Sunday, May 11, 2008

ತಾರಾಯಣ - ೧

ಇದು ನಡೆದದ್ದು ನನ್ನ ಹೈಸ್ಕೂಲು ದಿನಗಳಲ್ಲಿ. ಎಂಟನೇಯ ತರಗತಿಯಲ್ಲಿದ್ದಿದ್ದಿರಬೇಕು ನಾನು. ತರಗತಿಯಲ್ಲಿ ಕುಳಿತು ಓದುವುದನ್ನು ಬಿಟ್ಟರೆ ಆಟಾ ಆಡೋದರ ಬಗ್ಗೆ ಹಗಲುಗನಸನ್ನು ಕಾಣೋದು ನನ್ನ ಇಷ್ಟವಾದ ಕೆಲಸಗಳಲ್ಲಿ ಒಂದಾಗಿತ್ತು. ಇಂತಹ ಒಂದು ದಿನ ಬೆಳಗಿನ ಜಾವ ನಮ್ಮ ಕ್ಲಾಸ್ ಟೀಚರ್ ತರಗತಿಗೆ ಬಂದವರೇ ಇಸ್ರೋ ಸಂಸ್ಥೆಯಿಂದ ಒಬ್ಬ ವಿಜ್ನಾನಿ ಬಂದಿರುವುದಾಗಿಯು, ತಾರಾಮಂಡಲವನ್ನು ಕುರಿತು ನಮಗೆ ಮಾಹಿತಿಯನ್ನು ನೀಡುವುದಾಗಿತು ಹೇಳಿದರು. ಆವರ ಹಿಂದೆ ನಿಂತಿದ್ದ ವಿಜ್ನಾನಿ ಮುಂದೆ ಬಂದು ನಮ್ಮನ್ನು ಕುರಿತು ಮಾತನಾಡಹತ್ತಿದರು. ತಮ್ಮೊಡನೆ ಅವರು ಬಹಳಷ್ಟು ಚಿತ್ರಪಟಗಳನ್ನು ಹಾಗು ಇಸ್ರೋದ ಬಗ್ಗೆ ಲೇಖನಗಳನ್ನು ತಂದಿದ್ದು, ಅದನ್ನು ನಮಗೆಲ್ಲ ವಿಸ್ತಾರವಾಗಿ ವಿವರಿಸಿದರು. ಅವರ ಭಾಶೆ ಸಾಮನ್ಯ ಹಾಗು ಉತ್ಸಾಹಪೂರ್ಣವಾಗಿದ್ದರಿಂದಾಗಿ ಅರ್ಥವಾಗೋದು ಕಷ್ಟವಾಗಿರಲಿಲ್ಲ; ಹುಡುಗರೆಲ್ಲ ಆಸಕ್ತಿಯಿಂದ ಕೇಳಿದರು. ಇಸ್ರೋವಿನ ವಿಜ್ನಾನಿ ಅಂತ ನಂಬೋದು ನನಗೇಕೊ ಸ್ವಲ್ಪ ಕಷ್ಟವಾಗುತ್ತಿತ್ತು - ಜೀನ್ಸ್ ಪ್ಯಾಂಟು, ಟೀ ಶರ್ಟು ಹಾಗು ಬಾಯಲ್ಲಿ ಏನೋ ಅಗೆಯುತ್ತಿರುವುದನ್ನು ಗಮನಿಸಿ ನನ್ನ ಮನಸ್ಸಿನಲ್ಲಿದ್ದ ವಿಜ್ನಾನಿಯ ಚಿತ್ರಕ್ಕೆ ಈ ಮಹಾಶಯನನ್ನು ಹೋಲಿಸಿ, ವಿರೋಧಾಭಾಸವಾಗಿ ಸ್ವಲ್ಪ ಸಮಯ ಸುಮ್ಮನೆ ಕುಳಿತು ಬಿಟ್ಟಿದ್ದೆ.

