Thursday, May 22, 2008

ತಾರಾಯಣ - ೨

'ಇಸ್ರೋ'ದವನು ಎಂದು ಬಂದು, ಎಲ್ಲರಿಗೂ ಮೋಸ ಮಾಡಿ, ಆ ವ್ಯಕ್ತಿ ಓಡಿಹೋಗಿ ೮ ವರ್ಷಗಳೇ ಕಳೆದು ಹೋಗಿದ್ದವು; ನಾನು ಆರನೇಯ ಸೆಮಿಸ್ಟರ್ ಇಂಜಿನಿಯರಿಂಗ್ ಓದುತ್ತಿದ್ದೆ.

ಸೆಮಿಸ್ಟರ್ ಅಂತ್ಯದ ಪರೀಕ್ಷೆಗಳು ಹತ್ತಿರ ಬರುತ್ತಿದ್ದುವು. ಹುಡುಗರು ತರಗತಿಗಳಿಗೆ ಬರುವುದನ್ನು ಕಡಿಮೆ ಮಾಡಿ ತಮ್ಮ ತಮ್ಮ ಮನೆ ಅಥವ ಹಾಸ್ಟೆಲ್ ರೂಮುಗಳಲ್ಲಿ ಕುಳಿತು ಓದುವುದನ್ನು ಶುರು ಮಾಡಿದ್ದರು. ಇಂತಹ ಒಂದು ದಿನ ನಾನು ನನ್ನ ತರಗತಿಯಲ್ಲಿ ಕುಳಿತಿದ್ದೆ; ನಮ್ಮ ವಿಭಾಗದಿಂದ ಉತ್ತಮ ಅಂಕಗಳನ್ನು ಗಳಿಸಿದ ೧೦ ಮಂದಿ ವಿದ್ಯಾರ್ಥಿಗಳನ್ನು ಕೂಡಲೆ ಪ್ರಾಂಶುಪಾಲರ ಕೊಠಡಿಯ ಹತ್ತಿರ ಬರಬೀಕಾಗಿ ಬುಲಾವು ಬಂದಿತು. ಸರಿ, ಏಕೆ ಕರೆದಿದ್ದಾರೆ ಎಂದು ಗೊತ್ತಿರಲಿಲ್ಲವಾದರೂ ಅಟೆಂಡರುಗಳಿಗೆ ವಿಷಯವೇನೆಂದು ಕೇಳಿ ತಿಳಿದುಕೊಂಡೆವು. ಆಫೀಸಿನ ಮುಂದೆ ಇದ್ದ ಆಸನಗಳಲ್ಲಿ ಕುಳಿತುಕೊಂಡೆವು - ಮೆಕ್ಯಾನಿಕಲ್ ವಿಭಾಗದಿಂದ ಹುಡುಗರು ಇಸ್ತ್ರಿ ಮಾಡಿದ ಶರ್ಟು, ಟೈ ಹಾಕಿಕೊಂಡು ಬಂದಿದ್ದನ್ನು ಕಂಡು ನನಗೆ ಒಳಒಳಗೆ ವ್ಯಂಗ ನಗೆ ಉಕ್ಕಿ ಬರುತ್ತಿತ್ತು - ತಡೆದುಕೊಂಡು ಸುಮ್ಮನೆ ಕುಳಿತಿದ್ದೆ; ಅಲ್ಲಾ, ಬರುತ್ತಿರುವ ಒಬ್ಬ ವಿಜ್ಞಾನಿಯನ್ನು ನೋಡಲು ಸಿಂಗರಿಸಿಕೊಂಡು ಬರುವ ಅವಶ್ಯಕತೆಯಾದರೂ ಏನಿತ್ತು ಎನ್ನುವುದು ನನ್ನ ವಾದ! ಆದರೆ ನನಗೆ ಸಂಭಂದವಿಲ್ಲದ ವಿಷಯ ಅಂತಾ ಸುಮ್ಮನಾದೆ. ಹದಿನೈದು ನಿಮಿಷ ಎಂದು ಹೋದವರು ಒಂದು ಘಂಟೆಯಾದರು ಯಾವ ನರಪಿಳ್ಳೆಯು ನಮ್ಮೆಡೆಗೆ ತಿರುಗಿ ನೋಡುತಿಲ್ಲವಾದ್ದರಿಂದ ಬೇಸರವಾಗುತ್ತಿತ್ತು - ಸುಮ್ಮನೆ ತರಗತಿಯಲ್ಲಿ ಕುಳಿತು ಪಾಠವನ್ನಾದರೂ ಕೇಳುತಿದ್ದೆನಲ್ಲ ಎಂದು ಮನಸ್ಸಿನಲ್ಲಿಯೇ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಿಗೆ ಹಿಡಿ ಶಾಪ ಹಾಕುತ್ತ ಕುಳಿತಿದ್ದೆ.

ಆಫೀಸು ಅಂದರೆ ಜನ ಹೋಗೋದು-ಬರೋದು ಇದ್ದೆ ಇರುತ್ತದೆ. ಜನರನ್ನು ನೋಡುತ್ತ ಗುಣಾಕಾರ-ಭಾಗಾಕಾರ ಹಾಕುತ್ತ, ಗೆಳೆಯರೊಡನೆ ಮಾತನಾಡುತ್ತ ಕುಳ್ತಿದ್ದೆ. ಅಷ್ಟರಲ್ಲಿ ಒಂದು ಪರಿಚಿತ ಮುಖ ಕಂಡಂತಾಯಿತು - "ಅರೆ! ನಮಗೆಲ್ಲ ಮೋಸ ಮಾಡಿದ 'ಇಸ್ರೊ ವಿಜ್ಞಾನಿ'! ಆದರೆ ಏಕೋ ಅನುಮಾನ... ಇವನೇಕೆ ಇಲ್ಲಿಗೆ ಬಂದಿದ್ದಾನೆ? ಇವನೇ ಅವನೋ?ಇರಲೇಬೇಕು - ಸಿಗರೇಟು ಊದಿ ಚಪ್ಪಟೆಯಾದ ಮುಖ, ಟೀ-ಶರ್ಟು ಜೀನ್ಸು... ಹಂ... ವಿಜಯ ( ನನ್ನ ತಮ್ಮ ) ನಿಗೆ ಕೇಳಿ ನೋಡಬೇಕು. ಅವನು ಇವನೇ ಆಗಿದ್ದರೆ ನಾಲ್ಕು ತದಕಿ ನಮ್ಮ ದುಡ್ಡನ್ನು ಹಿಂತಗೆದುಕೊಳ್ಳಬೇಕು. ದುಡ್ಡು ಬೆಡ - ಆದರೆ ಮೋಸಗಾರನನ್ನು ಬಿಡಬಾರದು!", ಎಂದು ಅಂದುಕೊಂಡೆ. ಆ ವಿಜ್ಞಾನಿ ನೆಟ್ಟಗೆ ಪ್ರಾಂಶುಪಾಲರ ಕೊಠಡಿಯನ್ನು ಹೊಕ್ಕ - ನನಗೆ ತಿಳಿದು ಹೋಗಿತ್ತು. ಮತ್ತೆ ಮೋಸ ಮಾಡಲು ಬಂದಿದ್ದ ಮಹಾಶಯ! ಕಳ್ಳನನ್ನು ಹಿಡಿದುಬಿಟ್ಟೆ ಎಂಬ ಸಂತೋಷ ತುಂಬಿ ತುಳುಕುತ್ತಿತ್ತು - ಹಿಡಿದಿರಲಿಲ್ಲ; ಅದು ಬೇರೆಯ ಮಾತು ಆದರೆ ಇಷ್ಟು ವರ್ಷಗಳ ನಂತರ ಅವನನ್ನು ಗುರುತು ಹಿಡಿದಿದ್ದೆನಲ್ಲ? ಪಕ್ಕದಲ್ಲೆ ಇದ್ದ ತಮ್ಮನನ್ನು ವಿಚಾರಿಸಿದೆ - ಅವನಿಗೆ ನೆನಪೇ ಇರಲಿಲ್ಲ :( ಆದರೆ ನಾನು ಬಿಡಬೇಕಲ್ಲ?! ಅವನಿಗೆ ನೆನಪಿಸಿದೆ.

ಆಗಲೆ ಮಧ್ಯಾಹ್ನದ ೧ ಘಂಟೆಯಾಗಿದ್ದರಿಂದ ಊಟದ ನಂತರ ಕಾಲೇಜಿನಲ್ಲಿ ಸೇರುವುದಾಗಿ ಸುದ್ದಿ ಬಂತು. ಊಟವಾದ ಮೇಲೆ ನೋಡಿಕೊಳ್ಳೊದು ಇವನನ್ನ ಎಂದುಕೊಂಡು ನಮ್ಮ ಮಾಮೂಲಿ ತಾಣವಾದ 'ಕೆ.ಬಿ. ಮೆಸ್'ಗೆ ನಡೆದೆವು. ಊಟ ಮಾಡುತ್ತ ಸಹ ಅವನ ವಿಚಾರವೇ ನನ್ನೆ ತಲೆಯಲ್ಲಿ. ಹಿಂದಿರುಗಿ ಹೋದ ಮೇಲೆ ಅವನನ್ನು ಹಿಡಿದು ಬಡೆಯುವ ಮಹದಾಸೆ! ಬೇಗನೆ ಊಟ ಮುಗಿಸಿ ದಾರಿಯಲ್ಲಿ ಸಿಕ್ಕ ಎಲ್ಲ ಮಿತ್ರರಿಗೆ 'ತಾರಾಯಣ - ೧' ವಿವರಿಸಿ ಕಾಲೇಜಿಗ ಬಂದದ್ದಾಯಿತು. ನಮ್ಮ ವಿಭಾಗದ ಒಂದು ಕೊಠಡಿಯಲ್ಲಿ ಕೂಡಲು ವ್ಯವಸ್ಥೆಯನ್ನು ಮಾಡಲಾಗಿತ್ತು. ನಮ್ಮ ವಿಭಾಗದ ಮುಖ್ಯಸ್ಥರು ಮ್ರುದು ಸ್ವಭಾವದವರು - ನಾನು ಅವರಲ್ಲಿ ಹೋಗಿ,"ಸರ್... ಈ ವ್ಯಕ್ತಿಯ ಮೇಲೆ ನನಗ್ಯಾಕೋ ಅನುಮಾನ! ಹಿಂದೊಮ್ಮೆ ನಮ್ಮ ಶಾಲೆಗೆ ಬಂದು ಹುಡುಗರಿಗೆಲ್ಲ ಮೋಸ ಮಾಡಿದ್ದ. ಒಮ್ಮೆ ಇವರ ಬಗ್ಗೆ ವಿಚಾರಿಸಿ ಖಾತ್ರಿ ಪಡೆಸಿ", ಎಂದು ಕೇಳಿಕೊಂಡೆ. ಅವರು ನನ್ನ ಮಾತಿಗೆ ಬೆಲೆ ಕೊಟ್ಟ ಹಾಗೆ ಕಾಣಲಿಲ್ಲ - "ನೋಡೋಣ" ಎಂದರಷ್ಟೆ. ಇನ್ನೊಂದು ವಿಭಾಗದ ಮುಖ್ಯಸ್ಥರಿಗೂ ಹೇಳಿದ್ದಾಯಿತು - ಏನೋ ಹೊರಡಲಿಲ್ಲ.

ಕೊಠಡಿಯಲ್ಲಿ ಕೂತು ಇನ್ನೊಂದು ಘಂಟೆಯಾಗಿತ್ತು. ಬಂದರು ಮಹಾಶಯರು. ಆವರೋಡನೆ ವಿಭಾಗಗಳ ಮುಖ್ಯಸ್ಥರಿಬ್ಬರು ಬಂದಿದ್ದರು. ನಾನು ಹೇಳಿದ ಹಾಗೆಯೇ ಆಯಿತು! ಅವನು ತಾರ ಮಂಡಲ, ವಿಜ್ಞಾನ ಎಂದೆಲ್ಲ ಮಾತನಾಡಿದ. ಪ್ರಶ್ಣೆಗಳನ್ನು ಕೇಳಿದ ಹಾಗು ಕೆಲ ವಿದ್ಯಾರ್ಥಿಗಳನ್ನೂ ಆರಿಸಿಕೊಂಡ. ದೆಹಲಿಯಲ್ಲಿ ನಡೆಯುವ ಯಾವುದೋ ಕಾರ್ಯಕ್ರಮಕ್ಕೆ ಇದು ಆಯ್ಕೆ ಎಂದು ನಂಬಿಸಲು ಪ್ರಯತ್ನಿಸಿದ. ಆಯ್ದ ವಿದ್ಯಾರ್ಥಿಗಳು ಇವನೊಡನೆ ಹೋಗಬೇಕಂತೆ ದೆಹಲಿಗೆ! ಮತ್ತೆ ಬರುವುದಾಗಿಯು, ನಾವುಗಳು ಅವನೊಡನೆ ಬರಲು ಸಿದ್ಧರೋ ಇಲ್ಲವೋ ಎಂಬುದನ್ನು ತಿಳಿಸಬೇಕೆಂದು ಹೇಳಿ ಹೋಗಿಬಿಟ್ಟ. ಅಯ್ಯೊ ದೇವರೆ, ಒಂದು ಕ್ಯಾಮರಾನಾದರು ಇದ್ದಿದ್ದರೆ "ವಾಂಟೆಡ್" ಅಂತ ಹಾಕಿಸಿಬಿಡಬಹುದಾಗಿತ್ತಲ್ಲ ಅಂತ ಒಳಒಳಗೆ ಕಳಾವಳವುಂಟಾಯಿತಾದರು ಮುಖ್ಯಸ್ಥರನ್ನು ನಂಬಿ ಸುಮ್ಮನಾಗಿದ್ದೆ. ತಪ್ಪು ಮಾಡಿಬಿಟ್ಟೆ!

(ಸಾರಾಂಶ: ಭಯ-ಆಲಸ್ಯಗಳನ್ನು ಬಿಟ್ಟು ಕಣ್ಣಿಗೆ ಕಾಣುವ ಅನ್ಯಾಯ-ಮೋಸ-ವಂಚನೆಯನ್ನು ಮಾಡುವ ನೀಚರನ್ನು ಸುಮ್ಮನೆ ಬಿಡಬಾರದು. ಅದು ಅವರಿಗೆ ಪ್ರೋತ್ಸಾಹವಾಗಿ ಪರಿಣಮಿಸುತ್ತದೆ.)

2 comments:

  1. Very sharp memory.......I too remember the ISRO person who came to our school.

    I am curious to know did he again cheated engineer students also?

    ReplyDelete
  2. ಇಲ್ಲ... ಅವನು ಮತ್ತೆ ಬರುವುದಾಗಿ ಹೇಳಿ ಹೋದವ, ಹಿಂದಿರುಗಿ ಬರಲೇ ಇಲ್ಲ :) ಬಹುಶಹ ಅವನಿಗೆ ಮುಂಬರುವ ತೊಂದರೆಯ ಗಂಧ ಬಡೆದಿತ್ತೇನೊ...

    ReplyDelete