Monday, February 7, 2011

ಕವನ - ವರ್ಣನೆ

ಬರೆದದ್ದು ಪ್ರಥಮ ವರ್ಷ, ಪದವಿ ಪೂರ್ವ ಕಾಲೇಜಿನಲ್ಲಿದಾಗ. ಕೇವಲ ಕಾಲ್ಪನಿಕ! ಪ್ರಶ್ನೆಗಳನ್ನು ಕೇಳಬೇಡಿ - ನನ್ನ ಹತ್ತಿರ ಉತ್ತರಗಳಿಲ್ಲ. ಆಗ ಇದನ್ನು ಬರೆದಾಗ ನನ್ನ ಬೆನ್ನನ್ನು ನಾನೇ ತಟ್ಟಿಕೊಂಡಿದ್ದೆ - ಕಾಲೇಜಿನ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾಗಿತ್ತು - ಆ ಪುಟಗಳನ್ನು ಮತ್ತೆ ತಿರುವಿ ಹಾಕಿದಾಗ ಇದನ್ನು ಇಲ್ಲಿ ಬರೆಯಬೇಕೆನಿಸಿತು...

ಕವನ : ~

ಆ ನಿನ್ನ ಚಂಚಲತೆಗೆ ಸೋತೆ ನಾನು
ನಿನ್ನನ್ನು ತಡೆಯಲು ಇಲ್ಲವಲ್ಲ ಯಾವ ಕಾನೂನು
ನಿನ್ನ-ನನ್ನ ಸಂಬಂಧ ಬಿಡಿಸಲಾಗ ನಂಟು
ಬ್ರಹ್ಮನೂ ತಲೆ-ಕೆಡಿಸಿಕೊಂಡ ಜಟಿಲ ಗಂಟು

ನಿನ್ನ ಮೃದು ತನುವ ಹಾಡಿ ಹೊಗಳಲೆ
ನನ್ನ ಬಿಟ್ಟು ತೊಲಗು ನೀನೀಗಲೆ
ಆ ನಿನ್ನ ಬಳುಕು ನಡೆಗೆ ಸೋತೆ ನಾನು
ಜನರೆಲ್ಲ ನಕ್ಕರೂ ಏಕೆ ಬಿಡಲೊಲ್ಲೆ ನೀನು

ನೀನು ತೆಳು - ಬಿಳುಪು ಮಿಶ್ರಿತ ರನ್ನ
ಕರೆತಂದೆಯಲ್ಲ ಜೊತೆಗೆ ನಿನ್ನ ಅಣ - ತಮ್ಮಂದಿರನ್ನ
ಬಂದು, ಬೇಗನೆ ಹೋಗದವರನ್ನೆಲ್ಲ
ಅದ್ಹೇಗೆ ತಿಳಿ ಹೇಳುವುದು, ನನಗೆ ಗೊತ್ತಿಲ್ಲ

ನೀನೊಬ್ಬಳೇ ಬಂದರೆ ಪರ್ವಾಗಿಲ್ಲ
ಜೊತೆಗೆ ತರುತೀಯಲ್ಲ ತಲೆನೋವನ್ನೆಲ್ಲ
ನೀನು ಚಪಲತೆಯಿಂದ ಕೂಡಿದಾಗ ಮಾತ್ರ
ನನ್ನ ಸಿಟ್ಟಿಗೆ ನೀನೇ ಪಾತ್ರ

ಅಂದು ಕೇಳಿದ್ರು ಡಾಕ್ಟರು ನಿನ್ನ
ನಾನೆಂದೆ, ನನ್ನ-ನಿನ್ನದು ಅಮರ ಪ್ರೇಮ
ನಿನ್ನೊಂದಿಗೆ ನಾನು-ನನ್ನೊಂದಿಗೆ ನೀನು, ಜೊತೆಯಲ್ಲಿ
ನಮ್ಮೀ ಐಕ್ಯಕ್ಕೆ, ಅಯ್ಯೋ, ಆಕೆ ಬರಲಿಲ್ಲ ಕಲಿ?

ನಿನ್ನ ಪ್ರಯತ್ನಗಳನ್ನೆಲ್ಲ ಮಾಡಲು ವಿಫಲ
ವೈದ್ಯ ಮಹಾಶಯರು ಬಳಸಿದರು ತಮ್ಮ ತಪೋಬಲ
ಅವಳ ಮನದಲ್ಲೆದ್ದಿತೊಂದು ಬಲವಾದ ಶಂಕೆ
ವೈದ್ಯರ ವಿಷ ಬೀಜ ಹೊಡೆಯಲಿಲ್ಲ ಮೊಳಕೆ

ನಾ ಹೇಳಿದೆ ನಿನ್ನ ಆಗಮನದಿಂದ ಬೇಸರಗೊಳ್ಳಲಿಲ್ಲ ಚಿನ್ನ
ಆದರೆ ಆ ನಿನ್ನ ಚಪಲತೆ, ಹಾಕಿತು ನಿನ್ನ ನೀಯತ್ತಿಗೆ ಕನ್ನ
ಮರುದಿನದ ಆ ನಿನ್ನ ಜಟಿಲತೆ, ಕಾಡಿಸಿ ಕೈಬಿಟ್ಟಿತು ನನ್ನ
ಅಯ್ಯೋ, ಹೇಗೆ ತಡೆಯಲಿ ನಿನ್ನ ಕೆಲಸಗಳನ್ನ

ಸಕಲ ಅಸ್ತ್ರಗಳ ಬಳಕೆಯಾಯಿತು
’ಲೋಕಲ್’ - ಲಗಾಟಿ ಹೊಡೆಯಿತು
’ಹರ್ಬಲ್’ - ಶೆಟೆದು ಹೋಯಿತು
’ರಾಯಲ್’ - ಜೇಬಿಗೆ ತೂತು ಹೊಡೆಯಿತು

ನಿನ್ನ ಆ ಗಲಭೆಗೆ ಕೆಟ್ಟಿತು ಈ ತಲೆ
ಇನ್ನೇನಾದರು ಮಾಡಬೇಕೆನ್ನುವಷ್ಟರಲ್ಲೆ
ಹೊರಟು ಹೋದರು ನಿನ್ನ ಜೊತೆಯವರು
ಕೊನೆಗೂ ಕಡಿಮೆಯಾಯಿತು ನಿನ್ನ ಜೋರು

ಅಂದಹಾಗೆ, ದುಃಖಿಸಬೇಡ ಪ್ರಿಯೆ
ಅಡೆತಡೆ ಇಲ್ಲದೆ, ನಿರಂತರವಾಗಿ ನಡೆಸು ನಿನ್ನ ಕ್ರಿಯೆ
ಮೂಗಿನೊಳ ರಂಧ್ರದೊಳಗೆ ಮುತ್ತಿನಂತೆ ನೀನು ಹೊಳೆಯುತ್ತಿರುವೆ
ನೆಗಡಿ ಬಂದಾಗ ಮಾತ್ರ, ಎಲ್ಲರ ಮನದೊಳಗೆ ನೀ ಕೊಳೆಯುತ್ತಿರುವೆ

Friday, February 4, 2011

ಅಲೆ

ಹಿತವಾದ ತಂಗಾಳಿ ಸಮುದ್ರದ ಅಲೆಯೊಡನೆ ದಡದತ್ತ ಬೀಸುತಲಿತ್ತು. ಸಮುದ್ರದ ಮಧುರ ಘರ್ಜನೆಯ ಹೊರತು ಬೇರೆ ಯಾವುದೇ ಸಪ್ಪಳವಿರಲಿಲ್ಲ. ಸಾಯಂಕಾಲದ ಸಮಯ; ಅವರಿಬ್ಬರು ಹಸಿ ಮರಳಿನಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸುತ್ತ ಮಾತನಾಡದೆ ನಡೆಯುತ್ತಿರಲು, ಕೆಂಪಾದ ಸೂರ್ಯನು ಇವರಿಬ್ಬರ ನೆರಳನ್ನು ಸಮುದ್ರ ದಂಡೆಯ ಮೇಲೆ ಬೃಹದಾಕೃತಿಯ ರೂಪದಲ್ಲಿ ಮೂಡಿಸುತ್ತ ದೂರ-ದೂರದ ವರೆಗೆ ಹಬ್ಬಿದ್ದ ಸಮುದ್ರದ ಹಿಂದೆ ಮೆಲ್ಲನೆ ಮರೆಯಾಗಲಾರಂಭಿಸದ್ದನು. ಅವನು-ಅವಳ ಉತ್ಸಾಹ ಭರಿತ ಆ ನಡಿಗೆಯಲ್ಲಿ ಮಾತನ್ನು ಯಾರೂ ಪ್ರಾರಂಭಿಸಿರದಿದ್ದರೂ, ಕಣ್ಣುಗಳ ನೋಟದಲ್ಲಿಯೇ ಸಾವಿರಾರು ಪ್ರಶ್ನೆಗಳನ್ನು ಕೇಳಿ ಉತ್ತರಿಸಿಯೂ ಆಗಿತ್ತು! ಸಂತಸ ಕೂಡಿದ ಮಂದಹಾಸ ಅವಳ ಮುಖದಲ್ಲಿ ತುಂಬಿದ್ದರೆ, ಅವನ ನಯನಗಳಲ್ಲಿ ಅವಳ ಪ್ರತಿಬಿಂಬವೇ ಹೊರತು ಬೇರಿನ್ನಿಲ್ಲ... ಆಕಾಶ್ ಹಾಗು ಅನ್ವಿತ ಈ ಸಮುದ್ರ ದಂಡೆಯ ಮೇಲೆ ಹಲವಾರು ಬಾರಿ ನಡೆದಿದ್ದರು, ಆದರೆ ಇಂದು ಅವರಿಗೆ ಒಂದು ವಿಶೇಷವಾದ ದಿನ...