ಅಷ್ಟರಲ್ಲಿ ವಿಜ್ನಾನಿಗಳು ತಮ್ಮ ಮಾತುಗಳನ್ನು ಮುಗಿಸಿ ಆಗಿತ್ತು. ಅವರು ನಮ್ಮ ಮೇಷ್ಟ್ರೊಡನೆ ಏನೋ ಮಾತನಾಡಿ ಅಲ್ಲಿಂದ ಹೊರಟು ಹೋದರು. ಮೇಷ್ಟ್ರು ತರಗತಿಗೆ ಹಿಂತಿರುಗಿ, ವಿಜ್ನಾನಿಗಳು ನಮಗೆಲ್ಲ ಟೆಲಿಸ್ಕೋಪ್ ಮಾಡುವುದನ್ನು ತೋರಿಸಿಕೊದುವುದಾಗಿಯು, ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಕೋಡಬೇಕಾಗಿಯು ಹೇಳಿದರು. ಟೆಲಿಸ್ಕೋಪ್ ತಯಾರಿಸಲು ಬೇಕಾದ ಸಾಮಗ್ರಿಗಳ ಪಟ್ಟಿಯನ್ನು ನಮಗೆ ಹೇಳಲಾಯಿತು. ಎರಡು-ಮೂರು ಮಂದಿ ಕೂಡಿ ಸಹ ಒಂದು ಟೆಲಿಸ್ಕೋಪ್ ಮಾಡಬಹುದು ಎಂದು ಹೇಳಿದರು. ಇಂತಹುದರಲ್ಲೆಲ್ಲ ನನಗೆ ಆಸಕ್ತಿ ಕಡಿಮೆ ಇದ್ದುದ್ದರಿಂದ ಸುಮ್ಮನಿದ್ದೆ. ಆದರೆ ನನ್ನ ಪಕ್ಕಕ್ಕೆ ಕುಳಿತಿದ್ದ ನನ್ನ ಮಿತ್ರನೋಬ್ಬ ( ದೀಪಕ್ ಅಲಿಯಾಸ್ ದೀಪು ) ನಾವು ಕೂಡಿ ಮಾಡೋಣವೆಂದು ಕುಳಿತುಬಿಟ್ಟ! ಸರಿ, ಇನ್ನೇನು ಎಂದು ಒಪ್ಪಿಕೊಂಡೆ.

ನಾವೆಲ್ಲ ಸೇರಿ ಸಾಮಗ್ರಿಗಳ ಪಟ್ಟಿಯನ್ನು ಗಮನಿಸಿ ನೋಡಿದಾಗ ಅದರಲ್ಲಿ ಕೇವಲ ಒಂದು ಕನ್ನಡಿ ಹಾಗು ಒಂದು ಲೆನ್ಸ್ ಇದ್ದುದ್ದನ್ನು ಕಂಡು ಅಚ್ಚರಿಯಾಯಿತು - ಯಾಕೋ ಇದು ಸರಿ ಅಲ್ಲ ಅನ್ನಿಸಿತಾದರು ನಮ್ಮ ಮೇಷ್ಟ್ರೇ ಇದಕ್ಕೆ ಚಕಾರವೆತ್ತಿಲ್ಲವಾದ್ದರಿಂದ ನಾವು ಸುಮ್ಮನಾದೆವು. ಎಲ್ಲ ಸಾಮಗ್ರಿಗಳು ಕೊಂಡದ್ದಯಿತು; ಮುಂದಿನ ರವಿವಾರ ಅದನ್ನೆಲ್ಲ ಎತ್ತಿಕೊಂಡು ನಮ್ಮ ಶಾಲೆಯನ್ನು ನಡೆಸುವ ಸಂಸ್ಥೆಯ ಇನ್ನೊಂದು ಶಾಲೆಗೆ ಹೋದೆವು. ಅಲ್ಲಿ ನಮ್ಮಂತೆ ಬಹಳಷ್ಟು ಹುಡುಗರು ಆಗಲೆ ಬಂದು ನಿಂತಿದ್ದರು. ನಮ್ಮ ಮೇಷ್ಟ್ರು ಕಾಣಾದಿದ್ದ ಕಾರಣ ನಾನು ಅಲ್ಲಿಯ ಶಿಕ್ಷಕರ ಕೊಠಡಿಗೆ ಹೋಗಿ ಅಲ್ಲಿ ವಿಚಾರಿಸುತ್ತಿರುವಾಗ ನನ್ನ ಕಣ್ಣಿಗೆ ಆ ವಿಜ್ನಾನಿಗಳು ಬಿದ್ದರು; ಬಾಯಲ್ಲಿ ಪಾನ್/ಗುಟುಖ ಹಾಕಿ ಜಗೆಯುತ್ತ ಕಿವಿಗೆ ವಾಕ್ ಮ್ಯಾನ್ ಹಾಕಿಕೊಂದಿದ್ದರು; ಕಣ್ಣು ಮುಚ್ಚಿ ಸಂಗೀತ ಕೇಳುವುದರಲ್ಲಿ ಮಗ್ನರಾಗಿದ್ದರು. ಸಿಗರೇಟು ಊದಿ ತೆಗ್ಗು ಬಿದ್ದ ಗಲ್ಲ; ಹರಿದ ಜೀನ್ಸ್ ಪ್ಯಾಂಟು ನೋಡಿ ನನಗೆ ಇವನು ಮೋಸಗಾರನಾಗಿರಬಾರದೇಕೆ ಎಂಬ ಬಲವಾದ ಶಂಕೆ ಮನಸ್ಸಿನ್ನಲ್ಲಿ ಮೂಡಿತಾದರು ಅದನ್ನು ನಿಜವೆಂದು ಸಾಧಿಸಲು ಯಾವ ಸಾಧನವೂ ಇರಲಿಲ್ಲ. ಅಷ್ಟರಲ್ಲಿ ನಮ್ಮ ಮೇಷ್ಟ್ರು ನನ್ನ ಕಣ್ಣೀಗೆ ಬಿದ್ದಿದ್ದರಿಂದಾಗಿ ಅವರಿಗ ಮಾತನಾಡಿಸಲು ಹೋದೆ.

