷ್ಟಪಟ್ಟು ಮದುವೆಯಾಗಿದ್ದರು. ಇಬ್ಬರೂ ಬೆಂಗಳೂರೆಂಬ ಮಾಯಾ ನಗರಿಯಲ್ಲಿ ಅದೆಂತಹುದ್ದೋ ಕೂತು ಕೀಳಿ-ಮಣೆ ವೊತ್ತೋ ಕೆಲಸವಂತೆ, ಸಾಫ್ಟ್-ವೇರ್ ಅಂತಾರಲ್ಲ, ಅದನ್ನ ಮಾಡೋದು. ತಮ್ಮ ತವರೂರಾದ ಮಂಗಳೂರಿಗೆ ಬಂದಾಗಲೊಮ್ಮೆ ಸಮುದ್ರ ದರ್ಶನ ಮಾಡಿಯೇ ಹೋಗೋದು ಇವರು. ಇನ್ನು, ಕಥೆಗೆ ಮರಳೋಣ!

"ಆಕಾಶ್, ನಿನಗ್ಯಾವ ಮಗು ಇಷ್ಟ?", ಎಂದು ಅನ್ವಿತ ಪ್ರಶ್ನಿಸಿದಾಗ ಆಕಾಶ್, "ನನಗೆ ಗಂಡು, ಹೆಣ್ಣು ಮಗು - ಯಾವುದೇ ಆದರೂ ಪರ್ವಾಗಿಲ್ಲ; ಆದರೆ ಮಗು ಮೈ ಮೇಲೆ ಸುಸ್ಸು ಮಾಡುವುದನ್ನ ನಿಲ್ಲಿಸಿ ಸೂರ್ಯಕಾಂತಿಯಂತಹ ಬೊಜ್ಜು-ಬಾಯಿ ತುಂಬ ನಗು ಬೀರಿದರೆ ಅದು ನನಗಿಷ್ಟ!", ಎಂದು ಸುತ್ತು-ಬಳಸಿ, ಒಂದೇ ಮಾತಿನಲ್ಲಿ ಎರಡು ಪ್ರಶ್ನೆಗಳಿಗೆ (ಒಂದು ಕೇಳಿದ್ದು - ಇನ್ನೊಂದು ಕೇಳದೇ ಇದ್ದಿದ್ದು) ಉತ್ತರ ನೀಡಿದ. ಅನ್ವಿತಾ ಆಕಾಶನಿಗೆ ತಲೆಯ ಮೇಲೆ ನೀಡಿದ ಮೊಟಕು ಅವನ ಬಾಯಿ ಮುಚ್ಚಿಸಿತು!

"ಅದು ಸರಿ, ಒಂದು ಲಾಂಗ್-ಡ್ರೈವ್ ಗೆ ಹೋಗೋಣವೇ?", ಎಂದು ಅಕಾಶ್ ಉಸುರಿದಾಗ, "ಹುಂ! ಆ ನಿಮ್ಮ ಮುರುಕಲು ಬೈಕಿನ ಮೇಲೆ ಕುಳಿತಾ? ನಾನ್ ಬರಲ್ಲಾ!", ಎಂದು ಕಿಡಿ ಕಾರಿದಳು.

ಆಕಾಶ್, ಬೇಸರಿಸದೆ, "ಹಾಗಿದ್ದರೆ, ಒಂದು ಐಸ್ ಕ್ರೀಮ್?", ಎಂದಾಕ್ಷಣ ಅನ್ವಿತ, "ಖಂಡಿತ!", ಎಂದು ತಯಾರಾದಳು.

ಐಸ್ ಕ್ರೀಮ್ ನೆಕ್ಕುತ್ತ, ಮರಳಿನ ಮನೆಯನ್ನು ಅದರ ಪಾಡಿಗೆ ಬಿಟ್ಟು ಒಬ್ಬರನ್ನೊಬ್ಬರು ಛೇಡಿಸುತ್ತ, ಚಿಕ್ಕ ಮಕ್ಕಳಂತೆ ಜಗಳಾವಾಡುತ್ತ, ಮುದ್ದಾಡುತ್ತ ಮನೆಯತ್ತ ನಡೆದರು... ಅಮ್ಮನು ರಾತ್ರಿಗೆಂದು ಮಾಡಿದ್ದ ಸಾರಿನ ಸುವಾಸನೆ ಮರಿಗಳನ್ನು ಬಿಲಕ್ಕೆ ಸೇರುವಂತೆ ಸಂದೇಶವನ್ನು ನೀಡಿತ್ತು. ತಂಪಾದ ಗಾಳಿ ಬೀಸುತ್ತಲಿತ್ತು... ನೀರಿನ ಕೆನೆತ ಮುಗಿಲಿಗೇರಹತ್ತಿತ್ತು.

Wednesday, January 26, 2011

ಮಿತ್ರರೊಡನೆ ವಾಸ

ಮಿತ್ರರೊಡನೆ ಒಂದೇ ಮನೆಯಲ್ಲಿ ವಾಸಿಸುವ ಮಜವೇ ಬೇರೆ. ಅಂತಹ ಕೆಲ ಸ್ವಾರಸ್ಯಕರ ಸನ್ನಿವೇಶಗಳು ಇಲ್ಲಿವೆ - ಕೆಲವು ಕೇಳಿದ್ದವು, ಕೆಲವು ಅನುಭವಿಸಿದ್ದವು. ಕೆಲ ಕಡೆ, ಓದುಗರಲ್ಲಿ ಸ್ವಾರಸ್ಯ ಹೆಚ್ಚಿಸಲು ವಿಷೇಶ ಪದಗಳನ್ನು ಹಾಕಲಾಗಿದೆ.


ಫ್ಲಶ್!

ಅಪರೂಪಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಕೈಯಿಂದ ಬಟ್ಟೆಯನ್ನು ಅಟ್ಯಾಚ್ಡ್ ಬಾತ್ರೂಮಿನಲ್ಲಿ ತೊಳೆದರೆ ಏನಾಗಬಹುದು? ಊಹಿಸಿ :) ಏನಾದರು "ಅನಾಹುತ" ಆಗಲೇ ಬೇಕಲ್ಲವೇ? ಬೆನ್ನು ನೋಯಿಸಿಕೊಂಡು, ಬಟ್ಟೆ ತಿಕ್ಕಿ, ನೀರಿನಲ್ಲಿ ೨ ಬಾರಿ ತೊಳೆದು, ಬಟ್ಟೆಯನ್ನು ಹಿಂಡಿ ತಗೆದಿಟ್ಟು ಇನ್ನೇನು ಮುಗಿಯಿತು, ಈ ನೀರನ್ನು ಎಸೆಯಬೇಕು ಅನ್ನುವಷ್ಟರಲ್ಲಿ ಸುಸ್ತಾಗಿಬಿಟ್ಟಿರುತ್ತದೆ. ಆ ನೀರಿನಲ್ಲಿ ಇನ್ನೇನಾದರೂ ಉಳಿದಿದೆಯೆ ಎಂದು ನೋಡಲೂ ಸಹ ಮನಸ್ಸಿರುವುದಿಲ್ಲ. "ನೀರನ್ನು ಇನ್ನೇನು ಕಮೋಡಿನಲ್ಲಿ ಸುರಿದರೆ ಎರಡು ಕೆಲಸಗಳಾಗುತ್ತವೆ - ನೀರು ಎಸೆದಂತಾಗುತ್ತದೆ ಹಾಗು ಗಲೀಜಾದ ಕಮೋಡನ್ನು ಅಪರೂಪಕ್ಕೆ ಸ್ವಲ್ಪ ಮಟ್ಟಿಗೆ ತೊಳೆದಹಾಗಾಗುತ್ತದೆ", ಎಂಬ ಅತಿ ಜಾಣ್ಮೆಯ ಕಿಡಿ ಮನಸ್ಸಿನಲ್ಲಿ ಬಿದ್ದಾಗ ಎಲ್ಲ ಶುರುವಾಗುತ್ತದೆ. ಒಳಒಳಗೆ ಆದ ಸಂತೋಷದ ಗುಂಗಿನಲ್ಲಿ ಬಕೀಟನ್ನು ಎತ್ತಿ ನೀರನ್ನು ಕಮೋಡಿಗೆ ಸುರಿಯಲು ಶುರು ಮಾಡಲಾಗಿದೆ - ಅಷ್ಟರಲ್ಲಿ, ಅದೋ, ಅಲ್ಲಿ ಹೋಯಿತು ಆ ಅರ್ಧ ತೋಳಿನ ಬನಿಯಾನು... ಮೊನ್ನೆ ತಂದ ಕರ್ಚೀಫು... ಕಮೋಡು ಇವರಿಬ್ಬರನ್ನು "ಸ್ವಾಹಾ" ಅನ್ನುತ್ತಿದ್ದ ಹಾಗೆ, ಮೈ ಮೇಲಿನ ಧ್ಯಾನ ಮತ್ತೆ ಮರಳಿ ಬಕೀಟನ್ನು ಆಚೆ ಸರೆಸಿ, ಅದರಲ್ಲಿ ಉಳಿದ ಸ್ವಲ್ಪ ನೀರಿನಲ್ಲಿ ಇನ್ನೇನಾದರು ಇದೆಯೇ ಎಂದು ನೋಡಿದಾಗ ಏನೂ ಇರುವುದಿಲ್ಲ. ಹೋಗಿದ್ದು ಹೋಯಿತು, ಇನ್ನೇನು ಕಮೋಡಿನಲ್ಲಿ ಕೈ ಹಾಕುವುದು ಬಾಕಿ!

ಇವತ್ತಿನ ತಿಂಡಿ ಮ್ಯಾಗೀ!!

ಸಾಮಾನ್ಯವಾಗಿ ಯಾವುದೇ ತಿಂಡಿ ತಯಾರು ಮಾಡಲು ೩೦ ನಿಮಿಶಗಳಿಗಿಂತ ಹೆಚ್ಚು ಸಮಯ ಬೇಕಾಗುವುದಿಲ್ಲ - ಆದರೆ ಸಮಯ ಯಾರ ಹತ್ತಿರ ಇದೆ? ವಾರದಲ್ಲಿ ೩-೪ ದಿನ ಮ್ಯಾಗಿ ಸರ್ವೇಸಾಮನ್ಯ!

ನಾಳೆ ಬೆಳಿಗ್ಗೆ ನನ್ನ ಬೇಗನೆ ಎಬ್ಬಿಸು

ಬೆಳಗಿನ ಜಾವ (ಅಂದರೆ ೭ ಘಂಟೆಯ ಮೇಲೆ - ೭ ಘಂಟೆ ಆಗುವ ಮುಂಚಿನ ಸಮಯ "ಮಧ್ಯರಾತ್ರಿ"ಯಲ್ಲಿ ಬರುತ್ತದೆ! ) ಎಷ್ಟೇ ಬಾರಿ ಅಲಾರ್ಮ್ ಹೊಡೆದುಕೊಂಡರೂ ಕೈ ಅಲಾರ್ಮನ್ನು ಬಂದ್ ಮಾಡುತ್ತದೆಯೇ ವಿನಹ ದೇಹ ಮಂಚವನ್ನಗಲಿ ಕದಲುವುದಿಲ್ಲ. ಇಂತಹ ಸಮಯದಲ್ಲಿ ಒಬ್ಬರು ಇನ್ನೊಬ್ಬರನ್ನು ಎದ್ದೇಳಿಸಲು ಹೇಳಿ ಮಲಗುವುದು ಸರ್ವೇಸಾಮಾನ್ಯ. ಇದಾದ ಮೇಲೆ, ಇಬ್ಬರೂ ಏಳುವುದು ೮ ಘಂಟೆ ಆದ ಮೇಲೆಯೇ!

ನನ್ನ ಸಾಕ್ಸ್ ಎಲ್ಲಿ?!

ಅವನು (ಹೆಸರು ’ವಿನೋದ’ ಅಂತ ಅಂದ್ಕೊಳ್ಳಿ) ಮನೆ ಹೊಕ್ಕಾಗ ಸಮಯ ಸಾಯಂಕಾಲದ ೭ ಘಂಟೆ. ವಿನೋದನಿಗೆ, ಪ್ರತಿ ಅವಿವಾಹಿತ ಯುವಕನಂತೆ , ಏನನ್ನೂ ಮುಂಚಿತವಾಗಿ ಜೋಡಿಸಿ ಅಭ್ಯಾಸವಿಲ್ಲ. ಕಾಲಿಗೆ ತೊಡಿಸಿದ ಕಾಲುಚೀಲಗಳು (ಸಾಕ್ಸ್) ಹೊರಗಿನ ಕೋಣೆಯಲ್ಲಿ ಒಂದು ವಾರದಿಂದ ತಯಾರಾಗಿ ನಾನಾ ತೆರನೇಯ ಸುವಾಸನೆಗಳನ್ನು ಹೊಮ್ಮಿಸುತ್ತಲಿರುವ ವಿಧವಿಧ ಬಣ್ಣಗಳಿಂದ ಕೂಡಿದ ಗುಂಪೊಂದನ್ನು ಸೇರುವುದರಲ್ಲಿದೆ. ಈ ಸುವಾಸನೆ ಎಲ್ಲರ ಗಮನವನ್ನು ಕನಿಷ್ಟ ೩-೪ ದಿನಗಳಿಂದ ಸೆಳೆಯುತ್ತಲೇ ಇದೆ; ಇನ್ನೊಂದು ದಿನ ಕಳೆದರೆ, ಮೇಲಿನ ಮನೆಯವರು ಸತ್ತ ಇಲಿಯನ್ನು ಹುಡುಕಿಕೊಂದು ನಮ್ಮ ಮನೆಯ ಬಾಗಿಲನ್ನು ತಟ್ಟಿದರೆ ಆಶ್ಚರ್ಯವೇನಿಲ್ಲ. ರಾತ್ರಿ ಕಳೆದು ಬೆಳಗಾಗುತ್ತದೆ - ವಿನೋದನಿಗೆ ಬೆಳಗಿನ ಜಾವ ಬೇಗನೆ ಎದ್ದು ಆಫೀಸಿಗೆ ಹೋಗಬೇಕಾದ ಸಮಯ; ಅಪರೂಪಕ್ಕೆ ಸ್ನಾನ ಮಾಡಲಾಗಿದೆ ಇಂದು. ಎಂದಿನಂತೆ ಕ್ಯಾಬ್ ಬಂದು ಇವರಿಗಾಗಿ ಕಾಯುತ್ತಿದೆ... ಆದರೆ, ಕಾಲಿಗೆ ತೊಡಿಸಲು ಕಾಲುಚೀಲಗಳೆಲ್ಲಿ???

Monday, January 24, 2011

ಮೇಡಂನ ಬೆಚ್ಚಿ-ಬೀಳಿಸಿದ ಪ್ರಸಂಗ

ಮೇಡಂ ನ ಬೆಚ್ಚಿ-ಬೀಳಿಸಿದ ಪ್ರಸಂಗ

ಬಿ.ಈ. ತರಗತಿಗಳಲ್ಲಿ ಮಾಡಿದ ಹಲವಾರು ’ಅತಿ’ ಜಾಣ್ಮೆಯ ಕೆಲಸಗಳಲ್ಲಿ ನನಗಿಂದು ನೆನಪಿಗೆ ಬಂದದ್ದು ಈ ಸನ್ನಿವೆಷ.

ಸಾಯಂಕಾಲದ ೩ ಘಂಟೆಯಾಗಿದೆ. ಕಾಲೇಜಿನ ಎರಡನೇಯ ಅಂತಸ್ತಿನ ಕೊಠಡಿಗಳು ಸೂರ್ಯನ ಶಾಖಕ್ಕೆ ಸುಡುವ ಕಾವಲಿಯಂತೆ ಕಾದು, ಊಟ ಮಾಡಿ ಪಾಠ ಕೇಳಲು ಕುಳಿತ ವಿದ್ಯಾರ್ಥಿಗಳು ತೂಕಡಿಸುವಂತೆ ಮಾಡಿತ್ತು. ತೆರೆದ ಕಿಟಕಿಗಳು (ತೆರೆಯುವುದಿನ್ನೇನಿದೆ - ಗಾಜಿನ ಕಿಟಕಿಗಳಿಗೆ ಗಾಜೇ ಇಲ್ಲ), ಕಿಟಕಿಗಳಿಂದ ಒಳಚಿಮ್ಮುತ್ತಿದ್ದ ಸೂರ್ಯನ ಕಿರಣಗಳು, ಹಳೇಯ (ಆದರೆ ಗಟ್ಟಿಮುಟ್ಟಾದ) ಬೆಂಚುಗಳು, ದೂರದಲ್ಲಿ ಪೋಡಿಯಂ ಮೇಲೆ ತರಗತಿಯತ್ತ ಬೆನ್ನು ಮಾಡಿ ಬೋರ್ಡಿನ ಮೇಲೆ ,ಮಗ್ನವಾಗಿ, ಚಾಕ್ ಬಳಸಿ ಬರೆಯುತ್ತಿದ್ದ ಮೇಡಂ, ಇತ್ಯಾದಿ, ಇತ್ಯಾದಿ... ಇವೆಲ್ಲವನ್ನು ನೋಡುತ್ತ, ಪಾಠದೆಡೆ ಗಮನ ನೀಡದೆ ಅತೃಪ್ತನಂತೆ ಹೊರ ಹೋಗಲು ಕಾಯುತ್ತಿದ್ದೆ. ನನ್ನ ಜೊತೆ ಸೂರಿ; ಇಬ್ಬರೂ ಸೇರಿ ನಮ್ಮ ಡಿಪಾರ್ಟಮೆಂಟಿನ ಫೋರಂ ಕೆಲಸದ ನಿಮಿತ್ತ ಹೊರಹೋಗಬೇಕಿತ್ತು; ಆದರೆ ಹೋಗುವುದು ಹೇಗೆ? ೩.೩೦ ಗೆ ನಾವು ಹೋಗಬೇಕು - ತರಗತಿ ಶುರುವಾಗುತ್ತಿದ್ದಂತೆಯೆ ಮೇಡಂನ್ ಜೊತೆ ನಾವಿಬ್ಬರು ಇದರ ಕುರಿತು ಮಾತನಾಡಿದ್ದೆವು - ೩.೩೦ಗೆ ನಾವು ಹೊರ ಹೋಗುವುದಾಗಿ ತಿಳಿಸಿದ್ದೆವು; ಆದರೆ ಸಮಯ ಈಗ ೩.೪೦ ಆಗಿ ಹೋಗಿದೆ! ಮೇಡಂ ಇತ್ತ ತಿರುಗುತ್ತಿಲ್ಲವೇಕೆ? ನಮ್ಮನ್ನು ಹೋಗಲು ಹೇಳುತ್ತಿಲ್ಲ - ಏಕೆ? ತಲೆಯಲ್ಲಿ ಹಲವಾರು ಇಂತಹ ವಿಚಾರಗಳ ಸರಮಾಲೆಯೇ ಸುತ್ತುತಿವೆ.

ಅಷ್ಟರಲ್ಲಿ ಸೂರಿ ನನ್ನನ್ನು ಕುರಿತು ಸಣ್ಣ ದನಿಯಲ್ಲಿ ಪಿಸುಗುಟ್ಟುತ್ತಾನೆ,
"ವಿನಿ! ಅವಿನಾಶ್ ಸರ್ ಕರೆದಿದ್ರಲ್ಲ ಫೋರಂ ಕೆಲಸಕ್ಕೆ? ಹೋಗೋಣ? ಮೇಡಂನ್ ಕೇಳು!"
ನಾನು, "ಸರಿ - ಸ್ವಲ್ಪ ಕಾಯೋಣ" ಅಂದೆ. ಮನಸ್ಸಿನಲ್ಲಿ ಕಾಯುವ ಇಷ್ಟ ಕಿಂಚಿತ್ತೂ ಇಲ್ಲ - ಆದರೆ ಮೇಡಂ ಯಾಕೆ ತಿರ್ಗ್ತಿಲ್ಲಾ ಗೋಡೆ ಬಿಟ್ಟು?

ಅಟೆಂಡರ್ ಒಬ್ಬರು ಬಂದರು ತರಗತಿಯೊಳಗೆ. ಅವಿನಾಶ್ ಸರ್ ಕರೆ ಕಳುಹಿಸಿರಬೇಕು ಅಂತ ಅಂದುಕೊಂಡು ಖುಶಿಯಾಯಿತು. ಅವರು ಒಳಬಂದವರೇ ಸೀದಾ ಮೇಡಂನ ಡೆಸ್ಕಿಗೆ ಹೋಗಿ ಮೇಡಂಗೆ ಕರೆ ನೀಡಿದರು. ಮೇಡಂ, ಅಟೆಂಡರ್ ತಂದ ಕಾಗದದ ಮೇಲೆ ಸಹಿ ಹಾಕಿ ಕಳುಹಿಸಿಬಿಟ್ಟರು... ಅರೆ! ನಮ್ಮನ್ನು ಕರೆಯಲು ಯಾರೂ ಬರಲಿಲ್ಲವೆ? ಛೆ! ಸಮಯ ೪ ಘಂಟೆ!

ಇನ್ನು ತಡೆಯುವುದರಲ್ಲಿ ಅರ್ಥವಿರಲಿಲ್ಲ. ಅಷರಲ್ಲಿ ಸೂರಿ ಮತ್ತೊಮ್ಮೆ ಕೇಳಿದ,
"ವಿನಿ, ಇಗ ಕೇಳೋಣ?"
ನಾನು,"ಸರಿ, ಮೇಡಂನ ಕೇಳ್ತಿನಿ", ಅಂದೆ.

ಮೇಡಂ ಇನ್ನೂ ಬೋರ್ಡಿನತ್ತ ಮುಖ ಮಾಡಿ ಬರೆಯುತ್ತಲೇ ಇದ್ದಾರೆ. ನಾನು ನನ್ನ ಜಾಗದಿಂದ ಎದ್ದು ಮೇಡಂನತ್ತ ಸದ್ದು ಮಾಡದೆ ಧಾವಿಸತೊಡಗಿದೆ. ತಪ್ಪನ್ನೇನು ಮಾಡಿರದಿದ್ದರೂ, ತರಗತಿಯನ್ನು ತಪ್ಪಿಸಿ ಹೋಗಲು ಅನುಮತಿ ಕೇಳಲು ಹೊರಟಾಗ, ಮನಸ್ಸಿನಲ್ಲಿ ಒಂದು ತೆರನೇಯ ದುಗುಡ - ಆತಂಕ. ನಾನು ಇನ್ನೇನು ಪೋಡಿಯಂ ಹತ್ತಿರ ಬಂದೆ ಎನ್ನುವಷ್ಟರಲ್ಲಿ ಎಲ್ಲರ ಗಮನ ನನ್ನತ್ತ; ಆದರೆ ಮೇಡಂ ಮಾತ್ರ ತಿರುಗುವ ಮನಸ್ಸನ್ನು ಇನ್ನು ಮಾಡಿಲ್ಲ. ಎಂತಹ ವಿಪರ್ಯಾಸ! ಮೆಲ್ಲನೆ ಮೇಡಂನ ಕರೆದೆ. ಆದರೆ ಅವರಿಂದ ಉತ್ತರ ಬರಲಿಲ್ಲ. ಬೋರ್ಡಿನ ಮೇಲೆ ಚಾಕ್ ಕೆರೆಯುವ ಸದ್ದು ಹುಡುಗರ ಗುಜುಗುಜುವಿನೊಡನೆ ಬೆರೆತು ಹೊಮ್ಮುತ್ತಿದೆ. ಮೇಡಂ ಮಾತ್ರ - ಊಹುಂ - ಆಲಿಸುತ್ತಿಲ್ಲ. ಅವರ ಕೆಲಸದಲ್ಲಿ ಮುಳುಗಿ ಹೋಗಿದ್ದಾರೆ.

ಸದ್ದು ಮಾಡುವ ಇಷ್ಟ ನನಗಿರಲಿಲ್ಲ (ತಪ್ಪು ಮಾಡಲು ಮೂಲ ಕಾರಣ!). ಮೆಲ್ಲನೆ ಪೋಡಿಯಂ ಹತ್ತಿದೆ. ಮೇಡಂನ ಪಕ್ಕ ಬಂದು ನಿಂತೆ. ಕೈ ಚಾಚಿದರೆ ಮುಟ್ಟುವಷ್ಟು ದೂರ. ಮೇಡಂ ನನ್ನನ್ನು ಇನ್ನೂ ಗಮನಿಸಿಲ್ಲ... ಇದನ್ನು ನಾನೂ ಗಮನಿಸಿಲ್ಲ.

ಬಾಯಿ ತೆರೆದೆ, "ಮೇಡಂ...."

ತರಗತಿಯಲ್ಲೆಲ್ಲೆಡೆ ಮಂದ ಗುಜುಗುಜು ಮಿಶ್ರಿತ ನಗು ತೇಲುತಿದೆ...

ಮೇಡಂ ನಾನು ಕರೆದಾಕ್ಷಣ ಬೆಚ್ಚಿ ಬಿದ್ದು, ಹೆದರಿಕೆಯಿಂದ ಕೂಡಿದ ಕಣ್ಣುಗಳಿಂದ ನನ್ನನು ನೋಡಿ ಚಾಕ್ ಇಲ್ಲದ ಕೈಯನ್ನು ತಮ್ಮ ಎದೆಗವಚಿ ತಮ್ಮ ಜೀವನದಲ್ಲಾದ ಈ ವಿಚಿತ್ರ ಶಾಕ್ನ್ ನಿಂದ ಹೊರ ಬರಲು ಯತ್ನಿಸಿದರು. ಯಶಸ್ಸನ್ನು ಕಂಡರೆನ್ನಿಸುತ್ತದೆ. ಅಷ್ಟರಲ್ಲಿ ನಾನು, "ನಾನು ಹಾಗು ಸುರೇಶ್ ಅವಿನಾಶ್ ಸರ್ ಅನ್ನು ಫೋರಂ ವಿಶಯವಾಗಿ ಈಗ ಭೆಟ್ಟಿಯಾಗಬೇಕು - ನಾವು ತರಗತಿಯಿಂದಾಚೆ ಹೋಗಬಹುದೆ?", ಎಂದು ಉಸುರಿಯಾಗಿತ್ತು.

ಮೇಡಂ ಇನ್ನು ಶಾಕ್ ನಲ್ಲಿ, ತಮ್ಮ ಗೋಣನ್ನು "ನನಗೆ ಸಮ್ಮತಿ ಇದೆ" ಎನ್ನುವ ರೀತಿಯಲ್ಲಿ ಅಲುಗಾಡಿಸಿದ್ದೇ ತಡ, ಅವರಿಗೆ ಧನ್ಯವಾದಗಳನ್ನರ್ಪಿಸಿ, ನಾನು ಮಾಡಿದ ಅವಾಂತರ ನೆನೆದುಕೊಳ್ಳುತ್ತ, ಸೂರಿಯೊಡನೆ ಅಲ್ಲಿಂದ ಜಾಗ ಖಾಲಿ ಮಾಡಿದೆ. ನಮ್ಮೋಡನೆ ಕೊನೇಯ ಬೆಂಚಿನಲ್ಲಿ ಕುಳಿತಿದ್ದ ಸಹಪಾಠಿಗಳು ತಾವೂ ತರಗತಿಯಿಂದ ಹೊರ ಬರುವುದು ಹೇಗೆ ಎಂದು ಕೇಳಿದರಾದರೂ, ನಾನು ನನ್ನ ಈ ವರ್ತನೆಯಿಂದ ಪ್ರಭಾವಿತನಾಗಿದ್ದು, ನನ್ನ ತಲೆಯನ್ನು ಕೆರೆಯುತ್ತ "ಫೋರಂ ಕೆಲಸ" ಎಂದು ಹೇಳಿ ಅಲ್ಲಿಂದ ಹೊರಟೆ. ಪಾಪ, ಮೇಡಂ. :)

Monday, September 13, 2010

ದೃಢ ನಿರ್ಧಾರ

ಸುಮಾರು ೨ ದಶಕಗಳ ಹಿಂದಿನ ಮಾತು; ಒಂದನೇಯ ತರಗತಿಯಲ್ಲಿ ಪುಟ್ಟನೇಯ ಬೆಂಚುಗಳ ಮೇಲೆ ಕೂತು ಪಾಠ ಕೇಳಿದ ನೆನಪು. "ಈ ಕಿಟಕಿಗಳು ಎಷ್ಟು ದೊಡ್ಡದಾಗಿವೆ!", ಅಂತ ಆಗ ಮನದಲ್ಲಿಯೇ ಅಂದುಕೊಂಡದ್ದು ಈಗ ನೆನಪು ಬಂದಾಗ, ತರಗತಿಯಲ್ಲಿ ಶ್ರದ್ಧೆಯಿಂದ ವ್ಯಾಸಂಗ ಮಾಡುತ್ತಿದ್ದ ಆ ಸಹಪಾಠಿಯ ನೆನಪು ಸಹ ಬಂದಿತು. ದುಂಡನೇಯ ಮುಖ, ಲಕ್ಷಣವಾಗಿ ಬಾಚಿದ ತಲೆಗೂದಲು, ಎರಡು ಜುಟು, ನೀಟಾಗಿ ಆಯರ್ನ್ ಮಾಡಿದ ಸ್ಕರ್ಟು ಹಾಗು ಇಂಗ್ಲೀಷಿನಲ್ಲಿ ಮಾತನಾಡುವ ಸತತ ಪ್ರಯತ್ನ! ಪದಗಳು ಸರಿಯಾಗಿ ಬರುತ್ತಿರಲಿಲ್ಲ - ಆದರ ಅವಳು ಅಲ್ಲಿಗೇ ಬಿಡುವ ಪೈಕಿಯಲ್ಲ. ಪದಕ್ಕೆ ಪದವನ್ನು ಜೋಡಿಸು ಹರುಕು-ಮುರುಕು ಆದ್ರೂ ಸೈ, ಆಂಗ್ಲ ಪದಗಳ ಸರಮಾಲೆಯನ್ನು ಕಟ್ಟಿ ಮಾತನಾಡಲು ಯತ್ನಿಸುತ್ತಿದ್ದಳು. ಕಷ್ಟ ಪಟ್ಟು, ಪ್ರಯತ್ನ ಮಾಡಿ, ಎಡವಿ, ತಿದ್ದುಕೊಂಡು ಹೊಸ ಪದಗಳನ್ನು ಪ್ರಯೋಗಿಸುತ್ತಿದ್ದಳಾಕೆ. ಪ್ರಾಧ್ಯಾಪಕರು ಅವಳ ಪ್ರಯತ್ನವನ್ನು ಮೆಚ್ಚಿ ಕೈಲಾದಷ್ಟು ಸಹಾಯ ಮಾಡಿ ಪ್ರೋತ್ಸಾಹಿಸುತ್ತಿದ್ದರು. ನಾವು ಮಹಾ ಪಂಡಿತರಲ್ಲದಿದ್ದರೂ, ಅಪೇಕ್ಷೆಗೆ ತಕ್ಕಂತೆ, ಈ ಪ್ರಯತ್ನದಲ್ಲಿ ಹೊರಹೊಮ್ಮುವ ವಿವಿಧ ಪದಗಳಿಂದ ಉದ್ಭವಿಸುವ ನಗುವಿನ ಅಲೆಯನ್ನು ತಡೆದುಕೊಂಡು ಇರುತ್ತಿದ್ದೆವು. ಒಂದನೇಯ ತರಗತಿಯಲ್ಲಿ ಅನ್ಯರಂತೆ ನನಗಿದ್ದದ್ದು ಒಂದೇ ಪ್ರವೃತ್ತಿ - ಆಟ ಅಡುವುದು! ಆ ವಯಸ್ಸಿನ ಬಹಳಷ್ಟು ವಿಶಯಗಳು ನನಗೆ ನೆನಪಿಲ್ಲ - ಒಮ್ಮೆ ಕಾಲಚಕ್ರವನ್ನು ಹಿಂದಕ್ಕೆ ತಿರುಗಿಸಿ, ಗೆಳೆಯರನ್ನೊಮ್ಮೆ ನೋಡಿ ಆನಂದಿಸಬಹುದಾಗಿದ್ದರೆ ಎಷ್ಟು ಚೆನ್ನಾಗಿರ್ತಿತ್ತು :)

Monday, August 16, 2010

ಸವಿ ನುಡಿ

ಕಾಲೇಜಿನ ಮೊದಲ ದಿನ, ನಾನು ಕಾಲೇಜು ತಲುಪಿದಾಗ ಮೊದಲ ಪೀರಿಯಡ್ ಶುರುವಾಗಿತ್ತು. ಯಾವ ತರಗತಿ, ಎಲ್ಲಿ ಕೂಡ್ಬೇಕು, ಯಾವ ಸಬ್ಜೆಕ್ಟ್... ಇವೇನೂ ಗೊತ್ತಿರಲಿಲ್ಲ. ನನ್ನ ತಮ್ಮ ಹಾಗು ಮಿತ್ರರೊಡನೆ ಕಾಲೇಜಿನ ಕಾಂಪೌಂಡನ್ನು ದಾಟಿ ಒಳಗೆ ಬಂದಾಗ ಜನಜಾತ್ರೆಯನ್ನು ನೋಡಿ ಕೆಲಕಾಲ ಏನು ಮಾಡಬೇಕೆಂದು ತೋಚಲಿಲ್ಲ - ಬಹಳ ಜನರನ್ನು ಕಂಡರೆ ಮೊದಲೇ ನನಗಾಗುತ್ತಿರಲಿಲ್ಲ. ಒಂದೆಡೆ ಹುಡುಗರು ನೋಟಿಸ್-ಬೋರ್ಡನ್ನು ಮುತ್ತಿಗೆ ಹಾಕಿಕೊಂಡು ನಿಂತಿರುವುದನ್ನು ಕಂಡು ಅದರತ್ತ ನಾವೂ ಸಹ ಹೋಗಿ ನಿಂತೆವು - ಅಲ್ಲಿ, ಯಾವ ತರಗತಿಗಳಿಗೆ ಯಾವ ವಿದ್ಯಾಥಿಗಳು ಹೋಗಬೇಕೆಂಬ ವಿವರ ಬರೆಯಲಾಗಿತ್ತು. ನಮ್ಮದು ಫಿಸಿಕ್ಸ್ ಸೈಕಲ್ ಎಂದು ನಮಗೆ ಮೊದಲೇ ತಿಳಿದಿದ್ದರಿಂದಾಗಿ ನೇರವಾಗಿ ನಮ್ಮ ಹೆಸರುಗಳನ್ನು ಆ ಸೂಚಿಯಲ್ಲಿ ನೋಡತೊಡಗಿದೆವು. ನನ್ನ ತಮ್ಮನಿಗೆ ತನ್ನ ತರಗತಿಯಾವುದೆಂದು ತಿಳಿದು ಅವನು ಹೋಗಲು ಅಣಿಯಾದ. ನಾನು ನನ್ನ ತರಗತಿಯನ್ನು ಹುಡುಕಿಕೊಂದು ಅಲ್ಲಿ ಹೋಗುವುದಾಗಿ, ಅವನನ್ನು ಊಟದ ಸಮಯಕ್ಕೆ ಸಿಗುವುದಾಗಿ ಹೇಳಿ ಬೀಳ್ಕೊಟ್ಟೆ.

ಹುಡುಕುತ್ತ, ಹುಡುಕುತ್ತ ಕೊನೆಗೆ ನನ್ನ ಹೆಸರು ಕಂಡಾಗ ಕ್ಲಾಸ್ ಶುರುವಾಗಿ ಅರ್ಧ ಘಂಟೆ ಆಗಿ ಹೋಗಿತ್ತು. ನನ್ನೊಡನೆ ಸೂರಿ ಸಹ ಇದ್ದ - ಆಗಿನ್ನು ನಮ್ಮದು ಹೊಸ ಪರಿಚಯ - ಅವನೂ ಹರಿಹರದವನು ಅನ್ನುವುದೊಂದೇ ತಿಳಿದಿತ್ತು ನನಗೆ. ಗಡಿಬಿಡಿಯಲ್ಲಿ ಕ್ಲಾಸಿನತ್ತ ಧಾವಿಸತೊಡಗಿದೆವು. ಅಷ್ಟರಲ್ಲಿ ಹಿಂದಿನಿಂದ ಹುಡುಗಿಯೊಬ್ಬಳು ತನ್ನ ತಂದೆಯನ್ನು ಕುರಿತು ತಾನು ತರಗತಿಗೆ ಹೋಗುವುದಾಗಿಯು, ಚಿಂತಿಸಬಾರದೆಂದು ಹೇಳಿ ತಂದೆಯನ್ನು ಬೀಳ್ಕೊಟ್ಟು ನಮ್ಮ ತರಗತಿಯತ್ತ ಬರುವುದನ್ನು ಆಲಿಸಿದೆ - ನನ್ನ ಮನೆ ಹಾಗು ಸಂಭಂದಿಕರ ಹೊರತಾಗಿ ನನಗೆ ಅರ್ಥವಾಗುವ ರೀತಿಯಲ್ಲಿ ಕೊಂಕಣಿಯಲ್ಲಿ ಮಾತನಾಡಿದ್ದನ್ನು ನಾನು ಕೇಳಿದ್ದು ಅದು ಮೊದಲನೇಯ ಬಾರಿಯಾಗಿತ್ತು. ಒಂದು ಬಗೆಯ ಸಂತಸವಾಯಿತು - ಏಕೆಂದು ಗೊತ್ತಿಲ್ಲವಾದರು, ನೂರಾರು ಅಪರಚಿತರಲ್ಲಿ ಒಂದು ಪರಿಚಿತ ಸವಿ ನುಡಿಯನ್ನು ಕೇಳಿ ಈ ಅಪರಿಚಿತೆಯನ್ನು ಒಮ್ಮೆ ನನ್ನ ಮಾತೃಭಾಷೆಯಲ್ಲಿ ಮಾತನಾಡಿಸಬೇಕೆಂದುಕೊಂಡೆ ಆದರೆ ತಿರುಗಿ ಯಾರವಳಾಕೆ ಎಂದು ನೋಡಲು ಮನಸ್ಸಾಗಲಿಲ್ಲ.

ಇತ್ತ ಫಿಸಿಕ್ಸ್ ಮೇಷ್ಟ್ರು ಬುಲೆಟ್ ಟ್ರೇನಿನ ವೇಗದಲ್ಲಿ ಪಾಠವನ್ನು ಮಾಡುತ್ತಿದ್ದರು - ನಾವು ಅವರ ಕ್ಲಾಸನ್ನು ಹೊಕ್ಕು ಹಿಂದಿನ ಬೆಂಚಿನಲ್ಲಿ ಸಿಕ್ಕ ಜಾಗದಲ್ಲಿ ತುರುಕಿ ಕುಳಿತುಕೊಂಡೆವು. ಅಂದು ಪಾಠ ತಲೆಗೆ ಹತ್ತುವುದು ಅಷ್ಟರಲ್ಲಿಯೇಇತ್ತು - ನನ್ನ ಧ್ಯಾನ ಡೋರಿನತ್ತಕ್ಕೆ ಮಿಸ್ಕಾಡದ ಹಾಗೆ ಭದ್ರವಾಗಿ ನಾಟಿತ್ತು. ನನಗರಿವಾಗದಂತೆಯೇ ಓಳ ಬರುತ್ತಿದ್ದ ಪ್ರತಿಯೊಬ್ಬರನ್ನೂ ಕಣ್ಣಿನಿಂದಲೇ ಅಳೆಯಲಾರಂಭಿಸಿದ್ದೆ. ಅಂದಿನ ದಿನ ಈನ್ನೂ ಹಲವಾರು ಘಟನೆಗಳು ನಡೆದುವು - ಸೂರಿ ರುದ್ರಪ್ಪ ಸರ್ ಕೈಲಿ ಬೈಸಿಕೊಂಡ; ಕೆಲವು ತರಗತಿಗಳು ನಡೆದುವು ಆದರೆ ಅವುಗಳಲ್ಲೇನು ವಿಷೇಶವಾದುದ್ದೇನು ನಡೆಯಲಿಲ್ಲ ಅಂದರೆ ತಪ್ಪೇನಾಗದು.

ಆ ಹುಡುಗಿಯನ್ನು ಗುರುತಿಸಿದ್ದೇನೋ ಸರಿ ಆದರೆ ಅವಳನ್ನು ಮಾತನಾಡಿಸಿದ್ದು, ಇಡೀ ದಿಗ್ರೀ ಸಮಯದಲ್ಲಿ, ಕೇವಲ ೨-೩ ಬಾರಿ ಇರಬೇಕು. ಅದು ಇಂಗ್ಲೀಷಲ್ಲಿ. ನನ್ನ ತರಗತಿಯಲ್ಲಿ ನನ್ನೊಡನೆ ಓದುತ್ತಿದ್ದ ಪ್ರತಿ ಮುಖವನ್ನು ಗುರುತಿಸಲು ನನಗೆ ಏನಿಲ್ಲವೆಂದರೂ ಸುಮಾರು ಒಂದು ಸೆಮಿಸ್ಟರ್ ಬೇಕಾಯಿತು. ಇನ್ನು ಅವರ ಹೆಸರುಗಳು ತಿಳಿದು ಮಿತ್ರರು ಆಗುವಷರಲ್ಲಿ ಒಂದು ವರ್ಷವೇ ಆಗಿ ಹೋಗಿತ್ತು.

ಎರಡನೇಯ ವರ್ಷಕ್ಕೆ ಕಾಲಿಡುತ್ತಿದ್ದಂತೆಯೆ ನಮ್ಮ ತರಗತಿಗಳು ಬದಲಾದುವು. ಹೊಸ ಮಿತ್ರರು, ನಮ್ಮದೇ ಆದ ವಿಭಾಗ, ಎಲ್ಲ ಚೆನ್ನಾಗಿತ್ತು. ಜೀವನದ ಹಲವಾರು ಮರೆಯಲಾಗದ ನೆನಪುಗಳನ್ನು ಇಲ್ಲಿ ಪಡೆದೆ. ನಮ್ಮ ಲೋಕವೇ ಬೇರೆಯಾಗಿತ್ತು; ಬೆಳಗಾದರೆ ಓಡಿ ಪ್ರಾಣಭಯವಿಲ್ಲದೆ ಮುರುಕಲು ಉಕ್ಕಡಗಾತ್ರಿ-ದಾವಣಗೆರೆ ಬಸ್ಸಿನಲ್ಲಿ ಜೋತು ಬಿದ್ದು ಕಾಲೇಜು ಸೇರುವುದೆಂದರೆ ಒಂದು ತೆರನೇಯ ಮೋಜು - ಸಂತಸ. ಓದು, ಆಟ, ಮಿತ್ರರೊಡನೆ ತಿರುಗಾಟ - ಬೆಳಗಿನ ಜಾವ ಎದ್ದೇಳಲು ಕೇವಲ ಅಮ್ಮನ ಒಂದು ಸ್ಪರ್ಶವೇ ಸಾಕಾಗಿತ್ತು! ಉಪನ್ಯಾಸಕರ ಸಹಕಾರ ಹಾಗು ತಾಳ್ಮೆ ನಮ್ಮಲ್ಲಿನ ಆತ್ಮವಿಶ್ವಾಸವನ್ನು ಮುಗಿಲಿಗೇರಿಸಿತ್ತು. ನೋಡುನೋಡುತ್ತ ಸಮಯ ಕಳೆದದ್ದೇ ಗೊತ್ತಾಗಲಿಲ್ಲ - ಕಾಲೇಜು ಮುಗಿಯಲು ಕೆಲವೇ ದಿನಗಳು ಇದ್ದುವು.

ಹೀಗೊಂದು ದಿನ, ರವಿವಾರವಿರಬೇಕು, ದಾವಣಗೆರೆಗೆ ರೈಲ್ವೇ ಸ್ಟೇಶನ್ ಗೆ ಟಿಕೇಟೊಂದನ್ನು ಕೊಂಡುಕೊಳ್ಳಲು ನಾನು ಬಂದಿದ್ದೆ. ರಷ್ ಇದ್ದುದ್ದರಿಂದ ಕೆಲ ಕಾಲ ಕೂತುಕೊಂಡೆ - ಟಿಕೇಟನ್ನು ಪಡೆದೆ. ಆಷ್ಟರಲ್ಲಿ ನನ್ನ ಸಹಪಾಠಿಯೊಬ್ಬನು ಬೆಂಗಳೂರಿಗೆ ಹೋಗಲು ಟಿಕೇಟು ಕೊಂಡುಕೊಳ್ಳಲು ಬಂದಿದ್ದ; ಅವನೊಡನೆ ನಾನು ಕಾಲೇಜಿನ ಮೊದಲ ದಿನ ಮಾತನಾಡಲು ಬಯಸಿದ ಆ ಹುಡುಗಿಯೂ ಇದ್ದಳು. ಇಬ್ಬರನ್ನು ಮುಗುಳ್ನಕ್ಕು ಗುರುತಿಸಿದೆ. ಹಿಂದೆಂದೂ ಕೊಂಕಣಿಯಲ್ಲಿ ಅನ್ಯರನ್ನು ಮಾತನಾಡಿಸಿರಲಿಲ್ಲ - ಮಾತನಾಡಿಸುವ ಪ್ರಮಯವೂ ಬಂದಿರಲಿಲ್ಲ - ಬಂದಿದ್ದರೂ ನಾನು ಕನ್ನಡದಲ್ಲಿ ಅಥವ ಇಂಗ್ಲೀಷಿನಲ್ಲಿ ಮಾತನಾಡಿಸಿ ಮುಗಿಸಿದ್ದೆ. ಮೊದಲ ಬಾರಿ ನನ್ನ ಭಾಷೆಯನ್ನು ನನ್ನವರಲ್ಲದವರೊಡನೆ ಮಾತನಾಡಿದೆ. "ನೀನು ಎಲ್ಲಿಗೆ ಹೋಗ್ತಿದ್ದೀಯ?", ಅನ್ನೋ ಅರ್ಥದಲ್ಲಿ ಅವಳನ್ನು ಕುರಿತು ಒಂದು ಪ್ರಶ್ನೆಯನ್ನು ಕೇಳಿದೆ; ಮಾತಿನ ವಿಷಯದಲ್ಲಿ, ಮೊದಲ ಬಾರಿ, ಕೂಪಮಂಡೂಕನಾಗದಿರಲು ಮನಸ್ಸು ಮಾಡಿದ್ದೆ.

ಒಂದು ಕ್ಷಣ ಅವಳ ಮುಖದಲ್ಲಿ ದೊಡ್ಡ ಪ್ರಷ್ನಾಚಿನ್ಹೆಯನ್ನು ಕಂಡೆ - "ಇವನಿಗೆ ನನ್ನ ಭಾಷೆ ಹೇಗೆ ಗೊತ್ತು?", ಅನ್ನುವ ಭಾವದಲ್ಲಿ ಆ ಕಣ್ಣುಗಳು ನನ್ನನ್ನು ನೋಡಿದುವು. ಇದು ನಡೆದದ್ದು ಕ್ಷಣಾರ್ಧದಲ್ಲಿ. ನಾನು ಒಂದು ಶಾಕ್ ಕೊಟ್ಟ ಹಾಗೆ ಆಗಿದ್ದರಿಂದ ಆವಳು, ಸ್ವಲ್ಪ ಸುಧಾರಿಸಿಕೊಂಡು, "ಒಹ್! ನಿನಗೆ ಕೊಂಕಣಿ ಬರುತ್ತದೆಯಾ? ನಾವು ಬೆಂಗಳೂರಿಗೆ ಹೋಗುತ್ತಿದ್ದೇವೆ - ಕಂಪನಿಯವರು ಮೆಡಿಕಲ್ ಚೆಕಪ್ ಗೆ ಕರೆದಿದ್ದಾರೆ", ಎಂದು ಕೊಂಕಣಿಯಲ್ಲಿ ಉತ್ತರಿಸಿದಳು. ಆಷ್ಟರಲ್ಲಿ ಅವರಿಬ್ಬರು ಟಿಕೇಟನ್ನು ಕೋಂಡುಕೊಳುವ ಸರದಿ ಬಂದಿತ್ತು. ನಾನು ಅವರಿಬ್ಬರನ್ನು ಬೀಳ್ಕೊಟ್ಟು ಹರಿಹರದ ಬಸ್ಸನ್ನು ಹತ್ತಿದೆ. ನಾನು ಹಾಗೆ ಮಾತನಾಡಿ ಬಂದಿದ್ದೆ ಎಂಬುದು ನನಗೆ ಬಹಳ ಸಂತಸವನ್ನು ನೀಡಿತ್ತು; ಹುಡುಗಿಯನ್ನು ಮಾತನಾಡಿ ಬಂದೆನೆಂಬುದಕ್ಕಲ್ಲ - ಮುಕ್ತವಾಗಿ, ಬರುವ ಭಾಷೆಯಲ್ಲಿ ಭಯವಿಲ್ಲದೆ ಮಾತನಾಡಿ ಒಬ್ಬ ಮಿತ್ರನನ್ನು ಮಾಡಿಕೊಂಡೆನೆಂಬ ಕಾರಣದಿಂದಾಗಿ. ಮನೆ ತಲುಪುವ ತನಕ, ದಾರಿಯುದ್ದಕ್ಕೂ "ನಾನು ಮೊದಲಿನಿಂದ ಎಲ್ಲರೊಡನೆ ಇನ್ನೂ ಚೆನ್ನಾಗಿ ಬೆರೆತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು!" ಅಂತ ಹಗಲುಗನಸನ್ನು ಕಂಡದ್ದಾಯಿತು. ಆ ಅಧ್ಯಾಯ ಅಲ್ಲಿಗೇ ಮುಗಿಯಿತು; ಇದು ನಡೆದು ೩ ವರ್ಷಗಳಿಗೂ ಹೆಚ್ಚು ಸಮಯ ಕಳೆದು ಹೋಗಿದೆ.

ಈಗ, ಮಧ್ಯರಾತ್ರಿ ಕೂತು ಕೀಲಿಮಣೆಯನ್ನು ಕುಟಿಯುತ್ತಿರುವಾಗ, ನಾನು ಹಾಗೆ ಮಾಡಿದ್ದು ನನಗೆ ಎಷ್ಟು ಒಳ್ಳೆಯದನ್ನು ಮಾಡಿದೆ ಎಂದು ನೆನೆಯುತ್ತಿದ್ದೇನೆ. ಸಹೋದ್ಯೋಗಿಯೊಬ್ಬನು, "ನೀನು ಚೆನ್ನಾಗಿ ಹಿಂದಿಯಲ್ಲಿ ಮಾತನಾಡುತ್ತೀಯ! ಅನ್ನಿಸುವುದೇ ಇಲ್ಲ ನೀನು ದಕ್ಷಿಣ ಭಾರತದವ", ಎಂದಾಗ ನನಗೆ ಖುಶಿಯಾಗುವುದೇಕೆಂದರೆ ಸಮಯ ಬಂದಾಗ ಬರುವ ಭಾಷೆಯಲ್ಲಿ, ತಿಳಿದ ರೀತಿಯಲ್ಲಿ ನನ್ನ ವಿಚಾರಗಳನ್ನು ಅನ್ಯರೊಡನೆ ಹಂಚಿಕೊಳ್ಳುವ ಮನೋವೃತ್ತಿಯನ್ನು ನಾನು ಬೆಳೇಸಿಕೊಂಡಿದ್ದೇನೆ ಎಂದು. ಕನ್ನಡದಲ್ಲಿ ಮಾತನಾಡುವ ಸಂತಸ ಮನೆಯಲ್ಲಿ ಮಿತ್ರರೊಡನೆ ಮಾತನಾಡಿ ಪಡೆದರೆ, ಆಫೀಸಿನಲ್ಲಿ ಕನ್ನಡವನ್ನು ಸೇರಿಸಿ, ಅನ್ಯ ಭಾಷೆಗಳಲ್ಲಿ ಮಾತನಾಡಿ ಅದರ ಸ್ವಾರಸ್ಯವನ್ನು ಸವಿಯುತ್ತೇನೆ :)

Wednesday, May 26, 2010

ನಮ್ಮೂರ ನೆನಪುಗಳು - ೨

ಕೆ.ಬಿ. ಮೆಸ್

ನಾನು ಬಿ.ಈ. ಓದುತ್ತಿದ್ದಾಗ ಮೊದಲ ಕೆಲವು ತಿಂಗಳು ಮನೆಯಿಂದ ಊಟದ ಡಬ್ಬಿಯನ್ನು ಒಯ್ಯುತ್ತಿದ್ದೆ; ಆದರೆ ಬಿಸಿ-ಬಿಸಿ ಊಟ ಮಾಡಲು ಆಗುತ್ತಿರಲಿಲ್ಲ, ಮನೆಯಿಂದ ಡಬ್ಬವನ್ನು ಎತ್ತಿಕೊಂಡು ಹೋಗಬೇಕಾಗುತ್ತಿತ್ತು. ಕರಿಬಸವೇಶ್ವರ (ಕೆ.ಬಿ.) ಮೆಸ್ ಸೇರಿಕೊಂಡೆ. ಕೆ.ಬಿ. ಮೆಸ್ ನಮ್ಮ ಕಾಲೇಜಿನಿಂದ ಕೆಲವೇ ನೂರು ಮೀಟರ್ ದೂರದಲ್ಲಿತ್ತು. ಮಧ್ಯಾಹ್ನದ ಹೊತ್ತು ನಾನು, ಸೂರಿ ಹಾಗು ಹಲವರು ನಮ್ಮ ತರಗತಿಯವರು ಕೂಡಿ ಮೆಸ್ ಗೆ ಹೋಗೋದು ವಾಡಿಕೆಯಾಗಿತ್ತು. ಊಟದ ಸಮಯವೆಂದರೆ ಹೆಚ್ಚುಕಡಿಮೆ ಪೂರ್ತಿ ಕಾಲೇಜೇ ರೋಡಿನ ಮೇಲೆ ಇರ್ತಿತ್ತು; ಹಲವಾರು ಮಿತ್ರರು ಸಿಗುತ್ತಿದ್ದರು ಹಾಗು ಮಿತ್ರೇತರರು ಕಣ್ಣಿಗೆ ಬೀಳುತ್ತಿದ್ದರು. ದಾವಣಗೆರೆಯ ಮಧ್ಯಾಹ್ನದ ಬಿಸಿಲು ಸ್ವಲ್ಪ ತೀಕ್ಷ್ಣವಾಗೇ ಇರುತ್ತಿತ್ತು; ಆದರೆ ಹೊಟ್ಟೆಯ ಹಸಿವು ಇದನ್ನು ಮೀರಿಸುತ್ತಿತ್ತು!

ಕೆ.ಬಿ. ಮೆಸ್ಸಿನ ಊಟ ಬಹಳ ವಿಶೇಷವಾದುದ್ದೇನಲ್ಲ - ಎರಡು ತೆಳ್ಳನೇಯ ಹಾಗು ಸಣ್ಣ (ಹಪ್ಪಳಕ್ಕೆ ಪೈಪೋಟಿ ನೀಡುವಂತಹ) ಮೈದಾ ಚಪಾತಿಗಳು, ಎರಡು ಪಲ್ಯಗಳು (ಸಾಮಾನ್ಯವಾಗಿ ಒಂದು ಕಾಳಿನ ಪಲ್ಯ ಇದ್ದೇ ಇರುತ್ತಿತ್ತು), ಕರಿಂಡಿ / ಬದನೇಕಾಯಿ ಚಟ್ನಿ, ೫೦ ಮಿ.ಲೀ. ಗೂ ಕಡಿಮೆ ಹುಳಿ ಮೊಸರು, ಸೋಡಾಯುಕ್ತ ಅನ್ನ, ಕುದಿಯುವ ಸಾರು (ಮೂಲಂಗಿ ನಮ್ಮಲ್ಲಿ ಹೇರಳ ಹಾಗು ಸೋವಿ - ಇನ್ನು ಯಾವ ಸಾರು ಅಂತ ನಿಮಗೆ ಬಾಯಿ ಬಿಟ್ಟು ಹೇಳೋದು ಬೇಡ ಅಂದ್ಕೊಂಡಿದ್ದೀನಿ), ಉಪ್ಪಿನಕಾಯಿ, ಉಪ್ಪು - ಅಷ್ಟೆ! ಅದೆಷ್ಟೋ ಬಾರಿ ಪಲ್ಯದಲ್ಲಿ ಕಲ್ಲನ್ನು ಕಡೆದಿದ್ದೇನೆ - ಒಂದು ಹಲ್ಲು ಈ ಮೆಸ್ಸಿನಲ್ಲಿಯೇ ಕೆಡಿಸಿಕೊಂಡೆ ಎಂದರೆ ತಪ್ಪೇನಾಗದು. ಎರಡನೇಯ ಬಾರಿ ಪಲ್ಯ ನೀಡಲು ಹಿಂದೆ-ಮುಂದೆ ಮಾಡುತ್ತಿದ್ದರು ಮೆಸ್ಸಿನ ತಾತಾ. ಕೆಲವೊಮ್ಮೆ ಮೊಸರು ಅತಿ ಹುಳಿಯಾಗಿ ಬಿಟ್ಟು ಬಂದದ್ದೂ ಇದೆ. ತಾತಾ ಒಂದು ನೋಟು ಪುಸ್ತಕದಲ್ಲಿ ನಮ್ಮ ಲೆಕ್ಕವನ್ನು ಬರೆದಿಡುತ್ತಿದ್ದರು. ಮೊದಮೊದಲು ನನ್ನ ತಮ್ಮನ ಹಾಗು ನನ್ನ ಲೆಕ್ಕವನ್ನು ಏರುಪೇರು ಮಾಡಿದರಾದರು, ಕ್ರಮೇಣ ಅದನ್ನು ಸರಿ ಪಡೆಸಿದರು.

ಊಟ ತಿನ್ನಲು ಅಡ್ಡಿಯಿರಲಿಲ್ಲ - ಹೊಟ್ಟೆಗೆ ಇದನ್ನರಗಿಸಲು ಕಷ್ಟಪಡಬೇಕಾಗುತ್ತಿರಲಿಲ್ಲ; ಹಾಗಾಗಿ ಮೆಸ್ ನ ತಾತ/ಮಗನ ಜೋಡಿ ಸಹ ಖುಶ್, ನಾವು ಖುಶ್! ಪ್ರತಿ ಊಟದ ಬೆಲೆ ೧೧-೧೩ ಇತ್ತು; ತಿಂಗಳಿನ ಮೊತ್ತವನ್ನು ತಿಂಗಳು ಶುರುವಾಗುತ್ತಿದ್ದಂತೆ ಕೊಡಬೇಕಿತ್ತು. ಅಂದರೆ ತಿಂಗಳಿಗೆ (ಸಾಮಾನ್ಯವಾಗಿ ೨೧ ದಿನಗಳು) ೨೫೦ ಕ್ಕು ಹೆಚ್ಚು ಖರ್ಚು ಆಗುತ್ತಿರಲಿಲ್ಲ. ಪ್ರತಿಯೊಂದು ರೂಪಾಯಿಗು ಬೆಲೆ ಇತ್ತು - ನೆನಸಿಕೊಂಡರ ಖುಶಿಯಾಗೊತ್ತೆ. ಇಂದು ಒಂದು ಒಳ್ಳೆಯ ಬುಫೆಗೆ ಹೋದರೆ ಕನಿಷ್ಟ ೨೫೦+ತೆರಿಗಗಳು ಖಂಡಿತ; ಊಟದಲ್ಲಿ ನಿಮಗೇನು ಬೇಕು, ಎಷ್ಟು ಬೇಕು ಅಷ್ಟನ್ನು ಸ್ವಾಹ ಅನ್ನಬಹುದು; ಕಲ್ಲು ಹುಡುಕಿದರೂ ಸಿಗದು. ಆದರೆ, ಕೆ.ಬಿ. ಮೆಸ್ಸಿನಲ್ಲಿದ್ದ ಮಜ ಇಲ್ಲೆಲ್ಲಿ?

Monday, May 24, 2010

ನಮ್ಮೂರ ನೆನಪುಗಳು - ೧

ಈ ಬಾರಿ ಹರಿಹರಕ್ಕೆ ಹೋದಾಗ ಶಾಲೆ ಹಾಗು ಕಾಲೇಜು ದಿನಗಳಲ್ಲಿ ಕಳೆದ ಸವಿ ನೆನಪುಗಳು ಮನಸ್ಸಿನಲ್ಲಿ ಮರುಕಳಿಸಿ ಬಹಳ ಸಂತಸವೆನಿಸಿತು. ಕೆಲ ನನಪುಗಳನ್ನು ಇಲ್ಲಿ ಬರೆದಿದ್ದೇನೆ; ಓದಿ ಆನಂದಿಸಿ -

ಬೆಳಗಿನ ಜಾವ ಬಸ್ಸನ್ನೇರುವ ಸರ್ಕ್ ಸ್:
ದಾವಣಗೆರೆಯ ಬಾಪೂಜಿ ಕಾಲೇಜಿನಲ್ಲಿ ಓದುತ್ತಿರುವಾಗ ನಡೆಯುತ್ತಿದ್ದ ಪ್ರತಿ ದಿನದ ಸಾಹಸದ ಕೆಲಸ ಇದು! ನಮ್ಮೂರಿನಿಂದ (ಅಂದರೆ, ಹರಿಹರ) ಕಾಲೇಜಿಗೆ ನೇರವಾಗಿ ಹೋಗುವ ಒಂದು ಬಸ್ಸು ಇತ್ತು (ಈಗ ಸಹ ಇದೆ ಎಂದು ನನಗೆ ಕೇಳಿ ಬಂದಿದೆ). ಈ ಬಸ್ಸು ಬೆಳಗಿನ ಜಾವ ೭ - ೭.೧೫ರ ಒಳಗಡೆ ಹರಿಹರ ಬಸ್ ನಿಲ್ದಾಣಕ್ಕೆ ಬರುತ್ತಿತ್ತು. ಈ ಒಂದು ಬಸ್ಸನ್ನು ಅವಲಂಬಿಸಿದ್ದವರು ಹಲವಾರು ವಿದ್ಯಾರ್ಥಿಗಳು - ಪೀ.ಯೂ. ಕಾಲೇಜಿನಿಂದ ಹಿಡಿದು ಅನೇಕ ಡಿಗ್ರೀ ಕಾಲೇಜಿನ ಜನ ಇದನ್ನು ಹತ್ತೋರು. ಜನರ ಸಂಖ್ಯೆ ೩ ಬಸ್ಸುಗಳಿದ್ದರೂ ಸಾಕಾಗದಷ್ಟು ಇರುತ್ತಿತ್ತು. ಸೀಟು ಸಿಗುವ ವಿಷಯ ಆಚೆಯಿರಲಿ, ನಿಲ್ಲಲು ಜಾಗ ಸಿಗುವುದೇ ಒಂದು ದೊಡ್ಡ ಸಾಹಸವಾಗಿರುತ್ತಿತ್ತು. ಬಸ್ಸು ಹತ್ತಿರದ ಒಂದು ಹಳ್ಳಿಯೊಂದರಿಂದ ಬರುತ್ತಿದ್ದರಿಂದ ಅದರಲ್ಲಿ ಮೋತೀವೀರಪ್ಪ ಕಾಲೇಜಿನ ವಿದ್ಯಾರ್ಥಿಗಳು ಮೊದಲೇ ತುಂಬಿರುತ್ತಿದ್ದರು. ಉಳಿದ ಕೆಲವೇ ಸೀಟುಗಳಿಗಾಗಿ ನೂಕುನುಗ್ಗಲಾಟವಾಗುತ್ತಿತ್ತು. ಬಸ್ಸು ದೂರದಿಂದಲೇ ಬರುವುದನ್ನು ಗಮನಿಸಿ ಹುಡುಗರು ಬಸ್ಸಿನೋಡನೆ ಓಡಿ ಅದನ್ನೇರಲು ಸಜ್ಜಾಗುತ್ತಿದ್ದರು. ಬಸ್ಸು ಹತ್ತಿರ ಬಂತು ಅಂದಾಕ್ಷಣ ಅದರಲ್ಲಿಂದ ಇಳಿಯುವ ಜನರನ್ನು ಗಮನಿಸದೆ ನುಗ್ಗುತ್ತಿದ್ದರು. ಆ ಬಸ್ಸೋ ಒಂದು ಚಕ್ಕಡಿಗಾಡಿಗಿಂತಲೂ ಮೆಲ್ಲಗೆ ಚಲಿಸುತ್ತಿತ್ತು. ೧೨೦ ಕ್ಕೂ ಹೆಚ್ಚು ಜನರನ್ನು ಆ ಹಳೆಯ ಗಾಡಿ ಹೊತ್ತುಕೊಂಡು ಸಾಗುವಂತೆ ಮಾಡುತ್ತಿದ್ದ ಚಾಲಕನು ನಿಜವಾಗಿಯೂ ಚೆನ್ನಾಗಿ ಬಸ್ಸನ್ನು ಓಡಿಸುತ್ತಿದ್ದನೆನ್ನಬೇಕು.

ಬಸ್ಸನ್ನು ಏರುವುದು ಒಂದು ಸಾಹಸವಾದರೆ, ಅದರಲ್ಲಿ ನಿಲ್ಲುವುದು ಇನ್ನೊಂದು ಸಾಹಸ. ಒಬ್ಬರಿಗೊಬ್ಬರು ಮೈಯನ್ನು ಅಂಟಿಸಿ ನಿಲ್ಲದೆ ಬೇರೆಯ ವಿಧಿಯೇ ಇರಲಿಲ್ಲ. ಗಾಳಿಯಾಡದೆ, ಎಲ್ಲ ಬೆವೆತ ಮೈಗಳಿಂದ ಎಲ್ಲರ ಅಂಗಿಗಳು ಹಸಿ. ಬಸ್ಸಿನ ಸ್ಥಿತಿಯು ಅಷ್ಟೇನು ಚೆನ್ನಾಗಿರಲಿಲ್ಲ - ಮುರಿದು ಹೋದ ಕಿಟಕಿಗಳು, ಮುರಿದು ಬೀಳುವ ಅಂಚಿನಲ್ಲಿದ್ದ ಫೂಟ್-ರೆಸ್ಟ್, ತುಂಡಾಗಿದ್ದ ಬಸ್ಸಿನ ಮೇಲ್ಭಾಗ. ಇಷ್ಟೆಲ್ಲವಿದ್ದರೂ ಜನರು ಪ್ರತಿ ದಿನ ಈ ಬಸ್ಸಿಗಾಗಿ ಕಾಯುತ್ತಿದ್ದರು!

ಇಷ್ಟೆಲ್ಲ ಕಷ್ಟ ಪಡುವುದು ಬೇಕಿತ್ತೆ? ಸುಮ್ಮನೆ ದಾವಣಗೆರೆಗೆ ನೇರವಾಗಿ ಹೋಗಲು ಸೌಕರ್ಯವಿರಲಿಲ್ಲವೆ ಎಂದು ನಿಮಗೆ ಅನ್ನಿಸಿರಬಹುದು. ನಿಜ, ಬಸ್ಸುಗಳು ಸಾಕಷ್ಟು ಇದ್ದುವಾದರು, ನೇರವಾಗಿ ಕೇವಲ ಬಸ್ ಪಾಸನ್ನು ತೋರಿಸಿ ಕಾಲೇಜಿನವರೆಗೆ ಹೋಗಬಹುದಾದಂತಹ ಬಸ್ಸು ಇದು ಏಕಮಾತ್ರವಾಗಿತ್ತು. ೩ ರೂಪಾಯಿ ಉಳಿತಾಯವಾಗುತ್ತಿತ್ತು! ಒಂದು ವಾರ್ಷಿಕ ಪಾಸು ಸುಮಾರು ೭೦೦ ರೂಪಾಯಿಗಳಿಗೆ ಬಂದು ಬಿಡುತ್ತಿತ್ತು.

ಈಗ, ಮನಸ್ಸು ಬಂದಾಗ ಅಂತರ್ಜಾಲದಲ್ಲಿ ವಾಲ್ವೋ ಬಸ್ಸಿನ ಟಿಕೇಟನ್ನು, ೭೦೦ ರೂಪಾಯಿ ಕೊಟ್ಟು, ಕೊಂಡು ಪಯಣಿಸುತ್ತೇವೆ ಆದರೆ ಮುರುಕಲು ಬಸ್ಸಿನ ಮೇಲೆ ಮಿತ್ರರೊಡನೆ ಹರಟುತ್ತ ಸಾಗುವಾಗ ಸಿಗುತ್ತಿದ್ದ ಆನಂದ ಈಗ ವಿರಳ...

Thursday, May 13, 2010

ಹಾಳು ಹರಟೆ

ಸುಮ್ಮನೆ ಕೂತು ಏನೂ ಮಾಡದೆ ಹಾಗೆಯೆ ವಿಚಾರಗಳ ಲಹರಿಯನ್ನು ಮನದಲ್ಲಿ ಹರಿಬಿಟ್ಟು ಬಹಳ ದಿನಗಳಾಗಿದ್ದುವು; ಇಂದು ಸ್ವಲ್ಪ ಸಮಯ ಮಾಡ್ಕೊಂಡು ಕೂತಿದ್ದೀನಿ. ಎದ್ದು ಕಾಣುವ ಸಿಂಗಲ್ ಫ಼್ಯಾಮಿಲೀ ಪ್ಯಾಕ್ ಹೊಟ್ಟೆಯನ್ನು ನೇವರಿಸುತ್ತ ಅದನ್ನು ಕರಗಿಸುವ ಹಗಲುಗನಸುಗಳನ್ನು ಕಂಡದ್ದಾಯಿತು. ಸ್ವಲ್ಪ ಸಮಯದ ಕೆಳಗೆ ಅಮ್ಮ ಹಾಗು ಅಮ್ಮನ ತೊಡೆಯ ಮೇಲೆ ಮಲಗಿದಾಗ ಸಿಗುವ ಸಂತಸದ ಅರಿವನ್ನು ಮತ್ತೆ ಮೂಡಿಸಿದ ಒಂದು ಬ್ಲಾಗನ್ನು ಓದಿದೆ. ಚೆನ್ನಾಗಿದೆ - ನೀವು ಸಹ ಅದನ್ನು ಓದಿ ಆನಂದಿಸಬಹುದು : http://sampada.net/blog/harish-athreya/09/05/2010/25300

Saturday, December 26, 2009

ಅವಳು ಸಂತೋಷ ಪಡುವಳೇ?

ಬುದ್ಧಿವಂತ ಹುಡುಗ. ಒಳ್ಳೆಯ ಕೆಲಸ; ಅಪ್ಪ-ಅಮ್ಮನಿಂದ ದೂರದೂರಿನಲ್ಲಿ ಕೆಲಸ. ಆದರೆ, ಕನಿಷ್ಠ ತಿಂಗಳಿಗೊಮ್ಮೆ ಮನೆಗೆ ಹೋಗಿ ತಂದೆ-ತಾಯಿಯೊಡನೆ ಸಮಯ ಕಳೆದು ಮುಂಬರುವ ತಿಂಗಳ ಮನೆಯ ಪ್ರಯಾಣವನ್ನು ಕಾತರದಿಂದ ಕಾಯುತ್ತಿದ್ದ. ಕೆಲಸಕ್ಕೆ ಸೇರಿದಂದಿನಿಂದಲೂ ಪ್ರತಿ ದಿನ ಕತ್ತೆ ದುಡಿದಂತೆ ದುಡಿಯುತ್ತಿದ್ದ - ಜಗತ್ತಿನಲ್ಲಿ ಬದುಕಲು ಅಗತ್ಯವಾದ ಕಪಟ ಅವನು ಅರಿಯನು. ಜೀವನ ಒಂದು ಚಕ್ರದಂತೆ ಏನು ಬದಲಾವಣೆ ಇಲ್ಲದೆ ಹಾಗೆಯೇ ಸಾಗಿತ್ತು.

ಕೆಲಸಕ್ಕೆ ಸೇರಿ ೧ ವರ್ಷವಾಗಿತ್ತು - ಕೆಲಸ ತಕ್ಕ ಮಟ್ಟಿಗೆ ನಡೆಯುತ್ತಿತ್ತು. ಒಂದು ಒಳ್ಳೆಯ ಹುಡುಗಿಯನ್ನು ನೋಡಿದ್ದಾನೆ - ಅಪ್ಪ-ಅಮ್ಮಂಗೆ ಇಷ್ಟಾ ಆಗ್ತಾಳೆ ಅಂತ ಅವನಿಗೆ ಗೊತ್ತು - ಆದರೂ ಒಂದು ತೆರನೆಯ ಭಯ. ಭಯಕ್ಕೆ ಆಧಾರವಿಲ್ಲ - ಆದರೂ ಭಯ. ಸರಿಯಾದ ಸಮಯ ಬರಲೆಂದು ಕಾಯುತ್ತಿದ್ದ ಈ ವಿಷಯವನ್ನು ಅವರಿಗೆ ತಿಳಿಸುವುದಕ್ಕೆ! ಅಪ್ಪ-ಅಮ್ಮ ಖುಷಿಯಾಗಿರಬೇಕು ಅನ್ನುವ ಹರ-ಸಾಹಸ ಮಾಡುತ್ತಿದ್ದ ಹುಡುಗ - ವಿಶಿಷ್ಟ ಸಾಮಾನುಗಳ ಸುರಿಮಳೆಯೇ ಮಾಡುತ್ತಿದ್ದ. ಅಪ್ಪ-ಅಮ್ಮನ್ನ ದೇಶ-ವಿದೇಶ ತಿರುಗಾಡಿಸಿದ. ಆದರೆ ಅವನು ಹಲವಾರು ಬಾರಿ ಕೆಲಸದ ಮೇಲೆ ದೂರ ಪ್ರದೇಶಗಳಿಗೆ ಹೋಗುತ್ತಿದ್ದ - ಬಹಳ ಬಾರಿ ದೂರವಾಣಿಯ ಮೂಲಕ ಸಹ ಮಾತನಾಡಲಾಗುತ್ತಿರಲಿಲ್ಲ ಅವನಿಗೆ. ಬಹಳ ದಿನಗಳ ನಂತರ ಒಂದು ದಿನ ಅವನು ಮನೆಗೆ ಬಂದಿದ್ದ. ಮನೆಯಿಂದ ಕೆಲಸ ಮಾಡುವ ಸೌಲಭ್ಯ ಇದ್ದ ಕಾರಣ ಕೆಲಸವನ್ನು ಜೋತೆಗೆತ್ತಿಕೊಂಡು ಬಂದಿದ್ದ. ರಜೆಯ ದಿನವೂ ಕೆಲಸ ಮಾಡುತ್ತ ಅವನಿಗೆ ಅಪ್ಪ-ಅಮ್ಮನೊಡನೆ ಸರಿಯಾಗಿ ಮಾತನಾಡಲು ಸಹ ಆಗಲಿಲ್ಲ; ಇನ್ನೇನು ಇನ್ನೊಂದು ಘಂಟೆಯಲ್ಲಿ ತಿರುಗಿ ಹೊರಡಬೇಕು ಅನ್ನುವಷ್ಟರಲ್ಲಿ ಅಮ್ಮ ಅವನೊಡನೆ ಮಾತನಾಡಲು ಬಂದಳು... ಮಾತು-ಕಥೆ ನಡೆದದ್ದು ಹೀಗೆ...

ಅಮ್ಮ,"ಮಗಾ... ಯಾಕೋ ನಿಂಜೊತೆ ಇ ಸಲ ಮಾತಾಡ್ಲಿಕ್ಕೆ ಆಗ್ಲೇ ಇಲ್ಲ ನೋಡು... ಅಷ್ಟು ಕೆಲ್ಸಾನಾ? "

ಮಗ,"ಹೂನಮ್ಮ... ಬಹಳ ಕೆಲ್ಸಾ. ಮುಗಿಯೋದೇ ಇಲ್ಲ ಅನ್ನೋ ಅಷ್ಟು ಇದೆ."

ಅಮ್ಮ, ಕಸಿವಿಸಿಯಾಗಿ ನುಡಿದಳು,"ಈ ಕೆಲಸ ಮುಗಿಸಿಕೊಂಡೆ ಬರಬಹುದಿತ್ತಲ್ಲ? ಮನೆಗೆ ಬಂದಿದ್ದಿಯ - ಸ್ವಲ್ಪ ಸುಧಾರಿಸಿಕೊಳ್ಳಲೂ ಆಗಲಿಲ್ಲ ನಿನಗೆ ಈ ಬಾರಿ. ಹೋದ ಬಾರಿಯೂ ಹೀಗೆ ಹೇಳಿದ್ದೆ ನೀನು..."

ಮಗ,"ಕಂಪನಿಯವರು ಕೊಟ್ಟ ಕಾಸಿಗೆ ತಕ್ಕಂತೆ ದುಡಿಸಿಕೊಳ್ಳುತ್ತಾರೆ..."

ಅಮ್ಮ,"ದುಡಿಯಬೇಕು ನಿಜ... ಆದರೆ, ನಿನ್ನ ಅನ್ಯ ಮುಖ್ಯ ಕೆಲಸಗಳಿಗೇ ನಿನಗೆ ಸಮಯ ಸಿಗದಂತಾದರೆ ಅದೆಂತಹ ಕೆಲಸ ಮಗಾ?"

ಮಗ,"ನೀನು ಹೇಳುತ್ತಿರುವುದು ಸರಿಯಮ್ಮಾ. ಆದರೆ, ನಾವು ನಮ್ಮ ಇಂದಿನ ಬದುಕುವ ಶೈಲಿಗೆ ಅನುಗುಣವಾಗಿ ನಮ್ಮ ಖರ್ಚು-ವೆಚ್ಚಗಳು ಹೆಚ್ಚಿವೆ. ತಕ್ಕಂತೆ, ಅದನ್ನು ನಿಭಾಯಿಸಲು ಹೆಚ್ಚು ಕೆಲಸ ಮಾಡಬೇಕು."

ಅಮ್ಮ,"ನೆಮ್ಮದಿ ಇಲ್ಲದೆ, ದೇಹವನ್ನು ಅತಿವ್ರವಾಗಿ ದಂಡಿಸಿಕೊಳ್ಳುವುದರಿಂದ ನಿನ್ನ ಆರೋಗ್ಯ ಹದಗೆಟ್ಟಿ ಹೋಗುವುದು... ಯಾರ ಸಂತೋಷಕ್ಕಾಗಿ ಇದು?"

ಮಗ,"ನಿನ್ನ ಹಾಗು ಅಪ್ಪನಿಗಾಗಿ, ಅಮ್ಮ. ನೀನು-ಅಪ್ಪ ಇನ್ನಷ್ಟು ಜಗತ್ತನ್ನು ಸುತ್ತಿ ಆನಂದಿಸಬೇಕು; ಇರುವ ಹೊಸ ತಂತ್ರಜ್ಞಾನವನ್ನು ಸವಿಯಬೇಕು ಅನ್ನೋದು ನನ್ನ ಬಯಕೆ... ಯಾಕೆ, ನಿನಗೆ ಇದು ಸರಿ ಅನ್ಸಲ್ವಾ ಅಮ್ಮ?"

ಅಮ್ಮ,"ನನ್ನ ಕಂದಾ, ನಮಗಾಗಿ ನೀನು ಇಷ್ಟು ಕಷ್ಟ ಪಟ್ಟರೆ ನಮ್ಮಗೇ ನೆಮ್ಮದಿ ಸಿಗುವುದೇ? ಇಲ್ಲ... ಬದುಕಲು ನಾವು ಮಾಡಿಟ್ಟ ಸವಲತ್ತುಗಳು ತಕ್ಕ ಮಟ್ಟಿಗೆ ಇವೆ. ಆದರೆ ನಮಗೆ ನಿಜವಾದ ಸಂತೋಷ ನಿನ್ನನ್ನು ಕಂಡಾಗ, ನಿನ್ನೊಡನೆ ಮಾತನಾಡಿದಾಗ ಆಗೊತ್ತೆ. ಬೇರೆ ಯಾವುದು ಸಹ ನಮಗೆ ಬೇಡ. ಬೇಕಾಗಿರುವುದು ನಿನ್ನ ಸಾಮೀಪ್ಯ - ಇದು ಸಾಧ್ಯವಾಗದ ಪಕ್ಷದಲ್ಲಿ, ನಿನ್ನ ದನಿಯನ್ನಾದರು ಕೇಳಿಸು - ಅದನ್ನು ಕೇಳಿದರೆ ನನಗೆ ಒಂದು ತೆರನೆಯ ಸಮಾಧಾನ ಆಗುತ್ತದಪ್ಪ."

ಮಗ ಮಾತನಾಡಲಿಲ್ಲ. ಎನೆನ್ನಬೇಕೆಂದು ಅವನಿಗೆ ತೋಚಲಿಲ್ಲ.

ಅಮ್ಮ ಮಾತನ್ನು ಮುಂದೆ ವರೆಸಿದಳು,"ನಿನ್ನ ಮದುವೆಯ ವಿಷಯ ಮಾತನಾಡಬೇಕಿತ್ತು. ಯಾವುದಾದರು ಹುಡುಗಿಯನ್ನು ನೋಡಿದ್ದೀಯಾ?"

ಮತ್ತೆ ಮೌನ ಆವರಿಸಿತು. ಮಗ, ತನ್ನ ಕೆಲಸವನ್ನು ಅಲ್ಲಿಯೇ ನಿಲ್ಲಿಸಿ ಹದಿನೈದು ನಿಮಿಷಗಳಾಗಿದ್ದವು.

ಅಮ್ಮ ಮಾತನ್ನು ಬೆಳೆಸಿದಳು,"ಹುಡುಗಿ ಹೇಗಿದ್ದಾಳೆ ನೋಡೋಕ್ಕೆ?"

ಮಗ,"ಅವಳ ಹೆಸರು ಅನನ್ಯಾ... ನನ್ನ ಸಹೋದ್ಯೋಗಿ. ಒಳ್ಳೆಯ ಹುಡುಗಿ. ಇದನ್ನು ನಿಮಗೆ ಸರಿಯಾದ ಸಮಯಕ್ಕೆ ಹೇಳೋಣ ಅಂತ ಕಾಯ್ತಿದ್ದೆ..."

ಅಮ್ಮ,"ಚೆನ್ನಾಗಿದೆ ಹೆಸರು... ನಾವು ಅವಳನ್ನು ನೋಡಬೇಕಲ್ಲ"

ಮಗನ ಮುಖ ಸಂತಸದಿಂದ ಅರಳಿತು.

ತುರಿಮಣೆ-ತರಕಾರಿಗೂ ರಸ್ತೆ-ಲಾರಿಗೂ ಏನು ಸಂಬಂಧ?!

ಏನು ಸಂಬಂಧ ಅಂತೀರಾ? ಇದೆ! ಆದರೆ ಅದನ್ನು ತುರೆಮಣೆ ಉಪಯೋಗಿಸಿದವರೇ ಹೇಳಬಹುದು. ಹೇಗೆ ಅಂತೀರಾ?

ಒಮ್ಮೆ ಬದನೇಕಾಯಿಯನ್ನು ತುರೆಮಣೆಯ ಮೇಲೆ ಚಕ್ರಾಕೃತಿಯಾಗಿ ಕೊಯ್ದು ನೋಡಿ - ಪ್ರತಿಯೊಂದು ಹೊಡೆತದಲ್ಲಿ ಒಂದು ತುಂಡು ಆಗಬೇಕು; ಮತ್ತೊಮ್ಮೆ ಕೊಯ್ಯಿರಿ... ಆಗುವ ಶಬ್ಧವನ್ನು ಹುಷಾರಾಗಿ ಆಲಿಸಿ... ಈಗ ನೀವು ಒಂದು ಕಾರೊಂದರಲ್ಲಿ ಹೋಗುತ್ತಿದ್ದಿರ ಅಂದುಕೊಳ್ಳಿ... ಅಂದುಕೊಳ್ಳುವುದೇಕೆ, ಹೋಗಿಯೇ ಬಿಡಿ. ಯಾವುದಾದರು ರಾಷ್ಟ್ರೀಯ ಹೆದ್ದಾರಿಯನ್ನು ಹಿಡಿದು ಘಂಟೆಗೆ ೬೦ ಕಿ.ಮೀ. ಅನ್ನು ಮೀರಿದ ವೇಗದಲ್ಲಿ ಚಲಿಸಿ. ಹೀಗೆ ಹೋಗುತ್ತಿರುವಾಗ, ಎದುರುಗಡೆಯಿಂದ ಬರುತ್ತಿರುವ ಲಾರಿಗಳು ನಿಮ್ಮ ಗಾಡಿಯನ್ನು ದಾಟುತ್ತಿರುವಾಗ ಆಗುವ ಶಬ್ಧವನ್ನು ಗಮನಿಸಿ. ವ್ಯತ್ಯಾಸ ನಿಮಗೆ ಗೊತ್ತಾಗಿಬಿಡುವುದು.

Monday, December 21, 2009

ಹ್ಯಾಂಗ ಬೇ...?

ಪ್ರದೇಶದಿಂದ ಪ್ರದೇಶಕ್ಕೆ ಕನ್ನಡ ಭಾಷೆಯಲ್ಲಿ ಬಹಳಷ್ಟು ವ್ಯತ್ಯಾಸ ಕಾಣಬಹುದು. ಇಂತಹದ್ದೊಂದು ಅಚ್ಚರಿಯ ಸಂಗತಿ ನಾನು ಚಿಕ್ಕವನಿದ್ದಾಗ ನಡೆದಿತ್ತು. ಬೇಸಿಗೆಯ ರಜೆಯ ಸಮಯ ಅಜ್ಜಿಯ ಮನೆಗೆ ಹೋಗುವುದೆಂದರೆ ವಿಜಯ ಹಾಗು ನನಗೆ ಬಹಳ ಸಂತಸದ ಸಂಗತಿ. ಅಮ್ಮ ನಮ್ಮಿಬ್ಬರನ್ನು ಧಾರವಾಡದಲ್ಲಿರುವ ಅಜ್ಜಿಯ ಮನೆಗೆ ಕರೆದೊಯ್ದು ಕೆಲ ದಿನ ಅಲ್ಲಿ ನಮ್ಮೊಡನೆ ಇದ್ದು ಹರಿಹರಕ್ಕೆ ಹಿಂದಿರುಗುವುದು ಸಾಮಾನ್ಯವಾಗಿತ್ತು. ಅಜ್ಜಿಯ ಮನೆಯಲ್ಲಿ ನಮ್ಮ ಅತ್ತೆ - ಮಾಮಾ ಜೊತೆ ಕಾಲ ಕಳೆಯಲು ಸಿಗುತ್ತಿದ್ದುದು ನಮಗೆ ಖುಷಿಯ ಸಂಗತಿಯಾಗಿತ್ತು. ಹೀಗೆ ಒಂದು ದಿನ ಅತ್ತೆಯೊಡನೆ ತರಕಾರಿ ಮಾರುಕಟ್ಟೆಗೆ ಹೋದಾಗ ಅತ್ತೆ ತರಕಾರಿ ಕೊಳ್ಳುತ್ತಿದ್ದನ್ನು ಗಮನಿಸುತ್ತಿದ್ದೆ...
ಅತ್ತೆ, ತರಕಾರಿ ಮಾರುವವಳನ್ನು ಕುರಿತು, "ಹಾಗಲ ಕಾಯಿ ಹ್ಯಾಗೆ?"
ತರಕಾರಿಯವಳು ಸುಮಾರು ೨೫ ~ ೩೦ ವರ್ಷ ವಯಸ್ಸಿನ ಹೆಂಗಸು. ಅದಕ್ಕವಳು, "ಎಷ್ಟು ಬೆಕಬೆ?", ಅಂದಳು.
ಇದನ್ನು ಕೇಳಿ ನನಗೆ ಏನು ಅರ್ಥವಾಗಲಿಲ್ಲ -ಆದರೆ ಯಾಕೋ ಅದು ವಿಚಿತ್ರ ಎನಿಸಿತು. ಹಾಗಲಕಾಯಿ ತುಟ್ಟಿಯಾಯಿತು ಎಂದು ಅತ್ತೆ ಮುನ್ನಡೆದರು.
ಬೇರೆಯ ತರಕಾರಿಯವಳನ್ನು ಕುರಿತು ಅತ್ತೆ, "ಹ್ಯಾಂಗ್ ಬೇ ಈ ಬೆಂಡೀಕಾಯ್?"
ತರಕಾರಿಯವಳು, "ಪಾವ್ ಕಿಲೋ ಯಾಡ್ ರುಪಾಯಿ"
ಅತ್ತೆ, "ಅರ್ಧ ಕಿಲೋ ಬೇಕ್ - ಹ್ಯಾಗ್ ಕೊಡ್ತಿ ?"
ತರಕಾರಿಯವಳು, "ನಾಲ್ಕು ರುಪಾಯಿಗೆ ಅರ್ಧ ತಗೋ ಬೇ"
ಅತ್ತೆ, "ಅರ್ಧ ಕಿಲೋ ಮೂರು ರೂಪಾಯಿ ಇಲ್ಲ?"
ತರಕಾರಿಯವಳು, "ತಗೋರಿ..."

ಸ್ವಲ್ಪ ಹೊತ್ತಿನಲ್ಲಿ ಪೂರ್ತಿ ಮಾರುಕಟ್ಟೆಯನ್ನು ಜಾಲಾಡಿ ಆಗಿತ್ತು. ಮನೆಗೆ ಮರಳಿದೆವು.
ಆಮೇಲೆ ಸ್ವಲ್ಪ ಧೈರ್ಯ ಮಾಡಿ ಅತ್ತೆಯನ್ನು ಕೇಳಿದೆ, "ಏನಬೆ... ಅಂತ ಅಂದ್ರೆ ಏನು?"

ನನ್ನ ವಿಚಾರ ಧಾರೆ ಯಾವೆಡೆ ಸಾಗುತ್ತಿದೆ ಎಂದು ಅರಿತ ಅವರು ಹೀಗೆಂದರು,"ಇಲ್ಲಿ ಅಬ್ಬೆ ಅಂದ್ರೆ ನಿಮ್ಮಲ್ಲಿ ಅಮ್ಮ ಅಂದ ಹಾಗೆ!"

ಸ್ವಲ್ಪ ಸಮಾಧಾನವಾಯಿತು - ಅಬ್ಬೆ ಅಂದ್ರೆ ನಾನು ಮೊದಲು ಅಂದುಕೊಂಡ ಹಾಗೆ ಬೈಗುಳ ಅಲ್ಲ ಅಂದು ಗೊತ್ತಾಗಿ.
ಕನ್ನಡ-ಹಿಂದಿ-ಇಂಗ್ಲಿಷ್ ಎಲ್ಲವನ್ನು ಮೊಸರುಬಜ್ಜಿ ಮಾಡಿದ ಹಾಗೆ ಕಲೆಸಿ ಮಾತಾಡುವ ಮಂದಿ ಅಕ್ಕ ಪಕ್ಕ ಇದ್ದಿದ್ದರಿಂದಲೋ ಏನೋ ನನಗೆ ಈ ಸಂದೇಹ ಬಂದಿದ್ದು.

Monday, December 14, 2009

ಅವನು ನಿನಗೆ ಗೊತ್ತಾ??

ನವೆಂಬೆರ್ - ಡಿಸೆಂಬರ್ ೨೦೦೭ ಇರಬೇಕು ಅದು... ಸರಿಯಾಗಿ ನೆನಪಿಲ್ಲ ಆದರೆ ರಜೆ ಇದ್ದ ಕಾರಣ ಮನೆಗೆ ಹೋಗುತ್ತಿದ್ದದ್ದು ನೆನಪಿದೆ. ಇಬ್ಬರು ಸಹಪಾಠಿಗಳು, ವಿಜಯ ಹಾಗು ನಾನು ಬೆಂಗಳೂರಿನ ಬಸ್ ತಂಗುದಾಣದಲ್ಲಿ ನಮ್ಮ ಬಸ್ಸು ಬರುವ ಹಾದಿಯನ್ನು ಕಾಯುತ್ತ ಕುಳಿತಿದ್ದೆವು. ಎಂದಿನಂತೆ, ಜನ ತುಂಬಿ ತುಳುಕಾಡುತ್ತಿದ್ದ ಆ ಜಾಗ ನನ್ನ ಕಣ್ಣುಗಳಿಗೆ ಏನು ಹೊಸತನ್ನು ತಂದಿರಲಿಲ್ಲ. ಅಷ್ಟರಲ್ಲಿ ನಮ್ಮ ಬಸ್ಸು ಬಂದೇ ಬಿಟ್ಟಿತು. ಬೇಸರ ಕಳೆದು ಈಗ ಸುಮ್ಮನೆ ಮಲಗಬಹುದು ಅಂದುಕೊಂಡು ಬಸ್ಸು ಹತ್ತಲು ಅಣಿಯಾದೆ. ಅಷ್ಟರಲ್ಲಿ ನಡೆದ ಈ ಘಟನೆ ನನಗೆ ಅಚ್ಕಾರಿಯನ್ನು ಮೂಡಿಸಿತು.

ಬಸ್ಸು ಹತ್ತಲು ನಾನು ಹೋಗುತ್ತಿದಂತೆ ನನ್ನ ಮುಂದೆ ನಡೆಯುತ್ತಿದ್ದ ನನ್ನ ಸಹಪಾಠಿಯನ್ನು ನನ್ನ ಪಕ್ಕದಲ್ಲಿಯೇ ನಡೆದುಕೊಂಡು ಬರುತ್ತಿದ್ದ ಹುಡುಗನೊಬ್ಬ ಮಾತನಾಡಿಸಿದ. ಮಾತು-ಕಥೆ ಹೀಗೆ ನಡೆಯಿತು...
ಅವನಂದ, "ಒಹ್! ನೀವು !@# ಹೈಸ್ಕೂಲಿನಲ್ಲಿ ಓದಿದ್ದು ಅಲ್ವಾ? ನಾನು ಶ್ರೀನಿವಾಸ... ನೆನಪಿದೆ ನಾ? ನಾನು ಅದೇ ಹೈಸ್ಕೂಲಿನಲ್ಲಿ ಓದಿದ್ದು . ನಿಮ್ಮದೇ ಬ್ಯಾಚು... ನೀವು @#& ಅಲ್ಲ?"
ಅವಳು (ಮುಖದಲ್ಲಿ ಮುಗುಳ್ನಗು... ಬಹಳ ಪರಿಚಯದವರನ್ನು ಮಾತನಾಡಿಸುವಂತೆ),"ಹೌದು. ನೀವು ಹೇಗಿದ್ದೀರಾ? ..."
ಅದಕ್ಕವನು, "ನಾನು ಚೆನ್ನಾಗಿದ್ದೀನಿ... ನೀವು ಎಲ್ಲಿ ಕೆಲ್ಸಾ ಮಾಡ್ತಿದ್ದೀರ? "
"ನಾನು *&%$#@ಯಲ್ಲಿ ಹೋದ ತಿಂಗಳು ಸೇರಿಕೊಂಡೆ..."
"ಎಲ್ಲಿ.. ದಾವಣಗೆರೆಗೆ ಹೊರಟಿದ್ದೀರಾ?"
"ಹೌದು... ನೀವು?"
.....
ಮಾತು ಸುಮಾರು ೧೦ ನಿಮಿಷ ನಡೆಯಿತು.. ಅಷ್ಟರಲ್ಲಿ ನಾನು ಬಸ್ಸನ್ನೇರಿ, ನನ್ನ ಜಾಗವನ್ನು ಹುಡುಕಿಕೊಂಡು ಮಲಗಲು ಅಣಿಯಾದೆ... ಸ್ವಲ್ಪ ಸಮಯದ ನಂತರ ಅವಳು ನನ್ನ ಎದುರಿನ ಸೀಟಿನ ಮೇಲೆ ಕುಳಿತಾಗ ಕೇಳಿದೆ,"ನಿನಗೆ ಅವನು ಗೊತ್ತಿದ್ದಾನೇನೆ?"
ಅದಕ್ಕವಳು, "ಇಲ್ಲ! ಅವನು ಯಾರು ಅಂತಾ ನನಗೆ ಗೊತ್ತಿಲ್ಲ!", ಅನ್ನಬೇಕೆ?
ನಾನು, "ಗೊತ್ತಿಲ್ಲವಾ? ಮತ್ತೆ ಇಷ್ಟು ಹೊತ್ತು ಪೂರ್ತಿ ಪಿರಿಚಯದವರಂತೆ ಮಾತನಾಡಿಸಿದೆ?"
ಅವಳು, "ಇಲ್ಲಪ್ಪ... ಅವನು ಅಷ್ಟು ನೆನಪಿಸಿಕೊಂಡು ನನ್ನನ್ನು ಗುರುತಿಸಿದ... ಆದರೆ ನನಗೆ ಅವನ್ಯಾರು ಅಂತ ನೆನಪಿಲ್ಲ... ಪಾಪ ಬೇಜಾರು ಮಾಡ್ಕೋತಾನೆ ಅಂತ ಮಾತಾಡ್ಸಿದೆ..", ಅಂದಳು.

ನನಗೆ ಇನ್ನೂ ಅರ್ಥವಾಗದ ವಿಷಯವಿದು - ಅಪರಿಚಿತರು ಬಂದು ನಾನು ಇಂಥವನು ಅಂತ ನನಗ್ಯಾರಾದರು ಹೇಳಿದ್ದಿದ್ದರೆ, ನನಗೆ ನೆನಪಿಲ್ಲದ ಪಕ್ಷದಲ್ಲಿ ನಾನು "ನೀವು ಯಾರು ಅಂತ ನನಗೆ ನೆನಪು ಬರುತ್ತಿಲ್ಲ" ಅಂದು ಬಿಡುತ್ತಿದ್ದನೇನೋ...

Friday, December 4, 2009

ಅಡ್ಜಸ್ಟ್ ಮಾಡ್ಕೊಳ್ಳಿ ಸಾರ್!

ಹಬ್ಬದ ಸಮಯದಲ್ಲಿ ಕರ್ನಾಟಕ ಸಾರಿಗೆಯಲ್ಲಿ ಮುಂಗಡ ಆಸನಗಳನ್ನು ಕಾಯ್ದಿರಿಸಿ ಆ ಆಸನಗಳಲ್ಲಿ ಸುಖವಾಗಿ ಕೂತು ನೀವು ಹೋಗುವುದಾಗಿ ಕನಸು ಕಾಣುತಿದ್ದ ಪಕ್ಷದಲ್ಲಿ, ಎದ್ದೇಳಿ!

೧೬-ನವಂಬರ್-೨೦೦೯-ದೀಪಾವಳಿ ಹಬ್ಬದ ಸಮಯ. ವಿಜಯ ಹಾಗು ನಾನು ಹರಿಹರಕ್ಕೆ ಹೋಗುವ ಬಸ್ಸಿಗೆ ಕಾಯುತ್ತಿದ್ದೆವು - ಎಲ್ಲೆಡೆ ಜನಜಾತ್ರೆ. ನಮ್ಮನ್ನು ಹರಿಹರಕ್ಕೆ ಕರೆದೊಯ್ಯುವ ಕರ್ನಾಟಕ ಸಾರಿಗೆ ಬಸ್ಸು ಸುಮಾರು ೧ ಘಂಟೆ ತಡವಾಗಿ ಬಂದಿತು. ಮುಂಚಿತವಾಗಿ ಎರಡು ಆಸನಗಳನ್ನು ನಾವು ಕಾಯ್ದಿರಿಸಿದ್ದರಿಂದ ನಮ್ಮ ಪ್ರಯಾಣ ಸುಗಮವಾಗಿ ಆಗುವುದೆಂಬ ನಂಬಿಕೆ ನನ್ನದಾಗಿತ್ತು. ಬಸ್ಸು ತನ್ನ ಸಾಮಾನ್ಯ ಜಾಗಕ್ಕೆ ಹೋಗಿ ನಿಲ್ಲದೆ, ರಸ್ತೆಯ ಮಧ್ಯದಲ್ಲಿ ನಿಂತಿದ್ದರಿಂದ ಅದನ್ನು ಗುರುತಿಸಿ ಹತ್ತುವುದು ತುಸು ಕಷ್ಟವೇ ಆಯಿತು. ಹೇಗೋ ಮಾಡಿ ಬಸ್ಸನ್ನು ಹತ್ತಿದೆವು - ಶುರುವಾಯಿತು ನಮ್ಮ ಕಠಿಣಪರೀಕ್ಷೆ.

ಪೂರ್ತಿಯಾಗಿ ಕಾಯ್ದಿರಿಸಲ್ಪಟ್ಟ ಈ ಬಸ್ಸು ಆಗ ತಾನೆ ಬಂದಿದ್ದು, ತುಂಬಿ ತುಳುಕಾಡುತ್ತಿದ್ದನ್ನು ಕಂಡು ನನಗೆ ಸ್ವಲ್ಪ ಆಶ್ಚರ್ಯವಾಯಿತು. ಟಿಕೇಟನ್ನು ತಗೆದು ಸೀಟ್ ನಂಬರ್ ಹುಡುಕತೊಡಗಿದ ವಿಜಯನಿಗೆ ಇನ್ನೊಂದು ಅಚ್ಚರಿ ಕಾದಿತ್ತು - ಆ ಬಸ್ಸಿನಲ್ಲಿ ಇದ್ದ ಸೀಟುಗಳ ವಿನ್ಯಾಸ ನಾವು ಕಾಯ್ದಿರಿಸಿದ್ದ ವಿನ್ಯಾಸಕ್ಕೆ ಹೋಲುತ್ತಿರಲಿಲ್ಲ. ಅದರ ಪರಿಣಾಮವಾಗಿ ಹಲವಾರು ಮುಂಗಡ ಸೀಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ (ವಿಶೇಷವಾಗಿ ಆಜು-ಬಾಜು ಸೀಟು ಪಡೆಯಬೇಕಾದವರಿಗೆ - ನಮ್ಮನೂ ಸೇರಿಸಿ) ತೊಂದರೆ ಖಚಿತವಾಗಿತ್ತು. ಆದರೂ ಇಷ್ಟು ಜನ ಆ ಬಸ್ಸಿನಲ್ಲಿ ಇದ್ದದ್ದನ್ನು ನೋಡಿ ಸ್ವಲ್ಪ ದಿಗಿಲೇ ಆಯಿತು.

ದೀಪಾವಳಿಯ ಹಬ್ಬಕ್ಕೆ ಊರಿಗೆ ಹೋಗಬೇಕು ಅಂತ ನಾನು ಹಾಗು ವಿಜಯ ಒಂದು ತಿಂಗಳು ಮೊದಲೇ ವಿಚಾರ ಮಾಡಿದ್ದರೂ, ಪ್ರಯಾಣಕ್ಕೆ ಬೇಕಾದ ಟಿಕೆಟ್ ಗಳನ್ನ ಮುಂಚಿತವಾಗಿ ಕಾಯ್ದಿರಿಸುವುದನ್ನು ಮರೆತಿದ್ದೆವು (ಮರೆತಿದ್ದೆವು ಅನ್ನುವುದಕ್ಕಿಂತ, ಆಲಸ್ಯದಿಂದ "ಮಾಡಿದರಾಯಿತು ಬಿಡು!" ಎಂದು ಸುಮ್ಮನಿದ್ದೆವು). ಏರಾವತ, ರಾಜಹಂಸ ಬಸ್ಸುಗಳು ಸಿಗದೆ, ಇದ್ದ ಕೆಲವೇ ಕರ್ನಾಟಕ ಸಾರಿಗೆ ಬಸ್ಸೊಂದರಲ್ಲಿ ಸೀಟನ್ನು ಕಾಯ್ದಿರಿಸಿದ್ದೆವು.

ಕಂಡಕ್ಟರ್ ಸಾಹೇಬರು ನಮ್ಮ ಟಿಕೇಟನ್ನು ಪರಿಶೀಲಿಸಿ ನಮ್ಮನು ನಮ್ಮ 'ಹೊಸ' ಆಸನಗಳತ್ತ ಕೂರಲು ಹೇಳಿದನು. ಕೂತುಕೊಂಡದ್ದಾಯಿತು. ಆದರೆ ನಮ್ಮ ಸಾಮಾನನ್ನು ಇಡುವುದು ಎಲ್ಲಿ? ಕಣ್ಣನ್ನು ಮೇಲೆ ಹಾಯಿಸಿದರೆ ಎಲ್ಲೂ ಜಾಗ ಕಾಣುತ್ತಿಲ್ಲ! ಅಲ್ಲಿ-ಇಲ್ಲಿ ಎಂದು ಸ್ವಲ್ಪ ಜಾಗ ಮಾಡಿ ಸಾಮಾನು ತುರುಕಿದ್ದಾಯಿತು. ಇನ್ನೇನು ಮಲಗುವುದು ಅನ್ನುವಷ್ಟರಲ್ಲಿ ಗೊತ್ತಾಯಿತು - ಬಸ್ಸು ತುಂಬಿತ್ತು ಆದರೆ ಆದರಿಲ್ಲಿ ಇದ್ದ ಅರ್ಧಕ್ಕರ್ಧ ಜನ ಕಾಯ್ದಿರಿಸಿದ ಆಸನಗಳ ಮೇಲೆ ಕಾಯ್ದಿರಿಸಿದ ತಿಕೆಟಿಲ್ಲದೆ ಕೂತಿದ್ದರು. ಸರಿಯಾದ ಟಿಕೇಟು ಉಳ್ಳವರು ಬಸ್ಸು ಹತ್ತಲು ಹೊಡೆದಾಡುತ್ತಿದ್ದರು! ಸ್ವಲ್ಪ ಸಮಯದಲ್ಲಿ ಬಸ್ಸು ಜನರಿಂದ ತುಂಬಿ ಹೋಯಿತು. ನನಗೆ ಕೂರಲು ಸಹ ಕಷ್ಟವಾಗಿತ್ತು. ಜನರು ಮೈಗೆ ಮೈ ತಿಕ್ಕಿ, ನಿರಂತರವಾಗಿ ಅಲುಗಾಡುತ್ತಿದ್ದುದರಿಂದ ನಿದ್ದೆ ಎಂಬುದು ಕನಸಾಗಿ ಬಿಟ್ಟಿತ್ತು. ಕಂಡಕ್ಟರ್ ಹಾಗು ಜನರ ಮಾತು-ಕಥೆ ಹೀಗೆ ನಡೆಯಿತು (ಇಲ್ಲಿ ಸರಿಯಾದ ಮುಂಗಡ ಟಿಕೇಟು ಪಡೆದ ಪ್ರಯಾಣಿಕರನ್ನು 'ಸ-ಪ್ರಯಾಣಿಕ' ಹಾಗು ಅನ್ಯ ಪ್ರಯಾಣಿಕರನ್ನು 'ತ-ಪ್ರಯಾಣಿಕ' ಎಂದು ಕರೆದಿದ್ದೇನೆ) :

ಒಬ್ಬ ಸ-ಪ್ರಯಾಣಿಕ ಕಂಡಕ್ಟರ್ ಅನ್ನು ಕುರಿತು, "ರೀ, ಕಂಡಕ್ಟರ್! ನಂಗೆ ಕೂಡೋಕ್ಕೆ ಆಗ್ತಿಲ್ಲ - ಸೀಟು ಮುರಿದು ಹೋಗಿದೆ!"
ಅದಕ್ಕೆ ಕಂಡಕ್ಟರ್,"ಸಾರ್, ಡಿಪೋದವರು ಈ ಬಸ್ಸ ಬಿಟ್ಯಾರ್ ರೀ... ನಾ ಏನ್ ಮಾಡ್ಲಿ ? ಇದು ಎಕ್ಸ್-ಟ್ರಾ ಬಸ್ಸ ರೀ - ಆದ್ರೂ ಸಾಕಾಗಂಗಿಲ್ಲ ರೀ"
ಇನ್ನೊಬ್ಬ ಸ-ಪ್ರಯಾಣಿಕ,"ನೀವು ಅನ್-ರಿಜರ್ವಡ್ ಜನರನ್ನ ಯಾಕೆ ಒಳಗೆ ಬಿಟ್ಕೊಂಡ್ರಿ??"
ಕಂಡಕ್ಟರ್,"ಏನ್ ಮಾಡಲ್ ರೀ ನಾನು? ಜನಾ ಭಾಳ ಇದ್ದಾರೆ ಬಸ್ಸುಗಳು ಸಾಕಾಗ್ತಿಲ್ಲ. ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಸಾರ್!"
ತ-ಪ್ರಯಾಣಿಕಳೊಬ್ಬಳು ಸಣ್ಣ ಮಗುವೊಂದನ್ನು ಹಿಡಿದುಕೊಂದು ಬಸ್ಸು ಬಿಡುವಸ್ಟರಲ್ಲಿ ಹತ್ತಿದ್ದಳು - ಕಂಡಕ್ಟರ್ ಸಾಹೇಬರು ಮೊದಲೇ "ಇಲ್ಲಿ ಸೀಟು ಇಲ್ಲ!" ಎಂದು ಹೇಳಿದ್ದರೂ, "ನೋಡಿ ಸ್ವಾಮಿ... ಮಗು ಇದೆ ಜೊತೆಯಲ್ಲಿ"... ಎಂದು ಆರ್ತನಾದ ಹಾಡತೊಡಗಿದಳು.
ಸ-ಪ್ರಯಾಣಿಕರೊಬ್ಬರು ತಮ್ಮ ಲಗೇಜು ಇಡಲು ಜಾಗವಿಲ್ಲದೆ ತ-ಪ್ರಯಾಣಿಕರೊಬ್ಬರ ಲಗೇಜನ್ನು ಸ್ವಲ್ಪ ಸರಿಸಲು ಹೋದಾಗ ತ-ಪ್ರಯಾಣಿಕರು ಕುಂಡಿ-ಕೊಯ್ದ ಹಂದಿಯಂತೆ ಅರಚಾಡಿದರು. ಕಂಡಕ್ಟರ್ ಮೂಕ ಪ್ರೇಕ್ಷಕರಾಗಿ ಉಳಿದು ಬಿಟ್ಟಿದ್ದರು.
ತ-ಪ್ರಯಾಣಿಕರಿಗೆ ಹೀಗೆ ಪ್ರಯಾಣ ಮಾಡಿ ಅಭ್ಯಾಸ ನೋಡಿ. ತಮ್ಮ ಕೈಲಿದ್ದ ಚೀನಾ ಮೊಬೈಲನ್ನು ಜೋರಾಗಿ ಬೇನಾಮಿ ಹಾಡೊಂದನ್ನು ಅರಚಲು ಬಿಟ್ಟು ಜೋರಾಗಿ ಲೋಕಾಭಿರಾಮದ ಮಾತುಗಳನ್ನು ಮಾತನಾಡಲು ಪ್ರಾರಂಭಿಸಿದರು.

ತ-ಪ್ರಯಾಣಿಕರಿಗೆ ತಾವು ಕಳೆದುಕೊಳ್ಳೋದು ಏನೂ ಇರಲಿಲ್ಲ. ಸ-ಪ್ರಯಾಣಿಕರಿಗೆ ಸರಿಯಾಗಿ ಸೀಟು ಸಿಗದೇ, ನಿದ್ದೆ ಇಲ್ಲದೆ ಹೆಚ್ಚು ದುಡ್ಡು ಕೊಟ್ಟು ಟಿಕೇಟು ಪಡೆದು ಹುಚ್ಚರಾದೆವು ಅನ್ನೋದು ಖಾತ್ರಿಯಾಯಿತು. ಕಂಡಕ್ಟರ್ ಸಾಹೇಬರು ನಿಂತು ಪ್ರಯಾಣ ಮಾಡಿದರು.

ಇದೆಲ್ಲ ಹೀಗೆ ಯಾಕಾಯಿತು ಅಂತ ಸ್ವಲ್ಪ ಸಮಯ ವಿಚಾರ ಮಾಡಿದೆ -
೧. ಬೆಂಗಳೂರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಜನ ಇದ್ದಾರೆ
೨. ಜನರಿಗೆ 'ನಾನು-ಇವನ-ತಲೆ-ತುಳಿದರು-ಪರವಾಗಿಲ್ಲ" ಅನ್ನೋ ಭಾವನೆ
೩. ಸರಿಯಾದ ಸಮಯಕ್ಕೆ ಟಿಕೇಟು ಪಡೆಯದ ನಮ್ಮಂತಹ ಪ್ರಯಾಣಿಕರು

ಏನೇ ಹೇಳಿ, ಕರ್ನಾಟ ಸಾರಿಗೆ ಬಸ್ಸಿನಲ್ಲಿ ಹಬ್ಬದ ಸಮಯದಲ್ಲಿ ರಾತ್ರಿಯ ಪ್ರಯಾಣ ನರಕವಾಗೋದು ಬಹುತೇಕ ಸತ್ಯ!

Thursday, December 3, 2009

ನಗುವಿನ ನಾನಾರ್ಥಗಳು...

ನಾನು ಗಂಭೀರವಾಗಿ ಮಾತನ್ನು ಶುರು ಮಾಡಿದೆ, "ನೋಡಿ, ಇವತ್ತು ಶನಿವಾರ. ಕೆಲಸದ ಅನಿವಾರ್ಯತೆಯಿಂದಾಗಿ ನಾವು ಇಂದು ಆಫೀಸಿಗೆ ಬರಬೇಕಾಗಿದೆ. ಇನ್ನು ಮುಂದೆ ಹೀಗಾಗಬಾರದು ಅಂದ್ರೆ ನಾವು ನಮ್ಮ ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸಬೇಕು. ಈ ಕೆಲಸ ಇನ್ನೆರಡು ಘಂಟೆಗಳಲ್ಲಿ ಮುಗಿಸಬಹುದು ಅಂತ ನನಗೆ ಗೊತ್ತು. ಈಗ ಸಮಯ ೫:೩೦. ೬ ಆಗಲು ಇನ್ನರ್ಧ ಘಂಟೆ ಇದೆ. ಇನ್ನು ಆಫೀಸಿನಲ್ಲಿ ಇರಲು ಹೋಗಬೇಡಿ.. ನಾಳೆ ಬಂದು ಕೆಲಸ ಮುಗಿಸಿ"

ಅಲ್ಲಿ ನಿಂತು ನನ್ನ ಮಾತನ್ನು ಆಲಿಸುತ್ತಿದ್ದ ಸಹೋದ್ಯೋಗಿಯೊಬ್ಬಳು ಕಿಸಕ್ಕನೆ ನಕ್ಕಳು...

ನಗುವಿನಲ್ಲಿ ಮುಗ್ಧತೆ ಇದ್ದರೂ ಅದರ ಹಿಂದಿದ್ದ ಮಾತನಾಡದ ಪದಗಳನ್ನು ನಾನು ಅವಳ ಕಣ್ಣಿನಲ್ಲಿ ಕಂಡೆ - "ನಮಗಿನ್ನೂ ರಜಾ ದಿನದಂದು ಸಾಯಂಕಾಲ ೬ ಘಂಟೆಯ ಮೇಲೆ ಇದ್ದು ಕೆಲಸ ಮಾಡುವಷ್ಟು ತಲೆ ಕೆಟ್ಟಿಲ್ಲ"