ಅವಳಂದಳು, "ಇಂದು ನಮ್ಮ ಮದುವೆಯಾಗಿ ಒಂದು ವರ್ಷ ಕಳೆದಿದೆ ಅಂತ ನೆನೆಸಿಕೊಂಡ್ರೆ ನಂಬೊಕ್ಕೆ ಆಗ್ತಿಲ್ಲ! ನಾವು ಮೊದಲ ಬಾರಿ ಇಲ್ಲಿಗೆ ಬಂದಾಗ ನನ್ನನೇ ನೋಡುತ್ತ ನೀವು ಆ ತಂಗಿನ ಮರಕ್ಕೆ ಡಿಕ್ಕಿ ಹೊಡೆದದ್ದು ನನಗಿನ್ನೂ ನೆನಪಿದೆ...".
ಮುಖ ಕೆಂಪೇರಿದ ಅಕಾಶ್, "ಒಹ್! ಅದು ನಿನ್ನನ್ನು ನೋಡುತ್ತ ಅಲ್ಲ, ನಿನ್ನ ಜೊತೆಗಿದ್ದ ನಿನ್ನ ಗೆಳತಿ ಪ್ರಿಯಾ ನ ನೋಡಿ!", ಎಂದು ಅನ್ವಿತಾಳನ್ನು ರೇಗಿಸಿ ಅವಳ ಮೃದು ಕೈಗಳ ಪುಟ್ಟ ಗುದ್ದುಗಳಿಂದ ತಪ್ಪಿಸಿಕೊಳ್ಳುತ್ತ ಪ್ರೀತಿಯಿಂದ ಅವಳ ಕೈಗಳನ್ನು ಹಿಡಿದನು.
"ಅನ್ವಿತಾ, ನೀನೇ ನನ್ನ ದಾರಿ ತಪ್ಪಿಸಿದ್ದು! ಇನ್ನು ನಿನ್ನ ಹಾಗು ನನ್ನ ದಾರಿ ಒಂದೇ ಆದ ಮೇಲೆ ನಾನು ನೀನು ಹೇಳಿದ ಹಾಗೆಯೇ ಕೇಳಬೇಕಲ್ಲವೇ?", ಎಂದು ಸ್ವಲ್ಪ-ಸ್ವಲ್ಪವಾಗಿಯೇ ಬೆಂಕಿಗೆ ತುಪ್ಪ ಹಾಕಿದನು.
ಅನ್ವಿತಳ ಹುಸಿ ಮುನಿಸನ್ನು ಹೋಗಲಾಡಿಸಲು ಹಣೆಯೆ ಮುತ್ತೊಂದನ್ನು ಇತ್ತು ಕ್ಷಮೆಯನ್ನು ಯಾಚಿಸಿದನು. ಇಬ್ಬರೂ ದಡದ ಮೇಲೆ ಒಂದೆಡೆ ಕುಳಿತು ಮರಳಿನ ಮನೆಯೊಂದನ್ನು ಕಟ್ಟಲು ಪ್ರಾರಂಭಿಸಿದರು.

ಅಕಾಶ್ - ಅನ್ವಿತ, ಒಬ್ಬರನ್ನೊಬ್ಬರು ನೋಡಿದ್ದು ಸುಮಾರು ೨ ವರ್ಷಗಳ ಹಿಂದೆ. ಅಂದಿನಿಂದಲೂ ಒಬ್ಬರನ್ನೊಬ್ಬರು ಅರಿತು, ಇಷ್ಟಪಟ್ಟು ಮದುವೆಯಾಗಿದ್ದರು. ಇಬ್ಬರೂ ಬೆಂಗಳೂರೆಂಬ ಮಾಯಾ ನಗರಿಯಲ್ಲಿ ಅದೆಂತಹುದ್ದೋ ಕೂತು ಕೀಳಿ-ಮಣೆ ವೊತ್ತೋ ಕೆಲಸವಂತೆ, ಸಾಫ್ಟ್-ವೇರ್ ಅಂತಾರಲ್ಲ, ಅದನ್ನ ಮಾಡೋದು. ತಮ್ಮ ತವರೂರಾದ ಮಂಗಳೂರಿಗೆ ಬಂದಾಗಲೊಮ್ಮೆ ಸಮುದ್ರ ದರ್ಶನ ಮಾಡಿಯೇ ಹೋಗೋದು ಇವರು. ಇನ್ನು, ಕಥೆಗೆ ಮರಳೋಣ!

"ಆಕಾಶ್, ನಿನಗ್ಯಾವ ಮಗು ಇಷ್ಟ?", ಎಂದು ಅನ್ವಿತ ಪ್ರಶ್ನಿಸಿದಾಗ ಆಕಾಶ್, "ನನಗೆ ಗಂಡು, ಹೆಣ್ಣು ಮಗು - ಯಾವುದೇ ಆದರೂ ಪರ್ವಾಗಿಲ್ಲ; ಆದರೆ ಮಗು ಮೈ ಮೇಲೆ ಸುಸ್ಸು ಮಾಡುವುದನ್ನ ನಿಲ್ಲಿಸಿ ಸೂರ್ಯಕಾಂತಿಯಂತಹ ಬೊಜ್ಜು-ಬಾಯಿ ತುಂಬ ನಗು ಬೀರಿದರೆ ಅದು ನನಗಿಷ್ಟ!", ಎಂದು ಸುತ್ತು-ಬಳಸಿ, ಒಂದೇ ಮಾತಿನಲ್ಲಿ ಎರಡು ಪ್ರಶ್ನೆಗಳಿಗೆ (ಒಂದು ಕೇಳಿದ್ದು - ಇನ್ನೊಂದು ಕೇಳದೇ ಇದ್ದಿದ್ದು) ಉತ್ತರ ನೀಡಿದ. ಅನ್ವಿತಾ ಆಕಾಶನಿಗೆ ತಲೆಯ ಮೇಲೆ ನೀಡಿದ ಮೊಟಕು ಅವನ ಬಾಯಿ ಮುಚ್ಚಿಸಿತು!

"ಅದು ಸರಿ, ಒಂದು ಲಾಂಗ್-ಡ್ರೈವ್ ಗೆ ಹೋಗೋಣವೇ?", ಎಂದು ಅಕಾಶ್ ಉಸುರಿದಾಗ, "ಹುಂ! ಆ ನಿಮ್ಮ ಮುರುಕಲು ಬೈಕಿನ ಮೇಲೆ ಕುಳಿತಾ? ನಾನ್ ಬರಲ್ಲಾ!", ಎಂದು ಕಿಡಿ ಕಾರಿದಳು.

ಆಕಾಶ್, ಬೇಸರಿಸದೆ, "ಹಾಗಿದ್ದರೆ, ಒಂದು ಐಸ್ ಕ್ರೀಮ್?", ಎಂದಾಕ್ಷಣ ಅನ್ವಿತ, "ಖಂಡಿತ!", ಎಂದು ತಯಾರಾದಳು.

ಐಸ್ ಕ್ರೀಮ್ ನೆಕ್ಕುತ್ತ, ಮರಳಿನ ಮನೆಯನ್ನು ಅದರ ಪಾಡಿಗೆ ಬಿಟ್ಟು ಒಬ್ಬರನ್ನೊಬ್ಬರು ಛೇಡಿಸುತ್ತ, ಚಿಕ್ಕ ಮಕ್ಕಳಂತೆ ಜಗಳಾವಾಡುತ್ತ, ಮುದ್ದಾಡುತ್ತ ಮನೆಯತ್ತ ನಡೆದರು... ಅಮ್ಮನು ರಾತ್ರಿಗೆಂದು ಮಾಡಿದ್ದ ಸಾರಿನ ಸುವಾಸನೆ ಮರಿಗಳನ್ನು ಬಿಲಕ್ಕೆ ಸೇರುವಂತೆ ಸಂದೇಶವನ್ನು ನೀಡಿತ್ತು. ತಂಪಾದ ಗಾಳಿ ಬೀಸುತ್ತಲಿತ್ತು... ನೀರಿನ ಕೆನೆತ ಮುಗಿಲಿಗೇರಹತ್ತಿತ್ತು.

Wednesday, January 26, 2011

ಮಿತ್ರರೊಡನೆ ವಾಸ

ಮಿತ್ರರೊಡನೆ ಒಂದೇ ಮನೆಯಲ್ಲಿ ವಾಸಿಸುವ ಮಜವೇ ಬೇರೆ. ಅಂತಹ ಕೆಲ ಸ್ವಾರಸ್ಯಕರ ಸನ್ನಿವೇಶಗಳು ಇಲ್ಲಿವೆ - ಕೆಲವು ಕೇಳಿದ್ದವು, ಕೆಲವು ಅನುಭವಿಸಿದ್ದವು. ಕೆಲ ಕಡೆ, ಓದುಗರಲ್ಲಿ ಸ್ವಾರಸ್ಯ ಹೆಚ್ಚಿಸಲು ವಿಷೇಶ ಪದಗಳನ್ನು ಹಾಕಲಾಗಿದೆ.


ಫ್ಲಶ್!

ಅಪರೂಪಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಕೈಯಿಂದ ಬಟ್ಟೆಯನ್ನು ಅಟ್ಯಾಚ್ಡ್ ಬಾತ್ರೂಮಿನಲ್ಲಿ ತೊಳೆದರೆ ಏನಾಗಬಹುದು? ಊಹಿಸಿ :) ಏನಾದರು "ಅನಾಹುತ" ಆಗಲೇ ಬೇಕಲ್ಲವೇ? ಬೆನ್ನು ನೋಯಿಸಿಕೊಂಡು, ಬಟ್ಟೆ ತಿಕ್ಕಿ, ನೀರಿನಲ್ಲಿ ೨ ಬಾರಿ ತೊಳೆದು, ಬಟ್ಟೆಯನ್ನು ಹಿಂಡಿ ತಗೆದಿಟ್ಟು ಇನ್ನೇನು ಮುಗಿಯಿತು, ಈ ನೀರನ್ನು ಎಸೆಯಬೇಕು ಅನ್ನುವಷ್ಟರಲ್ಲಿ ಸುಸ್ತಾಗಿಬಿಟ್ಟಿರುತ್ತದೆ. ಆ ನೀರಿನಲ್ಲಿ ಇನ್ನೇನಾದರೂ ಉಳಿದಿದೆಯೆ ಎಂದು ನೋಡಲೂ ಸಹ ಮನಸ್ಸಿರುವುದಿಲ್ಲ. "ನೀರನ್ನು ಇನ್ನೇನು ಕಮೋಡಿನಲ್ಲಿ ಸುರಿದರೆ ಎರಡು ಕೆಲಸಗಳಾಗುತ್ತವೆ - ನೀರು ಎಸೆದಂತಾಗುತ್ತದೆ ಹಾಗು ಗಲೀಜಾದ ಕಮೋಡನ್ನು ಅಪರೂಪಕ್ಕೆ ಸ್ವಲ್ಪ ಮಟ್ಟಿಗೆ ತೊಳೆದಹಾಗಾಗುತ್ತದೆ", ಎಂಬ ಅತಿ ಜಾಣ್ಮೆಯ ಕಿಡಿ ಮನಸ್ಸಿನಲ್ಲಿ ಬಿದ್ದಾಗ ಎಲ್ಲ ಶುರುವಾಗುತ್ತದೆ. ಒಳಒಳಗೆ ಆದ ಸಂತೋಷದ ಗುಂಗಿನಲ್ಲಿ ಬಕೀಟನ್ನು ಎತ್ತಿ ನೀರನ್ನು ಕಮೋಡಿಗೆ ಸುರಿಯಲು ಶುರು ಮಾಡಲಾಗಿದೆ - ಅಷ್ಟರಲ್ಲಿ, ಅದೋ, ಅಲ್ಲಿ ಹೋಯಿತು ಆ ಅರ್ಧ ತೋಳಿನ ಬನಿಯಾನು... ಮೊನ್ನೆ ತಂದ ಕರ್ಚೀಫು... ಕಮೋಡು ಇವರಿಬ್ಬರನ್ನು "ಸ್ವಾಹಾ" ಅನ್ನುತ್ತಿದ್ದ ಹಾಗೆ, ಮೈ ಮೇಲಿನ ಧ್ಯಾನ ಮತ್ತೆ ಮರಳಿ ಬಕೀಟನ್ನು ಆಚೆ ಸರೆಸಿ, ಅದರಲ್ಲಿ ಉಳಿದ ಸ್ವಲ್ಪ ನೀರಿನಲ್ಲಿ ಇನ್ನೇನಾದರು ಇದೆಯೇ ಎಂದು ನೋಡಿದಾಗ ಏನೂ ಇರುವುದಿಲ್ಲ. ಹೋಗಿದ್ದು ಹೋಯಿತು, ಇನ್ನೇನು ಕಮೋಡಿನಲ್ಲಿ ಕೈ ಹಾಕುವುದು ಬಾಕಿ!

ಇವತ್ತಿನ ತಿಂಡಿ ಮ್ಯಾಗೀ!!

ಸಾಮಾನ್ಯವಾಗಿ ಯಾವುದೇ ತಿಂಡಿ ತಯಾರು ಮಾಡಲು ೩೦ ನಿಮಿಶಗಳಿಗಿಂತ ಹೆಚ್ಚು ಸಮಯ ಬೇಕಾಗುವುದಿಲ್ಲ - ಆದರೆ ಸಮಯ ಯಾರ ಹತ್ತಿರ ಇದೆ? ವಾರದಲ್ಲಿ ೩-೪ ದಿನ ಮ್ಯಾಗಿ ಸರ್ವೇಸಾಮನ್ಯ!

ನಾಳೆ ಬೆಳಿಗ್ಗೆ ನನ್ನ ಬೇಗನೆ ಎಬ್ಬಿಸು

ಬೆಳಗಿನ ಜಾವ (ಅಂದರೆ ೭ ಘಂಟೆಯ ಮೇಲೆ - ೭ ಘಂಟೆ ಆಗುವ ಮುಂಚಿನ ಸಮಯ "ಮಧ್ಯರಾತ್ರಿ"ಯಲ್ಲಿ ಬರುತ್ತದೆ! ) ಎಷ್ಟೇ ಬಾರಿ ಅಲಾರ್ಮ್ ಹೊಡೆದುಕೊಂಡರೂ ಕೈ ಅಲಾರ್ಮನ್ನು ಬಂದ್ ಮಾಡುತ್ತದೆಯೇ ವಿನಹ ದೇಹ ಮಂಚವನ್ನಗಲಿ ಕದಲುವುದಿಲ್ಲ. ಇಂತಹ ಸಮಯದಲ್ಲಿ ಒಬ್ಬರು ಇನ್ನೊಬ್ಬರನ್ನು ಎದ್ದೇಳಿಸಲು ಹೇಳಿ ಮಲಗುವುದು ಸರ್ವೇಸಾಮಾನ್ಯ. ಇದಾದ ಮೇಲೆ, ಇಬ್ಬರೂ ಏಳುವುದು ೮ ಘಂಟೆ ಆದ ಮೇಲೆಯೇ!

ನನ್ನ ಸಾಕ್ಸ್ ಎಲ್ಲಿ?!

ಅವನು (ಹೆಸರು ’ವಿನೋದ’ ಅಂತ ಅಂದ್ಕೊಳ್ಳಿ) ಮನೆ ಹೊಕ್ಕಾಗ ಸಮಯ ಸಾಯಂಕಾಲದ ೭ ಘಂಟೆ. ವಿನೋದನಿಗೆ, ಪ್ರತಿ ಅವಿವಾಹಿತ ಯುವಕನಂತೆ , ಏನನ್ನೂ ಮುಂಚಿತವಾಗಿ ಜೋಡಿಸಿ ಅಭ್ಯಾಸವಿಲ್ಲ. ಕಾಲಿಗೆ ತೊಡಿಸಿದ ಕಾಲುಚೀಲಗಳು (ಸಾಕ್ಸ್) ಹೊರಗಿನ ಕೋಣೆಯಲ್ಲಿ ಒಂದು ವಾರದಿಂದ ತಯಾರಾಗಿ ನಾನಾ ತೆರನೇಯ ಸುವಾಸನೆಗಳನ್ನು ಹೊಮ್ಮಿಸುತ್ತಲಿರುವ ವಿಧವಿಧ ಬಣ್ಣಗಳಿಂದ ಕೂಡಿದ ಗುಂಪೊಂದನ್ನು ಸೇರುವುದರಲ್ಲಿದೆ. ಈ ಸುವಾಸನೆ ಎಲ್ಲರ ಗಮನವನ್ನು ಕನಿಷ್ಟ ೩-೪ ದಿನಗಳಿಂದ ಸೆಳೆಯುತ್ತಲೇ ಇದೆ; ಇನ್ನೊಂದು ದಿನ ಕಳೆದರೆ, ಮೇಲಿನ ಮನೆಯವರು ಸತ್ತ ಇಲಿಯನ್ನು ಹುಡುಕಿಕೊಂದು ನಮ್ಮ ಮನೆಯ ಬಾಗಿಲನ್ನು ತಟ್ಟಿದರೆ ಆಶ್ಚರ್ಯವೇನಿಲ್ಲ. ರಾತ್ರಿ ಕಳೆದು ಬೆಳಗಾಗುತ್ತದೆ - ವಿನೋದನಿಗೆ ಬೆಳಗಿನ ಜಾವ ಬೇಗನೆ ಎದ್ದು ಆಫೀಸಿಗೆ ಹೋಗಬೇಕಾದ ಸಮಯ; ಅಪರೂಪಕ್ಕೆ ಸ್ನಾನ ಮಾಡಲಾಗಿದೆ ಇಂದು. ಎಂದಿನಂತೆ ಕ್ಯಾಬ್ ಬಂದು ಇವರಿಗಾಗಿ ಕಾಯುತ್ತಿದೆ... ಆದರೆ, ಕಾಲಿಗೆ ತೊಡಿಸಲು ಕಾಲುಚೀಲಗಳೆಲ್ಲಿ???

Monday, January 24, 2011

ಮೇಡಂನ ಬೆಚ್ಚಿ-ಬೀಳಿಸಿದ ಪ್ರಸಂಗ

ಮೇಡಂ ನ ಬೆಚ್ಚಿ-ಬೀಳಿಸಿದ ಪ್ರಸಂಗ

ಬಿ.ಈ. ತರಗತಿಗಳಲ್ಲಿ ಮಾಡಿದ ಹಲವಾರು ’ಅತಿ’ ಜಾಣ್ಮೆಯ ಕೆಲಸಗಳಲ್ಲಿ ನನಗಿಂದು ನೆನಪಿಗೆ ಬಂದದ್ದು ಈ ಸನ್ನಿವೆಷ.

ಸಾಯಂಕಾಲದ ೩ ಘಂಟೆಯಾಗಿದೆ. ಕಾಲೇಜಿನ ಎರಡನೇಯ ಅಂತಸ್ತಿನ ಕೊಠಡಿಗಳು ಸೂರ್ಯನ ಶಾಖಕ್ಕೆ ಸುಡುವ ಕಾವಲಿಯಂತೆ ಕಾದು, ಊಟ ಮಾಡಿ ಪಾಠ ಕೇಳಲು ಕುಳಿತ ವಿದ್ಯಾರ್ಥಿಗಳು ತೂಕಡಿಸುವಂತೆ ಮಾಡಿತ್ತು. ತೆರೆದ ಕಿಟಕಿಗಳು (ತೆರೆಯುವುದಿನ್ನೇನಿದೆ - ಗಾಜಿನ ಕಿಟಕಿಗಳಿಗೆ ಗಾಜೇ ಇಲ್ಲ), ಕಿಟಕಿಗಳಿಂದ ಒಳಚಿಮ್ಮುತ್ತಿದ್ದ ಸೂರ್ಯನ ಕಿರಣಗಳು, ಹಳೇಯ (ಆದರೆ ಗಟ್ಟಿಮುಟ್ಟಾದ) ಬೆಂಚುಗಳು, ದೂರದಲ್ಲಿ ಪೋಡಿಯಂ ಮೇಲೆ ತರಗತಿಯತ್ತ ಬೆನ್ನು ಮಾಡಿ ಬೋರ್ಡಿನ ಮೇಲೆ ,ಮಗ್ನವಾಗಿ, ಚಾಕ್ ಬಳಸಿ ಬರೆಯುತ್ತಿದ್ದ ಮೇಡಂ, ಇತ್ಯಾದಿ, ಇತ್ಯಾದಿ... ಇವೆಲ್ಲವನ್ನು ನೋಡುತ್ತ, ಪಾಠದೆಡೆ ಗಮನ ನೀಡದೆ ಅತೃಪ್ತನಂತೆ ಹೊರ ಹೋಗಲು ಕಾಯುತ್ತಿದ್ದೆ. ನನ್ನ ಜೊತೆ ಸೂರಿ; ಇಬ್ಬರೂ ಸೇರಿ ನಮ್ಮ ಡಿಪಾರ್ಟಮೆಂಟಿನ ಫೋರಂ ಕೆಲಸದ ನಿಮಿತ್ತ ಹೊರಹೋಗಬೇಕಿತ್ತು; ಆದರೆ ಹೋಗುವುದು ಹೇಗೆ? ೩.೩೦ ಗೆ ನಾವು ಹೋಗಬೇಕು - ತರಗತಿ ಶುರುವಾಗುತ್ತಿದ್ದಂತೆಯೆ ಮೇಡಂನ್ ಜೊತೆ ನಾವಿಬ್ಬರು ಇದರ ಕುರಿತು ಮಾತನಾಡಿದ್ದೆವು - ೩.೩೦ಗೆ ನಾವು ಹೊರ ಹೋಗುವುದಾಗಿ ತಿಳಿಸಿದ್ದೆವು; ಆದರೆ ಸಮಯ ಈಗ ೩.೪೦ ಆಗಿ ಹೋಗಿದೆ! ಮೇಡಂ ಇತ್ತ ತಿರುಗುತ್ತಿಲ್ಲವೇಕೆ? ನಮ್ಮನ್ನು ಹೋಗಲು ಹೇಳುತ್ತಿಲ್ಲ - ಏಕೆ? ತಲೆಯಲ್ಲಿ ಹಲವಾರು ಇಂತಹ ವಿಚಾರಗಳ ಸರಮಾಲೆಯೇ ಸುತ್ತುತಿವೆ.

ಅಷ್ಟರಲ್ಲಿ ಸೂರಿ ನನ್ನನ್ನು ಕುರಿತು ಸಣ್ಣ ದನಿಯಲ್ಲಿ ಪಿಸುಗುಟ್ಟುತ್ತಾನೆ,
"ವಿನಿ! ಅವಿನಾಶ್ ಸರ್ ಕರೆದಿದ್ರಲ್ಲ ಫೋರಂ ಕೆಲಸಕ್ಕೆ? ಹೋಗೋಣ? ಮೇಡಂನ್ ಕೇಳು!"
ನಾನು, "ಸರಿ - ಸ್ವಲ್ಪ ಕಾಯೋಣ" ಅಂದೆ. ಮನಸ್ಸಿನಲ್ಲಿ ಕಾಯುವ ಇಷ್ಟ ಕಿಂಚಿತ್ತೂ ಇಲ್ಲ - ಆದರೆ ಮೇಡಂ ಯಾಕೆ ತಿರ್ಗ್ತಿಲ್ಲಾ ಗೋಡೆ ಬಿಟ್ಟು?

ಅಟೆಂಡರ್ ಒಬ್ಬರು ಬಂದರು ತರಗತಿಯೊಳಗೆ. ಅವಿನಾಶ್ ಸರ್ ಕರೆ ಕಳುಹಿಸಿರಬೇಕು ಅಂತ ಅಂದುಕೊಂಡು ಖುಶಿಯಾಯಿತು. ಅವರು ಒಳಬಂದವರೇ ಸೀದಾ ಮೇಡಂನ ಡೆಸ್ಕಿಗೆ ಹೋಗಿ ಮೇಡಂಗೆ ಕರೆ ನೀಡಿದರು. ಮೇಡಂ, ಅಟೆಂಡರ್ ತಂದ ಕಾಗದದ ಮೇಲೆ ಸಹಿ ಹಾಕಿ ಕಳುಹಿಸಿಬಿಟ್ಟರು... ಅರೆ! ನಮ್ಮನ್ನು ಕರೆಯಲು ಯಾರೂ ಬರಲಿಲ್ಲವೆ? ಛೆ! ಸಮಯ ೪ ಘಂಟೆ!

ಇನ್ನು ತಡೆಯುವುದರಲ್ಲಿ ಅರ್ಥವಿರಲಿಲ್ಲ. ಅಷರಲ್ಲಿ ಸೂರಿ ಮತ್ತೊಮ್ಮೆ ಕೇಳಿದ,
"ವಿನಿ, ಇಗ ಕೇಳೋಣ?"
ನಾನು,"ಸರಿ, ಮೇಡಂನ ಕೇಳ್ತಿನಿ", ಅಂದೆ.

ಮೇಡಂ ಇನ್ನೂ ಬೋರ್ಡಿನತ್ತ ಮುಖ ಮಾಡಿ ಬರೆಯುತ್ತಲೇ ಇದ್ದಾರೆ. ನಾನು ನನ್ನ ಜಾಗದಿಂದ ಎದ್ದು ಮೇಡಂನತ್ತ ಸದ್ದು ಮಾಡದೆ ಧಾವಿಸತೊಡಗಿದೆ. ತಪ್ಪನ್ನೇನು ಮಾಡಿರದಿದ್ದರೂ, ತರಗತಿಯನ್ನು ತಪ್ಪಿಸಿ ಹೋಗಲು ಅನುಮತಿ ಕೇಳಲು ಹೊರಟಾಗ, ಮನಸ್ಸಿನಲ್ಲಿ ಒಂದು ತೆರನೇಯ ದುಗುಡ - ಆತಂಕ. ನಾನು ಇನ್ನೇನು ಪೋಡಿಯಂ ಹತ್ತಿರ ಬಂದೆ ಎನ್ನುವಷ್ಟರಲ್ಲಿ ಎಲ್ಲರ ಗಮನ ನನ್ನತ್ತ; ಆದರೆ ಮೇಡಂ ಮಾತ್ರ ತಿರುಗುವ ಮನಸ್ಸನ್ನು ಇನ್ನು ಮಾಡಿಲ್ಲ. ಎಂತಹ ವಿಪರ್ಯಾಸ! ಮೆಲ್ಲನೆ ಮೇಡಂನ ಕರೆದೆ. ಆದರೆ ಅವರಿಂದ ಉತ್ತರ ಬರಲಿಲ್ಲ. ಬೋರ್ಡಿನ ಮೇಲೆ ಚಾಕ್ ಕೆರೆಯುವ ಸದ್ದು ಹುಡುಗರ ಗುಜುಗುಜುವಿನೊಡನೆ ಬೆರೆತು ಹೊಮ್ಮುತ್ತಿದೆ. ಮೇಡಂ ಮಾತ್ರ - ಊಹುಂ - ಆಲಿಸುತ್ತಿಲ್ಲ. ಅವರ ಕೆಲಸದಲ್ಲಿ ಮುಳುಗಿ ಹೋಗಿದ್ದಾರೆ.

ಸದ್ದು ಮಾಡುವ ಇಷ್ಟ ನನಗಿರಲಿಲ್ಲ (ತಪ್ಪು ಮಾಡಲು ಮೂಲ ಕಾರಣ!). ಮೆಲ್ಲನೆ ಪೋಡಿಯಂ ಹತ್ತಿದೆ. ಮೇಡಂನ ಪಕ್ಕ ಬಂದು ನಿಂತೆ. ಕೈ ಚಾಚಿದರೆ ಮುಟ್ಟುವಷ್ಟು ದೂರ. ಮೇಡಂ ನನ್ನನ್ನು ಇನ್ನೂ ಗಮನಿಸಿಲ್ಲ... ಇದನ್ನು ನಾನೂ ಗಮನಿಸಿಲ್ಲ.

ಬಾಯಿ ತೆರೆದೆ, "ಮೇಡಂ...."

ತರಗತಿಯಲ್ಲೆಲ್ಲೆಡೆ ಮಂದ ಗುಜುಗುಜು ಮಿಶ್ರಿತ ನಗು ತೇಲುತಿದೆ...

ಮೇಡಂ ನಾನು ಕರೆದಾಕ್ಷಣ ಬೆಚ್ಚಿ ಬಿದ್ದು, ಹೆದರಿಕೆಯಿಂದ ಕೂಡಿದ ಕಣ್ಣುಗಳಿಂದ ನನ್ನನು ನೋಡಿ ಚಾಕ್ ಇಲ್ಲದ ಕೈಯನ್ನು ತಮ್ಮ ಎದೆಗವಚಿ ತಮ್ಮ ಜೀವನದಲ್ಲಾದ ಈ ವಿಚಿತ್ರ ಶಾಕ್ನ್ ನಿಂದ ಹೊರ ಬರಲು ಯತ್ನಿಸಿದರು. ಯಶಸ್ಸನ್ನು ಕಂಡರೆನ್ನಿಸುತ್ತದೆ. ಅಷ್ಟರಲ್ಲಿ ನಾನು, "ನಾನು ಹಾಗು ಸುರೇಶ್ ಅವಿನಾಶ್ ಸರ್ ಅನ್ನು ಫೋರಂ ವಿಶಯವಾಗಿ ಈಗ ಭೆಟ್ಟಿಯಾಗಬೇಕು - ನಾವು ತರಗತಿಯಿಂದಾಚೆ ಹೋಗಬಹುದೆ?", ಎಂದು ಉಸುರಿಯಾಗಿತ್ತು.

ಮೇಡಂ ಇನ್ನು ಶಾಕ್ ನಲ್ಲಿ, ತಮ್ಮ ಗೋಣನ್ನು "ನನಗೆ ಸಮ್ಮತಿ ಇದೆ" ಎನ್ನುವ ರೀತಿಯಲ್ಲಿ ಅಲುಗಾಡಿಸಿದ್ದೇ ತಡ, ಅವರಿಗೆ ಧನ್ಯವಾದಗಳನ್ನರ್ಪಿಸಿ, ನಾನು ಮಾಡಿದ ಅವಾಂತರ ನೆನೆದುಕೊಳ್ಳುತ್ತ, ಸೂರಿಯೊಡನೆ ಅಲ್ಲಿಂದ ಜಾಗ ಖಾಲಿ ಮಾಡಿದೆ. ನಮ್ಮೋಡನೆ ಕೊನೇಯ ಬೆಂಚಿನಲ್ಲಿ ಕುಳಿತಿದ್ದ ಸಹಪಾಠಿಗಳು ತಾವೂ ತರಗತಿಯಿಂದ ಹೊರ ಬರುವುದು ಹೇಗೆ ಎಂದು ಕೇಳಿದರಾದರೂ, ನಾನು ನನ್ನ ಈ ವರ್ತನೆಯಿಂದ ಪ್ರಭಾವಿತನಾಗಿದ್ದು, ನನ್ನ ತಲೆಯನ್ನು ಕೆರೆಯುತ್ತ "ಫೋರಂ ಕೆಲಸ" ಎಂದು ಹೇಳಿ ಅಲ್ಲಿಂದ ಹೊರಟೆ. ಪಾಪ, ಮೇಡಂ. :)

Monday, September 13, 2010

ದೃಢ ನಿರ್ಧಾರ

ಸುಮಾರು ೨ ದಶಕಗಳ ಹಿಂದಿನ ಮಾತು; ಒಂದನೇಯ ತರಗತಿಯಲ್ಲಿ ಪುಟ್ಟನೇಯ ಬೆಂಚುಗಳ ಮೇಲೆ ಕೂತು ಪಾಠ ಕೇಳಿದ ನೆನಪು. "ಈ ಕಿಟಕಿಗಳು ಎಷ್ಟು ದೊಡ್ಡದಾಗಿವೆ!", ಅಂತ ಆಗ ಮನದಲ್ಲಿಯೇ ಅಂದುಕೊಂಡದ್ದು ಈಗ ನೆನಪು ಬಂದಾಗ, ತರಗತಿಯಲ್ಲಿ ಶ್ರದ್ಧೆಯಿಂದ ವ್ಯಾಸಂಗ ಮಾಡುತ್ತಿದ್ದ ಆ ಸಹಪಾಠಿಯ ನೆನಪು ಸಹ ಬಂದಿತು. ದುಂಡನೇಯ ಮುಖ, ಲಕ್ಷಣವಾಗಿ ಬಾಚಿದ ತಲೆಗೂದಲು, ಎರಡು ಜುಟು, ನೀಟಾಗಿ ಆಯರ್ನ್ ಮಾಡಿದ ಸ್ಕರ್ಟು ಹಾಗು ಇಂಗ್ಲೀಷಿನಲ್ಲಿ ಮಾತನಾಡುವ ಸತತ ಪ್ರಯತ್ನ! ಪದಗಳು ಸರಿಯಾಗಿ ಬರುತ್ತಿರಲಿಲ್ಲ - ಆದರ ಅವಳು ಅಲ್ಲಿಗೇ ಬಿಡುವ ಪೈಕಿಯಲ್ಲ. ಪದಕ್ಕೆ ಪದವನ್ನು ಜೋಡಿಸು ಹರುಕು-ಮುರುಕು ಆದ್ರೂ ಸೈ, ಆಂಗ್ಲ ಪದಗಳ ಸರಮಾಲೆಯನ್ನು ಕಟ್ಟಿ ಮಾತನಾಡಲು ಯತ್ನಿಸುತ್ತಿದ್ದಳು. ಕಷ್ಟ ಪಟ್ಟು, ಪ್ರಯತ್ನ ಮಾಡಿ, ಎಡವಿ, ತಿದ್ದುಕೊಂಡು ಹೊಸ ಪದಗಳನ್ನು ಪ್ರಯೋಗಿಸುತ್ತಿದ್ದಳಾಕೆ. ಪ್ರಾಧ್ಯಾಪಕರು ಅವಳ ಪ್ರಯತ್ನವನ್ನು ಮೆಚ್ಚಿ ಕೈಲಾದಷ್ಟು ಸಹಾಯ ಮಾಡಿ ಪ್ರೋತ್ಸಾಹಿಸುತ್ತಿದ್ದರು. ನಾವು ಮಹಾ ಪಂಡಿತರಲ್ಲದಿದ್ದರೂ, ಅಪೇಕ್ಷೆಗೆ ತಕ್ಕಂತೆ, ಈ ಪ್ರಯತ್ನದಲ್ಲಿ ಹೊರಹೊಮ್ಮುವ ವಿವಿಧ ಪದಗಳಿಂದ ಉದ್ಭವಿಸುವ ನಗುವಿನ ಅಲೆಯನ್ನು ತಡೆದುಕೊಂಡು ಇರುತ್ತಿದ್ದೆವು. ಒಂದನೇಯ ತರಗತಿಯಲ್ಲಿ ಅನ್ಯರಂತೆ ನನಗಿದ್ದದ್ದು ಒಂದೇ ಪ್ರವೃತ್ತಿ - ಆಟ ಅಡುವುದು! ಆ ವಯಸ್ಸಿನ ಬಹಳಷ್ಟು ವಿಶಯಗಳು ನನಗೆ ನೆನಪಿಲ್ಲ - ಒಮ್ಮೆ ಕಾಲಚಕ್ರವನ್ನು ಹಿಂದಕ್ಕೆ ತಿರುಗಿಸಿ, ಗೆಳೆಯರನ್ನೊಮ್ಮೆ ನೋಡಿ ಆನಂದಿಸಬಹುದಾಗಿದ್ದರೆ ಎಷ್ಟು ಚೆನ್ನಾಗಿರ್ತಿತ್ತು :)

Monday, August 16, 2010

ಸವಿ ನುಡಿ

ಕಾಲೇಜಿನ ಮೊದಲ ದಿನ, ನಾನು ಕಾಲೇಜು ತಲುಪಿದಾಗ ಮೊದಲ ಪೀರಿಯಡ್ ಶುರುವಾಗಿತ್ತು. ಯಾವ ತರಗತಿ, ಎಲ್ಲಿ ಕೂಡ್ಬೇಕು, ಯಾವ ಸಬ್ಜೆಕ್ಟ್... ಇವೇನೂ ಗೊತ್ತಿರಲಿಲ್ಲ. ನನ್ನ ತಮ್ಮ ಹಾಗು ಮಿತ್ರರೊಡನೆ ಕಾಲೇಜಿನ ಕಾಂಪೌಂಡನ್ನು ದಾಟಿ ಒಳಗೆ ಬಂದಾಗ ಜನಜಾತ್ರೆಯನ್ನು ನೋಡಿ ಕೆಲಕಾಲ ಏನು ಮಾಡಬೇಕೆಂದು ತೋಚಲಿಲ್ಲ - ಬಹಳ ಜನರನ್ನು ಕಂಡರೆ ಮೊದಲೇ ನನಗಾಗುತ್ತಿರಲಿಲ್ಲ. ಒಂದೆಡೆ ಹುಡುಗರು ನೋಟಿಸ್-ಬೋರ್ಡನ್ನು ಮುತ್ತಿಗೆ ಹಾಕಿಕೊಂಡು ನಿಂತಿರುವುದನ್ನು ಕಂಡು ಅದರತ್ತ ನಾವೂ ಸಹ ಹೋಗಿ ನಿಂತೆವು - ಅಲ್ಲಿ, ಯಾವ ತರಗತಿಗಳಿಗೆ ಯಾವ ವಿದ್ಯಾಥಿಗಳು ಹೋಗಬೇಕೆಂಬ ವಿವರ ಬರೆಯಲಾಗಿತ್ತು. ನಮ್ಮದು ಫಿಸಿಕ್ಸ್ ಸೈಕಲ್ ಎಂದು ನಮಗೆ ಮೊದಲೇ ತಿಳಿದಿದ್ದರಿಂದಾಗಿ ನೇರವಾಗಿ ನಮ್ಮ ಹೆಸರುಗಳನ್ನು ಆ ಸೂಚಿಯಲ್ಲಿ ನೋಡತೊಡಗಿದೆವು. ನನ್ನ ತಮ್ಮನಿಗೆ ತನ್ನ ತರಗತಿಯಾವುದೆಂದು ತಿಳಿದು ಅವನು ಹೋಗಲು ಅಣಿಯಾದ. ನಾನು ನನ್ನ ತರಗತಿಯನ್ನು ಹುಡುಕಿಕೊಂದು ಅಲ್ಲಿ ಹೋಗುವುದಾಗಿ, ಅವನನ್ನು ಊಟದ ಸಮಯಕ್ಕೆ ಸಿಗುವುದಾಗಿ ಹೇಳಿ ಬೀಳ್ಕೊಟ್ಟೆ.

ಹುಡುಕುತ್ತ, ಹುಡುಕುತ್ತ ಕೊನೆಗೆ ನನ್ನ ಹೆಸರು ಕಂಡಾಗ ಕ್ಲಾಸ್ ಶುರುವಾಗಿ ಅರ್ಧ ಘಂಟೆ ಆಗಿ ಹೋಗಿತ್ತು. ನನ್ನೊಡನೆ ಸೂರಿ ಸಹ ಇದ್ದ - ಆಗಿನ್ನು ನಮ್ಮದು ಹೊಸ ಪರಿಚಯ - ಅವನೂ ಹರಿಹರದವನು ಅನ್ನುವುದೊಂದೇ ತಿಳಿದಿತ್ತು ನನಗೆ. ಗಡಿಬಿಡಿಯಲ್ಲಿ ಕ್ಲಾಸಿನತ್ತ ಧಾವಿಸತೊಡಗಿದೆವು. ಅಷ್ಟರಲ್ಲಿ ಹಿಂದಿನಿಂದ ಹುಡುಗಿಯೊಬ್ಬಳು ತನ್ನ ತಂದೆಯನ್ನು ಕುರಿತು ತಾನು ತರಗತಿಗೆ ಹೋಗುವುದಾಗಿಯು, ಚಿಂತಿಸಬಾರದೆಂದು ಹೇಳಿ ತಂದೆಯನ್ನು ಬೀಳ್ಕೊಟ್ಟು ನಮ್ಮ ತರಗತಿಯತ್ತ ಬರುವುದನ್ನು ಆಲಿಸಿದೆ - ನನ್ನ ಮನೆ ಹಾಗು ಸಂಭಂದಿಕರ ಹೊರತಾಗಿ ನನಗೆ ಅರ್ಥವಾಗುವ ರೀತಿಯಲ್ಲಿ ಕೊಂಕಣಿಯಲ್ಲಿ ಮಾತನಾಡಿದ್ದನ್ನು ನಾನು ಕೇಳಿದ್ದು ಅದು ಮೊದಲನೇಯ ಬಾರಿಯಾಗಿತ್ತು. ಒಂದು ಬಗೆಯ ಸಂತಸವಾಯಿತು - ಏಕೆಂದು ಗೊತ್ತಿಲ್ಲವಾದರು, ನೂರಾರು ಅಪರಚಿತರಲ್ಲಿ ಒಂದು ಪರಿಚಿತ ಸವಿ ನುಡಿಯನ್ನು ಕೇಳಿ ಈ ಅಪರಿಚಿತೆಯನ್ನು ಒಮ್ಮೆ ನನ್ನ ಮಾತೃಭಾಷೆಯಲ್ಲಿ ಮಾತನಾಡಿಸಬೇಕೆಂದುಕೊಂಡೆ ಆದರೆ ತಿರುಗಿ ಯಾರವಳಾಕೆ ಎಂದು ನೋಡಲು ಮನಸ್ಸಾಗಲಿಲ್ಲ.

ಇತ್ತ ಫಿಸಿಕ್ಸ್ ಮೇಷ್ಟ್ರು ಬುಲೆಟ್ ಟ್ರೇನಿನ ವೇಗದಲ್ಲಿ ಪಾಠವನ್ನು ಮಾಡುತ್ತಿದ್ದರು - ನಾವು ಅವರ ಕ್ಲಾಸನ್ನು ಹೊಕ್ಕು ಹಿಂದಿನ ಬೆಂಚಿನಲ್ಲಿ ಸಿಕ್ಕ ಜಾಗದಲ್ಲಿ ತುರುಕಿ ಕುಳಿತುಕೊಂಡೆವು. ಅಂದು ಪಾಠ ತಲೆಗೆ ಹತ್ತುವುದು ಅಷ್ಟರಲ್ಲಿಯೇಇತ್ತು - ನನ್ನ ಧ್ಯಾನ ಡೋರಿನತ್ತಕ್ಕೆ ಮಿಸ್ಕಾಡದ ಹಾಗೆ ಭದ್ರವಾಗಿ ನಾಟಿತ್ತು. ನನಗರಿವಾಗದಂತೆಯೇ ಓಳ ಬರುತ್ತಿದ್ದ ಪ್ರತಿಯೊಬ್ಬರನ್ನೂ ಕಣ್ಣಿನಿಂದಲೇ ಅಳೆಯಲಾರಂಭಿಸಿದ್ದೆ. ಅಂದಿನ ದಿನ ಈನ್ನೂ ಹಲವಾರು ಘಟನೆಗಳು ನಡೆದುವು - ಸೂರಿ ರುದ್ರಪ್ಪ ಸರ್ ಕೈಲಿ ಬೈಸಿಕೊಂಡ; ಕೆಲವು ತರಗತಿಗಳು ನಡೆದುವು ಆದರೆ ಅವುಗಳಲ್ಲೇನು ವಿಷೇಶವಾದುದ್ದೇನು ನಡೆಯಲಿಲ್ಲ ಅಂದರೆ ತಪ್ಪೇನಾಗದು.

ಆ ಹುಡುಗಿಯನ್ನು ಗುರುತಿಸಿದ್ದೇನೋ ಸರಿ ಆದರೆ ಅವಳನ್ನು ಮಾತನಾಡಿಸಿದ್ದು, ಇಡೀ ದಿಗ್ರೀ ಸಮಯದಲ್ಲಿ, ಕೇವಲ ೨-೩ ಬಾರಿ ಇರಬೇಕು. ಅದು ಇಂಗ್ಲೀಷಲ್ಲಿ. ನನ್ನ ತರಗತಿಯಲ್ಲಿ ನನ್ನೊಡನೆ ಓದುತ್ತಿದ್ದ ಪ್ರತಿ ಮುಖವನ್ನು ಗುರುತಿಸಲು ನನಗೆ ಏನಿಲ್ಲವೆಂದರೂ ಸುಮಾರು ಒಂದು ಸೆಮಿಸ್ಟರ್ ಬೇಕಾಯಿತು. ಇನ್ನು ಅವರ ಹೆಸರುಗಳು ತಿಳಿದು ಮಿತ್ರರು ಆಗುವಷರಲ್ಲಿ ಒಂದು ವರ್ಷವೇ ಆಗಿ ಹೋಗಿತ್ತು.

ಎರಡನೇಯ ವರ್ಷಕ್ಕೆ ಕಾಲಿಡುತ್ತಿದ್ದಂತೆಯೆ ನಮ್ಮ ತರಗತಿಗಳು ಬದಲಾದುವು. ಹೊಸ ಮಿತ್ರರು, ನಮ್ಮದೇ ಆದ ವಿಭಾಗ, ಎಲ್ಲ ಚೆನ್ನಾಗಿತ್ತು. ಜೀವನದ ಹಲವಾರು ಮರೆಯಲಾಗದ ನೆನಪುಗಳನ್ನು ಇಲ್ಲಿ ಪಡೆದೆ. ನಮ್ಮ ಲೋಕವೇ ಬೇರೆಯಾಗಿತ್ತು; ಬೆಳಗಾದರೆ ಓಡಿ ಪ್ರಾಣಭಯವಿಲ್ಲದೆ ಮುರುಕಲು ಉಕ್ಕಡಗಾತ್ರಿ-ದಾವಣಗೆರೆ ಬಸ್ಸಿನಲ್ಲಿ ಜೋತು ಬಿದ್ದು ಕಾಲೇಜು ಸೇರುವುದೆಂದರೆ ಒಂದು ತೆರನೇಯ ಮೋಜು - ಸಂತಸ. ಓದು, ಆಟ, ಮಿತ್ರರೊಡನೆ ತಿರುಗಾಟ - ಬೆಳಗಿನ ಜಾವ ಎದ್ದೇಳಲು ಕೇವಲ ಅಮ್ಮನ ಒಂದು ಸ್ಪರ್ಶವೇ ಸಾಕಾಗಿತ್ತು! ಉಪನ್ಯಾಸಕರ ಸಹಕಾರ ಹಾಗು ತಾಳ್ಮೆ ನಮ್ಮಲ್ಲಿನ ಆತ್ಮವಿಶ್ವಾಸವನ್ನು ಮುಗಿಲಿಗೇರಿಸಿತ್ತು. ನೋಡುನೋಡುತ್ತ ಸಮಯ ಕಳೆದದ್ದೇ ಗೊತ್ತಾಗಲಿಲ್ಲ - ಕಾಲೇಜು ಮುಗಿಯಲು ಕೆಲವೇ ದಿನಗಳು ಇದ್ದುವು.

ಹೀಗೊಂದು ದಿನ, ರವಿವಾರವಿರಬೇಕು, ದಾವಣಗೆರೆಗೆ ರೈಲ್ವೇ ಸ್ಟೇಶನ್ ಗೆ ಟಿಕೇಟೊಂದನ್ನು ಕೊಂಡುಕೊಳ್ಳಲು ನಾನು ಬಂದಿದ್ದೆ. ರಷ್ ಇದ್ದುದ್ದರಿಂದ ಕೆಲ ಕಾಲ ಕೂತುಕೊಂಡೆ - ಟಿಕೇಟನ್ನು ಪಡೆದೆ. ಆಷ್ಟರಲ್ಲಿ ನನ್ನ ಸಹಪಾಠಿಯೊಬ್ಬನು ಬೆಂಗಳೂರಿಗೆ ಹೋಗಲು ಟಿಕೇಟು ಕೊಂಡುಕೊಳ್ಳಲು ಬಂದಿದ್ದ; ಅವನೊಡನೆ ನಾನು ಕಾಲೇಜಿನ ಮೊದಲ ದಿನ ಮಾತನಾಡಲು ಬಯಸಿದ ಆ ಹುಡುಗಿಯೂ ಇದ್ದಳು. ಇಬ್ಬರನ್ನು ಮುಗುಳ್ನಕ್ಕು ಗುರುತಿಸಿದೆ. ಹಿಂದೆಂದೂ ಕೊಂಕಣಿಯಲ್ಲಿ ಅನ್ಯರನ್ನು ಮಾತನಾಡಿಸಿರಲಿಲ್ಲ - ಮಾತನಾಡಿಸುವ ಪ್ರಮಯವೂ ಬಂದಿರಲಿಲ್ಲ - ಬಂದಿದ್ದರೂ ನಾನು ಕನ್ನಡದಲ್ಲಿ ಅಥವ ಇಂಗ್ಲೀಷಿನಲ್ಲಿ ಮಾತನಾಡಿಸಿ ಮುಗಿಸಿದ್ದೆ. ಮೊದಲ ಬಾರಿ ನನ್ನ ಭಾಷೆಯನ್ನು ನನ್ನವರಲ್ಲದವರೊಡನೆ ಮಾತನಾಡಿದೆ. "ನೀನು ಎಲ್ಲಿಗೆ ಹೋಗ್ತಿದ್ದೀಯ?", ಅನ್ನೋ ಅರ್ಥದಲ್ಲಿ ಅವಳನ್ನು ಕುರಿತು ಒಂದು ಪ್ರಶ್ನೆಯನ್ನು ಕೇಳಿದೆ; ಮಾತಿನ ವಿಷಯದಲ್ಲಿ, ಮೊದಲ ಬಾರಿ, ಕೂಪಮಂಡೂಕನಾಗದಿರಲು ಮನಸ್ಸು ಮಾಡಿದ್ದೆ.

ಒಂದು ಕ್ಷಣ ಅವಳ ಮುಖದಲ್ಲಿ ದೊಡ್ಡ ಪ್ರಷ್ನಾಚಿನ್ಹೆಯನ್ನು ಕಂಡೆ - "ಇವನಿಗೆ ನನ್ನ ಭಾಷೆ ಹೇಗೆ ಗೊತ್ತು?", ಅನ್ನುವ ಭಾವದಲ್ಲಿ ಆ ಕಣ್ಣುಗಳು ನನ್ನನ್ನು ನೋಡಿದುವು. ಇದು ನಡೆದದ್ದು ಕ್ಷಣಾರ್ಧದಲ್ಲಿ. ನಾನು ಒಂದು ಶಾಕ್ ಕೊಟ್ಟ ಹಾಗೆ ಆಗಿದ್ದರಿಂದ ಆವಳು, ಸ್ವಲ್ಪ ಸುಧಾರಿಸಿಕೊಂಡು, "ಒಹ್! ನಿನಗೆ ಕೊಂಕಣಿ ಬರುತ್ತದೆಯಾ? ನಾವು ಬೆಂಗಳೂರಿಗೆ ಹೋಗುತ್ತಿದ್ದೇವೆ - ಕಂಪನಿಯವರು ಮೆಡಿಕಲ್ ಚೆಕಪ್ ಗೆ ಕರೆದಿದ್ದಾರೆ", ಎಂದು ಕೊಂಕಣಿಯಲ್ಲಿ ಉತ್ತರಿಸಿದಳು. ಆಷ್ಟರಲ್ಲಿ ಅವರಿಬ್ಬರು ಟಿಕೇಟನ್ನು ಕೋಂಡುಕೊಳುವ ಸರದಿ ಬಂದಿತ್ತು. ನಾನು ಅವರಿಬ್ಬರನ್ನು ಬೀಳ್ಕೊಟ್ಟು ಹರಿಹರದ ಬಸ್ಸನ್ನು ಹತ್ತಿದೆ. ನಾನು ಹಾಗೆ ಮಾತನಾಡಿ ಬಂದಿದ್ದೆ ಎಂಬುದು ನನಗೆ ಬಹಳ ಸಂತಸವನ್ನು ನೀಡಿತ್ತು; ಹುಡುಗಿಯನ್ನು ಮಾತನಾಡಿ ಬಂದೆನೆಂಬುದಕ್ಕಲ್ಲ - ಮುಕ್ತವಾಗಿ, ಬರುವ ಭಾಷೆಯಲ್ಲಿ ಭಯವಿಲ್ಲದೆ ಮಾತನಾಡಿ ಒಬ್ಬ ಮಿತ್ರನನ್ನು ಮಾಡಿಕೊಂಡೆನೆಂಬ ಕಾರಣದಿಂದಾಗಿ. ಮನೆ ತಲುಪುವ ತನಕ, ದಾರಿಯುದ್ದಕ್ಕೂ "ನಾನು ಮೊದಲಿನಿಂದ ಎಲ್ಲರೊಡನೆ ಇನ್ನೂ ಚೆನ್ನಾಗಿ ಬೆರೆತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು!" ಅಂತ ಹಗಲುಗನಸನ್ನು ಕಂಡದ್ದಾಯಿತು. ಆ ಅಧ್ಯಾಯ ಅಲ್ಲಿಗೇ ಮುಗಿಯಿತು; ಇದು ನಡೆದು ೩ ವರ್ಷಗಳಿಗೂ ಹೆಚ್ಚು ಸಮಯ ಕಳೆದು ಹೋಗಿದೆ.

ಈಗ, ಮಧ್ಯರಾತ್ರಿ ಕೂತು ಕೀಲಿಮಣೆಯನ್ನು ಕುಟಿಯುತ್ತಿರುವಾಗ, ನಾನು ಹಾಗೆ ಮಾಡಿದ್ದು ನನಗೆ ಎಷ್ಟು ಒಳ್ಳೆಯದನ್ನು ಮಾಡಿದೆ ಎಂದು ನೆನೆಯುತ್ತಿದ್ದೇನೆ. ಸಹೋದ್ಯೋಗಿಯೊಬ್ಬನು, "ನೀನು ಚೆನ್ನಾಗಿ ಹಿಂದಿಯಲ್ಲಿ ಮಾತನಾಡುತ್ತೀಯ! ಅನ್ನಿಸುವುದೇ ಇಲ್ಲ ನೀನು ದಕ್ಷಿಣ ಭಾರತದವ", ಎಂದಾಗ ನನಗೆ ಖುಶಿಯಾಗುವುದೇಕೆಂದರೆ ಸಮಯ ಬಂದಾಗ ಬರುವ ಭಾಷೆಯಲ್ಲಿ, ತಿಳಿದ ರೀತಿಯಲ್ಲಿ ನನ್ನ ವಿಚಾರಗಳನ್ನು ಅನ್ಯರೊಡನೆ ಹಂಚಿಕೊಳ್ಳುವ ಮನೋವೃತ್ತಿಯನ್ನು ನಾನು ಬೆಳೇಸಿಕೊಂಡಿದ್ದೇನೆ ಎಂದು. ಕನ್ನಡದಲ್ಲಿ ಮಾತನಾಡುವ ಸಂತಸ ಮನೆಯಲ್ಲಿ ಮಿತ್ರರೊಡನೆ ಮಾತನಾಡಿ ಪಡೆದರೆ, ಆಫೀಸಿನಲ್ಲಿ ಕನ್ನಡವನ್ನು ಸೇರಿಸಿ, ಅನ್ಯ ಭಾಷೆಗಳಲ್ಲಿ ಮಾತನಾಡಿ ಅದರ ಸ್ವಾರಸ್ಯವನ್ನು ಸವಿಯುತ್ತೇನೆ :)

Wednesday, May 26, 2010

ನಮ್ಮೂರ ನೆನಪುಗಳು - ೨

ಕೆ.ಬಿ. ಮೆಸ್

ನಾನು ಬಿ.ಈ. ಓದುತ್ತಿದ್ದಾಗ ಮೊದಲ ಕೆಲವು ತಿಂಗಳು ಮನೆಯಿಂದ ಊಟದ ಡಬ್ಬಿಯನ್ನು ಒಯ್ಯುತ್ತಿದ್ದೆ; ಆದರೆ ಬಿಸಿ-ಬಿಸಿ ಊಟ ಮಾಡಲು ಆಗುತ್ತಿರಲಿಲ್ಲ, ಮನೆಯಿಂದ ಡಬ್ಬವನ್ನು ಎತ್ತಿಕೊಂಡು ಹೋಗಬೇಕಾಗುತ್ತಿತ್ತು. ಕರಿಬಸವೇಶ್ವರ (ಕೆ.ಬಿ.) ಮೆಸ್ ಸೇರಿಕೊಂಡೆ. ಕೆ.ಬಿ. ಮೆಸ್ ನಮ್ಮ ಕಾಲೇಜಿನಿಂದ ಕೆಲವೇ ನೂರು ಮೀಟರ್ ದೂರದಲ್ಲಿತ್ತು. ಮಧ್ಯಾಹ್ನದ ಹೊತ್ತು ನಾನು, ಸೂರಿ ಹಾಗು ಹಲವರು ನಮ್ಮ ತರಗತಿಯವರು ಕೂಡಿ ಮೆಸ್ ಗೆ ಹೋಗೋದು ವಾಡಿಕೆಯಾಗಿತ್ತು. ಊಟದ ಸಮಯವೆಂದರೆ ಹೆಚ್ಚುಕಡಿಮೆ ಪೂರ್ತಿ ಕಾಲೇಜೇ ರೋಡಿನ ಮೇಲೆ ಇರ್ತಿತ್ತು; ಹಲವಾರು ಮಿತ್ರರು ಸಿಗುತ್ತಿದ್ದರು ಹಾಗು ಮಿತ್ರೇತರರು ಕಣ್ಣಿಗೆ ಬೀಳುತ್ತಿದ್ದರು. ದಾವಣಗೆರೆಯ ಮಧ್ಯಾಹ್ನದ ಬಿಸಿಲು ಸ್ವಲ್ಪ ತೀಕ್ಷ್ಣವಾಗೇ ಇರುತ್ತಿತ್ತು; ಆದರೆ ಹೊಟ್ಟೆಯ ಹಸಿವು ಇದನ್ನು ಮೀರಿಸುತ್ತಿತ್ತು!

ಕೆ.ಬಿ. ಮೆಸ್ಸಿನ ಊಟ ಬಹಳ ವಿಶೇಷವಾದುದ್ದೇನಲ್ಲ - ಎರಡು ತೆಳ್ಳನೇಯ ಹಾಗು ಸಣ್ಣ (ಹಪ್ಪಳಕ್ಕೆ ಪೈಪೋಟಿ ನೀಡುವಂತಹ) ಮೈದಾ ಚಪಾತಿಗಳು, ಎರಡು ಪಲ್ಯಗಳು (ಸಾಮಾನ್ಯವಾಗಿ ಒಂದು ಕಾಳಿನ ಪಲ್ಯ ಇದ್ದೇ ಇರುತ್ತಿತ್ತು), ಕರಿಂಡಿ / ಬದನೇಕಾಯಿ ಚಟ್ನಿ, ೫೦ ಮಿ.ಲೀ. ಗೂ ಕಡಿಮೆ ಹುಳಿ ಮೊಸರು, ಸೋಡಾಯುಕ್ತ ಅನ್ನ, ಕುದಿಯುವ ಸಾರು (ಮೂಲಂಗಿ ನಮ್ಮಲ್ಲಿ ಹೇರಳ ಹಾಗು ಸೋವಿ - ಇನ್ನು ಯಾವ ಸಾರು ಅಂತ ನಿಮಗೆ ಬಾಯಿ ಬಿಟ್ಟು ಹೇಳೋದು ಬೇಡ ಅಂದ್ಕೊಂಡಿದ್ದೀನಿ), ಉಪ್ಪಿನಕಾಯಿ, ಉಪ್ಪು - ಅಷ್ಟೆ! ಅದೆಷ್ಟೋ ಬಾರಿ ಪಲ್ಯದಲ್ಲಿ ಕಲ್ಲನ್ನು ಕಡೆದಿದ್ದೇನೆ - ಒಂದು ಹಲ್ಲು ಈ ಮೆಸ್ಸಿನಲ್ಲಿಯೇ ಕೆಡಿಸಿಕೊಂಡೆ ಎಂದರೆ ತಪ್ಪೇನಾಗದು. ಎರಡನೇಯ ಬಾರಿ ಪಲ್ಯ ನೀಡಲು ಹಿಂದೆ-ಮುಂದೆ ಮಾಡುತ್ತಿದ್ದರು ಮೆಸ್ಸಿನ ತಾತಾ. ಕೆಲವೊಮ್ಮೆ ಮೊಸರು ಅತಿ ಹುಳಿಯಾಗಿ ಬಿಟ್ಟು ಬಂದದ್ದೂ ಇದೆ. ತಾತಾ ಒಂದು ನೋಟು ಪುಸ್ತಕದಲ್ಲಿ ನಮ್ಮ ಲೆಕ್ಕವನ್ನು ಬರೆದಿಡುತ್ತಿದ್ದರು. ಮೊದಮೊದಲು ನನ್ನ ತಮ್ಮನ ಹಾಗು ನನ್ನ ಲೆಕ್ಕವನ್ನು ಏರುಪೇರು ಮಾಡಿದರಾದರು, ಕ್ರಮೇಣ ಅದನ್ನು ಸರಿ ಪಡೆಸಿದರು.

ಊಟ ತಿನ್ನಲು ಅಡ್ಡಿಯಿರಲಿಲ್ಲ - ಹೊಟ್ಟೆಗೆ ಇದನ್ನರಗಿಸಲು ಕಷ್ಟಪಡಬೇಕಾಗುತ್ತಿರಲಿಲ್ಲ; ಹಾಗಾಗಿ ಮೆಸ್ ನ ತಾತ/ಮಗನ ಜೋಡಿ ಸಹ ಖುಶ್, ನಾವು ಖುಶ್! ಪ್ರತಿ ಊಟದ ಬೆಲೆ ೧೧-೧೩ ಇತ್ತು; ತಿಂಗಳಿನ ಮೊತ್ತವನ್ನು ತಿಂಗಳು ಶುರುವಾಗುತ್ತಿದ್ದಂತೆ ಕೊಡಬೇಕಿತ್ತು. ಅಂದರೆ ತಿಂಗಳಿಗೆ (ಸಾಮಾನ್ಯವಾಗಿ ೨೧ ದಿನಗಳು) ೨೫೦ ಕ್ಕು ಹೆಚ್ಚು ಖರ್ಚು ಆಗುತ್ತಿರಲಿಲ್ಲ. ಪ್ರತಿಯೊಂದು ರೂಪಾಯಿಗು ಬೆಲೆ ಇತ್ತು - ನೆನಸಿಕೊಂಡರ ಖುಶಿಯಾಗೊತ್ತೆ. ಇಂದು ಒಂದು ಒಳ್ಳೆಯ ಬುಫೆಗೆ ಹೋದರೆ ಕನಿಷ್ಟ ೨೫೦+ತೆರಿಗಗಳು ಖಂಡಿತ; ಊಟದಲ್ಲಿ ನಿಮಗೇನು ಬೇಕು, ಎಷ್ಟು ಬೇಕು ಅಷ್ಟನ್ನು ಸ್ವಾಹ ಅನ್ನಬಹುದು; ಕಲ್ಲು ಹುಡುಕಿದರೂ ಸಿಗದು. ಆದರೆ, ಕೆ.ಬಿ. ಮೆಸ್ಸಿನಲ್ಲಿದ್ದ ಮಜ ಇಲ್ಲೆಲ್ಲಿ?