ಟೆಲಿಸ್ಕೋಪ್ ನಿರ್ಮಾಣ ಶುರುವಾಯಿತು; ಶಾಲೆಯ ತುಂಬ ಮಕ್ಕಳು ಪೈಪಿನ ತುಂಡುಗಳು ಹಾಗು ಫೆವಿಕಾಲಿನ ಬಾಟ್ಲಿಗಳನ್ನ ಹಿಡಿದು ಕುಳಿತಿದ್ದರು. ಎಲ್ಲ ಮುಗಿಯಿತು ಎನ್ನುವಷ್ಟರಲ್ಲಿ ಲೆನ್ಸುಗಳ ನೆನಪಾಯಿತು - ಅದಿಲ್ಲದೆ ಈ ಸಾಧನ ಅಪೂರ್ಣ. ಶಿಕ್ಷಕರು ಹಾಗು ವಿಜ್ನಾನಿಯಲ್ಲಿ ಏನು ಮಾತಾಯಿತೊ ಗೊತ್ತಿಲ್ಲ; ನಾವೆಲ್ಲ ಲೆನ್ಸಿಗೆಂದು ನಲವತ್ತು ರೂಪಾಯಿ ಕೊಡಬೇಕೆಂದು ಸುದ್ದಿ ಬಂದಿತು. ಮಿತ್ರನೊಬ್ಬನಿಗೆ ಇನ್ನು ಒಳ್ಳೆಯ ಲೆನ್ಸು ತರುವುದಾಗಿ ವಿಜ್ನಾನಿ ಹೇಳಿದ್ದರಿಂದ ಅವನು ಎಂಭತ್ತು ರೂಪಾಯಿ ಕೊಡಲು ಸಿದ್ಧನಾಗಿದ್ದನು. ಲೆನ್ಸು ಇನ್ನೆರಡು ದಿನಗಳಲ್ಲಿ ಕಳುಹಿಸುವುದಾಗಿ ಹೇಳಿ ದುಡ್ಡನ್ನೆಲ್ಲ ಕೂಡಿಸಿಕೊಂಡು ಹೋದ ಆಸಾಮಿ ನಾಪತ್ತೆ!

ಸುಮಾರು ನಾಲ್ಕೈದು ಸಾವಿರ ದುಡಿದುಕೋಡಿದ್ದಿರಬೇಕು ಅವನು. ಆದರೆ ಬೇಸರದ ಸಂಗತಿ ಏನೆಂದರೆ ನಮ್ಮ ಮೇಷ್ಟ್ರು ಈ ವಿಷಯವನ್ನು ನಮಗೆ ಹೇಳದೇ ಇದ್ದದ್ದು. ಯಾರು ಎಷ್ಟೇ ದೊಡ್ಡವರಾಗಿದ್ದರು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ದೊಡ್ಡ ಮನಸ್ಸು ಇದ್ದಿದ್ದರೆ ಎಷ್ಟು ಚೆನ್ನಗಿರ್ತಿತ್ತು ಅಂತ ನನಗೆ ಹಲವಾರು ಬಾರಿ ಅನಿಸಿದೆ; ನೆಟ್ಟಗೆ ಜನರನ್ನು ಅಳೆಯಲು ಬಾರದ ೮ ನೆಯ ತರಗತಿಯ ಬಾಲಕರಿಗೇ ಸಂಶಯ ಬಂದಾಗ ಜಗತ್ತು ನೋಡಿದ, ವಿವೇಚನೆಯುಳ್ಳ ಮೇಷ್ಟ್ರು ವಿಜ್ನಾನಿಯ ಬಗೆಗಾಗಿ ವಿಚಾರಣೆಯನ್ನು ಮೊದಲೇ ನಡೆಸಿ, ವ್ಯಕ್ತಿ ಇಸ್ರೋದವನೇ ಎಂದು ಖಾತ್ರಿ ಪಡೆಸಬಹುದಿತ್ತಲ್ಲವೆ?

(ಸಾರಾಂಶ: ಅಪರಿಚಿತರಲ್ಲಿ ಏಕೆ?ಏನು?ಹೇಗೆ?ಯಾರು? ಎಂದೆಲ್ಲ ಪ್ರಶ್ನೆಗಳನ್ನು ಕೇಳುವುದು, ಪರಿಚಯದವರಿಂದ ಅವರ ಬಗ್ಗೆ ಕೇಳಿ ತಿಳಿದುಕೊಳ್ಳುವುದು ಮೇಲೆ ನಡೆದಂತಹ ಮೂರ್ಖತನವನ್ನು ತಡೆಯಲು. ನಮ್ಮ ಮೂರ್ಖತನದಿಂದಲೇ ತಮ್ಮ ಕಿಸೆಯನ್ನು ತುಂಬಿಸಿಕೊಳ್ಳೋರು ಹಲವಾರು ಜನ. ಯಾರೇ ಇರಲಿ, ಪ್ರತ್ಯಕ್ಷ ಕಂಡರು ಪ್ರಂಮಾಣಿಸಿ ನೋಡು!)

1 comment: